Tuesday, 22nd October 2024

ಹೆಚ್‌ಡಿಡಿ ಜತೆಗಿನ ಒಡನಾಟ ಹೆಮ್ಮೆ

ಅಭಿವ್ಯಕ್ತಿ

ಬಂಡೆಪ್ಪ ಕಾಶೆಂಪುರ್‌

ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಸಣ್ಣ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಹರದನಹಳ್ಳಿ ದೊಡ್ಡೆಗೌಡ ದೇವೇಗೌಡ.

ಸ್ವತಃ ರೈತರಾಗಿದ್ದ ಅವರು ಮುಂದೆ ರಾಜಕೀಯ ಪ್ರವೇಶಿಸಿ, ಹೊಳೆ ನರಸೀಪುರ ತಾಲೂಕು ಬೋರ್ಡ್‌ನಿಂದ ಭಾರತದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದು, ದೇಶದ ಇತಿಹಾಸದಲ್ಲಿ ವಿಶೇಷವೆನಿಸಿದೆ. ಅವರು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿ ರುವ ೧೦ ತಿಂಗಳುಗಳ ಕಾಲ ಬಹಳಷ್ಟು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ತಮ್ಮ ಅಧಿಕಾರ ಅವಧಿಯಲ್ಲಿ ಅವರು ತಮ್ಮದೆ ಆದ ಇತಿಹಾಸ ನಿರ್ಮಿಸಿzರೆ. ಇಂಥ ಮೇರು ವ್ಯಕ್ತಿಯ ಜತೆಗೆ ನಾವು ಇದ್ದೇವೆ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ರಾಜಕಾರಣದಲ್ಲಿ ನಾವು ಬಹಳ ಚಿಕ್ಕವರು. ಆದರೆ, ಅವರ ಕುಟುಂಬ ದೊಂದಿಗೆ ಒಡನಾಟ ಇರುವುದರಿಂದಾಗ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ಸಿಕ್ಕಿದೆ.

ಕನ್ನಡಿಗರೊಬ್ಬರ ಮೊದಲ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಪ್ರಧಾನ ಮಂತ್ರಿಯಾಗಿ ಅವರು ಕೈಗೊಂಡ ಅನೇಕ ನಿರ್ಣಯಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡಿದೆ. ನೀರಾವರಿ ವಿಚಾರದಲ್ಲಿ ಬಹಳ ವಾಗಿ ಅಧ್ಯಯನ ಮಾಡಿರುವ ಅವರು ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತನ್ನು ಕೊಟ್ಟಿದ್ದರು. ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೇಳೆ ಕೃಷ್ಣ ನದಿ ನೀರಿನ ಉಪಯೋಗಕ್ಕಾಗಿ ಕೈಗೊಂಡ ನೀರಾವರಿ ಕಾಮಗಾರಿಗಳು, ಪ್ರಧಾನಮಂತ್ರಿ ಆಗಿದ್ದಾಗ ವಿವಾದದಲ್ಲಿದ್ದ ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕಕ್ಕೆ ತನ್ನ ಹಕ್ಕಿನ ಮೂಲಕ ಬಳಸಿಕೊಳ್ಳುವ ವಿಷಯದಲ್ಲಿ ಅವರು ಬಹಳ ಜಾಣ್ಮೆಯ ನಡೆಯನ್ನು ಅನುಸರಿಸಿದರು.

ನಾನು ಎರಡು ಬಾರಿ ಸಚಿವನಾಗಿದ್ದ (ಕೃಷಿ ಮತ್ತು ಸಹಕಾರ ಸಚಿವ) ವೇಳೆಯೂ ಮಾನ್ಯ ದೇವೇಗೌಡರ ಬಳಿ ಅನೇಕ ಸಲ ಚರ್ಚೆಗಳನ್ನು ನಡೆಸಿದ್ದೇನೆ. ಚರ್ಚೆಗಳು ನಡೆದ ಸಂದರ್ಭದಲ್ಲಿ ಅವರು ಕೊಟ್ಟ ಸಲಹೆಗಳು ಸಚಿವನಾಗಿ ಇಲಾಖೆಗಳನ್ನು ನಡೆಸಲು ಬಹಳಷ್ಟು ಪೂರಕವಾಗಿತ್ತು. ಪ್ರಧಾನ ಮಂತ್ರಿಯಂಥ ಹುzಯನ್ನು ಅಲಂಕರಿಸಿದ್ದರೂ, ದೇವೇಗೌಡರು ಎಂದಿಗೂ ನಮ್ಮ ಬಳಿ ಮಾತನಾಡುವಾಗ ಅದರ ಹಮ್ಮು ಬಿಮ್ಮುಗಳನ್ನು ತೋರಿಸಿದವರಲ್ಲ.

ಅತ್ಯಂತ ಪ್ರೀತಿ ವಿಶ್ವಾಸ ಗೌರವದಿಂದ ಕಾಣುತ್ತಾರೆ. ಅವರ ಸುದೀರ್ಘ ಆರು ದಶಕಗಳಿಗೂ ಹೆಚ್ಚಿನ ರಾಜಕೀಯ ಜೀವನದಲ್ಲಿ
ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದು 60 ತಿಂಗಳು. ಆದರೂ ಅವರ ಸುದೀರ್ಘ ಹೋರಾಟದ ಜೀವನದಿಂದಾಗಿ ಇಂದಿಗೂ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಪ್ರಸ್ತುತ ಎನ್ನಿಸುತ್ತಾರೆ.

ಅಪಾರ ಜ್ಞಾನ , ಅನುಭವ, ವಿಚಾರಧಾರೆ ಹೊಂದಿರುವ ನಮ್ಮ ದೇವೇಗೌಡರ ನಡುವೆಯೇ ನಾವಿರುವುದು ನಮ್ಮ ಪುಣ್ಯ. ಇಂದಿಗೂ ಅವರ ಸಲಹೆ, ಸೂಚನೆ, ಅನುಭವ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಅವಶ್ಯಕವಾಗಿದೆ ಎಂದರೆ ತಪ್ಪಾಗ ಲಾರದು.