Tuesday, 22nd October 2024

ಮೂರು ಆಯೋಗಗಳು ಮೈಮರೆತಿವೆಯೇ ?

ಅಭಿಮತ

ಛಾಯಾದೇವಿ ಈ.

ಮಾನವ ಹಕ್ಕುಗಳ ಆಯೋಗ, ಮಹಿಳಾ ಹಕ್ಕುಗಳ ಆಯೋಗ ಹಾಗೂ ಮಕ್ಕಳ ಹಕ್ಕುಗಳ ಆಯೋಗ, ಈ ಮೂರು ಆಯೋಗ ಗಳನ್ನು ಆಯಾಯ ರಾಜ್ಯ ಸರಕಾರಗಳು ಶಾಸನಬದ್ಧವಾಗಿ ಸ್ಥಾಪನೆ ಮಾಡಿರುವುದು. ಮಕ್ಕಳ, ಮಹಿಳೆಯರ, ದುರ್ಬಲ ವರ್ಗ ದವರ, ವೃದ್ಧರ ಹಾಗೂ ಹಿಂದುಳಿದ ವರ್ಗದವರ ಮಾನವಹಕ್ಕುಗಳನ್ನು ಕಾಪಾಡುವ ಉದ್ದೇಶ ಹಾಗೂ ರಾಜ್ಯ ಸರಕಾರಗಳು ಈ ಹಕ್ಕುಗಳ ಉಲ್ಲಂಘನೆ ಮಾಡಿದಂಥ ಸಂದರ್ಭದಲ್ಲಿ ಅವುಗಳ ವಿರುದ್ಧ ಎಚ್ಚರಿಕೆ ನೀಡಿ, ಸಂತ್ರಸ್ತರಿಗೆ ಪರಿಹಾರ ನೀಡಲೆಂದು.

ಆದರೆ, ಕೋವಿಡ್-19ರ ಸಂದರ್ಭಗಳನ್ನು ಮಾನವೀಯ ಮೌಲ್ಯ ನೆಲೆಗಟ್ಟಿನಲ್ಲಿ ಆತ್ಮಾವಲೋಕನ ಮಾಡಿದಂಥ ಸಂದರ್ಭ ದಲ್ಲಿ, ಚಾಮರಾಜನಗರದ ಜಿಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಜನರ ಸಾವು, ಕಲಬುರ್ಗಿಯಲ್ಲಿ ವೆಂಟಿಲೇಟರ್
ಇಲ್ಲದೆ ಕಾರ ಪ್ರಾಣಬಿಟ್ಟ ವ್ಯಕ್ತಿ, ಅಂತ್ಯಸಂಸ್ಕಾರಕ್ಕಾಗಿ 20 ತಾಸು ಸರದಿ, ಔರಂಗಬಾದ್‌ನಲ್ಲಿ ಒಂದೇ ಆಂಬುಲೆನ್ಸ್‌ನಲ್ಲಿ 22 ಶವಗಳ ಸಾಗಾಟ, ಚಿಂತಾಮಣಿಯಲ್ಲಿ ಕೋವಿಡ್‌ನಿಂದ ಮೃತ ಹೊಂದಿದ ಮಹಿಳೆಯನ್ನು ಜೆಸಿಬಿಯಲ್ಲಿ ತೆಗೆದುಕೊಂಡು ಹೋಗಲಾಯಿತು. ಈ ಎಲ್ಲಾ ಸುದ್ದಿಗಳು ನಮ್ಮ ಸುತ್ತಮುತ್ತಲ ಜಿಗಳಲ್ಲಿ ನಡೆಯುತ್ತಿರುವ ವಾಸ್ತವ ಚಿತ್ರಣಗಳಿಗೆ ಉದಾಹರಣೆ ಗಳು.

