Saturday, 27th April 2024

ನಡು ವಯಸ್ಸಿನ ಬಿಕ್ಕಟ್ಟುಗಳು

ನಡುವಯಸ್ಸಿನ ಮನಸ್ಥಿತಿಯು ಕೆಲವರಲ್ಲಿ ಆತಂಕವನ್ನು ತಂದೊಡ್ಡಬಹುದು. ಪಾಶ್ಚಾತ್ಯ ಜೀವನ ಶೈಲಿಯನ್ನು ಅನುಸರಿಸುವವರಲ್ಲಿ ಇದು ಜಾಸ್ತಿ ಎನ್ನಲಾಗಿದೆ. ಇದಕ್ಕೇನು ಪರಿಹಾರ?

ಡಾ. ಸವಿತಾ ಸಿ. ಜಿ.

ಮಾನವನ ಜೀವಿತಾವಧಿಯಲ್ಲಿ ಯೌವನ ಹಾಗೂ ವೃದ್ಧಾಪ್ಯದ ನಡುವಿನ ವಯಸ್ಸಿನ ಪಾತ್ರ ಬಹುಮುಖ್ಯ. ಈ ವಯೋವಧಿಯಲ್ಲಿ, ಕೈಯಿಂದ ಜಾರುತ್ತಿರುವ ಯೌವನವನ್ನು ಹಿಡಿಯಲು ಪರದಾಡುತ್ತ, ವೃದ್ಧಾಪ್ಯದಲ್ಲಿ ಕಾಲಿಡಲು ಒ ಎನ್ನುವ ಮನಸ್ಸಿನ ಬಿಕ್ಕಟ್ಟಿನ ಸ್ಥಿತಿಯು ಉಂಟಾಗುತ್ತದೆ. ಇದರೊಡನೆ ಕಳೆದು ಹೋದ ದಿನಗಳ ಬಗ್ಗೆ ಪಶ್ಚಾತ್ತಾಪ ಪಡುವುದು, ಜೀವನದಲ್ಲಿ ತಾನೇನೂ ಸಾಧಿಸಲಿಲ್ಲ, ತಾನು ಹೀಗೆ ಮಾಡಿದ್ದರೆ ಚೆನ್ನಿತ್ತು, ಹಾಗೆ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬೆ ಯೋಚನಾ ಸರಣಿ, ವಿಚ್ಛೇದನ, ಕೆಲಸ ಕಳೆದುಕೊಳ್ಳುವಿಕೆ, ಬೆಳೆದ ಅವಿಧೇಯ ಮಕ್ಕಳು, ಆಪ್ತರ ಸಾವು, ವ್ಯವಹಾರದಲ್ಲಿ ನಷ್ಟ ಇನ್ನೂ ಅನೇಕ ಕಾರಣಗಳು ಮಾನಸಿಕ ಸಂತುಲನವನ್ನು ಕದಡಿ, ಆತ್ಮ ವಿಶ್ವಾಸ ಹಾಗು ಸ್ವಂತಿಕೆಯ ಬುಡವನ್ನೇ ಅಡಿಸುವ ಮನಸ್ಸಿನ ಒಂದು ಮಜಲು ನಿರ್ಮಾಣವಾಗುತ್ತದೆ.

ದೇಹದಲ್ಲಿ ಇಳಿಮುಖವಾಗುತ್ತಿರುವ ಶಕ್ತಿ, ಸುಕ್ಕು ಬೀಳಲಾರಂಭಿಸಿದ ಚರ್ಮ, ನರೆಯುತ್ತಿರುವ ಕೂದಲು, ಏರುತ್ತಿರುವ ದೇಹದ ತೂಕ ಇವೆಲ್ಲ ವೃದ್ಧಾಪ್ಯ ಹತ್ತಿರವಾಗುತ್ತಿರುವುದನ್ನು ಹೇಳಲಾರಂಭಿಸಿದಂತೆ ಯೌವನ ವನ್ನು ಮತ್ತೆ ಹಿಡಿಯುವ ವ್ಯರ್ಥ ಪ್ರಯತ್ನವೂ ಆರಂಭವಾಗುತ್ತದೆ. ವಾಸ್ತವವನ್ನು ಒಪ್ಪಲಾರದೆ, ಮುಂದೇ ನನ್ನೂ ಸಾದಿಸಲಾರೆ ಎಂಬ ಭ್ರಮಾ ಲೋಕದಲ್ಲಿ ಮನಸ್ಸು ಸಿಕ್ಕಿ ಹಾಕಿಕೊಳ್ಳುತ್ತದೆ. ಮಧ್ಯವಯಸ್ಕರ ಮನಸ್ಸಿನ ಈ ವಿಷಮಸ್ಥಿತಿಯೇ ಮಿಡ್ ಲೈಫ್ ಕ್ರೈಸಿಸ್.

