Sunday, 19th May 2024

ಬಹುಪ್ರತಿಭೆಗಳ ಸಂಗಮ ಹನುಮಂತ

Hanumantha

ಗ.ನಾ.ಭಟ್ಟ

ಏಳು ಕಾಂಡಗಳಿಂದ ಕೂಡಿದ ‘ವಾಲ್ಮೀಕಿ ರಾಮಾಯಣ’ವು ಆಯಾ ಕಾಂಡಗಳಿಗೆ ಅನ್ವರ್ಥಶೀರ್ಷಿಕೆಯನ್ನೇ ಹೊಂದಿದೆ. ಆದರೆ ಅವುಗಳಲ್ಲಿ ಸುಂದರ ಕಾಂಡ ಮಾತ್ರ ವಿಭಿನ್ನವೆನಿಸುತ್ತದೆ. ಹನುಮಂತನೇ ಪ್ರಧಾನವಾಗಿರುವ ಆ ಕಾಂಡಕ್ಕೆ ವಾಲ್ಮೀಕಿಗಳು ಯಾಕೆ ‘ಸುಂದರಕಾಂಡ’ ಎಂದು ಹೆಸರಿಸಿದರು ಅಂತ ತಲೆಕೆಡಿಸಿಕೊಂಡವರಿದ್ದಾರೆ.

ಅದಕ್ಕೆ ಉತ್ತರವಾಗಿ ಹನುಮಂತ ಆ ಕಾಂಡದಲ್ಲಿ ಸುಂದರವಾದ ಹಾಗೂ ಜನಮೆಚ್ಚುವ ಕೆಲಸ ಮಾಡಿದ್ದ ಅಂತ ಹೇಳ ಬೇಕಾಗುತ್ತದೆ. ಕಷ್ಟಗಳಲ್ಲಿ ಸಿಲುಕಿಕೊಂಡಿದ್ದ ಶ್ರೀರಾಮ ಮತ್ತು ಸೀತಾದೇವಿಗೆ ಸಂತೋಷವಾಗುವ ವಾರ್ತೆ ಯೊಂದನ್ನು ತಂದಿದ್ದ ಹನುಮಂತ. ಶ್ರೀರಾಮ ಮತ್ತು ಸೀತೆ ಪರಸ್ಪರ ವಿರಹಿತರಾಗಿ, ಅನ್ಯೋನ್ಯ ಚಿಂತಾಕ್ರಾಂತರಾಗಿ, ಅಜ್ಞಾತ ವಾಸಿಗಳಾಗಿ, ದುಃಖತಪ್ತರಾಗಿ ಇದ್ದಾಗ ಹನುಮಂತ ಅವರೀರ್ವರಿಗೂ ಪ್ರಿಯವಾರ್ತೆಯನ್ನು ತಂದಿದ್ದ.

ಅವರೀರ್ವರೂ ಮಾನಸಿಕವಾಗಿ ಸಮಾಗಮವಾಗುವಂತೆ ಮಾಡಿದ್ದ. ಅದು ಮುಂದೆ ಅವರಿಬ್ಬರ ಸಾಕ್ಷಾತ್ ಸಮಾ ಗಮಕ್ಕೆ ದಾರಿಮಾಡಿಕೊಟ್ಟಿತು. ಈ ಘಟನೆ ಅತ್ಯಂತ ಸುಂದರ, ಪರಮ ಮಂಗಳಕರವಾದದ್ದು. ಆ ಕಾರಣಕ್ಕೇ ಅದು ಸುಂದರಕಾಂಡ. ರಾಮಾಯಣದಲ್ಲಿ ಬರುವ ಅಯೋಧ್ಯಾಕಾಂಡ ಮತ್ತು ಅರಣ್ಯಕಾಂಡ ಸುಂದರವಾದು ದಲ್ಲ. ಸಂತೋಷಕರವಾದು ದಲ್ಲ. ಅದು ದುಃಖಕರವಾದುದು. ಅಯೋಧ್ಯಾಕಾಂಡದಲ್ಲಿ ರಾಮನ ಪಟ್ಟಾಭಿಷೇಕ ತಪ್ಪಿ ಹೋಗಿ ರಾಮ ವನವಾಸ ಮಾಡುವಂತಾಯಿತು.

