Saturday, 26th October 2024

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್‌ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ದಂಗೆ(Bangladesh Unrest)ಯ ನಂತರ ಅಲ್ಲಿನ ಹಿಂದೂಗಳ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಹಿಂದೂಗಳಿಗೆ ಕನಿಷ್ಠ ಹಕ್ಕು, ಭದ್ರತೆ ನೀಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ನಡುವೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸನಾತನ ಜಾಗರಣ ಮಂಚ್ ಚಿತ್ತಗಾಂಗ್‌ನ ಐತಿಹಾಸಿಕ ಲಾಲ್ದಿಘಿ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಿತು, ಅಲ್ಲಿ ಸಾವಿರಾರು ಹಿಂದೂಗಳು ಮಧ್ಯಂತರ ಸರ್ಕಾರದಿಂದ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಭದ್ರತೆಗೆ ಒತ್ತಾಯಿಸಿದ್ದಾರೆ.

ಪ್ರಸ್ತುತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರವು ಎಂಟು ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಸಾಮೂಹಿಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇನ್ನು ಬೃಹತ್‌ ರ್ಯಾಲಿ ವಿಡಿಯೋವನ್ನು ಎಕ್ಸ್‌ನಲ್ಲಿಸಾಮಾಜಿಕ ಹೋರಾಟಗಾರ್ತಿ ತಸ್ಲಿಮಾ ನಸ್ರೀನ್‌ ಪೋಸ್ಟ್‌ ಮಾಡಿದ್ದಾರೆ.

ಬಾಂಗ್ಲಾ ಹಿಂದೂಗಳ ಬೇಡಿಕೆ ಏನು?

  1. ಅಲ್ಪಸಂಖ್ಯಾತರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಲು ನ್ಯಾಯಮಂಡಳಿ ರಚನೆ
  2. ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಅವರ ಪುನರ್ವಸತಿ
  3. ಕೂಡಲೇ ಅಲ್ಪಸಂಖ್ಯಾತರ ರಕ್ಷಣೆ ಕಾನೂನನ್ನು ಜಾರಿಗೊಳಿಸುವುದು
  4. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಚನೆ
  5. ಶಿಕ್ಷಣ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಅಲ್ಪಸಂಖ್ಯಾತರಿಗಾಗಿ ಪ್ರಾರ್ಥನಾ ಕೊಠಡಿಗಳು ಅಥವಾ ಪೂಜಾ ಸ್ಥಳಗಳನ್ನು ನಿರ್ಮಿಸುವುದು.
  6. ಹಿಂದೂ ಬೌದ್ಧ ಮತ್ತು ಕ್ರಿಶ್ಚಿಯನ್ ಕಲ್ಯಾಣ ಟ್ರಸ್ಟ್‌ಗಳ ಸ್ಥಾಪನೆ.
  7. ‘ಆಸ್ತಿ ವಸೂಲಾತಿ ಮತ್ತು ಸಂರಕ್ಷಣೆ ಕಾಯಿದೆ ಮತ್ತು ಒಪ್ಪಿಸಿದ ಆಸ್ತಿ ವರ್ಗಾವಣೆ ಕಾಯ್ದೆ’ ಸಮರ್ಪಕವಾಗಿ ಜಾರಿಯಾಗಬೇಕು.
  8. ಸ್ಥಾಪಿತವಾದ ಸಂಸ್ಕೃತ ಮತ್ತು ಪಾಲಿ ಶಿಕ್ಷಣ ಮಂಡಳಿಯನ್ನು ಆಧುನೀಕರಿಸಬೇಕು ಮತ್ತು ದುರ್ಗಾ ಪೂಜೆಗೆ 5 ದಿನಗಳ ರಜೆಯನ್ನು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಗಸ್ಟ್ 5 ರಂದು ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಹಿಂದೂ ಗುಂಪುಗಳು ನಡೆಸಿದ ಅತಿದೊಡ್ಡ ಕೂಟಗಳಲ್ಲಿ ಇದು ಒಂದಾಗಿದೆ. ಮಧ್ಯಂತರ ಸರ್ಕಾರವು ಅಧಿಕಾರಕ್ಕೆ ಬಂದ ನಂತರ, ಅಲ್ಪಸಂಖ್ಯಾತರ ವಿರುದ್ಧದ ವಿಧ್ವಂಸಕ ಕೃತ್ಯಗಳು, ಲೂಟಿ, ದೈಹಿಕ ಹಾನಿಯಂತಹ ಅಪರಾಧಗಳು ಹೆಚ್ಚಿವೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯಲಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh Immigrants: ರಾಜ್ಯದಲ್ಲಿದ್ದಾರೆ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು!