Thursday, 19th September 2024

Samyukta Hornad: ಟೆಕಿಯಾನ್ ಸಂಸ್ಥೆ ಜತೆಗೂಡಿ ಹುಲಿ‌ ದತ್ತು ಪಡೆದ ಸಂಯುಕ್ತ ಹೊರನಾಡು

Samyukta Hornad

ಬೆಂಗಳೂರು: ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತ ಹೊರನಾಡು (Samyukta Hornad) ಅವರು, ಈಗಾಗಲೇ ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ಇವರಿಗೆ ನಾಯಿ, ಮೊಲ ಎಂದರೆ ಎಲ್ಲಿಲ್ಲದ ಪ್ರೀತಿ. ಇದೀಗ ತಮ್ಮದೇ ಪ್ರಾಣ ಹಾಗೂ ಟೆಕಿಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ನಟಿ ಸಂಯುಕ್ತಾ ಹೊರನಾಡು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿದೆ, ಹೀಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರದಲ್ಲಿ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ.

ಟೆಕಿಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು.

ಸಂಯುಕ್ತ ಹೊರನಾಡು ಮಾತನಾಡಿ, ಟೆಕಿಯಾನ್ ಜತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು.

ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮಾತನಾಡಿ, ಡೈಮಂಡ್ ಕ್ಲಾಸ್ ವಿಭಾಗದಲ್ಲಿ ಟೆಕಿಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು.

ಟೆಕಿಯಾನ್ ಹಾಗೂ ಪ್ರಾಣ ಸಂಸ್ಥೆ ಜತೆಗೂಡಿ ದಿನದ 24 ಗಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕಿಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ.