Sunday, 8th September 2024

ಬೇಂದ್ರೆ ಬೆಂಗಳೂರಿಗೆ ಬಂದರು

`ಬೇಂದ್ರೆ ಬದುಕು – ಬರಹ’ ಹೀಗೊಂದು ಫೇಸ್ಬುಕ್ ಪೇಜ್ ಮೂಲಕ ಶುರುವಾದ ಕಾರ್ಯಕ್ರಮ `ಬೆಂಗ್ಳೂರಾಗೂ ಬೇಂದ್ರೆ’ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟು, ಆ ಮೂಲಕ ಒಂದು ಹದಕ್ಕೆ ಬಂದು ಮೂರನೆ ಸಂಚಿಕೆಯಲ್ಲಿದೆ. ಕಾರ್ಯಕ್ರಮದಲ್ಲಿ ಬೇಂದ್ರೆ ಬದುಕು – ಬರಹ , ಕಾವ್ಯೋದ್ಯೋಗ , ಸಾಹಿತ್ಯಯೋಗ , ಬೇಂದ್ರೆ ಕಾವ್ಯ ಜೀವಕೋಶ, ಬೇಂದ್ರೆ ಸಮಗ್ರ ಕಾವ್ಯ , ನಾಟಕ , ಜೀವನ , ಬೇಂದ್ರೆ ಪದ್ಯಗಳ ಓದು – ಹಾಡು – ವಿಮರ್ಶೆ ಎಲ್ಲವನ್ನು ಚರ್ಚಿಸಲಾಗುತ್ತದೆ. ಪ್ರತಿ ಬಾರಿ ಅತಿಥಿಗಳು ಯಾವ ಫಲಾಪೇಕ್ಷೆ ಇಲ್ಲದೆ ಜೊತೆಗೂಡಿ ಯುವಪೀಳಿಗೆಗೆ ಬೇಂದ್ರೆ ರುಚಿ ಹಚ್ಚಿಸುತ್ತಿz್ದÁರೆ. ಬೇಂದ್ರೆ ಬದುಕು – ಬರಹ – ಕವಿತೆ , ತಿಳಿದವರಿಂದ, ತಿಳಿಯಬಯಸುವ ಸಹೃದಯರಿಗೆ ಈ ಕಾರ್ಯಕ್ರಮ.

ಇಂದಿನ ಯುವಪೀಳಿಗೆಯೂ ಬೇಂದ್ರೆಯವರ ಕುರಿತು ಆಸಕ್ತಿ ತೋರಿ, ಹೆಚ್ಚು ಹೆಚ್ಚು ತಿಳಿಯುವ ಕಾತುರ ಹೊಂದಿರುವುದು ಮತ್ತು ಅದಕ್ಕಾಗಿ ಭಾನುವಾರವೊಂದನ್ನು ಮೀಸಲಿಟ್ಟಿರುವುದು ಸಂತೋಷ ಮತ್ತು ಅಚ್ಚರಿಯನ್ನು ಮೂಡಿಸುತ್ತಿದೆ. ಹಳೆಯ ತಲೆಮಾರಿನ ಕವಿಗಳನ್ನು ತಿಳಿದಾಗಲೇ ತಾನೆ, ಈ ತಲೆಮಾರಿನ ಬರಹಗಾರರು ಏನನ್ನಾದರೂ ಅರ್ಥಪೂರ್ಣ ಕೊಡುಗೆ ನೀಡಲು ಸಾಧ್ಯ? ಈ 17 ನೇ ನವೆಂಬರ್ ರವಿವಾರದಂದು ಬೆಳಿಗ್ಗೆ 9.30ಕ್ಕೆ, ಬೆಂಗಳೂರಿನ ಕಬ್ಬನ್ ಪಾರ್ಕ್‍ನ ಒಳಗಡೆ (ಪ್ರೆಸ್ ಕ್ಲಬ್ ಎದುರು) ಬಯಲು ತೋಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತ್ಯಾಸಕ್ತರು ಭಾಗವಹಿಸಲು ಮುಕ್ತ ಅವಕಾಶವಿದೆ.

