Kalyan Banerjee: ಮಹುವಾ ಮೊಯಿತ್ರಾ ಕುಟುಂಬವನ್ನೇ ಒಡೆದಿದ್ದಾರೆ ಎಂದ ಕಲ್ಯಾಣ್ ಬ್ಯಾನರ್ಜಿ; ಬೀದಿಗೆ ಬಂತು ಟಿಎಂಸಿ ನಾಯಕರ ಒಳಜಗಳ
Mahua Moitra: ಜೂ. 25ರಂದು ಕೋಲ್ಕತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇದೀಗ ಕಲ್ಯಾಣ್ ಬ್ಯಾನರ್ಜಿ ಮತ್ತು ಮಹುವಾ ಮೊಯಿತ್ರಾ ಜಗಳ ತಾರಕಕ್ಕೇರಿದೆ.

ಮಹುವಾ ಮೊಯಿತ್ರಾ ಮತ್ತು ಕಲ್ಯಾಣ್ ಬ್ಯಾನರ್ಜಿ.

ಕೋಲ್ಕತಾ: ದಕ್ಷಿಣ ಕೋಲ್ಕತಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಮತ್ತು ಮಹುವಾ ಮೊಯಿತ್ರಾ (Mahua Moitra) ಮಧ್ಯೆ ಪರಸ್ಪರ ಕೆಸರೆರಚಾಟ ಮುಂದುವರಿದಿದೆ. ಆ ಮೂಲಕ ಟಿಎಂಸಿ ನಾಯಕರ ನಡುವಿನ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಮತ್ತೊಮ್ಮೆ ಬಹಿರಂಗಗೊಂಡಿದೆ. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ಕಲ್ಯಾಣ್ ಬ್ಯಾನರ್ಜಿ ಮೊಯಿತ್ರಾ ಅವರ ವೈಯಕ್ತಿಕ ಜೀವನವನ್ನು ಟೀಕಿಸಿದ್ದಾರೆ. ಒಡಿಶಾದ ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರ ಕುಟುಂಬವನ್ನು ಮಹುವಾ ಮೊಯಿತ್ರಾ ಒಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಮೊಯಿತ್ರಾ ಮಹಿಳೆಯರ ವಿರೋಧಿ ಎಂದೂ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಂಸದೆ ಮಹುವಾ ಮೊಯಿತ್ರಾ ಬಿಜು ಜನತಾ ದಳದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿದೇಶದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವರಿಸಿದ್ದರು. ಇದನ್ನು ಉಲ್ಲೇಖಿಸಿ ಇದೀಗ ಕಲ್ಯಾಣ್ ಬ್ಯಾನರ್ಜಿ ಟೀಕಿಸಿದ್ದಾರೆ.
#TMC MP #KalyanBanerjee launches a blistering attack on party MP Mahua Moitra.
— Pooja Mehta (@pooja_news) June 29, 2025
Says, “She is terming me anti-women but she has broken a family & married a 65 year old.”
Kalyan Banerjee makes sensational claims that he was stopped from campaigning in recently concluded… pic.twitter.com/4Rrna6JbLe
ಈ ಸುದ್ದಿಯನ್ನೂ ಓದಿ: ಮಹಿಳೆಯರಿಗೆ ಕಿರುಕುಳ, ಕಳವು, ಸೊತ್ತು ನಾಶ...ಕೋಲ್ಕತಾ ಸಾಮೂಹಿನ ಅತ್ಯಾಚಾರ ಆರೋಪಿ ಮೊನೊಜಿತ್ ಮಿಶ್ರಾನ ಭಯಾನಕ ಇತಿಹಾಸ ಒಂದೆರಡಲ್ಲ
ಕಲ್ಯಾಣ್ ಬ್ಯಾನರ್ಜಿ ಹೇಳಿದ್ದೇನು?
"ಮಹುವಾ ಹನಿಮೂನ್ ಮುಗಿಸಿ ಭಾರತಕ್ಕೆ ಹಿಂತಿರುಗಿ ನನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾರೆ. ಅವರು ನನ್ನನ್ನು ಮಹಿಳಾ ವಿರೋಧಿ ಎಂದು ಆರೋಪಿಸುತ್ತಾರೆ. ಆದರೆ ಅವರು ಮಾಡಿದ್ದೇನು? 65 ವರ್ಷ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಆ ಮೂಲಕ ಅವರ 40 ವರ್ಷಗಳ ದಾಂಪತ್ಯವನ್ನು ಮುರಿದಿದ್ದಾರೆ. ಅವರ (ಪಿನಾಕಿ ಮಿಶ್ರಾ) ಮೊದಲ ಪತ್ನಿಯನ್ನು ಮಹುವಾ ನೋಯಿಸಲಿಲ್ಲವೇ?" ಎಂದು ಕಲ್ಯಾಣ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ಮುಂದುವರಿದು, "ನೀತಿ ಉಲ್ಲಂಘನೆಗಾಗಿ ಸಂಸತ್ತಿನಿಂದ ಹೊರಹಾಕಲ್ಪಟ್ಟ ಸಂಸದೆಯೊಬ್ಬರು ನನಗೆ ಉಪದೇಶ ನೀಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅವರೇ ಮಹಿಳಾ ವಿರೋಧಿ. ತನ್ನ ಭವಿಷ್ಯವನ್ನು ಹೇಗೆ ಭದ್ರಪಡಿಸಿಕೊಳ್ಳುವುದು ಮತ್ತು ಹಣ ಸಂಪಾದಿಸುವುದು ಹೇಗೆ ಎಂದು ಮಾತ್ರ ಅವರಿಗೆ ತಿಳಿದಿದೆ" ಎಂದು ಅವರು ತಮ್ಮದೇ ಪಕ್ಷದ ಸಂಸದೆಯನ್ನು ಟೀಕಿಸಿದ್ದಾರೆ.
Misogyny in India cuts across party lines. What differentiates @AITCofficial is that we condemn these disgusting comments no matter who makes them. https://t.co/2AQ59fQK4w
— Mahua Moitra (@MahuaMoitra) June 28, 2025
ಏನಿದು ವಿವಾದ?
"ಒಬ್ಬ ಸ್ನೇಹಿತೆಯ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿದರೆ ನೀವು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹೇಗೆ ಸಾಧ್ಯ? ಶಾಲೆಗಳಲ್ಲಿ ಪೊಲೀಸರು ಇರುತ್ತಾರೆಯೇ? ಈ ಕೃತ್ಯ ಒಬ್ಬ ವಿದ್ಯಾರ್ಥಿಯಿಂದ ಇನ್ನೊಂದು ವಿದ್ಯಾರ್ಥಿನಿಗೆ ನಡೆದಿದೆ. ಆಕೆಯನ್ನು ಯಾರು ಕಾಪಾಡುತ್ತಾರೆ?ʼʼ ಎಂದು ಕಲ್ಯಾಣ್ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿದ್ದ ಮಹುವಾ "ಭಾರತದಲ್ಲಿ ಸ್ತ್ರೀ ದ್ವೇಷವು ಪಕ್ಷದ ರೇಖೆಗಳನ್ನು ಮೀರುತ್ತಿದೆ. ಅಸಹ್ಯಕರ ಕಾಮೆಂಟ್ಗಳನ್ನು ಯಾರು ಮಾಡಿದರೂ ನಾವು ಖಂಡಿಸುತ್ತೇವೆ" ಎಂದು ಎಕ್ಸ್ನಲ್ಲಿ ಬರೆದಿದ್ದರು. ಇದಕ್ಕೆ ಕಲ್ಯಾಣ್ ಬ್ಯಾನರ್ಜಿ ಇದೀಗ ತಿರುಗೇಟು ನೀಡಿದ್ದಾರೆ.
ಇನ್ನು ಟಿಎಂಸಿಯ ಇನ್ನೊಬ್ಬ ಹಿರಿಯ ನಾಯಕ ಹಾಗೂ ಶಾಸಕ ಮದನ್ ಮಿತ್ರಾ ಕೂಡ ಶನಿವಾರ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದರು. "ವಿದ್ಯಾರ್ಥಿನಿ ಅಲ್ಲಿಗೆ ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಕಾಲೇಜು ಮುಚ್ಚಿದ ಬಳಿಕ ಯಾರಾದರೂ ನಿಮಗೆ ಕರೆ ಮಾಡಿ ಕರೆದರೆ ಹೋಗಬೇಡಿ. ಇದರಿಂದ ಯಾವುದೇ ಒಳ್ಳೆಯದಾಗುವುದಿಲ್ಲ ಎಂಬ ಸಂದೇಶವನ್ನು ಈ ಘಟನೆ ಹುಡುಗಿಯರಿಗೆ ರವಾನಿಸಿದೆ. ಆ ಹುಡುಗಿ ಅಲ್ಲಿಗೆ ಹೋಗದೇ ಇರುತ್ತಿದ್ದರೆ ಘಟನೆ ನಡೆಯುತ್ತಿರಲಿಲ್ಲ" ಎಂದು ಮಿತ್ರಾ ಹೇಳಿದ್ದರು.
ಪಕ್ಷಕೆ ತಲೆನೋವಾದ ನಾಯಕ ಒಳಜಗಳ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಇದೀಗ ಟಿಎಂಸಿ ಒಳಗೇ ನಡೆಯುತ್ತಿರುವ ಈ ಜಗಳ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತಲೆನೋವು ತಂದಿತ್ತಿದೆ. ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿದ ಬಿಜೆಪಿಯು ಟಿಎಂಸಿ ಸರ್ಕಾರದ ವಿರುದ್ದ ಕಿಡಿಕಾರಿದೆ. ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದೂ ಆಗ್ರಹಿಸಿದೆ.