ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು 7 ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು, ಪಾಕಿಸ್ತಾನ ಮತ್ತು ಚೀನಾದ ವಿಷಯದಲ್ಲಿ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ. ಚೀನಾ ಎಂಬ ನಯವಂಚಕ ರಾಷ್ಟ್ರವನ್ನು ದೊಡ್ಡ ಶಕ್ತಿಯೆಂದು ದೇಶದೆದುರು ಬಿಂಬಿಸಿದ್ದು ಕಾಂಗ್ರೆಸ್ ಪಕ್ಷವೇ.

ಗಡಿ ಪ್ರಮಾದಗಳ ಸರದಾರರು: ನೆಹರು ಮತ್ತು ಇಂದಿರಾ ಗಾಂಧಿ

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ, 100ಕ್ಕೂ ಹೆಚ್ಚು ಉಗ್ರರನ್ನು ಸದೆ ಬಡಿದಿದೆ. ಪಾಕಿಸ್ತಾನದ ಅಷ್ಟ ದಿಕ್ಕುಗಳಿಗೆ ಭಾರತದ ಕ್ಷಿಪಣಿಗಳು ನುಗ್ಗಿ ಅಲ್ಲಿನ ವಾಯುನೆಲೆಗಳನ್ನು ನಾಶಗೊಳಿಸಿವೆ. ಭಾರತೀಯ ಸೇನಾಧಿಕಾರಿಗಳು ಪಾಕ್ ವಿರುದ್ಧದ ಈ ಕಾರ್ಯಾಚರಣೆಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದ ನಂತರವೂ, ಈ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ಪಕ್ಷದವರು ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

“ಯುದ್ಧದಲ್ಲಿ ಭಾರತ ಕಳೆದುಕೊಂಡ ವಿಮಾನಗಳೆಷ್ಟು?" ಎಂದು ಒಬ್ಬರು ಕೇಳಿದರೆ, “ಸೇನೆಯು ಯಾವುದೋ ನಾಲ್ಕು ಕಡೆ ದಾಳಿ ನಡೆಸಿದೆ" ಎಂದರು ಮತ್ತೊಬ್ಬರು. “ಡೊನಾಲ್ಡ್ ಟ್ರಂಪ್ ಮಾತಿ ನಿಂದಾಗಿ ಭಾರತವು ಕದನವಿರಾಮಕ್ಕೆ ಒಪ್ಪಿತು" ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದರು.

ಇಷ್ಟು ಸಾಲದೆಂಬಂತೆ, ಕಾಂಗ್ರೆಸ್ಸಿಗರು 1971ರ ಯುದ್ಧವನ್ನು ಮುನ್ನೆಲೆಗೆ ತಂದು ಇಂದಿರಾ ಗಾಂಧಿ ಯವರ ಭಿತ್ತಿಚಿತ್ರಗಳನ್ನು ರಸ್ತೆ ರಸ್ತೆಗಳಲ್ಲಿ ಅಂಟಿಸಿದರು. ಭಾರತೀಯ ಸೇನೆಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ನೆಹರು ಮತ್ತು ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ವಿಷಯದಲ್ಲಾದ ಪ್ರಮಾದಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ? ನೆಹರು ಅವರು ನೊಬೆಲ್ ಪ್ರಶಸ್ತಿಯ ಆಸೆಗಾಗಿ ಭಾರತೀಯ ಸೇನೆಯ ನಿಶ್ಶಸೀಕರಣ ಮಾಡಿದ್ದರು, ‘ಇಂಡಿಯಾ-ಚೀನಾ ಭಾಯಿ ಭಾಯಿ’ ಎಂದಿದ್ದರು.

ಚೀನಾದ ಸಾಮ್ರಾಜ್ಯಶಾಹಿ ಮನಸ್ಥಿತಿಯ ಅರಿವಿದ್ದರೂ, ಭಾರತೀಯ ಸೇನೆಯನ್ನು ಬಲಪಡಿಸುವ ಕೆಲಸ ಮಾಡಿರಲಿಲ್ಲ. ನೆಹರು ಪ್ರಧಾನ ಮಂತ್ರಿಯಾಗಿದ್ದಾಗ ಸೇನೆಗಾಗಿರುವ ಬಜೆಟ್ ಹಂಚಿಕೆ ಯನ್ನು ಕಡಿಮೆ ಮಾಡಿದ್ದರು. ಭಾರತದ ವಿರುದ್ಧ ಚೀನಾ ಯುದ್ಧ ಮಾಡುವುದಿಲ್ಲವೆಂಬ ಅತಿಯಾದ ಆತ್ಮವಿಶ್ವಾಸ ಅವರಿಗಿತ್ತು.

ಇದನ್ನೂ ಓದಿ: Mohan Vishwa Column: ಆಪರೇಶನ್‌ ಸಿಂದೂರ್:‌ ಇದು ಮೇಡ್‌ ಇನ್‌ ಇಂಡಿಯಾ !

ಆದರೆ ಆಗಿದ್ದೇನು? 1962ರ ಭಾರತ ಮತ್ತು ಚೀನಾ ನಡುವಿನ ಯುದ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂರ್ವಭಾಗದ ಅಕ್ಸಾಯ್ ಚಿನ್ ಪ್ರಾಂತ್ಯವನ್ನು ಚೀನಾ ವಶಪಡಿಸಿಕೊಂಡಿತು. ಈ ಭಾಗ ಸುಮಾರು 2150 ಕಿ.ಮೀ. ಗಡಿಯನ್ನು ಹೊಂದಿದೆ. ಈ ಯುದ್ಧದಲ್ಲಿ ಭಾರತವು ದೊಡ್ಡದೊಂದು ಭೂಭಾಗವನ್ನು ಕಳೆದುಕೊಳ್ಳಬೇಕಾಯಿತು. ಇದನ್ನು ಕಳೆದುಕೊಂಡ ಮೇಲೆ, “ಈ ಭಾಗದಲ್ಲಿ ಒಂದು ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ, ಆದ್ದರಿಂದ ನಮಗೆ ಯಾವ ನಷ್ಟವೂ ಇಲ್ಲ" ಎಂಬ ಮಾತನ್ನು ನೆಹರು ಹೇಳಿದ್ದರು.

ಆಪರೇಷನ್ ಸಿಂದೂರ್ ಬಗ್ಗೆ ಹಗುರವಾಗಿ ಮಾತನಾಡುವ ರಾಹುಲ್ ಗಾಂಧಿ ಮತ್ತು ಅವರ ಪಟಾಲಂನವರು, ನೆಹರು ಹೇಳಿದ್ದ ಈ ಮಾತಿಗೆ ಉತ್ತರ ಕೊಡಲು ಸಾಧ್ಯವೇ? ಭಾರತದ ದೊಡ್ಡ ದೊಂದು ಭೂಭಾಗವನ್ನು ಕಳೆದುಕೊಂಡ ನಂತರ ದೇಶದ ಪ್ರಧಾನಿಯೇ ಸ್ವತಃ ಹೀಗೆ ಹೇಳಿದರೆ ಚೀನಾಕ್ಕೆ ಭಯ ಎಲ್ಲಿಂದ ಬರಬೇಕು? ನೆಹರು ಅವರು ಭಾರತೀಯ ಸೇನೆಯ ನಿಶ್ಶಸ್ತ್ರೀಕರಣ ಮಾಡಿದ ಪರಿಣಾಮ ಭಾರತದ ಇತಿಹಾಸದಲ್ಲಿ ಹೀಗೆ ದೊಡ್ಡದೊಂದು ಪ್ರಮಾದ ನಡೆದು ಹೋಯಿತು.

ಅಕ್ಸಾಯ್ ಚಿನ್ ವಿಚಾರದಲ್ಲಿ ಹೇಳುವುದಾದರೆ, ಡಬ್ಲ್ಯು. ಎಚ್.ಜಾನ್ಸನ್ ಎಂಬ ಬ್ರಿಟಿಷ್ ಕಂದಾಯ ಅಧಿಕಾರಿಯು 1865ರಲ್ಲಿ ಈ ಸಂಪೂರ್ಣ ಭೂಭಾಗವು ಭಾರತಕ್ಕೆ ಸೇರಬೇಕೆಂದು ಹೇಳಿದ್ದ. 1947ರಲ್ಲಿ ಅಖಂಡ ಭಾರತದ ವಿಭಜನೆಯಾದಾಗ ಈತನ ಸರ್ವೆಯ ಆಧಾರದ ಮೇಲೆ ಗಡಿಯನ್ನು ರಚಿಸಲಾಗಿತ್ತು.

6 R

ಸಂಪೂರ್ಣ ಜಮ್ಮು ಮತ್ತು ಕಾಶ್ಮೀರದ ಭೂಪಟ ಈತನ ಸರ್ವೆಯ ಮೇಲೆ ರಚಿತವಾಗಿದೆ, ಆದರೆ ಈತನ ಸರ್ವೆಯ ಗಡಿಯನ್ನು ಒಪ್ಪಲು ಚೀನಾ ತಯಾರಿರಲಿಲ್ಲ. ನೆಹರು ಅವಧಿಯಲ್ಲಿ ಚೀನಾ ತನಗೆ ಬೇಕಾದ ಹಾಗೆ ತನ್ನ ಗಡಿಯನ್ನು ವಿಸ್ತರಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಭಾರತಕ್ಕೆ ಬೇಕಾದಂತೆ ಗಡಿಯನ್ನು ವಿಸ್ತರಿಸಿಕೊಳ್ಳಲಿಲ್ಲ.

1962ರ ಯುದ್ಧದಲ್ಲಿ ಅಕ್ಸಾಯ್ ಚಿನ್‌ನ ಇಡೀ ಪ್ರಾಂತ್ಯವನ್ನು ಚೀನಾ ವಶಪಡಿಸಿಕೊಂಡು ೨,೧೫೦ ಕಿ.ಮೀ. ಒಳಗೆ ಬಂದಿತ್ತು. ಶಾಂತಿ ಮಾತುಕತೆಯಲ್ಲಿ ಚೀನಾವನ್ನು ಎಂದಿಗೂ ನಂಬಲಾಗುವುದಿಲ್ಲ. ತನ್ನ ಜತೆಗೆ ಗಡಿಯನ್ನು ಹಂಚಿಕೊಂಡಿರುವ ಎಲ್ಲಾ ದೇಶಗಳ ಜತೆಗೂ ಚೀನಾ ಗಡಿ ತಕರಾರನ್ನು ಹೊಂದಿದೆ.

ವಿಯೆಟ್ನಾಂನಂಥ ಪುಟ್ಟ ದೇಶವು ಚೀನಾಕ್ಕೆ ಮಣ್ಣು ಮುಕ್ಕಿಸಿ ತನ್ನ ಭೂಭಾಗವನ್ನು ಉಳಿಸಿ ಕೊಂಡಿತು. ಆದರೆ ನೆಹರು ಮಾಡಿದ ಪ್ರಮಾದದಿಂದಾಗಿ ಭಾರತ ಮಾತ್ರ 1962ರಲ್ಲಿ ಬಹುದೊಡ್ಡ ಭೂಭಾಗವನ್ನು ಕಳೆದುಕೊಂಡಿತು. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಭಾಗವಾಗಿ ನಡೆಸಿದ ವಾಯುದಾಳಿಯ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ಸಿಗರು, ಇಂಥ ಪ್ರಮಾದಗಳ ಬಗ್ಗೆ ಮಾತ್ರ ಚಕಾರವೆತ್ತುವುದಿಲ್ಲ; ಚೀನಾ ವಿರುದ್ಧದ 1962ರ ಯುದ್ಧದಲ್ಲಿ ಭಾರತೀಯ ವಾಯುಪಡೆಯನ್ನು ಬಳಸಿಕೊಳ್ಳಲು ಸೇನೆಗೆ ನೆಹರು ಅನುಮತಿ ನೀಡಿರಲಿಲ್ಲ, ಸೈನಿಕರಿಗೆ ಅವಶ್ಯವಾಗಿ ಬೇಕಿದ್ದಂಥ ಶಸ್ತ್ರಾಸ್ತ್ರಗಳನ್ನು ಒದಗಿಸಿರಲಿಲ್ಲ.

ಕಾಂಗ್ರೆಸ್ ಪಕ್ಷವು ದೇಶದೊಳಗೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಮ್ಯುನಿಸ್ಟರಿಗೆ ನಿಷ್ಠೆ ಯನ್ನು ತೋರಿಸಿತ್ತು. ಭಾರತದ ಒಳಗಿದ್ದ ಕಮ್ಯುನಿಸ್ಟರು, ಭಾರತ ಮತ್ತು ಚೀನಾ ನಡುವಿನ ಯುದ್ಧ ದಲ್ಲಿ ನಮ್ಮ ಸೈನಿಕರೊಂದಿಗೆ ನಿಂತಿರಲಿಲ್ಲ, ಅವರು ಚೀನಾದ ಕಮ್ಯುನಿಸ್ಟರಿಗೆ ಪರೋಕ್ಷ ವಾಗಿ ಸಹಾಯ ಮಾಡಿದ ಅನೇಕ ಪ್ರಸಂಗಗಳಿವೆ.

‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಬಳಿಕ ಕಮ್ಯುನಿಸ್ಟರು ಕೋಲ್ಕತ್ತಾದ ಬೀದಿಗಳಲ್ಲಿ ಶಾಂತಿಪಠಣ ಮಾಡಿ, ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದು ತಪ್ಪೆಂದು ಪ್ರತಿಭಟನೆ ಮಾಡಿದ್ದರು. ಚೀನಾ ಹಾಗೂ ಪಾಕಿಸ್ತಾನದ ನಡುವೆ ದೊಡ್ಡದೊಂದು ಆರ್ಥಿಕ ಕಾರಿಡಾರ್ ನಿರ್ಮಾಣವಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 12 ಬಿಲಿಯನ್ ಡಾಲರ್, ಅಂದರೆ ಸುಮಾರು 100000 ಕೋಟಿ ರುಪಾಯಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ.

ಚೀನಾ ನಿರ್ಮಿಸುತ್ತಿರುವ ಈ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗುತ್ತದೆ. ನೆಹರು ಅವರು ಅಂದು ಮಾಡಿದ ಪ್ರಮಾದದಿಂದಾಗಿ ಭಾರತಕ್ಕೆ ಸೇರಿದ ಭೂಭಾಗದೊಳಗೆ ಚೀನಾ ದ ಆರ್ಥಿಕ ಕಾರಿಡಾರ್ ನಿರ್ಮಾಣವಾಗುವಂತಾಗಿದೆ. ಆಪರೇಷನ್ ಸಿಂದೂರ್ ಬಳಿಕ, ‘ಪಾಕ್ ಆಕ್ರಮಿತ ಕಾಶ್ಮೀರ’ವನ್ನು ಹಿಂಪಡೆಯುವ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು, ಹಿಂದೆ ತಮ್ಮ ಪಕ್ಷದವರೇ ಅಧಿಕಾರದಲ್ಲಿ ಇದ್ದಾಗ ಆದ ಪ್ರಮಾದದ ಬಗ್ಗೆ ಮಾತನಾಡುವುದಿಲ್ಲ.

ಭಾರತದ ವಿರುದ್ದದ 1962ರ ಯುದ್ಧದ ನಂತರ 1963ರಲ್ಲಿ ಪಾಕಿಸ್ತಾನವು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಗಿಲ್ಗಿಟ್ ಬಾಲ್ಟಿಸ್ತಾನ್) ಶಕ್ಸ್‌ಗಮ್ ಕಣಿವೆಯನ್ನು ಚೀನಾ ದೇಶಕ್ಕೆ ಉಡುಗೊರೆ ಯಾಗಿ ನೀಡಿತು. ತನ್ನ ಅಪ್ಪನ ಮನೆಯ ಆಸ್ತಿಯೆಂಬಂತೆ ಈ ಭೂಭಾಗವನ್ನು ಪಾಕಿಸ್ತಾನ ಹೀಗೆ ನೀಡಿತು. ಆಗಲೂ ನೆಹರು ಅವರು ಪ್ರತಿಭಟಿಸಲಿಲ್ಲ.

‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ಸಿನ ಬಾಲಂಗೋಚಿಗಳು, ನೆಹರು ಮಾಡಿದ ಈ ಪ್ರಮಾದದ ಬಗ್ಗೆಯೂ ಮಾತನಾಡಬೇಕು. ಮತ್ತೊಂದೆಡೆ, ಡೋಕ್ಲಾಮ್ ಭಾರತಕ್ಕೆ ಅತ್ಯಂತ ಮಹತ್ವಪೂರ್ಣವಾದ ಭೂಭಾಗ. ಇದು ಭಾರತ, ಚೀನಾ ಹಾಗೂ ಭೂತಾನ್ ಗಡಿಗಳು ಸೇರುವ ತ್ರಿಸಂಧಿ ಸ್ಥಳದಲ್ಲಿದೆ. ಈ ಜಾಗದಲ್ಲಿ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಿದರೆ ತನ್ನ ಶಸಾಸಗಳನ್ನು ಭಾರತದ ಗಡಿಯತ್ತ ಸಾಗಿಸಲು ಸುಲಭವಾಗುತ್ತದೆ ಎಂಬ ಭ್ರಮೆಯಲ್ಲಿತ್ತು ಚೀನಾ.

ಇದನ್ನರಿತ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾಮಗಾರಿಯನ್ನು ನಡೆಸದಂತೆ ಚೀನಾ ವನ್ನು ತಡೆದರು. ಜತೆಗೆ, ಚೀನಾದ ದುರಾಲೋಚನೆಯನ್ನು ಅರಿತಿದ್ದ ಅವರು ಭೂತಾನ್ ದೇಶಕ್ಕೆ ಆರ್ಥಿಕ ಸಹಾಯ ಮಾಡಿದರು. ಮಾತುಮಾತಿಗೂ ‘ಮೋದಿಯವರು ಹೊರದೇಶಕ್ಕೆ ಪ್ರಯಾಣ ಮಾಡುತ್ತಾರೆ’ ಎಂದು ಚೀರಾಡುವ ಕಾಂಗ್ರೆಸ್ಸಿಗರಿಗೆ ಈ ವಿಷಯದ ಅರಿವಿಲ್ಲ.

ಈಶಾನ್ಯ ಭಾರತದ 7 ರಾಜ್ಯಗಳನ್ನು ತಲುಪಲು ಅತಿಮುಖ್ಯವಾದ ಜಾಗ ಸಿಲಿಗುರಿ ಕಾರಿಡಾರ್. ಈ ಸಣ್ಣ ಭೂಭಾಗವನ್ನು ‘ಚಿಕನ್ ನೆಕ್’ ಎಂದು ಕರೆಯುತ್ತಾರೆ. ಕೇವಲ 200 ಕಿ.ಮೀ. ಉದ್ದ ಹಾಗೂ 60 ಕಿ.ಮೀ. ಅಗಲವಿರುವ ಭೂಭಾಗವಿದು. ಈ ಕಾರಿಡಾರ್‌ನ ಅತ್ಯಂತ ಸಣ್ಣಭಾಗ ಕೇವಲ 17 ಕಿ.ಮೀ. ಇದೆ. ಈ ಕಿರಿದಾದ ಭೂಭಾಗದಿಂದ ಮಾತ್ರ ಈಶಾನ್ಯ ಭಾರತದ ರಾಜ್ಯಗಳಿಗೆ ಸಂಪರ್ಕ ಸಾಧ್ಯ.

ಗೂಗಲ್ ಮ್ಯಾಪ್ ತೆರೆದಿಟ್ಟುಕೊಂಡು, ಈಶಾನ್ಯ ಭಾರತದ ರಾಜ್ಯಗಳಿಗೆ ಸಂಪರ್ಕಿಸುವ ಸಣ್ಣ ಭೂಭಾಗದೆಡೆಗೆ ಗಮನಹರಿಸಿದರೆ ‘ಚಿಕನ್ ನೆಕ್’ ಕಾಣಿಸುತ್ತದೆ. ದೇಶದ್ರೋಹಿ ‘ಶಾರ್ಜೀಲ್ ಇಮಾಮ್’ ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಸುವಾಗ ಇಂಥ ಪ್ರಮುಖ ಭೂಭಾಗವನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದ.

ಈ ಭೂಭಾಗವು ಕಿರಿದಾಗಿರುವುದರ ಪರಿಣಾಮ ಭಾರತ ಯಾವಾಗಲೂ ಜಾಗರೂಕವಾಗಿರಬೇಕು. ಈ ಭೂಭಾಗ ಇಷ್ಟೊಂದು ಕಿರಿದಾಗಿರಲು ಕಾರಣವೇನು? ಈ ಸಮಸ್ಯೆಯನ್ನು ತಂದವರು ಯಾರು? ಮತ್ತದೇ ಕಾಂಗ್ರೆಸ್ಸಿನ ನೆಹರು. ಭಾರತ ವಿಭಜನೆಯಾದಾಗ ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನವೆಂದು ಎರಡು ಭಾಗಗಳಾದವು; ಕನಿಷ್ಠ ಸಾಮಾನ್ಯ ಜ್ಞಾನ ಇದ್ದಿದ್ದರೆ, ಚಿಕನ್ ನೆಕ್‌ನ ಕಿರಿದಾದ ಭೂಭಾಗದ ಅಪಾಯವನ್ನು ಅರಿತು ಪೂರ್ವ ಪಾಕಿಸ್ತಾನದ (ಇಂದಿನ ಬಾಂಗ್ಲಾದೇಶ) ಉತ್ತರದ ಭೂಭಾಗವನ್ನು ಭಾರತಕ್ಕೆ ಸೇರಿಸಬಹುದಿತ್ತು. ಅದನ್ನು ಬಿಟ್ಟು ಅವರು ಕೇಳಿದಷ್ಟು ಭೂಮಿಯನ್ನು ಕೊಟ್ಟು ಮತ್ತೊಂದು ಪ್ರಮಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಪಕ್ಷ.

ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ 1971ರ ಯುದ್ಧದ ಬಗ್ಗೆ ಮಾತನಾಡಿ, ಅದನ್ನು ‘ಆಪರೇಷನ್ ಸಿಂದೂರ’ಕ್ಕೆ ಹೋಲಿಕೆ ಮಾಡುವ ಕಾಂಗ್ರೆಸ್ಸಿಗರಿಗೆ ಒಂದು ಪ್ರಶ್ನೆ- ನೆಹರು ಮಾಡಿದ್ದ ‘ಚಿಕನ್ ನೆಕ್’ ಪ್ರಮಾದವನ್ನು ಸರಿಪಡಿಸಲು ಇಂದಿರಾ ಗಾಂಧಿ ಯವರಿಗೆ ಒಂದು ಅವಕಾಶವಿತ್ತು.

ಪೂರ್ವ ಪಾಕಿಸ್ತಾನವು ಸ್ವಾತಂತ್ರ್ಯವನ್ನು ಪಡೆಯಲು ಇಂದಿರಾ ಗಾಂಧಿಯವರು ಸಹಾಯ ಮಾಡಿದ್ದರು. ಅಂದು ಮಾಡಿದ ಸಹಾಯಕ್ಕೆ ಪ್ರತಿಫಲವಾಗಿ ಸ್ವಲ್ಪ ಭೂಭಾಗವನ್ನು ಭಾರತಕ್ಕೆ ಸೇರಿಸಿಕೊಳ್ಳಬಹುದಿತ್ತು. ಭಾರತದ ಸಹಾಯಕ್ಕೆ ಬಾಂಗ್ಲಾದೇಶ ಏನು ಬೇಕಾದರೂ ಮಾಡಲು ಸಿದ್ಧವಿತ್ತು. ಅಂಥ ಚಿನ್ನದಂಥ ಅವಕಾಶವನ್ನು ಕಳೆದುಕೊಂಡ ಇಂದಿರಾ ಗಾಂಧಿಯವರನ್ನು ಕಾಂಗ್ರೆಸ್ಸಿಗರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಪಾಕಿಸ್ತಾನದ 54000 ಸೈನಿಕರು ಭಾರತದ ವಶದಲ್ಲಿ ದ್ದರು.

ತಮ್ಮ ತಂದೆ ಮಾಡಿದ್ದ ಪ್ರಮಾದವನ್ನು ಇಂದಿರಾ ಗಾಂಧಿಯವರು ಸರಿಪಡಿಸಬಹುದಿತ್ತು. ಆದರೆ ಸರಿಪಡಿಸಲಿಲ್ಲ. ಕಾರಣ ಚೀನಾ ಮೇಲಿನ ಮೃದುಧೋರಣೆ. ಭಾರತ, ಪಾಕಿಸ್ತಾನ ಹಾಗೂ ಚೀನಾ ದೇಶಗಳ ಗಡಿವಿಚಾರದಲ್ಲಿ ಸಂಭವಿಸಿರುವ ವಿವಾದಗಳನ್ನು ಸರಿಪಡಿಸುವ ಅನೇಕ ಅವಕಾಶ ಗಳಿದ್ದರೂ ಕಾಂಗ್ರೆಸ್ ಅಂಥ ಯತ್ನಕ್ಕೆ ಮುಂದಾಗಲಿಲ್ಲ.

ಅಷ್ಟೇಕೆ, ನೆಹರು ಅವರಿಗೆ, ಸ್ವತಃ ತಾವು ಸೃಷ್ಟಿಸಿದ ಪ್ರಮಾದಗಳನ್ನು ಸರಿಪಡಿಸುವ ಅನೇಕ ಅವಕಾಶಗಳು ಸಿಕ್ಕಿದ್ದರೂ ಸರಿಪಡಿಸಲಿಲ್ಲ. ನಂತರ ಇಂದಿರಾ ಗಾಂಧಿಯವರು 1971ರಲ್ಲಿ ಇದ್ದಂಥ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಅಖಂಡ ಭಾರತದ ಸಾವಿರಾರು ಕಿ.ಮೀ. ಭೂಭಾಗವನ್ನು ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಲಾಗಿದೆ. ಭಾರತವನ್ನು ಏಳು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷವು, ಪಾಕಿಸ್ತಾನ ಮತ್ತು ಚೀನಾದ ವಿಷಯದಲ್ಲಿ ತೋರಿದ ಮೃದುಧೋರಣೆ ಇಷ್ಟಕ್ಕೆಲ್ಲ ಕಾರಣ.

ಚೀನಾ ಎಂಬ ನಯವಂಚಕ ರಾಷ್ಟ್ರವನ್ನು ದೊಡ್ಡದೊಂದು ಶಕ್ತಿಯೆಂದು ದೇಶದೆದುರು ಬಿಂಬಿಸಿದ್ದು ಕಾಂಗ್ರೆಸ್ ಪಕ್ಷವೇ. ಕಾಂಗ್ರೆಸ್‌ಗೆ ಜತೆಯಾದವರು ಕಮ್ಯುನಿಸ್ಟರು. ಇವರು, ತಮ್ಮ ಅಸ್ತಿತ್ವವು ಜಗತ್ತಿನಾದ್ಯಂತ ಹೇಳಹೆಸರಿಲ್ಲದಂತೆ ಸವೆದು ಹೋಗಿ, ಏನೂ ಮಾಡದ ಸ್ಥಿತಿಯಲ್ಲಿರು ವಾಗ ಚೀನಾದ ಪರವಾಗಿ ನಿಲ್ಲುತ್ತಾರೆ.

ಭಾರತದ ನೆಲ, ಜಲ ಎಂಬ ಅಭಿಮಾನವಾಗಲೀ ದೇಶಭಕ್ತಿಯಾಗಲೀ ಇಲ್ಲದವರ ಬಾಯಲ್ಲಿ ಈಗ ದೇಶದ ಭದ್ರತೆಯ ಕುರಿತಾದ ಮಾತುಗಳನ್ನು ಕೇಳಬೇಕಾಗಿ ಬಂದಿದೆ. 1993, 1996 ಮತ್ತು 2008ರಲ್ಲಿ ಚೀನಾದೊಂದಿಗೆ ಗಡಿ ಒಪ್ಪಂದವನ್ನು ಮಾಡಿಕೊಂಡಾಗ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರಕಾರ. ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ಮಾಡಿದ ಪ್ರಮಾದ ಗಳ ಪಟ್ಟಿ ದೊಡ್ಡದಿದೆ. ಆದರೆ, ಈ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಅವಕಾಶಗಳು ಸಿಕ್ಕರೂ ಆ ನಿಟ್ಟಿನಲ್ಲಿ ಅವರು ಮುಂದುವರಿಯಲಿಲ್ಲ ಎಂಬುದು ವಿಪರ್ಯಾಸ!