ಈ ಕಾರ್ಯಕ್ರಮದ ಪ್ರೇರಣೆಯಿಂದ ಸದ್ಯ ಅದೇ ದಿನ ಚಾಮರಾಜನಗರ ಮತ್ತು ತುಮಕೂರಿನಲ್ಲಿಯೂ ಬೇಂದ್ರೆ ಕಾರ್ಯಕ್ರಮವನ್ನು ಅಲ್ಲಿಯ ಯುವಸಹೃದಯತೆ ತಾವೇ ಮುಂದೆ ಬಂದು ತಮ್ಮ ಊರಿನ ಹೆಸರಿನೊಂದಿಗೆ ಬೇಂದ್ರೆ ಸೇರಿಸಿ ಓದಲನುವಾಗಿದ್ದು ನಮ್ಮ ಹೆಮ್ಮೆ. ಚಾಮರಾಜನಗರದ ಮಕ್ಕಳಾದ ಪೂರ್ವಿಕಾ ಮತ್ತು ಸಮರ್ಥರಂತಹ ಪುಟಾಣಿಗಳೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಿಸುವಂತೆ ಆಯೋಜಿಸಲಾಗಿದ್ದು, ಮುಂದಿನ ತಲೆಮಾರಿಗೂ ಬೇಂದ್ರೆಯವರನ್ನು ಪರಿಚಯಿಸುವ ಪ್ರಯತ್ನ ಇದು. ತಿಂಗಳಿಗೊಮ್ಮೆ ನಡೆಯುವ ಈ ಕಾರ್ಯಕ್ರಮಕ್ಕೆ ಬಂದು, ಯಾವುದೇ ಶುಲ್ಕವಿಲ್ಲದೆ ಬೇಂದ್ರೆಯ ಕುರಿತು ತಿಳಿಯಬಹುದು, ಕನ್ನಡ ಸಾಹಿತ್ಯ ಆಸ್ವಾದಿಸಬಹುದು. ಹೆಚ್ಚಿನ ಮಾಹಿತಿಗಾಗಿ `ಬೇಂದ್ರೆ ಬದುಕು ಬರಹ’-8970870271.


ಎಲ್ಲೆಲ್ಲಿ ಬೇಂದ್ರೆ?
1. ಕಬ್ಬನ್ ಪಾರ್ಕ್, ಬೆಂಗಳೂರು : ಬೆಳಿಗ್ಗೆ 9.30
ಮುಖ್ಯ ಅತಿಥಿ : ಟಿ. ಯಲ್ಲಪ್ಪ
2.ಅಮಾನಿಕೆರೆ ಪಾರ್ಕ್, ತುಮಕೂರು : ಬೆಳಿಗ್ಗೆ 9.30
ಮುಖ್ಯ ಅತಿಥಿ : ಎಚ್.ಎಸ್.ಸತ್ಯನಾರಾಯಣ
3. ಚಾಮರಾಜೇಶ್ವರ ದೇವಸ್ಥಾನ, ಚಾಮರಾಜನಗರ : ಬೆಳಿಗ್ಗೆ 10.30
ಮುಖ್ಯ ಅತಿಥಿ: ಕೆ. ಶ್ರೀಧರ್

ನೂರು ವರ್ಷಗಳ ಹಿಂದಿನ ಕವನ
ಬೇಂದ್ರೆಯವರು 1919ರಲ್ಲಿ ರಚಿಸಿದ ಕವನ `ಬೆಳಗು’ ಇಂದಿಗೂ ಅರ್ಥಪೂರ್ಣ. ಈ ಕವನ `ಸ್ವಧರ್ಮ’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡು, ನಂತರ 1932ರಲ್ಲಿ ಬೇಂದ್ರೆಯವರ `ಗರಿ’ ಕನವ ಸಂಕಲನದಲ್ಲಿ ಮೊದಲ ಕವನವಾಗಿ ಅಡಕಗೊಂಡಿತು. ಕನ್ನಡ ಚಲನಚಿತ್ರ `ಬೆಳ್ಳಿಮೋಡ’ದಲ್ಲಿ (1967) ಸಂಗೀತ ಸಂಯೋಜನೆಗೊಂಡು, ಬಿತ್ತರಗೊಂಡ ನಂತರ ಕನ್ನಡ ನಾಡಿನ ಜನಸಾಮಾನ್ಯರ ಬಾಯಲ್ಲಿ ನಲಿಯುಂತಾದ ಈ ಕವನ, ನೂರು ವರ್ಷಗಳು ಕಳೆದ ನಂತರವೂ ಜನಪ್ರಿಯತೆಯ ತುದಿಯಲ್ಲಿರುವುದು ವಿಸ್ಮಯ ಹುಟ್ಟಿಸುತ್ತದೆ; ಕಾವ್ಯದ ನಿಜ ಶಕ್ತಿಯನ್ನು ಬಿಂಬಿಸುತ್ತದೆ.

ಬೆಳಗು
1
ಮೂಡಲ ಮನೆಯಾ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣ-ನ್ನೆರಕವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ – ಜಗವೆಲ್ಲಾ ತೊಯ್ದಾ||
2
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಡಿದು
ಮಘಮಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು||
3
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲಮೇಲಿಂ-
ದಿಲ್ಲಿಗೇ ತಂದು
ಈಗ – ಇಲ್ಲಿಗೇ ತಂದು||
4
ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ
5
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು- ಹಕ್ಕೀಗಳ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.
6
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನಾ ಗೇಹ.
7
ಅರಿಯದು ಅಳವು ತಿಳಿಯದು ಮನವು
ಕಾಣದೋ ಬಣ್ಣಾ
ಕಣ್ಣಿಗೆ-ಕಾಣದೋ ಬಣ್ಣಾ
ಶಾಂತೀರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ

 

Leave a Reply

Your email address will not be published. Required fields are marked *

error: Content is protected !!