Couple missing: ಹನಿಮೂನ್ಗೆ ತೆರಳಿದ್ದ ನವ ದಂಪತಿ ಮಿಸ್ಸಿಂಗ್- ಮೊಬೈಲ್ ಸ್ವಿಚ್ಡ್ ಆಫ್... ಸ್ಕೂಟರ್ ಪತ್ತೆ!
ಹನಿಮೂನ್ಗೆ ಹೋಗಿದ್ದ ನವ ದಂಪತಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೇಘಾಲಯದಲ್ಲಿ ವರದಿಯಾಗಿದೆ. ನಾಪತ್ತೆಯಾಗಿರುವ ದಂಪತಿಯನ್ನು ಉದ್ಯಮಿ ರಾಜ ರಘುವಂಶಿ ಮತ್ತು ಪತ್ನಿ ಸೋನಮ್ ಎಂದು ಗುರುತಿಸಲಾಗಿದೆ. ಶಿಲ್ಲಾಂಗ್ನ ಈಸ್ಟ್ ಕಾಶಿ ಹಿಲ್ಸ್ಗೆ ತೆರಳಿದ್ದ ಈ ಜೋಡಿ ಮೇ 23ರಿಂದ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.


ಭೋಪಾಲ್: ಕೆಲವು ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯೊಂದು(Couples missing) ಹನಿಮೂನ್ಗೆ ಹೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮೇಘಾಲಯದಲ್ಲಿ ವರದಿಯಾಗಿದೆ. ನಾಪತ್ತೆಯಾಗಿರುವ ದಂಪತಿಯನ್ನು ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಮತ್ತು ಪತ್ನಿ ಸೋನಮ್ ಎಂದು ಗುರುತಿಸಲಾಗಿದೆ. ಶಿಲ್ಲಾಂಗ್ನ ಈಸ್ಟ್ ಕಾಶಿ ಹಿಲ್ಸ್ಗೆ ತೆರಳಿದ್ದ ಈ ಜೋಡಿ ಮೇ 23ರಿಂದ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.
ಇವರಿಬ್ಬರು ಗುವಾಹಟಿ ಮೂಲಕ ಶಿಲ್ಲಾಂಗ್ಗೆ ಪ್ರಯಾಣಿಸಿ ಅಲ್ಲಿಂದ ಸುಮಾರು 60 ಕಿ.ಮೀ ದೂರವಿರುವ ಸೊಹ್ರಾ (ಚಿರಾಪುಂಜಿ) ಗೆ ಭೇಟಿ ನೀಡಲು ಸ್ಕೂಟರ್ವೊಂದನ್ನು ಬಾಡಿಗೆಗೆ ಪಡೆದಿದ್ದರು. ಮರುದಿನ, ಬಾಡಿಗೆಗೆ ಪಡೆದ ಆಕ್ಟಿವಾ ಸ್ಕೂಟರ್ ಮಾತ್ರ ಸಿಕ್ಕಿದೆ. ಆದರೆ ದಂಪತಿ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ಇನ್ನು ಈ ಜೋಡಿ ಮೇ 11ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಮೇ 20 ರಿಂದ ಹನಿಮೂನ್ ತೆರಳಿದ್ದರು. ಇವರು ಶಿಲ್ಲಾಂಗ್ಗೆ ಬರುವುದಕ್ಕೂ ಮುನ್ನ ಗುಹಾವಾಟಿಯ ಮಾ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಇನ್ನು ಮಗ ಮತ್ತು ಸೊಸೆ ಕಾಣೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ ರಘುವಂಶಿ ತಾಯಿ ಮಾತಾನಾಡಿ ಇಬ್ಬರೂ ನಮ್ಮ ಜೊತೆ ಮೇ23 ರಂದು ಕೊನೆಯ ಬಾರಿ ಮಾತನಾಡಿದ್ದು, ಅವರ ಪ್ರವಾಸದ ಬಗ್ಗೆ ಸಂತಸ ಹಂಚಿಕೊಂಡಿದ್ದರು. ಅದಾದ ಬಳಿಕ ಇಬ್ಬರಿಗೂ ಫೋನ್ ಮಾಡುತ್ತಲೇ ಇದ್ದೆವು. ಆದರೆ ಯಾರೂ ಕರೆ ಸ್ವೀಕರಿಸಿಲ್ಲ. ಮೇ24 ರಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇನ್ನು ಅವರ ಸಹೋದರ ಸಚಿನ್ ರಘುವಂಶಿ ಮಾತನಾಡಿ ಪ್ರಾರಂಭದಲ್ಲಿ ನೆಟ್ವರ್ಕ್ ಸಮಸ್ಯೆ ಕೇಳಿ ಬಂತು ನಂತರ ಪದೇ ಪದೇ ಕರೆ ಮಾಡಿದೆವು ಆದರೆ ಸಂಪರ್ಕಿಸಲು ಸಾಧ್ಯವಾಗಿಲ್ಲ, ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಸ್ಥಳೀಯ ಪೋಲಿಸರ ಸಹಕಾರದ ಜೊತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.
ಘಟನೆ ಬಗ್ಗೆ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿದ್ದು, ನಾಪತ್ತೆಯಾಗಿರುವ ದಂಪತಿ ಹುಡುಕಾಟದಲ್ಲಿದ್ದೇವೆ. ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಕಾರ್ಯಾಚರಣೆಗೆ ಭಾರೀ ತೊಂದರೆಯುಂಟಾಗುತ್ತಿದೆ. ಕೊನೆಯದಾಗಿ ಅವರಿಬ್ಬರ ಮೊಬೈಲ್ ಲೊಕೇಶ್ ಓಸ್ರಾ ಬೆಟ್ಟದ ಸಮೀಪ ಪತ್ತೆಯಾಗಿದೆ. ಅವರು ಬಳಸಿದ್ದ ಸ್ಕೂಟರ್ ಕೂಡ ಪತ್ತೆಯಾಗಿದೆ. ಇನ್ನು ಇಲ್ಲೇ ಸಮೀಪವೊಂದು ಹಲವು ಕ್ರಿಮಿನಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿದ್ದ ರೆಸಾರ್ಟ್ಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇಂತಹದ್ದೇ ಒಂದು ಪ್ರಕರಣ ಈ ಹಿಂದೆಯೂ ನಡೆದಿತ್ತು!
ಇದೇ ರೀತಿಯ ಘಟನೆ ಈ ಹಿಂದೆಯೂ ಈ ಪ್ರದೇಶದಲ್ಲಿ ನಡೆದಿತ್ತು. ಪುಸ್ಕಾಸ್ ಝ್ಸೋಲ್ಟ್ ಎಂವ ಹಂಗೇರಿಯನ್ ಪ್ರವಾಸಿಗನೊಬ್ಬ ನಿಗೂಢವಾಗಿ ಕಣ್ಮರೆಯಾಗಿದ್ದರು ಘಟನೆ ನಡೆದ 12 ದಿನಗಳ ನಂತರ ರಾಮ್ಡೈಟ್ ಗ್ರಾಮದ ಬಳಿ ಆತ ಶವವಾಗಿ ಪತ್ತೆಯಾಗಿದ್ದ. ಪೊಲೀಸರು ಇದೊಂದು ಆಕಸ್ಮಿಕ ಸಾವು ಪ್ರಕರಣ ಎಂದು ಘೋಷಿಸಿ ಕೇಸ್ ಅನ್ನು ಮುಚ್ಚಿ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು.