Friday, 20th September 2024

ಈ ಡಾಕ್ಟರ್‌ ಭಾರತದ ಮೊದಲ ಮಹಿಳಾ ಕ್ಯಾಪ್ಟನ್‌ !

ಶಶಾಂಕಣ

ಶಶಿಧರ ಹಾಲಾಡಿ

ನಮ್ಮ ದೇಶದಲ್ಲಿ ಮಹಿಳಾ ಕ್ರಾಂತಿಕಾರಿಗಳು, ಹೋರಾಟಗಾರರು ಕಡಿಮೆಯೇ. ಅದೇ ರೀತಿ 20ನೆಯ ಶತಮಾನದ ಮೊದಲ ಭಾಗ ದಲ್ಲಿ ವೈದ್ಯಕೀಯ ಪದವೀಧರರೂ ಕಡಿಮೆ. ಆಗಿನ ದಿನಮಾನಗಳಲ್ಲಿ ಮಹಿಳೆಯರು ಮುಂದುವರಿಯುವ ಅವಕಾಶ ಕಡಿಮೆ. ಅಂತಹ ಸಂದರ್ಭದಲ್ಲಿ ಮಹಿಳಾ ಕ್ರಾಂತಿಕಾರಿಯಾಗಿ, ವೈದ್ಯರಾಗಿ ಹೆಸರು ಮಾಡಿದ ಅಪರೂಪದ ಮಹಿಳೆ ಎಂದರೆ ಕ್ಯಾಪ್ಟನ್ ಡಾಕ್ಟರ್ ಲಕ್ಷ್ಮಿ ಸೆಹಗಲ್. ಭಾರತಕ್ಕೆ ತ್ವರಿತವಾಗಿ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಸುಮಾರು 43000 ಸೈನಿಕರೊಂದಿಗೆ ದಾಳಿ ಮಾಡಿದ ಅಜಾದ್ ಹಿಂದ್ -ಜ್‌ನ ಮಹಿಳಾ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿದ್ದ ಲಕ್ಷ್ಮಿ ಸೆಹಗಲ್, ಸುಭಾಷ್ ಚಂದ್ರ ಬೋಸ್ ಅವರ ಒಡನಾಡಿ. ಬ್ರಿಟಿಷರನ್ನು ಭಾರತದಿಂದ ಓಡಿಸುವ ಉದ್ದೇಶದಿಂದ ಜಪಾನ್ ಸೇನೆಯ ಸಹಕಾರ ಪಡೆದು, 1940ರ ದಶಕದಲ್ಲಿ ದಾಳಿ ಮಾಡಿ, ಅಸ್ಸಾಂನ ಭೂಭಾಗಗಳನ್ನು ವಶಪಡಿಸಿಕೊಂಡ ಸುಭಾಷ್ ಮತ್ತು ಲಕ್ಷ್ಮಿ ಅವರ ಹೋರಾಟವು, ಕಾರಣಾಂತರದಿಂದ ವಿಫಲಗೊಂಡಿತು.

ಆದರೆ, ಅವರ ಹೋರಾಟದ ವಿವರಗಳು ನಮ್ಮ ದೇಶದಲ್ಲಿ ಅದೇಕೋ ಪಡೆಯಬೇಕಾದಷ್ಟು ಪ್ರಾಮುಖ್ಯತೆ ಪಡೆಯಲೇ ಇಲ್ಲ. ಸುಭಾಷ್‌ಚಂದ್ರ ಬೋಸ್ ಅವರ ಮರಣದ ರಹಸ್ಯವು ಕೊನೆಗೂ ನಿಗೂಢವಾಗಿಯೇ ಉಳಿದುಹೋಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೊದಲ ಮೂರು ದಶಕಗಳ ತನಕ ಅವರ ಹೆಸರನ್ನು, ಅಜಾದ್ ಹಿಂದ್ -ಜ್ ಹೆಸರಸನ್ನು ವ್ಯವಸ್ಥಿತವಾಗಿ ಮರೆ ಮಾಚ ಲಾಯಿತು. ಇದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಈಚಿನ ಒಂದೆರಡು ದಶಕಗಳಲ್ಲಿ ಮಾತ್ರ ಸುಭಾಷ್ ಚಂದ್ರ ಬೋಸ್ ಅವರ ಹೋರಾಟವನ್ನು, ಅವರ ನಾಯಕತ್ವ ಗುಣವನ್ನು, ತ್ಯಾಗವನ್ನು ನೆನಪಿಸಿಕೊಳ್ಳುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ.

