Sunday, 8th September 2024

ಪಕ್ಷದಿಂದ ಉಚ್ಚಾಟಿಸಿ

ramesh kumar

ಸಜ್ಜನ, ಬುದ್ಧಿವಂತ ರಾಜಕಾರಣಿ, ಅಪಾರ ಅನುಭವವುಳ್ಳ ಶಾಸಕ, ಗೌರವಾನ್ವಿತ ಮಾಜಿ ಸ್ಪೀಕರ್, ಒಳ್ಳೆಯ ಮಾತುಗಾರ, ಬಡವರ, ದುರ್ಬಲ ವರ್ಗದ
ಚಿಂತಕ, ಬುದ್ಧಿಜೀವಿ… ಎಂದೆಲ್ಲ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ ಕಾಂಗ್ರೆಸ್ ಶಾಸಕ ರಮೇಶ್‌ಕುಮಾರ್ ಅವರ ಮನಃಸ್ಥಿತಿ ಎಂಥದ್ದು, ಅವರ ಯೋಚನೆಗಳು ಎಷ್ಟು ಕೀಳು ಮಟ್ಟದಲ್ಲಿ ನಿಂತಿದೆ ಅನ್ನುವುದನ್ನು ಅವರೇ ಬಾಯಿಬಿಟ್ಟು ಸದನದಲ್ಲಿ ಆಡಬಾರದ್ದನ್ನು ಆಡಿ ಎತ್ತಿ ತೋರಿಸಿದ್ದಾರೆ.

ಇಂತಹ ಜನಪ್ರತಿನಿಧಿಗಳನ್ನು ಆರಿಸಿ ತರುವ ಜನಗಳು ತಮ್ಮನ್ನು ತಾವೇ ಒಂದು ಸಲ ಮುಟ್ಟಿ ನೋಡಿಕೊಳ್ಳಬೇಕು. ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದೇವೆ ಅನ್ನುವ ಸೊನಿಯಾ, ಪ್ರಿಯಾಂಕಾ ವಾದ್ರಾ ಇಂತಹ ಮನಸ್ಥಿತಿಯಳ್ಳ ಶಾಸಕರನ್ನು ಹೇಗೆ ಸಹಿಸಿಕೊಂಡಿದ್ದಾರೆ? ನಿಜವಾಗಿಯೂ ಅವರುಗಳಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಈ ಕೂಡಲೇ ರಮೇಶ್‌ ಕುಮಾರ್ ವರನ್ನು ಪಕ್ಷದಿಂದ ಉಚ್ಚಾಟಿಸಿ ಉಳಿದವರಿಗೆ ಸ್ಪಷ್ಟ ಸಂದೇಶ ರವಾನಿಸಬೇಕು.
-ವೈ.ಎಸ್. ನಾಗರಾಜ, ಕೊಪ್ಪ
ಸರಕಾರ-ಉಪನ್ಯಾಸಕರ

ಹಗ್ಗಜಗ್ಗಾಟ
ಗಂಡ-ಹೆಂಡ್ತಿ ಜಗಳ ನಡುವೆ ಕೂಸು ಬಡವಾಯ್ತು ಎಂಬಂತೆ ಅತಿಥಿ ಉಪನ್ಯಾಸಕರ ಮತ್ತು ಸರಕಾರದ ಹಗ್ಗ ಜಗ್ಗಾಟದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯ ಕಮರುತ್ತಿದೆ. ನಾ ಕೊಡೆ ನೀ ಬಿಡೆ ಎಂಬ ಪರಿಸ್ಥಿತಿ ಇದೆ. ಕೋರೋನ ಮಹಾಮಾರಿಯಿಂದಾಗಿ ಚೇತರಿಸಿಕೊಂಡು ಶಾಲಾ ಕಾಲೇಜು ಆರಂಭ ವಾಯಿತು ಎನ್ನುವಷ್ಟರಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಈ ಹಿನ್ನೆಲೆ ಯಲ್ಲಿ ಗಮನ ಸೆಳೆಯಲು ಅತಿಥಿ ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಇದರಿಂದ ಹೆಚ್ಚಿನ ನಷ್ಟ ಅನುಭವಿಸುತ್ತಿರುವುದು ವಿದ್ಯಾರ್ಥಿಗಳು. ಸರಕಾರ ತನ್ನ ಹಠಮಾರಿ ಧೋರಣೆ ಬಿಟ್ಟು ಉಪನ್ಯಾಸಕರ ಬೇಡಿಕೆ ಈಡೇರಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ವಂಚನೆ ತಪ್ಪಿಸಬೇಕು. ಸರಕಾರ ಇನ್ನಾದರೂ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ.

-ಪ್ರಶಾಂತ್ ಸತ್ತಿ, ಅಥಣಿ

ರೈಲು ನಿಲ್ದಾಣಕ್ಕೆ ರಾಣಿಯ ಹೆಸರಿಡಿ
ವಾರಾಣಸಿ ವಿಶ್ವನಾಥ ಮಂದಿರ ನವೀಕೃತ ಸೌಲಭ್ಯಗಳೊಂದಿಗೆ ಕಾರಿಡಾರ್ ಡಿ.೧೩ ರಂದು ಲೋಕಾರ್ಪಣೆಗೊಂಡಿತು. ವಾರಣಾಸಿಯ ವಿಶ್ವನಾಥ ಮಂದಿರ ಇಂದು ಅಸ್ತಿತ್ವದಲ್ಲಿರಲು ಮುಖ್ಯ ಕಾರಣ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್.

ಮತಾಂಧರ ದಾಳಿಗೆ ಒಳಗಾಗಿ ನೆಲೆಕಳೆದುಕೊಂಡ ವಿಶ್ವನಾಥನಿಗೆ ಮಂದಿರವನ್ನು ಪುನರ್ ನಿರ್ಮಾಣ ಮಾಡಿದ್ದಲ್ಲದೇ ದೇಶದ ಉದ್ದಗಲಕ್ಕೂ ದ್ವಾರಕಾ,
ತ್ರ್ಯಂಬಕೇಶ್ವರ, ಭೀಮಾಶಂಕರ, ಶ್ರೀಶೈಲ ಮಲ್ಲಿಕಾರ್ಜುನ, ಕೇದಾರನಾಥ, ಉಜ್ಜಯಿನಿ, ಪುರಿ ಮುಂತಾದ ಹಿಂದೂಗಳ ತೀರ್ಥಕ್ಷೇತ್ರಗಳನ್ನು ಜೀರ್ಣೋ ದ್ಧಾರ ಮಾಡಿ ಉಪಕರಿಸಿದರು. ಉತ್ತಮ ಆಡಳಿತ ನೀಡಿ, ರಾಜ್ಯ ರಕ್ಷಣೆಯನ್ನೂ ಮಾಡಿದವಳು. ಹೀಗಿದ್ದೂ ಇಂದಿಗೂ ಅಹಲ್ಯಾ ಬಾಯಿ ಸಾಕಷ್ಟು ಜನರಿಗೆ ಅಪರಿಚಿತಳೇ.

ಪಾವನಚರಿತಳಾದ ಅಹಲ್ಯಾ ಬಾಯಿ ಹೋಳ್ಕರ್ ಹೆಸರನ್ನು ಚಿರಸ್ಥಾಯಿಗೊಳಿಸಲು ವಾರಾಣಸಿ ರೈಲು ನಿಲ್ದಾಣಕ್ಕೆ ‘ರಾಣಿ ಅಹಲ್ಯಾ ಬಾಯಿ ಹೋಳ್ಕರ್ ರೈಲು ನಿಲ್ದಾಣ’ ವೆಂದು ಮರುನಾಮಕರಣ ಮಾಡುವುದು ಸೂಕ್ತ. ಕೇಂದ್ರ ಸರಕಾರ ಈ ಬಗ್ಗೆ ಯೋಚಿಸಿ ಧಿರೋದಾತ್ತ ರಾಣಿಗೆ ಸೂಕ್ತ ಗೌರವ ಸಲ್ಲಿಸಲಿ.
-ಹಲವಾಗಲ ಶಂಭು, ರಾಣಿಬೆನ್ನೂರು

ರೈಲ್ವೆ ಟಿಕೆಟ್ ನಿಲ್ದಾಣದಲ್ಲೆ ಸಿಗಲಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣದಿಂದ ಟಿಕೆಟ್ ಸೌಲಭ್ಯವೇ ಇಲ್ಲ. ರಾಣಿ ಚೆನ್ನಮ್ಮ, ಶತಾಬ್ದಿ ಸೇರಿ ಕೆಲವೊಂದಕ್ಕೆ ಮಾತ್ರ ನಿಲ್ದಾಣದಲ್ಲಿ ಟಿಕೆಟ್ ಕೊಡಲಾಗುತ್ತದೆ. ಉಳಿದಂತೆ ಆನ್ ಲೈನ್‌ನಲ್ಲಿಯೇ ಟಿಕೆಟ್ ಬುಕ್ ಮಾಡಬೇಕೆನ್ನುತ್ತಾರೆ ಅಧಿಕಾರಿಗಳು. ಆದರೆ ಆನ್‌ಲೈನ್‌ನಲ್ಲಿ ಒಂದು ಐಡಿಗೆ ಆರು ಜನರಿಗೆ ಮಾತ್ರ ಟಿಕೆಟ್ ಬುಕ್ ಮಾಡುವ ಅವಕಾಶವಿದೆ.

