Monday, 28th October 2024

ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ: ಶಾಸಕ ಗೌರಿಶಂಕರ್

ತುಮಕೂರು: ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀಉದ್ದಾನ ಶಿವಯೋಗಿಗಳ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಇಂತಹ ಶಿಕ್ಷಕರ ಋಣ ತೀರಿಸುವ ನಿಟ್ಟಿನಲ್ಲಿ ಈ ವರ್ಷ ಕೊನೆಯಲ್ಲಿ ಶಿಕ್ಷಕರು, ಬುದ್ದಿಜೀವಿಗಳು, ಸಾಹಿತಿಗಳು,ಸ್ವಾಮೀಜಿಗಳು, ಕಲಾವಿದರನ್ನು ಒಳಗೊಂಡ ಬೃಹತ್ ರಾಜಕೀಯೇತರ ಸಮಾರಂಭ ನಡೆಸಲು ಉದ್ದೇಶಿಸಿದ್ದು, ಕರ್ನಾಟಕ ಶಿಕ್ಷಕರ ಪ್ರತಿಭಾ ಪರಿಷತ್ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಳೆದ ಎರಡು ವರ್ಷಗಳ ಕೋರೋನ ಕಾಲದಲ್ಲಿ ಶಿಕ್ಷಕರ ಕಷ್ಟ ಹೇಳತೀರದಾಗಿತ್ತು. ಪರೀಕ್ಷೆಗಳನ್ನು ನಡೆಸುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು.ಇದನ್ನು ಸ್ವತಃ ನಾನೇ ಕಂಡಿದ್ದೇನೆ.ಕೈಜೋಡಿಸಿ ಕೆಲಸ ಮಾಡಿದ್ದೇನೆ.ಕೋರೋನದ ಜತೆ, ಜತೆಗೆ ಶಾಲೆ ಬಿಟ್ಟ ಮಕ್ಕಳನ್ನು ಕರೆತರುವುದು,ಮಕ್ಕಳಿಗೆ ಪರ್ಯಾಯ ಬೋಧನೆ ಸೇರಿದಂತೆ ಹಲ ವಾರು ಸಂಕಷ್ಟಗಳನ್ನು ಅನುಭವಿದ್ದು, ಆ ವೇಳೆ ವೇತನವೂ ಸಹ ಸರಿಯಾದ ಸಮಯಕ್ಕೆ ಸಿಕ್ಕಿಲ್ಲ. ಈ ಎಲ್ಲಾ ತೊಂದರೆಗಳ ನಡುವೆಯೂ ಉತ್ತಮ ಫಲಿತಾಂಶ ಬಂದಿದೆ.ಇದಕ್ಕಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.ಮುಂದಿನ ದಿನಗಳಲ್ಲಿ ತಾವೆಲ್ಲರು ಮತ್ತಷ್ಟು ಮುತ್ತುವರ್ಜಿ ಯಿಂದ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಶ್ರಮವಹಿಸುವಂತೆ ಸಲಹೆ ನೀಡಿದ ಅವರು,ಸಂಘಕ್ಕೆ ತಮ್ಮ ವೈಯುಕ್ತಿಕವಾಗಿ 2 ಲಕ್ಷ  ನಗದು ನೆರವು ನೀಡಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್,ಮೈಸೂರು ಇದರ ರಾಜ್ಯಾಧ್ಯಕ್ಷ ಮಹೇಶ್ ಮಾತನಾಡಿ,ಶಿಕ್ಷಕರಲ್ಲಿ ಇರುವ ಪ್ರತಿಭೆ ಯನ್ನು ಹೊರತರುವ ನಿಟ್ಟಿನಲ್ಲಿ ಶಿಕ್ಷಕರಿಗಾಗಿ ಕಥೆ,ಕವನ,ಚಿತ್ರಕಲೆ,ಹಾಡುಗಾರಿಕೆ,ನಾಟಕಾಭೀನಯ,ಪ್ರಬಂಧ, ಚರ್ಚಾ ಸ್ಪರ್ಧೆ ಸೇರಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿ,ಬಹುಮಾನ ನೀಡುವ ಮೂಲಕ ಶಿಕ್ಷಕರಿಗೆ ಕಲಿಕೆಯ ಬಗ್ಗೆ ಆಸಕ್ತಿ ಮೂಡು ವಂತೆ ಮಾಡಲಾಗುತ್ತಿದೆ.ಇಂದು 1.80 ಲಕ್ಷ ರು.ಗಳ ಬಹುಮಾನ ವಿತರಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಣಿಗಲ್ ತಾಲೂಕಿನ ಹಿತ್ತಲಹಳ್ಳಿ ಮಠದ ಡಾ.ಸದಾಶಿವ ಶಿವಾಚಾರ್ಯ ಸ್ವಾಮೀಜಿ,ಉತ್ತಮ ವ್ಯಕ್ತಿ ಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಸಾಭೀತಾಗಿರುವ ವಿಷಯ. ಪ್ರಾಥಮಿಕ, ಪ್ರೌಢಶಾಲಾ ಮತ್ತು ಪಿಯು ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವುದ ಜೊತೆಗೆ,ನಮ್ಮ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಿದರೆ ಅವರು ಅದನ್ನು ತಮ್ಮ ಜೀವಿತಾವಧಿವರೆಗು ಕಾಪಾಡಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ನಮ್ಮದು ಎಂದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಬುಲಿಂಗನಗೌಡ ಪಾಟೀಲ್, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಆರ್.ಸಂಘಟನಾ ಕಾರ್ಯದರ್ಶಿ ಪ್ರಮೀಳ ಟಿ.ಕಾಳೇನಹಳ್ಳಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಚಿಕ್ಕಣ್ಣ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ವೆಂಕಟರಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪಿ.ಜಿ.ತಿಮ್ಮೇಗೌಡ, ಉಪಾಧ್ಯಕ್ಷ ಸಿ.ಕೆ.ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.