ಸುಭಾಷ್ ಅವರ ಒಡನಾಡಿಯಾಗಿದ್ದು, ಅವರಿಂದ ‘ರಾಣಿ ಆಫ್‌ ಝಾನ್ಸಿ ರೆಜಿಮೆಂಟ್’ನ ಕ್ಯಾಪ್ಟನ್‌ಆಗಿ ನೇಮಿಸಲ್ಪಟ್ಟ ಡಾ||ಲಕ್ಷ್ಮಿ ಸೆಹಗಲ್, ನಮ್ಮ ದೇಶದಲ್ಲಿ ಸಾಕಷ್ಟು ಪರಿಚಿತರೇ. 1998ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಲಕ್ಷ್ಮಿ ಸೆಹಗಲ್,
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಡಜನರ, ನಿರಾಶ್ರಿತರ ಸೇವೆ ಮಾಡುತ್ತಾ ವೈದ್ಯ ವೃತ್ತಿ ಮುಂದುವರಿಸಿದರು. ಜತೆಯಲ್ಲೇ ತಮ್ಮ ಹೋರಾಟದ ಬದುಕನ್ನು ಸಹ ಮುಂದುವರಿಸಿ, ತಮ್ಮದೇ ನೆಲೆಯಲ್ಲಿ ರಾಜಕೀಯವಲಯದಲ್ಲೂ ಶಕ್ತಿಯಾಗಿ ಗುರುತಿಸಿ
ಕೊಂಡರು. ಸಾವಿರಾರು ಮಹಿಳಾ ಸೈನಿಕರಿದ್ದ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿದ್ದ ಇವರು, 1940ರ ದಶಕದಲ್ಲಿ ಬಂದೂಕು ಚಲಾಯಿಸುವುದನ್ನು ಕಲಿತದ್ದಲ್ಲದೇ, ಸಾವಿರಾರು ಸಶಸ ಮಹಿಳಾ ಯೋಧರ ನಾಯಕಿಯಾಗಿದ್ದರು ಎಂಬ ವಿಷಯವೇ ವಿಸ್ಮಯ
ಹುಟ್ಟಿಸುವಂತಹದ್ದು.

ಸಿಂಗಪುರದಲ್ಲಿ ವೈದ್ಯೆಯಾಗಿ, ಸೀರೋಗ ತಜ್ಞೆಯಾಗಿ ಹೆಸರು ಮಾಡಿ, ಯಶಸ್ವಿ ವೈದ್ಯಕೀಯ ಬದುಕನ್ನು ರೂಪಿಸಿಕೊಳ್ಳುವ ಉತ್ತಮ ಅವಕಾಶವಿದ್ದ ಈ ಮಹಿಳೆ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡುತ್ತಿದ್ದ ಸೈನ್ಯದ ಭಾಗವಾಗಿ ಯುದ್ಧ ಭೂಮಿಗಿಳಿದ ವಿಷಯ ಸಹ ಇಂದು ವಿಸ್ಮಯ ಎನಿಸುತ್ತದೆ. ಜೀವನದುದ್ದಕ್ಕೂ ಹೋರಾಟದ ಮನೋಭಾವದಿಂದಲೇ ಬದುಕಿದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾದ ಲಕ್ಷ್ಮಿ ಸೆಹಗಲ್ ಅವರು ಜನಿಸಿದ್ದು ಕೇರಳದ ಅಮಕ್ಕರ ಎಂಬ ಹಳ್ಳಿಯಲ್ಲಿ. ಅವರ ತಂದೆ ಅಂದಿನ ಪ್ರಸಿದ್ಧ ನ್ಯಾಯವಾದಿ ಸ್ವಾಮಿನಾಥನ್. ಇಂಗ್ಲೆಂಡಿನಲ್ಲಿ ಕಾನೂನು ಶಾಸ ಅಧ್ಯಯನ ಮಾಡಿದ್ದರು. ತಾಯಿ ಅಮ್ಮು ಸ್ವಾಮಿನಾಥನ್, ಆಗಿನ ಕಾಲದಲ್ಲಿ ಪತಿಯ ಸಹಕಾರದಿಂದ ಇಂಗ್ಲಿಷ್ ಕಲಿತ ಅಪರೂಪದ ಮಹಿಳೆ.

ಸ್ವಾಮಿನಾಥನ್ ಮತ್ತು ಅಮ್ಮು ಅವರು ಇಂಗ್ಲೆಂಡಿನಲ್ಲಿದ್ದಾಗ, ರಿಜಿಸ್ಟರ್ ಮದುವೆಯಾಗಿ, ಕಾನೂನಿನ ಪ್ರಕಾರ ತಮ್ಮ ದಾಂಪತ್ಯ ವನ್ನು ದಾಖಲಿಸಬೇಕಾಯಿತು. ಏಕೆಂದರೆ, ಕೇರಳದಲ್ಲಿ ಅವರ ಕುಟುಂಬದಲ್ಲಿದ್ದ ಮಾತೃಪ್ರಧಾನ ಕೌಟುಂಬಿಕ ವ್ಯವಸ್ಥೆಯಿಂದ ಇವರು ಹೊರಬರಬೇಕಾಗಿತ್ತು. ಸ್ವಾಮಿನಾಥನ್ ಅವರು ಭಾರತಕ್ಕೆ ವಾಪಸಾಗಿ ಮದರಾಸ್ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರೂ, ಅವರದ್ದು ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಮನೋಭಾವ. ಆಂಗ್ಲರ ನಡುವೆ ಇದ್ದು ಕೊಂಡೇ, ಅವರ ಒಡನಾಟ ಪಡೆದು, ಅವರನ್ನು ಈ ದೇಶದಿಂದ ಓಡಿಸುವ ಪ್ರಯತ್ನ ಮಾಡಬೇಕೆಂಬ ಮನೋಭಾವದಿಂದ, ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಿದ್ದರು. ಸ್ವಾಮಿನಾಥನ್ ಅವರ ಬಂಡಾಯ ಮನೋಭಾವ ಕೇವಲ ಆಶಯದ ಮಟ್ಟ ದಲ್ಲಿ ಉಳಿಯಲಿಲ್ಲ, ಕೃತಿರೂಪದಲ್ಲಿತ್ತು.

ಮಗಳು ಲಕ್ಷ್ಮಿ ಓದುತ್ತಿದ್ದ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯ ಹುದ್ದೆಯಲ್ಲಿದ್ದುದು ಓರ್ವ ಯುರೋಪಿಯನ್ ಮಹಿಳೆ. ಅವಳ ಅಣ್ಣನಾದ ಹೇ ಎಂಬ ಬ್ರಿಟಿಷ್ ಅಧಿಕಾರಿಯನ್ನು ಮದರಾಸಿನ ಸ್ಥಳೀಯ ವ್ಯಕ್ತಿ ಕದಂಬೂರ್ ಎಂಬಾತ ಕೊಲೆ ಮಾಡಿದ!
ಆಗ, ಆ ಆರೋಪಿಯ ಪರವಾಗಿ ವಕಾಲತ್ತು ಮಾಡಿ, ಆತನನ್ನು ಶಿಕ್ಷೆಯಿಂದ ಪಾರುಮಾಡಿದರು ಈ ಸ್ವಾಮಿನಾಥನ್! ಈ ಘಟನೆಯು ಮಕ್ಕಳ ವಿದ್ಯಾಭ್ಯಾಸದ ಮೇಲೆ ನೇರ ಪರಿಣಾಮ ಮಾಡಿತು.

