Friday, 20th September 2024

Nutrition Food: ಪೌಷ್ಠಿಕ ಆಹಾರ ಸೇವನೆ ಮಾಡಿದಾಗ ಮಾತ್ರ ಹುಟ್ಟುವ ಮಗು ಆರೋಗ್ಯ ವಾಗಿರಲು ಸಾಧ್ಯ- ಮಂಜುನಾಥ್

ಫಾಸ್ಟ್ ಫುಡ್ ಬಿಡಿ ಒಳ್ಳೆ ಆಹಾರ ಸೇವನೆ ಮಾಡಿ

ಕೊರಟಗೆರೆ: ಗರ್ಭಿಣಿಯರು (Pregnant Women) ಪೌಷ್ಟಿಕ ಆಹಾರ(Nutrition Food) ಸೇವನೆ ಮಾಡಿದಾಗ ಮಾತ್ರ ಹುಟ್ಟುವ ಮಗು ಆರೋಗ್ಯ ಗಿರಲು ಸಾಧ್ಯ. ಇವತ್ತಿನ ಫಾಸ್ಟ್ ಫುಡ್ ಬಿಟ್ಟು ಒಳ್ಳೆ ಆಹಾರ ಸೇವನೆ ಮಾಡಿ ಎಂದು ತಹಶೀಲ್ದಾರ್ ಕೆ.ಮಂಜುನಾಥ್(Tahsildar K Manjunath) ತಿಳಿಸಿದರು.

ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಸ್ಥಾನದ ದಾಸೋಹ ನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪೌಷ್ಠಿಕತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ್ ಅಭಿಯಾನ (Rashtriya Poshan Abhiyan)ಒಂದು ಮಹತ್ತರ ಕಾರ್ಯಕ್ರಮವಾಗಿದ್ದು ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾ ಗಿದ್ದು, ಮಹಿಳೆಯರು ಪೋಷಣ್ ಅಭಿಯಾನದಡಿ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಬೇಕು ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ಮಾತನಾಡಿ, ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಲ್ಲಿ ರಕ್ತಹೀನತೆ ಕಡಿಮೆ ಮಾಡುವುದು ಮತ್ತು ಪೌಷ್ಠಿಕತೆ ಹೆಚ್ಚಿಸುವುದು ಪೋಷಣ್ ಅಭಿಯಾನದ ಉದ್ದೇಶವಾಗಿದೆ. ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಎಲ್ಲಾ ಅಂಗನವಾಡಿಗಳಲ್ಲಿ ಪೋಷಣ್ ಮಾಸಾಚರಣೆಯನ್ನು ಆಚರಿಸಿ ಜನರಲ್ಲಿ ಗರ್ಭಿಣಿ ಬಾಣಂತಿಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಮಾತನಾಡಿ, ಇತ್ತೀಚಿಗೆ ಹೆಚ್ಚಾಗಿ ಚಿಕ್ಕವಯಸ್ಸಿನಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಹಲವಾರು ಕಾಯಿಲೆಗಳು ಸಾಮಾನ್ಯವಾಗಿವೆ. ಇದಕ್ಕೆ ಕಾರಣ ನಾವೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನವನ್ನು ಕಳೆದುಕೊಂಡು ನಮ್ಮ ಆಹಾರ ಪದ್ಧತಿ ಯನ್ನು ಬಿಡುತ್ತಿರುವುದು ಬೇಸರದ ಸಂಗತಿ. ಸ್ಥಳೀಯವಾಗಿ ಸಿಗುವ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತೀತಾ ಗ್ರಾ.ಪಂ ಅಧ್ಯಕ್ಷೆ ಸುಮಂಗಳ, ಉಪಾಧ್ಯಕ್ಷೆ ಕಮಲಮ್ಮ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್, ಟಿಎಚ್‌ಓ ಡಾ.ವಿಜಯ್‌ ಕುಮಾರ್, ತೀತಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ದಾನೇಶ್, ಮುಖ್ಯೋಪಾಧ್ಯಾಯರಾದ ವೀರಕ್ಯಾತಯ್ಯ, ಮೇಲ್ವಿಚಾರಕಿ ಮಮ್ತಾಜ್, ರತ್ನಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಯಿತು. ಸಾರ್ವಜನಿಕರಿಗೆ ಪೌಷ್ಟಿಕಯುಕ್ತ ಆಹಾರಗಳ ತಯಾರಿಕೆಯ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: Tumkur News: ಎಸ್ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಶ್ವತ್ ಗೌಡ ಅವಿರೋಧ ಆಯ್ಕೆ