ಇವುಗಳು ಪ್ರತಿನಿತ್ಯ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವುದನ್ನು ನಾವೆಲ್ಲ ಅಸಹಾಯಕರಾಗಿ ಓದುತ್ತಿದ್ದೇವೆ. ಮನುಷ್ಯನಿಗೆ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಹಲವಾರು ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ಗುರುತಿಸಲಾಗಿದೆ. ಗೌರವವಾಗಿ ಜೀವಿಸುವ ಹಕ್ಕನ್ನು ಅನುಚ್ಛೇದ 21ರಲ್ಲಿ ನೀಡಲಾಗಿದೆ. ಇದು ಗೌರವಯುತವಾದ ಅಂತ್ಯಸಂಸ್ಕಾರದ ಹಕ್ಕನ್ನು ಒಳಗೊಂಡಿರು ತ್ತದೆ. ಪ್ರಸ್ತುತತೆಯನ್ನು ಗಮನಿಸುವುದಾದರೆ ಆರೋಗ್ಯಯುತವಾಗಿ ಜೀವಿಸುವ ಹಕ್ಕಿಗೆ ಸಂಪೂರ್ಣವಾಗಿ ಉಂಟಾಗಿದೆ.

ರಾಜ್ಯ ಸರಕಾರ ವ್ಯಕ್ತಿಯ ಆರೋಗ್ಯದ ಹಕ್ಕನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವಂತೆ ಭಾಸವಾಗುತ್ತಿದೆ. ನಡುರಸ್ತೆ ಯಲ್ಲಿ ಜನರು ಅಸುನೀಗುತ್ತಿzರೆ. ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೆ ಕಂಗಾಲಾಗುತ್ತಿದ್ದಾರೆ. ಉಸಿರಾಟಕ್ಕಾಗಿ ಆಮ್ಲಜನಕ ವಿಲ್ಲದೆ ಪರದಾಡುತ್ತಿದ್ದಾರೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಎಂಬ ಕಾರಣಕ್ಕಾಗಿ ಭಯಭೀತ ರಾಗಿದ್ದಾರೆ, ಅವರನ್ನು ಕನಿಷ್ಠ ಗೌರವ ಇಲ್ಲದೆ ಸಂಸ್ಕಾರ ಮಾಡುತ್ತಿರುವುದು ನಮ್ಮ ನಾಡಿನ ಸಂಸ್ಕೃತಿಗೆ ಅಗೌರವ ಸೂಚಿಸಿದಂತಾಗಿದೆ.
ಇವೆಲ್ಲದರ ನಡುವೆ ಮತ್ತೊಂದು ವಿಪರ್ಯಾಸದ ಸಂಗತಿಯೆಂದರೆ ನಮ್ಮಲ್ಲಿನ ಮೂರು ಮ… ಗಳು ಕಾಣೆಯಾಗಿರುವುದು. ಮೂರು ಮ… ಗಳು ಎಂದರೆ ಮಾನವ ಹಕ್ಕುಗಳ ಆಯೋಗ, ಮಹಿಳಾ ಹಕ್ಕುಗಳ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗ. ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಚ್ಯುತಿಯಾದಂಥ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ಸ್ವಪ್ರೇರಿತವಾಗಿ ಮುಂದೆ ಬಂದು ಅವರನ್ನು ರಕ್ಷಣೆಗೆ ಒಳಪಡಿಸಿ ಹಕ್ಕುಚ್ಯುತಿಯನ್ನು ಸರಿಪಡಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ.

ಆದರೆ ಇಂಥ ವ್ಯಕ್ತಿಗಳು ನಡುರಸ್ತೆಯಲ್ಲಿ ಹೆಣಗಳಾಗುತ್ತಿದ್ದರು. ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರಕಿಸುವಲ್ಲಿ ಸರಕಾರ ಸೋತಿದ್ದರೂ, ಗೌರವಯುತ ಅಂತ್ಯಸಂಸ್ಕಾರವಿರಲಿ ಸಾವಿನ ದುಃಖದ ಜತೆಗೆ 20 ತಾಸುಗಳು ಶವಸಂಸ್ಕಾರಕ್ಕಾಗಿ ಸರದಿಸಾಲಿ ನಲ್ಲಿ ಕಾಯುವ ಅಮಾನವೀಯ ಪರಿಸ್ಥಿತಿ ನೋಡಿಯೂ ಮಾನವ ಹಕ್ಕುಗಳ ಆಯೋಗ ನಿಶಬ್ದವಾಗಿರುವುದನ್ನು ಗಮನಿಸಿದರೆ ಇಂಥ ಆಯೋಗಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡದೇ ಇರದು.