ಲಕ್ಷ್ಮಿ ಮತ್ತು ಅವಳ ಸಹೋದರಿ ಮೃಣಾಲಿನಿ (ನಂತರ ಮೃಣಾಲಿನಿ ಸಾರಾಭಾಯಿ) ಇಂಗ್ಲಿಷ್ ಶಾಲೆ ಬಿಟ್ಟು ಸರಕಾರಿ ಶಾಲೆ ಗಳಲ್ಲಿ ಓದುವಂತಾಯಿತು. ಆಗಲೇ ಬ್ರಿಟಿಷರ ವಿರುದ್ಧದ ಹೋರಾಟದ ಮನೋಭಾವನೆಯ ಬೀಜ ಲಕ್ಷ್ಮಿಯವರ ಮನದಲ್ಲಿ  ಬಿತ್ತಿರಬೇಕು. 1920ರ ದಶಕದ ಆ ಕಾಲದಲ್ಲೇ, ಲಕ್ಷ್ಮಿಯವರ ಮನೆಯಲ್ಲಿ ಸಮಾನತೆಯ ಗಾಳಿ; ಎಲ್ಲ ಜಾತಿಯವರಿಗೂ ಸಮಾನ ಸ್ಥಾನ. ಈ ಕುಟುಂಬದ ಕ್ರಾಂತಿಕಾರಿ ನಡತೆಗಳನ್ನು ಕಂಡ ಸ್ಥಳೀಯರು ಅಚ್ಚರಿಪಟ್ಟದ್ದೂ ಉಂಟು.

ಮದರಾಸಿನ ಕಾಲೇಜುಗಳಲ್ಲಿ ಅಧ್ಯಯನ ಮಾಡಿ 1938ರಲ್ಲಿ ವೈದ್ಯಕೀಯ ಪದವಿ ಪಡೆದ ಲಕ್ಷ್ಮಿ ಸ್ವಾಮಿನಾಥನ್ ಅವರು, ಪಿ.ಕೆ.ಎನ್.ರಾವ್ ಎಂಬ ಪೈಲಟ್‌ನ್ನು ವಿವಾಹವಾಗುತ್ತಾರೆ. ಆದರೆ ಅದೊಂದು ಅಸಮ ದಾಂಪತ್ಯ ಎನಿಸಿ, ಬಹುಬೇಗನೆ
ಮುರಿದುಬೀಳುತ್ತದೆ. ವೈಯಕ್ತಿಕ ಬದುಕಿನಲ್ಲಿ ಎದುರಾದ ಈ ದುರ್ಭರ ಸನ್ನಿವೇಶದಿಂದ ದೂರಾಗಲೆಂದೇ, 1940ರಲ್ಲಿ ಡಾ|| ಲಕ್ಷ್ಮಿಯವರು ಸಿಂಗಪುರಕ್ಕೆ ಹೋಗಿ, ಅಲ್ಲಿ ತನ್ನ ವೈದ್ಯಕೀಯ ವೃತ್ತಿಯನ್ನು ಮುಂದುವರಿಸುತ್ತಾರೆ. ಆ ದಿನಗಳಲ್ಲಿ ಸಿಂಗಪುರವು ಬ್ರಿಟಿಷರ ಆಳ್ವಿಕೆಯಲ್ಲಿದ್ದು, ಸಾಕಷ್ಟು ಭಾರತೀಯರು ಅಲ್ಲಿ ನೆಲೆಸಿದ್ದರು.

ತನ್ನ 26ನೆಯ ವಯಸ್ಸಿನಲ್ಲಿ ಸಿಂಗಪುರ ತಲುಪಿದ ಲಕ್ಷ್ಮಿಯವರನ್ನು ತನ್ನ ಪ್ರಭಾವಲಯಕ್ಕೆ ಸೆಳೆದುಕೊಂಡದ್ದು, ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದ ಅಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ). ಡಾ||ಲಕ್ಷ್ಮಿಯವರು ಸಿಂಗಪುರ ತಲುಪಿದ ಎರಡು ವರ್ಷಗಳಲ್ಲಿ ಜಪಾನ್ ಸೇನೆಯು ಸಿಂಗಪುರವನ್ನು ಆಕ್ರಮಿಸಿತು; ಬ್ರಿಟಿಷ್ ಸೇನೆಯು ಸಿಂಗಪುರವನ್ನು ಜಪಾನಿಯರಿಗೆ ಒಪ್ಪಿಸಿ, ಶರಣಾಗತವಾಯಿತು. ಆ ಸಂಘರ್ಷದಲ್ಲಿ ಗಾಯಗೊಂಡ ಸೇನಾ ಸಿಬ್ಬಂದಿ ಯನ್ನು ಉಪಚರಿಸುವ ಕೆಲಸದಲ್ಲಿ ಲಕ್ಷ್ಮಿ ಸೆಹಗಲ್ ತೊಡಗಿಕೊಂಡರು. ಆಗ ಅಲ್ಲಿದ್ದ ಹೋರಾಟಗಾರರಾದ ಕೇಶವ ಮೆನನ್, ಎಸ್.ಸಿ. ಗುಹಾ, ಎನ್. ರಾಘವನ್ ಮೊದಲಾದವರ ಸಂಪರ್ಕ. ಈ ನಡುವೆ, ಅಜಾದ್ ಹಿಂದ್ ಫೌಜ್‌ನ ಮುಖ್ಯಸ್ಥರಾಗಿ ಸುಭಾಷ್ ಚಂದ್ರ ಬೋಸ್ ಅವರು ನೇಮಕಗೊಂಡರು.