ಯಾಕೆ ಹೀಗೆ? ಆನ್‌ಲೈನ್ ವ್ಯವಹಾರಕ್ಕೆ ಸ್ಮಾರ್ಟ್ ಫೋನ್, ಇಂಟರ್ನೆಟ್ ಸೌಲಭ್ಯ, ನೆಟ್ ಬ್ಯಾಂಕಿಂಗ್ ಎಲ್ಲವೂ ಇರಬೇಕು.ಅಕ್ಷರಸ್ಥರಾಗಿರಬೇಕು. ರೈಲಿನಲ್ಲಿ ಪ್ರಯಾಣಿಸುವವರೆಲ್ಲರೂ ಹೀಗೇ ಇರಬೇಕೆಂದೇನೂ ಇಲ್ಲ. ಇಂದಿಗೂ ಎಷ್ಟೋ ಮಂದಿ ಅನಕ್ಷರಸ್ಥರು, ಸ್ಮಾರ್ಟ್ ಫೋನ್ ಇಲ್ಲದವರೂ ಇzರೆ. ಅವರ ಪಾಡೇನು? ಕೆಲವೊಂದು ರೈಲುಗಳಿಗೆ ಸ್ಟೇಷನ್ನಲ್ಲಿಯೇ ಟಿಕೆಟ್ ಕೊಟ್ಟು, ಇನ್ನೂ ಕೆಲವು ರೈಲುಗಳಿಗೆ ಮಾತ್ರ ಯಾಕೀ ನಿರ್ಬಂಧ? ಕೊರೋನಾ
ಕಾರಣಕ್ಕೆ ಕಳೆದೆರಡು ವರ್ಷಗಳಿಂದ ರದ್ದಾಗಿದ್ದ ಎಲ್ಲ ರೈಲುಗಳು ಈಗ ಮರು ಸಂಚರಿಸುತ್ತಿವೆ. ಜನಜೀವನ ಯಥಾಸ್ಥಿತಿಗೆ ಮರಳಿದೆ, ಆದರೂ ರೈಲ್ವೆ ಸ್ಟೇಷನ್‌ನಲ್ಲಿ ಯಾಕೆ ನಿರ್ಬಂಧ? ಆನ್‌ಲೈನ್ ಟಿಕೆಟ್ ಬುಕಿಂಗ್ ಕಡ್ಡಾಯ ಮಾಡುವುದರಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಇಲಾಖೆ, ಸರಕಾರ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.
ಮುರುಗೇಶ ಡಿ, ದಾವಣಗೆರೆ.

ಫುಟ್ ಪಾತ್‌ಗಳಲ್ಲಿ ನೀರಿಂಗಲಿ
ಬೆಂಗಳೂರು ನಗರದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗಲು ತಾಣವೇ ಇಲ್ಲದಾಗಿದೆ. ಫುಟ್ ಪಾತ್‌ಗಳನ್ನು ಸಿಮೆಂಟ್ ಮಯ ಮಾಡಿರುವುದರ ಜತೆಗೆ ಈಗ ದುಡ್ಡಿನ ದಾಹಕ್ಕೆ ರಸ್ತೆಗಳನ್ನು ಸಹ ಅನವಶ್ಯಕವಾಗಿ ವೈಟ್ ಟ್ಯಾಪಿಂಗ್ ಮಾಡಿ ಮುಂದೆ ನೀರಿನ ಅಭಾವಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಇಂಥ ಎಂಜಿನಿಯರುಗಳು, ಬಿಬಿಎಂಪಿ ಅಧಿಕಾರಿಗಳ ಹಣದ ದಾಹಕ್ಕೆ ಧಿಕ್ಕಾರವಿರಲಿ.

ನೀರಿನ ಅಭಾವ ತಡೆಗಟ್ಟಲು ಇರುವ ಒಂದೇ ಮಾರ್ಗ ನೀರಿನ ಸಂರಕ್ಷಣೆ. ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತ ವ್ಯಯದಿಂದ ಬಳಸಿ,
ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ. ಇದರ ಬಗ್ಗೆ ಸರಕಾರ ಕಾಟಾಚಾರಕ್ಕೆ ಬರೀ ಜಾಹೀರಾತುಗಳಲ್ಲಿ ನೀರಿನ ಸಂರಕ್ಷಣೆ ಬಗ್ಗೆ
ಪ್ರಚಾರಗಿಟ್ಟಿಸುತ್ತಿದ್ದು ಮತ್ತೊಂದೆಡೆ ಪರಿಜ್ಞಾನವಿಲ್ಲದ ಕೆಲಸಗಳನ್ನು ಮಾಡಿಸುತ್ತಿರುವುದು ಎಷ್ಟು ಸರಿ ? ಇದಕ್ಕೆ ಉತ್ತರ ನೀಡುವವರು ಯಾರು?
-ಬೆಂ. ಮು. ಮಾರುತಿ, ಮಲ್ಲತ್ತಹಳ್ಳಿ

error: Content is protected !!