ಅದು ಅಸುಂದರ; ಮನಸ್ಸಿಗೆ ಹಿತವಾದುದಲ್ಲ. ಅರಣ್ಯಕಾಂಡವೂ ಹಾಗೆಯೇ. ರಾವಣ ಸೀತೆಯನ್ನು ಅಪಹರಿಸಿ ರಾಮಲಕ್ಷ್ಮಣರಿಗೆ ಅತೀವ ದುಃಖವನ್ನು ತಂದ. ಅದಕ್ಕಾಗಿ ಅದು ಅಸುಂದರ, ಮನೋವೇದಕರ.

ಸಂತೋಷ ವಾರ್ತೆಯ ಕಾಂಡ ಆದರೆ ಸುಂದರಕಾಂಡ ಹಾಗಲ್ಲ. ಕಂಗಾಲಾಗಿದ್ದ ರಾಮನಿಗೆ ಹನುಮಂತ ಸೀತೆ ಬದುಕಿದ್ದಾಳೆ ಎಂಬ ಸಂತೋಷದ
ವಾರ್ತೆಯನ್ನು ತಂದ. ರಾಮ ಕ್ಷೇಮವಾಗಿದ್ದಾನೆ ಎಂಬ ವಾರ್ತೆಯನ್ನು ಸೀತೆಗೆ ಅರುಹಿದ. ಅದಕ್ಕಾಗಿ ಅದು ಸುಂದರ. ರಾಮಯಣದಲ್ಲಿ ಹನುಮಂತನಿಗೆ ವಿಶಿಷ್ಟವಾದ ಸ್ಥಾನ. ಅವನು ರಾಮನ ಭಕ್ತನಷ್ಟೇ ಅಲ್ಲ. ಮಹಾವೀರ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ ಅವನಷ್ಟು ಎತ್ತರಕ್ಕೆ ಏರುವವರು ವಿರಳ. ಇಡೀ ಜೀವನವನ್ನು ರಾಮನ ಸೇವೆಗೆ ಮುಡುಪಾಗಿಟ್ಟವನು.

ಸ್ವಾರ್ಥವಿಲ್ಲದವನು. ಜೀವನೋತ್ಸಾಹ, ಪೌರುಷಪ್ರಕಾಶ, ಲೋಕಸ್ನೇಹ ಇವು ಅವನ ತಾರಕಮಂತ್ರಗಳಾಗಿದ್ದವು. ವೇದ, ವೇದಾಂತ, ವ್ಯಾಕರಣ, ತರ್ಕ, ಜ್ಯೌತಿಷ, ಮೀಮಾಂಸಾ ಎಲ್ಲವೂ ಅವನಿಗೆ ಹೃದ್ಗತವಾಗಿದ್ದವು. ಹನುಮಂತ ಶತ್ರುಭಯಂಕರನೆನಿಸಿಕೊಂಡಿದ್ದ. ಕಾರ್ಯದಕ್ಷನಾಗಿ, ರಾಯಭಾರಿಯಾಗಿ, ವಿವೇಕದ ಸಾಕಾರಮೂರ್ತಿಯಾಗಿ ಅವನು ರಾಮನಿಗೆ ಸಲ್ಲಿಸಿದ ಸೇವೆ ಅನುಪಮ. ಶರೀರಬಲ, ಬುದ್ಧಿಬಲ, ಅಧ್ಯಾತ್ಮಬಲಗಳ ತ್ರಿವೇಣಿ ಸಂಗಮವಾಗಿ ಮೆರೆದ ಹನುಮಂತ ಭಾರತಿಯರಿಗೆ ನಿತ್ಯಸ್ಮರಣೀಯ.

ಇಷ್ಟರೂಪಿ
ಅವನ ವೈಶಿಷ್ಟ್ಯವೆಂದರೆ- ಸಂದರ್ಭ ಬಂದಾಗ ಅವನು ಎಂತಹ ರೂಪವನ್ನೂ ತಾಳಬಲ್ಲವನಾಗಿದ್ದ. ಅದಕ್ಕಾ ಗಿಯೇ ಅವನನ್ನು ಕಾಂಚನಾದ್ರಿ ಕಮನೀಯವಿಗ್ರಹಮ್, ಬಂಗಾರದ ಬೆಟ್ಟದಂತಹ ಆಕರ್ಷಕ ರೂಪವುಳ್ಳವ ನೆಂದು ವರ್ಣಿಸಿದೆ. ತನ್ನಿಚ್ಛೆಯಂತೆ ಆತ ಅಣುವೂ, ಬೃಹತ್ತೂ, ಸೌಮ್ಯನೂ, ಘೋರನೂ ಆಗಬಲ್ಲವನಾಗಿದ್ದ. ಅವನ ವೀರಸಂಪತ್ತಂತೂ ಅಸಾಧಾರಣವಾದುದು. ಮನೋಜವಂ ಮಾರುತತುಲ್ಯವೇಗಮ್, ಮನೋವೇಗ ವುಳ್ಳವನು, ಮಾರತಸದೃಶವೇಗವುಳ್ಳವನು ಎಂದೇ ವರ್ಣಿಸಿದೆ.

ಇವೆಲ್ಲಕ್ಕಿಂತ ಅವನ ಅಂತರಂಗ ಸಂಪತ್ತು ಇನ್ನೂ ಶ್ರೇಷ್ಠವಾದುದು. ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್, ತನ್ನ ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡವನು, ಬುದ್ಧಿವಂತರಲ್ಲಿ ಮಹಾವರಿಷ್ಠ ಆತ. ಹೀಗೆ ಅವನ ಕೊಂಡಾಟ ರೋಚಕವಾಗಿ ಬರುತ್ತದೆ. ಇವೆಲ್ಲವೂ ಇಂದಿನ ಜನತೆಗೆ ಆದರ್ಶಪ್ರಾಯವಾಗಿ ನಿತ್ಯಾನು ಸಂಧೇಯವಾಗಿದೆ.

ಹನುಮಂತ ರಾಮನಿಗೆ ತನ್ನನ್ನು ಪ್ರಪ್ರಥಮವಾಗಿ ಪರಿಚಯಿಸಿಕೊಂಡ ವಿಧ ಜಗತ್ಪ್ರಸಿದ್ಧ. ಅದನ್ನು ವಾಲ್ಮೀಕಿ ವರ್ಣಿಸಿದ ಬಗೆ ಇಡೀ ವಾಕ್ ಶಾಸಕ್ಕೇ ಕನ್ನಡಿ ಹಿಡಿಯುಂಥಾದ್ದು. ಆತ ಮಾತನಾಡಿದ ರೀತಿ ಶ್ರೀರಾಮನ ಹೃದಯವನ್ನೇ ಸೂರೆಗೊಂಡಿತಂತೆ. ‘ಉಚ್ಚಾರ ಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್’ ಎಂದು ರಾಮ ಕೊಂಡಾಡುವ ಬಗೆ ಬಲು ಭೋಗ್ಯವಾದುದು.

ಬಹುವ್ಯಾಹರತಾನೇನ ನ ಕಿಂಚಿದಪಶಬ್ದಿತಂ |
ನ ಮುಖೇ ನೇತ್ರಯೋರ್ವಾಪಿ ಲಲಾಟೇ ಚ ಭ್ರುವೋಸ್ತಥಾ |
ಅನ್ಯಷ್ವಪಿ ಚ ಗಾತ್ರೇಷು ದೋಷಃ ಸಂವಿದಿತಃ ಕ್ವಚಿತ್ |
ಅವಿಸ್ತರಮಸಂದಿಗ್ಧಂ ಅವಿಲಂಬಿತಮದ್ರುತಮ್ |
ಉರಸ್ಥಂ ಕಂಠಗಂ ವಾಕ್ಯಂ ವರ್ತತೇ ಮಧ್ಯಮೇ ಸ್ವರೇ ||
ಕಿಷ್ಕಿಂಧಾ: ೩-೨೮,೨೯, ೩೦.

ರಾಮ ಲಕ್ಷ್ಮಣನಿಗೆ ಅವನನ್ನು ಪರಿಚಯಿಸಕೊಡುವಾಗ- ‘ನೋಡು ಲಕ್ಷ್ಮಣ, ಈತ ಇಷ್ಟೊಂದು ಮಾತನಾಡಿದರೂ ಒಂದೇ ಒಂದು ಅಪಶಬ್ದ ಇವನ ಬಾಯಿಂದ ಬರಲಿಲ್ಲ.