2.7.1943 ರಂದು ಸಿಂಗಪುರ ಭೇಟಿಗೆ ಬಂದ ಸುಭಾಷ್ ಚಂದ್ರ ಬೋಸ್ ಅವರು ಲಕ್ಷ್ಮಿಯವರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿದ ನಾಯಕ, ಕ್ರಾಂತಿಕಾರಿ. ತನ್ನ ಸೇನೆಯಲ್ಲಿ ಮಹಿಳಾ ಘಟಕವನ್ನು ಆರಂಭಿಸಬೇಕೆಂದು ಸುಭಾಷ್ ಯೋಚಿಸು ತ್ತಿದ್ದ ವಿಷಯ ಲಕ್ಷ್ಮಿಯವರಿಗೆ ತಿಳಿದು, ತಾನು ಸುಭಾಷ್‌ರನ್ನು ಭೇಟಿಯಾಗಬೇಕೆಂಬ ಮನವಿ ಸಲ್ಲಿಸಿದರು. ವೈದ್ಯೆಯಾಗಿದ್ದ ಲಕ್ಷ್ಮಿಯವರೊಂದಿಗೆ ಐದು ಗಂಟೆಗಳ ಸುದೀರ್ಘ ಸಮಾಲೋಚನೆ ನಡೆಸಿದ ಸುಭಾಷ್ ಚಂದ್ರ ಬೋಸ್ ಅವರು, ಲಕ್ಷ್ಮಿಯ ವರನ್ನು ಮಹಿಳಾ ಸೇನೆಯ ಕ್ಯಾಪ್ಟನ್ ಆಗಿ ನೇಮಿಸಿದರು. ಅಂದಿನಿಂದ ಇವರು ಕ್ಯಾಪ್ಟನ್ ಲಕ್ಷ್ಮಿ ಎಂದೇ ಪ್ರಖ್ಯಾತರು.

ಕ್ಯಾಪ್ಟನ್ ಲಕ್ಷ್ಮಿಯವರ ಮಹಿಳಾ ಸೇನೆಯು ಶಸ್ತ್ರಾಸ್ತ್ರ ಬಳಕೆಯಲ್ಲಿ ತರಬೇತಿ ಪಡೆಯುತ್ತಾ, ಅಜಾದ್ ಹಿಂದ್ ಫೌಜ್‌ನ ಅಭಿಯಾನದಲ್ಲಿ ತನ್ನದೇ ಪಾತ್ರ ವಹಿಸಿತು. ಸುಭಾಷ್ ಚಂದ್ರ ಬೋಸ್ ಅವರ ಸೇನೆಯಲ್ಲಿ ಸುಮಾರು 43000 ಸೈನಿಕರಿದ್ದರು. ಸ್ವಾತಂತ್ರ್ಯದ ಕರೆಗೆ ಓಗೊಟ್ಟು, ಬ್ರಿಟಿಷ್ ಸೇನೆ ತೊರೆದ ಭಾರತೀಯ ಯೋಧರು ಇದರ ಪ್ರಮುಖ ಅಂಗ. ಜಪಾನಿಯರಿಗೆ ಶರಣಾ ಗಿದ್ದ ಕೆಲವು ಬ್ರಿಟಿಷ್ ಸೈನಿಕರು ಸಹ ಅಜಾದ್ ಹಿಂದ್ ಫೌಜ್ ಸೇರಿದ್ದರು.

1944ರ ಸಮಯದಲ್ಲಿ ಈ ಸೇನೆಯು ಭಾರತವನ್ನು ಬ್ರಿಟಿಷರಿಂದ ವಿಮುಕ್ತಿಗೊಳಿಸುವ ಅಭಿಯಾನದಲ್ಲಿ, ಬರ್ಮಾದ ಮೂಲಕ ಭಾರತದತ್ತ ಧಾವಿಸಿ, ಅಸ್ಸಾಂನ ಇಂಫಾಲ್ ನಗರದತ್ತ ಮುಂದುವರಿಯಿತು. ಆದರೆ ವಿಶ್ವಯುದ್ಧದ ವಿದ್ಯಮಾನ ಬೇರೆ ದಿಕ್ಕಿನಲ್ಲಿ ಚಲಿಸಿತು. 1945ರಲ್ಲಿ ಜಪಾನ್ ಸೋತುಹೋಯಿತು. ಬ್ರಿಟಿಷರು ಅಜಾದ್ ಹಿಂದ್ ಫೌಜ್‌ನ ಸೈನಿಕರನ್ನು ಬಂಧಿಸಿದರು.

ಕ್ಯಾಪ್ಟನ್ ಲಕ್ಷ್ಮಿ ಸಹ ಬಂಧನಕ್ಕೆ ಒಳಗಾಗಿ, ಭಾರತಕ್ಕೆ ಕರೆತರಲ್ಪಟ್ಟರು. ಅಲ್ಲಿಗೆ ಅವರ ಸೇನಾ ಜೀವನಕ್ಕೆ ತೆರೆ ಬಿತ್ತು. ಸುಭಾಷ್ ಚಂದ್ರ ಬೋಸ್ ಅವರ ಸೇನೆಯಲ್ಲಿದ್ದ ಕರ್ನಲ್ ಪ್ರೇಮ್ ಕುಮಾರ್ ಸೆಹಗಲ್ ಎಂಬವರೊಡನೆ ೧೯೪೭ರಲ್ಲಿ ವಿವಾಹವಾದ ಕ್ಯಾಪ್ಟನ್ ಲಕ್ಷ್ಮಿಯವರು, ಲಾಹೋರ್‌ನಲ್ಲಿ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿದರು. ಇವರ ಪತಿ ಸೆಹಗಲ್ ಅವರದ್ದು
ಇನ್ನೊಂದೇ ಸಾಹಸಗಾಥೆ. ಬ್ರಿಟಿಷರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ಸಿಂಗಪುರದಲ್ಲಿ ಜಪಾನೀಯರ ಸೆರೆಯಾದಾಗ, ಬ್ರಿಟಿಷರ ವಿರುದ್ಧ ಹೋರಾಡುವ ನಿರ್ಧಾರ ಮಾಡಿದರು.

