Saturday, 26th October 2024

ಬೆನ್ನು ಹತ್ತಲಿದ್ದಾನೆ ಬೇತಾಳ

ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಬೇತಾಳ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಬೇತಾಳ ಮೂಡಿಬಂದಿದೆ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ ಹಿಂದೆ ಸಮಾಗಮ ಹಾಗೂ ದೇವಯಾನಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದು ಅವರ ಮೂರನೇ ಚಿತ್ರ.

ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ನಾಯಕ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್, ತನ್ನ ಮನೆಯಲ್ಲಿ ಆಗಾಗ ಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಆ ಹುಡುಕಾಟದಲ್ಲಿ ಆತನಿಗೆ ಕೊನೆಗೂ ಒಂದು ಮನೆ ಸಿಗುತ್ತದೆ. ಆ ಮನೆಗೆ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ
ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ನಾಯಕ ನಿಗೆ ತಿಳಿಸುತ್ತದೆ. ನಾಯಕ ಅದರ ಆಸೆ ಪೂರೈಸುತ್ತಾನೆಯೋ ಇಲ್ಲವೆ ಎಂಬುದೇ ಚಿತ್ರದ ಕಥೆ.

ನಾಯಕ ದೆವ್ವದ ಆಸೆ ಪೂರೈಸಲು ಏನೆಲ್ಲಾ ಕಸರತ್ತು ಮಾಡಿದ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ಹೇಳುವ ಪ್ರಯತ್ನ ಮಾಡಿ ದ್ದಾರೆ ನಿರ್ದೇಶಕರು. ಯುವನಟ ಸ್ಮೈೈಲ್ ಶಿವು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಮತ್ತೊಬ್ಬ ನಟ ಅನಿಕ್ ಮುಖ್ಯ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ಹಾಗೂ ಕಾವ್ಯಾಗೌಡ ಇಬ್ಬರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈಗಾಗಲೇ, ತನ್ನ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳ ಚಿತ್ರೀಕರಣಕ್ಕೆ ಸಿದ್ದವಾಗಿದೆ ಚಿತ್ರತಂಡ. ಚಿತ್ರದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು, ಪ್ರತಿ ಸೀನ್ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಬೆಂಗಳೂರು ಸುತ್ತಮುತ್ತ ಟಾಕಿ ಫೋರ್ಷನ್ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ ಸ್ಮೈಲ್ ಶಿವು.

ಬೇತಾಳ ಒಂದು ಕಾಮಿಡಿ ಹಾರರ್ ಕಂಟೆಟ್ ಹೊಂದಿರೋ ಚಿತ್ರ. ಇದರಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಜ್‌ಶೋರ್  ಸಂಗೀತ ನೀಡಿದ್ದಾರೆ. ಮಾತಿನ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿಯಿದೆ.  ಚಿಕ್ಕಮಗಳೂರು, ಸಕಲೇಶಪುರದಲ್ಲಿ ಹಾಡುಗಳನ್ನು ಶೂಟ್ ಮಾಡುವ ಪ್ಲಾನ್ ಇದೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡಿಯುತ್ತಿದೆ ಎಂದರು ನಿರ್ದೇಶಕರು.