ಇವನ ಮುಖದಲ್ಲಾಗಲೀ, ಕಣ್ಣುಗಳಲ್ಲಾಗಲೀ, ಹಣೆಯಲ್ಲಾಗಲೀ, ಹುಬ್ಬುಗಳಲ್ಲಾಗಲೀ, ಇತರ ಅವಯವಗಳಲ್ಲಾಗಲೀ ಎಲ್ಲೂ ಕೂಡಾ ವಿಕಾರ  ಕಾಣಿಸಿ ಕೊಳ್ಳಲಿಲ್ಲ. ಸಂದೇಹಕ್ಕವಕಾಶವಿಲ್ಲದಂತೆ ಮಾತನಾಡಿದ. ಮಾತಿನಲ್ಲಿ ಅತಿವೇಗವೂ ಇಲ್ಲ. ಅತಿ ನಿಧಾನವೂ ಇಲ್ಲ. ಧ್ವನಿ ಅತಿ ಗಟ್ಟಿ ಇಲ್ಲ, ಮೆಲ್ಲನೆ
ಇಲ್ಲ. ಮಧ್ಯಮ ಅಂತಸ್ತಿನದು’. ಇಲ್ಲಿ ಇಡಿ ಮಾತಿನಮರ್ಮವೇ ಅನಾವರಣಗೊಂಡಿದೆ.

ಸುಗ್ರೀವಸಚಿವನಾಗಿ, ಸೀತಾನ್ವೇಷಕನಾಗಿ, ರಾವಣನಿಗೆ ಬುದ್ಧಿವಾದ ಹೇಳಿದ ವಿವೇಕಿಯಾಗಿ, ಯುದ್ಧದಲ್ಲಿ ರಣಮಲ್ಲನಾಗಿ, ರಾಮನ ಬಂಟನಾಗಿ ಹನುಮಂತ ಸಲ್ಲಿಸಿದ ಸೇವೆ ಆಚಂದ್ರಾರ್ಕ ನೆನಪಿಸಿಕೊಳ್ಳುವಂತಾದ್ದು. ಅದು ಹನುಮಭಕ್ತರಿಗೆ ಒದಗಿ ಬರಲಿ ಎಂದು ಹಾರೈಸೋಣ.

ಸುಂದರಕಾಂಡ ಹೆಸರೇಕೆ?
ಹನೂಮಂತ ಶ್ರೀರಾಮನ ನಮ್ರಸೇವಕ ಮತ್ತು ಪರಮಭಕ್ತ. ಅವನು ಎಂದೂ ಶ್ರೀರಾಮನ ಸಮಾನ ಆಗಲಾರ. ಬಾಲಕಾಂಡ, ಅಯೋಧ್ಯಾಕಾಂಡ,
ಅರಣ್ಯಕಾಂಡ ಹೀಗೆ ಎಲ್ಲ ಕಾಂಡವೂ ಆಯಾ ಹೆಸರಿಗೆ ತಕ್ಕಂತೆ ಪ್ರಾಧಾನ್ಯತೆಯನ್ನು ಹೊಂದಿದೆ.

ಆದರೆ ಸುಂದರಕಾಂಡ ಹನುಮಂತನೇ ಪ್ರಧಾನವಾಗಿ ಕಾರ್ಯನಿರ್ವಹಿಸಿದ ಕಾಂಡ. ಆದರೆ ಅವನಿಗೆ ಆ ಕಾಂಡಕ್ಕೆ ತನ್ನ ಹೆಸರಿನೊಡನೆ ಅನ್ವಯಿಸು ವುದು (ಹನೂಮತ್ಕಾಂಡ) ಇಷ್ಟವಿಲ್ಲದ ಸಂಗತಿ. ಇದು ವಾಲ್ಮೀಕಿಗಳಿಗೆ ಗೊತ್ತಿತ್ತು. ಹಾಗೇನಾದರೂ ವಾಲ್ಮೀಕಿಗಳು ‘ಹನೂಮತ್ಕಾಂಡ’ ಎಂದು
ಹೆಸರಿಸಿದ್ದರೆ ಅವನು ವಾಲ್ಮೀಕಿಗಳನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ನ! ಅವರ ಜನ್ಮ ಜಾಲಾಡುತ್ತಿದ್ದ. ಅದನ್ನು ಮನಗಂಡೇ ಅವರು ಜಾಗರೂಕರಾಗಿ ಆ ಕಾಂಡವನ್ನು ನಾಮಾಂಕಿತ ಮಾಡುವುದಕ್ಕಿಂತ ಸಂದರ್ಭಾಂಕಿತ ಮಾಡಿಬಿಟ್ಟರು. ಯೋಚನೆ ಮಾಡಿ ಮಾಡಿ ಅದಕ್ಕೆ ‘ಸುಂದರಕಾಂಡ’ ಎಂದು ಹೆಸರಿಟ್ಟರು.

error: Content is protected !!