ಜಪಾನಿಯರು ಸಿಂಗಪುರ ತೊರೆದಾಗ, ಸೆಹಗಲ್ ಸಹ ಬ್ರಿಟಿಷರ ಬಂಧಿಯಾದರು. 1947ರಲ್ಲಿ ದೇಶ ವಿಭಜನೆ ಗೊಂಡಾಗ, ಸೆಹಗಲ್ ದಂಪತಿ ಕಾನ್‌ಪುರಕ್ಕೆ ಬಂದು ನೆಲೆಸಿದರು. ನಿರಾಶ್ರಿತ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಾ, ಜನಸಾಮಾನ್ಯರ ನಡುವೆ ವಿಶ್ವಾಸ ಬೆಳೆಸಿಕೊಂಡ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ಜನಾನುರಾಗಿ ಎನಿಸಿದರು. 1971ರಲ್ಲಿ ಬಾಂಗ್ಲಾ ದೇಶದ ಉದಯವಾದಾಗ, ಕೋಲ್ಕತಾಕ್ಕೆ ಹರಿದು ಬಂದ ಸಾವಿರಾರು ನಿರಾಶ್ರಿತರಿಗೆ ವೈದ್ಯಕೀಯ ಸೇವೆ ನೀಡಲು ಕೋಲ್ಕತಾಕ್ಕೆ ಹೋಗಿ, ಐದು ವಾರ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದರು. ಈ ನಡುವೆ, ಲಕ್ಷ್ಮಿ ಸೆಹಗಲ್ ಅವರ ಮಗಳು ಸುಭಾಷಿಣಿ ಆಲಿಯವರು ಸಿಪಿಐ (ಎಂ)
ಸೇರಿದ್ದು, ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯವರ ಪರಿಚಿತರಾಗಿದ್ದರು. ಆ ಮೂಲಕ, 57 ವರ್ಷದ ಲಕ್ಷ್ಮಿ ಸೆಹಗಲ್ ಅವರನ್ನು ಸಹ ಸಿಪಿಐ (ಎಂ) ಪಕ್ಷಕ್ಕೆ ಸೇರಿಸಿದರು. 1971ರಲ್ಲಿ ಸಿಪಿಐ(ಎಂ) ಪಕ್ಷ ಸೇರಿದಾಗ, ಲಕ್ಷ್ಮಿ ಸೆಹಗಲ್ ಅವರ ಮಾತುಗಳು ಹೀಗಿವೆ “ನಾನು ಮೊದಲಿನಿಂದಲೂ ಕಮ್ಯುನಿಸ್ಟ್‌ರ ರೀತಿ ಚಿಂತಿಸುತ್ತಿದ್ದೆ. ನನಗೆ ಅಪಾರ ಹಣ, ಆಸ್ತಿ, ಸಂಪತ್ತು ಗಳಿಸುವ ಆಸೆ ಎಂದಿಗೂ ಇರಲಿಲ್ಲ.” ಅದೇ ವರ್ಷ ರಾಜ್ಯಸಭೆಯ ಸದಸ್ಯರಾಗಿ ತಮ್ಮ ಪಕ್ಷವನ್ನು ಪ್ರತಿನಿಧಿಸಿದರು, ಲಕ್ಷ್ಮಿ ಸೆಹಗಲ್.

1981 ರಲ್ಲಿ ಆಲ್ ಇಂಡಿಯಾ ಡೆಮೊಕ್ರಾಟಿಕ್ ವಿಮೆನ್ಸ್ ಅಸೋಸಿಯೇಷನ್ ಆರಂಭಿಸಿದ ಲಕ್ಷ್ಮಿ ಸೆಹಗಲ್, ರಾಜಕೀಯ ಚಟು ವಟಿಕೆಗಳ ನಡುವೆ ತಮ್ಮ ವೈದ್ಯಕೀಯ ವೃತ್ತಿಯನ್ನು ಕಡೆಗಣಿಸಲಿಲ್ಲ. 1984ರಲ್ಲಿ ಭೋಪಾಲ್ ನಲ್ಲಿ ಅನಿಲ ದುರಂತ ಸಂಭವಿಸಿ ದಾಗ, ಅಲ್ಲಿನ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ನೀಡಲು ಧಾವಿಸಿದರು. ಅದೇ ವರ್ಷ ಇಂದಿರಾ ಗಾಂಧಿಯವರ
ಕೊಲೆಯಾಗಿ, ದೇಶದ ಎಲ್ಲೆಡೆ ಸಿಖ್ ಜನರ ಮೇಲೆ ಆಕ್ರಮಣ ನಡೆದಾಗ, ಕಾನ್‌ಪುರದಲ್ಲಿ ಸಿಖ್ ವಿರುದ್ಧ ಹಿಂಸಾಚಾರ ನಡೆಸುತ್ತಿದ್ದ ಜನರನ್ನು ಎದುರಿಸಿದ್ದೇ ಅಲ್ಲದೆ, ಗಾಯಗೊಂಡ ಎಲ್ಲರಿಗೂ ತಮ್ಮ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಿದರು.