ಮನಸ್ಸಿನ ಈ ಸ್ಥಿತಿಯು ವ್ಯಕ್ತಿಯ ಸಂಸ್ಕೃತಿ ಹಾಗು ಸುತ್ತಲಿನ ಸಮಾಜದ ಮೇಲೆ ಅವಲಂಬಿತ. ಅಮೆರಿಕದಂತಹ ಪಾಶ್ಚಿಮಾತ್ಯ ಸಂಸ್ಕೃತಿಯುಳ್ಳ ದೇಶಗಳಲ್ಲಿ ಸುಮಾರು ೨೫% ಜನರು ಈ ಬಿಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗುತ್ತಾರೆ. ಸಂಶೋಧನೆಗಳ ಪ್ರಕಾರ ಜಪಾನ್ ಹಾಗೂ ಭಾರತದಲ್ಲಿ ಈ ಮನೋಸ್ಥಿತಿ ಅನುಭವಿಸುವವರು ಕಡಿಮೆ. ಮಧ್ಯವಯಸ್ಸಿನ ಈ ಸ್ಥಿತಿ ಹೆಂಗಸರಲ್ಲೂ ಹಾಗೂ ಗಂಡಸರಲ್ಲೂ ಬೇರೆ ಬೇರೆ ರೀತಿಯಾಗಿ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಗಂಡಸರು ವೃತ್ತಿ, ಮದುವೆ ಅಥವಾ ಆರೋಗ್ಯದ ಬಗ್ಗೆ ಅಸಮಾಧಾನ ತಳೆಯು ವುದು, ಹಠಾತ್ತಾಗಿ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವುದು, ತನಗಿಂತ ಅತಿ ಕಡಿಮೆ ವಯಸ್ಸಿನ ಹೆಂಗಸರೊಂದಿಗೆ ಸಂಬಂಧ ಬೆಳಸು ವುದು, ರೋಮಾಂಚಕ ಅನುಭವ ನೀಡುವ ಕಾರ್ಯಗಳನ್ನು ಮಾಡುವುದು, ದುಬಾರಿ ವಸ್ತುಗಳನ್ನು ಖರೀದಿಸುವುದರಲ್ಲಿ ತಮ್ಮ ಮನಸ್ಸನ್ನು ಹರಿಯಬಿಡುತ್ತಾರೆ.

ಮಧ್ಯವಯಸ್ಕ ಹೆಂಗಸರು ಏರುತ್ತಿರುವ ತಮ್ಮ ದೇಹದ ತೂಕದ ಬಗ್ಗೆ ಅತಿಯಾಗಿ ಆಲೋಚಿಸುವುದು, ತಮಗೆ ಸಂತೋಷ ನೀಡುತ್ತಿದ್ದ ಹವ್ಯಾಸಗಳಿಂದ ವಿಮುಖರಾಗುವುದು, ದೇಹದಲ್ಲಿ ಹುಸಿ ನೋವುಗಳನ್ನು ಅನುಭವಿಸುವುದು, ಆತ್ಮಾವಲೋಕನ ಮಾಡಿಕೊಳ್ಳುವುದು, ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಕೈಗೆ ಬರುವ ಅವಕಾಶಗಳನ್ನು ನಿರಾಕರಿಸುವುದು, ತನ್ನ ಬಾಹ್ಯ ರೂಪದ ಬಗ್ಗೆ ಅತಿಯಾಗಿ ಚಿಂತಿಸುವುದು ಅಥವಾ ತೀರಾ ನಿರ್ಲಕ್ಷಿ ಸುವುದು, ತಾನು ವೃದ್ಧೆ ಎಂದು ಪರಿಗಣಿಸುವುದು, ಇಂತಹುದೇ ಹಲವಾರು ಗೊಂದಲ ಗೋಜುಗಳಿಗೆ ಒಳಗಾಗುತ್ತಾರೆ.

ಈ ಬಿಕ್ಕಟ್ಟಿನಲ್ಲಿ ಗಂಡು ಹಾಗು ಹೆಣ್ಣು ಇಬ್ಬರಲ್ಲೂ ಖಿನ್ನತೆ, ಆತಂಕ, ಕಳೆದು ಹೋದ ದಿನಗಳ ಬಗ್ಗೆ ಪಶ್ಚಾತಾಪ, ಸಹೋದ್ಯೋಗಿ ಹಾಗು ಸ್ನೇಹಿತರಿಂದ ಅಪಮಾನದ ಭಯ, ಮತ್ತೆ ಯೌವ್ವನದ ಬಯಕೆ, ಒಂಟಿಯಾಗಿರಬೇಕೆಂಬ ಭಾವನೆ, ಅತಿ ಹೆಚ್ಚಾದ ಅಥವಾ ಅತೀ ಕಡಿಮೆಯಾದ ಲೈಂಗಿಕ ಬಯಕೆಗಳು, ನಿರಾಸಕ್ತಿ, ಸಣ್ಣ ವಿಷಯಗಳಿಗೂ ಕೋಪ, ತನ್ನ ಪ್ರಸ್ತುತ ಸ್ಥಿತಿಯ ಬಗ್ಗೆ ಅಸಹನೆ, ಹಿಂದೆ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ಸರಿ ಪಡಿಸುವ
ಬಯಕೆ ಇವೇ ಮುಂತಾದವು ಸಾಮಾನ್ಯವಾಗಿ ಕಾಣಬರುವ ಲಕ್ಷಣಗಳು.

ಈ ಬಿಕ್ಕಟ್ಟಿಗೆ ಪರಿಹಾರವೇನು?
ಈ ಮನೋಸ್ಥಿತಿಯಿಂದ ಹೊರಬರಲು ಕೆಲವು ಸರಳ ಉಪಾಯಗಳಿವೆ.
? ಪ್ರತಿಯೊಬ್ಬರೂ ಒಂದ ಒಂದು ಹವ್ಯಾಸದಲ್ಲಿ ಆಸಕ್ತಿ ಹೊಂದಿರುತ್ತಾರೆ. ಅಡುಗೆ, ಚಿತ್ರಕಲೆ, ಹಾಡುಗಾರಿಕೆ, ಬರವಣಿಗೆ, ಭಾಷಣ, ಕಥಾ ನಿರೂಪಣೆ, ವಸ ವಿನ್ಯಾಸ ಇತ್ಯಾದಿಗಳಲ್ಲಿ ಒಲವಿರುತ್ತದೆ. ಇಂತಹ ಹವ್ಯಾಸವನ್ನು ಪುನರ್ಜೀವಗೊಳಿಸಿ ಅದರಲ್ಲಿ ಪರಿಣಿತಿ ಪಡೆದು ಅದನ್ನು ಮುಂದುವರೆಸುವುದು. ಇದು ಗೊಂದಲಕ್ಕೊಳಗಾದ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತದೆ.

? ಧ್ಯಾನ ಅಥವಾ ಮೆಡಿಟೇಶನ್. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಿ ಮುಂದಿನ ನಿರ್ಧಾರಗಳ ಬಗ್ಗೆ ವಿವೇಕದಿಂದ ಯೋಚಿಸುವಂತೆ ಮಾಡುತ್ತದೆ. ಮನಸ್ಸುಯೋಚಿಸುವ ಶಕ್ತಿಯನ್ನುಕುದುರಿಸಿಕೊಳ್ಳುತ್ತದೆ.

? ಜೀವನದಲ್ಲಿ ಚಿಕ್ಕಪುಟ್ಟ ಬದಲಾವಣೆಗಳನ್ನು ತರುವುದು – ಮನೆಯನ್ನು ಶೃಂಗರಿಸುವುದು,ಕೆಟ್ಟ ಸ್ನೇಹಿತರ ಸಹವಾಸ ನಿಲ್ಲಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು,ಕ್ಷುಲ್ಲಕ ಚಿಂತನೆಗಳನ್ನು ತೊರೆಯುವುದು, ಪ್ರವಾಸ ಇತ್ಯಾದಿಗಳು ಮನೋಸಗೊಳಿಸಿ ಬದುಕಿಗೆ ಒಂದು ಗುರಿ ತೋರುತ್ತವೆ.

? ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ವೀಕ್ಷಿಸುವುದನ್ನು ನಿಲ್ಲಿಸುವುದು ಉತ್ತಮ ಬದಲಾವಣೆ. ಇದರ ಬದಲು ಆಸಕ್ತಿ ಇರುವ ವಿಷಯದ ಬಗ್ಗೆ ಪುಸ್ತಕಗಳನ್ನೋದುವ ಹವ್ಯಾಸ ಬೆಳಸಿಕೊಂಡಲ್ಲಿ ಖಂಡಿತವಾಗಿಯೂ ಈ ಬಿಕ್ಕಟ್ಟಿಗೆ ಪರಿಹಾರ ದೊರೆಯುತ್ತದೆ.

? ನಿಮ್ಮಂತೆಯೇಯೋಚಿಸುವ ವ್ಯಕ್ತಿಗಳ ಸಖ್ಯ ಬೆಳಸಿರಿ. ಇದರಿಂದ ನಿಮ್ಮಯೋಚನಾ ಮಟ್ಟ ಹೆಚ್ಚಿ ಮನಸ್ಸು ತಿಳಿಯಾಗುತ್ತದೆ.

ನಮ್ಮ ವೇದಗಳಲ್ಲಿ ಗೃಹಸ್ಥಾಶ್ರಮದ ನಂತರದ ನಾಲ್ಕನೆಯ ಆಶ್ರಮವಾದ ವಾನಪ್ರಸ್ಥದ ಉಖವಿದೆ. ವಾನಪ್ರಸ್ಥವೆಂದರೆ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ, ವನದ ಕಡೆ ಪ್ರಸ್ಥಾನಿಸುವುದೆಂದರ್ಥ. ಇದರರ್ಥ ಕಾಡಿನಲ್ಲಿ ಅಲೆಯುವುದೆಂದಲ್ಲ. ಅತಿಯಾದ ವ್ಯಾಮೋಹವನ್ನು ತ್ಯಜಿಸಿ, ಶಾಂತವಾಗಿದ್ದು, ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದೆಂದರ್ಥ.

ನಮ್ಮ ಹಿರಿಯರ ಆಲೋಚನೆಯಾದ ವಾನಪ್ರಸ್ಥಾಶ್ರಮ ಈ ಸ್ಥಿತಿಗೆ ಉತ್ತಮ ಪರಿಹಾರವೆನ್ನಬಹುದೇನೋ! ಇಂತಹ ಮಾನಸಿಕ ಬಿಕ್ಕಟ್ಟಿನ ಸ್ಥಿತಿಯೂ ಶಾಶ್ವತವಲ್ಲ, ಇದೂ ಸಹ ನಿಧಾನವಾಗಿ ಕಳೆದುಹೋಗುತ್ತದೆ. ಚಿಂತಿಸದೇ, ದುಡುಕದೇ ಶಾಂತವಾಗಿರಿ.

ಭಾರತೀಯರಲ್ಲಿ ಕಡಿಮೆ
ಇಂತಹ ಮಾನಸಿಕ ಬಿಕ್ಕಟ್ಟು ಎಲ್ಲಾ ಮಧ್ಯವಯಸ್ಕರಿಗೂ ಆಗುತ್ತದೆ ಎಂದೇನಿಲ್ಲ. ಇದು ಶೇಕಡಾ ೧೫ ರಷ್ಟು ಜನರಲ್ಲಿಕಾಣಬಹುದು. ಇದರ ವಿಶೇಷತೆ ಏನೆಂದರೆ ಹೆಚ್ಚು ವಿದ್ಯಾವಂತರಾಗಿ ಸಮಾಜದಲ್ಲಿ ಗಣ್ಯರಾಗಿರುವವರಲ್ಲಿ ಹಾಗು ಅನಕ್ಷರಸ್ಥರಲ್ಲಿ ಕಾಣಬಾರದೇ, ಮಧ್ಯಮ ಮಟ್ಟದ ವಿದ್ಯಾಭ್ಯಾಸ ಹಾಗೂ ಸಾಮಾನ್ಯ ಜೀವನ ನಡೆಸುತ್ತಿರುವವರಲ್ಲಿ ಹೆಚ್ಚು ಕಾಡುತ್ತದೆ. ಭಾರತೀಯ ಜೀವನ ಶೈಲಿಯನ್ನು ಅನುಸರಿಸುವವರಿಗೆ ಇಂತಹ ಬಿಕ್ಕಟ್ಟಿನ ಮನಸ್ಥಿತಿ ಕಡಿಮೆ ಪ್ರಮಾಣದಲ್ಲಿಕಾಣಿಸಿಕೊಳ್ಳುತ್ತದೆ.

error: Content is protected !!