Sunday, 6th October 2024

Bigg Boss kannada 11: ಜಗದೀಶ್‌ ಲಾಯರೇ ಅಲ್ಲ, ಹಾಗಂತ ಕರೀಬೇಡಿ! ಬಿಗ್‌ ಬಾಸ್‌ಗೆ ಎಚ್ಚರಿಕೆ ನೀಡಿದ ವಕೀಲರ ಸಂಘ

Lawyer Jagadish

ಬೆಂಗಳೂರು: ಬಿಗ್ ಬಾಸ್ (Bigg Boss kannada 11) ಕಾರ್ಯಕ್ರಮದಲ್ಲಿರುವ ಜಗದೀಶ್ ಅವರ ವಕೀಲ (Lawyer) ವೃತ್ತಿ ಸನ್ನದು ರದ್ದಾಗಿರುವುದರಿಂದ ಮತ್ತು ಅವರು ವಕೀಲರಲ್ಲದ ಕಾರಣ ಇನ್ನು ಮುಂದೆ ಅವರನ್ನು ವಕೀಲರೆಂದು ಕರೆಯಬಾರದು ಎಂದು ಬಿಗ್‌ ಬಾಸ್‌ ಕಾರ್ಯಕ್ರಮ ನಡೆಸುತ್ತಿರುವ ಕಲರ್ಸ್ ಕನ್ನಡ (Colours kannada) ವಾಹಿನಿಗೆ ಬೆಂಗಳೂರು ವಕೀಲರ ಸಂಘ ಎಚ್ಚರಿಕೆ ನೀಡಿದೆ.

ಜೊತೆಗೆ, ಇತರ ಸ್ಪರ್ಧಿಗಳಿಗೂ ಜಗದೀಶ್ ವಕೀಲರಲ್ಲವೆಂದು ತಿಳಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ನೇರವಾಗಿ ಎಚ್ಚರಿಕೆ ನೀಡಿದೆ. ಏಷ್ಯಾದಲ್ಲಿಯೇ ಬೆಂಗಳೂರು ವಕೀಲರ ಸಂಘ ಅತಿ ದೊಡ್ಡ ಸಂಘವಾಗಿ ಘನತೆ ಮತ್ತು ಗೌರವ ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘದಲ್ಲಿ 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರಿದ್ದಾರೆ. ವಕೀಲರ ಸಮುದಾಯ ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಗೌರವಪೂರ್ವಕವಾಗಿ ವೃತ್ತಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಮೂಲಕ ಬೆಂಗಳೂರು ವಕೀಲರ ಸಂಘವು ಮಾದರಿಯಾಗಿದೆ. ಇಂತಹ ಗೌರವಯುತ ಸಂಘಕ್ಕೆ ಯಾವುದೇ ವ್ಯಕ್ತಿಯು ಮಸಿ ಬಳಿಯಲು ಪ್ರಯತ್ನಪಟ್ಟಲ್ಲಿ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದಿದೆ.

ಆದರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್.ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿದೆ. ಇದು ನಮ್ಮ ವಕೀಲರ ಸಂಘಕ್ಕೆ ನೋವುಂಟು ಮಾಡಿರುತ್ತದೆ. ಜೊತೆಗೆ, ಅನೇಕ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಕೆ.ಎನ್‌.ಜಗದೀಶ್‌ ಅವರಿಗೆ ಈಗಾಗಲೇ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ವತಿಯಿಂದ ರಾಜ್ಯದಲ್ಲಿ ಕಾನೂನು ವೃತ್ತಿ (Advocate Service) ನಡೆಸದಂತೆ ಆದೇಶ ಹೊರಡಿಸಿದೆ. ಜೊತೆಗೆ, ಕೆ.ಎನ್‌.ಜಗದೀಶ್‌ ಕುಮಾರ್ ಅವರು ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ದೆಹಲಿ ಬಾರ್ ಕೌನ್ಸಿಲ್ ಸಮಿತಿ ವತಿಯಿಂದ ಪರಿಶೀಲನೆ ಮಾಡಲಾಗಿದೆ. ಆಗ ಜಗದೀಶ್ ಅವರ ದಾಖಲೆಗಳು ನಕಲಿ ಎಂದು ದೃಢಪಟ್ಟಿವೆ. ಆ ನಂತರ ಅವರ ವಕೀಲ ವೃತ್ತಿ ಸನ್ನದು ನೋಂದಣಿ ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವುದಕ್ಕೆ ಆದೇಶವನ್ನೂ ಹೊರಡಿಸಲಾಗಿದೆ.

ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಕೀಲರಲ್ಲದ ವ್ಯಕ್ತಿಯೊಬ್ಬನ ಹಿನ್ನೆಲೆಯನ್ನು ಪರಿಶೀಲಿಸದೆ ವಕೀಲರೆಂದು ಬಿಂಬಿಸುತ್ತಿದೆ. ಇದು ಏಷ್ಯಾದ ಅತ್ಯಂತ ದೊಡ್ಡ ವಕೀಲರ ಸಂಘವಾಗಿರುವ ಸದಸ್ಯರ ವೃಂದಕ್ಕೆ ಬಹಳ ನೋವುಂಟು ಮಾಡಿದೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಮದ ಇನ್ನು ಮುಂದೆ ನೀವು ಕೆ.ಎನ್.ಜಗದೀಶ್ ಅವರನ್ನು ಬಿಗ್‌ಬಾಸ್-11 ರ ಕಾರ್ಯಕ್ರಮದಲ್ಲಿ ವಕೀಲರೆಂದು ಬಿಂಬಿಸಬಾರದು ಎಂದು ಮನವಿ ಮಾಡುತ್ತೇವೆ. ಜೊತೆಗೆ, ಈ ವಿಷಯ ಕುರಿತಂತೆ ಬಿಗ್ ಬಾಸ್ ಸೀಸನ್ 11ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇತರೆ ಕಂಟೆಸ್ಟೆಂಟ್‌ಗಳಿಗೂ ಜಗದೀಶ್ ವಕೀಲರಲ್ಲವೆಂದು ತಿಳಿಸಬೇಕು. ಇದನ್ನು ಸರಿಪಡಿಸದಿದ್ದರೆ ವಕೀಲರ ಪರವಾಗಿ, ಬೆಂಗಳೂರು ವಕೀಲರ ಸಂಘವು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Bigg Boss kannada 11: ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ವೀಕ್ಷಕರ ಕಣ್ಮಣಿ! ಅತಿ ಹೆಚ್ಚು ಮತ ಪಡೆದವಳು ಕಿಚ್ಚನ ಮುಂದೆ ಕಣ್ಣೀರಿಟ್ಟದ್ದೇಕೆ?