1996ರಲ್ಲಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು. 2002ರಲ್ಲಿ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದು ಲಕ್ಷ್ಮಿ ಸೆಹಗಲ್ ಅವರ ಇಳೀ ವಯಸ್ಸಿನ ಅಭಿಯಾನಗಳಲ್ಲಿ ಪ್ರಮುಖ ಎನಿಸಿದೆ. ಸಿಪಿಐ (ಎಂ) ಮತ್ತು ಇತರ ಕಮ್ಯುನಿಸ್ಟ್ ವಿಚಾರ ಧಾರೆಯ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಲಕ್ಷ್ಮಿ ಸೆಹಗಲ್ ಅವರು ಸ್ಪರ್ಧೆಗೆ
ಇಳಿದು, ಸಾಕಷ್ಟು ಓಡಾಡಿ ಪ್ರಚಾರದ ಅಭಿಯಾನ ಕೈಗೊಂಡರು. ಆದರೇನು ಮಾಡುವುದು!

ಅವರ ಎದುರಾಳಿಯಾಗಿ ಆಡಳಿತ ಪಕ್ಷದ ಬೆಂಬಲದೊಂದಿಗೆ ಡಾ.ಎಪಿಜೆ ಅಬ್ದುಲ್ ಕಲಾಂ ಸ್ಪರ್ಧಿಸಿದ್ದರು! ತಾನು ಎಂತಿದ್ದರೂ ಗೆಲ್ಲುವುದು ಅಸಂಭವ ಎಂದು ತಿಳಿದಿದ್ದರೂ, ತಮ್ಮ 88 ನೆಯ ವರ್ಷದ ಇಳಿವಯಸ್ಸಿನಲ್ಲೂ ಹೋರಾಟದ ಮನೋಭಾವ ದಿಂದಲೇ ಲಕ್ಷ್ಮಿ ಸೆಹಗಲ್ ದಿಟ್ಟತನದ ಪ್ರಚಾರದ ಅಭಿಯಾನ ನಡೆಸಿದರು.

ಹಲವಾರು ದಶಕಗಳಿಂದಲೂ ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರು, ಕೊನೆಯ ತನಕವೂ ತಾವು ನಂಬಿ ದ್ದನ್ನೇ ಪಾಲಿಸಿಕೊಂಡು ಬಂದದ್ದು ವಿಶೇಷ. ರಾಷ್ಟ್ರಪತಿ ಚುನಾವಣೆ ನಡೆದು, ಅಬ್ದುಲ್ ಕಲಾಂ ಅವರು ಆಯ್ಕೆಗೊಂಡ ನಂತರ, ಕಾನ್‌ಪುರಕ್ಕೆ ವಾಪಸಾಗಿ, ಎಂದಿನಂತೆ ಜನಸೇವೆಯನ್ನು ಡಾ||ಲಕ್ಷ್ಮಿ ಸೆಹಗಲ್ ಮುಂದುವರಿಸಿದರು. ತಾನು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ, ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ ನೀಡುವ ಕೈಂಕರ್ಯವನ್ನು ಕೊನೆಗಾಲದ ತನಕವೂ ಮುಂದು ವರಿಸಿದ ಧೀಮಂತ ಮಹಿಳೆಯಾಗಿ ಅವರನ್ನು ಗುರುತಿಸಬಹುದು.

ಲಕ್ಷ್ಮಿ ಸೆಹಗಲ್ ಅವರು ಮೃತರಾಗುವ ಹಿಂದಿನ ವಾರದ ತನಕವೂ ತಮ್ಮ ಕ್ಲಿನಿಕ್ ನಲ್ಲಿ ಜನರ ತಪಾಸಣೆ ಮಾಡುತ್ತಿದ್ದರು. 2012ರಲ್ಲಿ ಅವರು ಇಹಲೋಕ ತ್ಯಜಿಸಿದಾಗ ಅವರಿಗೆ 98 ವರ್ಷ ವಯಸ್ಸು. ಡಾ||ಲಕ್ಷ್ಮಿ ಸೆಹಗಲ್ ಬದುಕಿದ್ದರೆ, ಇದೇ
ಅಕ್ಟೋಬರ್ 24ಕ್ಕೆ ಅವರಿಗೆ 106 ವರ್ಷ ವಯಸ್ಸಾಗಿರುತ್ತಿತ್ತು.