Monday, 28th October 2024

ರಾಜ್ಯಸಭಾ ಚುನಾವಣೆಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸು; ಕತ್ತಿ, ಕೋರೆ, ತೇಜಸ್ವಿನಿ ಹೆಸರು ಮುಂಚೂಣಿಯಲ್ಲಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ರಾಜ್ಯಸಭೆ  ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ  ಚಟುವಟಿಕೆ, ಟಿಕೆಟ್ ಲಾಬಿ ಶುರುವಾಗಿದೆ.
ರಾಜ್ಯಸಭೆಯ ನಾಲ್ಕು ಸ್ಥಾಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಎರಡು ಸ್ಥಾನ ಖಚಿತವಾಗಿದ್ದು, ಆರು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

ಅದರಲ್ಲಿ ಮೂವರು ಈಗಾಗಲೇ ಟಿಕೆಟ್ಗೆ ಬೇಡಿಕೆ ಸಲ್ಲಿಸಿ, ತಮ್ಮ ಗಾಡ್ಫಾದರ್ಗಳ ಮೂಲಕ ಪಕ್ಷದ ವರಿಷ್ಠರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.
ಸದ್ಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಪ್ರಾಥಮಿಕ ಹಂತದ  ಚಿಂತನ-ಮಂಥನ ಆರಂಭಗೊಂಡಿದ್ದು, ಯಾರಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಬಲ ಬರಲಿದೆ ಎನ್ನುವ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಶೀಘ್ರವೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಸೇರಿ ಹೆಸರು ಅಂತಿಮಗೊಳಿಸುವ ಕಸರತ್ತು ನಡೆಸಲಿದ್ದಾರೆ.

ಸತತ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿರುವ ಬೆಳಗಾವಿಯ ಪ್ರಭಾವಿ ನಾಯಕ ಹಾಲಿ ಸದಸ್ಯ ಪ್ರಭಾಕರ್ ಕೋರೆ ರಾಜ್ಯಸಭೆಗೆ ಮರು ಆಯ್ಕೆ ಬಯಸಿದ್ದಾರೆ. ಈ  ಬಾರಿಯೂ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಕತ್ತಿ ಕುಟುಂಬ ಆಕ್ಷೇಪ ವ್ಯಕ್ತಪಡಿಸಿದ್ದು, ರಮೇಶ್ ಕತ್ತಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಯನ್ನು  ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ.

ರಾಜ್ಯಸಭೆಯ ಎರಡು ಸ್ಥಾನಕ್ಕೆ ಆರು ಜನ ಆಕಾಂಕ್ಷಿಗಳು ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್
ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ  ಹೇರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನೀಡಿದ ಮಾತಿನಂತೆ ನಡೆದುಕೊಳ್ಳಿ ಎಂದು ನೆನಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಾಸಕರ ಸಭೆ ನಡೆಸಿ  ಪರೋಕ್ಷವಾಗಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೂ ಸಂದೇಶ ರವಾನಿಸಿದ್ದಾರೆ. ಉತ್ತರ ಕರ್ನಾಟಕ ಕೋಟಾದಲ್ಲಿ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು, ಬಹುತೇಕ ಶಾಸಕ ಉಮೇಶ್ ಕತ್ತಿ ಒತ್ತಡಕ್ಕೆ ಬಿಜೆಪಿ ನಾಯಕರು ಮಣಿಯುವ ಸಾಧ್ಯತೆ ಹೆಚ್ಚಾಗಿದೆ.

ಶಾಸಕರೂ ಕೂಡ ಈ ಹಿಂದೆಯೇ ಭರವಸೆ ನೀಡಿದಂತೆ ರಮೇಶ್ ಕತ್ತಿಗೆ ರಾಜ್ಯಸಭಾ  ಟಿಕೆಟ್ ನೀಡುವುದು ಒಳಿತು ಎನ್ನುವ ಅಭಿಪ್ರಾಯವನ್ನು ಯಡಿಯೂರಪ್ಪ ಮುಂದೆ ವ್ಯಕ್ತಪಡಿಸಿದ್ದಾರೆ. ಮತ್ತೊೊಂದು ಸ್ಥಾನಕ್ಕೆೆ ದಕ್ಷಿಣ ಕರ್ನಾಟಕ ಕೋಟಾದಡಿ ಬೆಂಗಳೂರಿಗೆ ಈ ಸ್ಥಾನ ಲಭ್ಯವಾಗಲಿದ್ದು, ಉದ್ಯಮಿ ಪ್ರಕಾಶ್ ಶೆಟ್ಟಿ ಈಗಾಗಲೇ  ಟಿಕೆಟ್ಗೆ ಬೇಡಿಕೆ ಸಲ್ಲಿಸಿದ್ದಾರೆ. ಇವರ ಜೊತೆ ಪ್ರೊ. ನಾಗರಾಜ್, ತೇಜಸ್ವಿನಿ ಅನಂತ್  ಕುಮಾರ್, ಮುರುಳಿಧರ ರಾವ್ ಕೂಡ ರೇಸ್‌ನಲ್ಲಿದ್ದಾರೆ. ಪಕ್ಷ ಕಟ್ಟಲು ಹೆಗಲಿಗೆ ಹೆಗಲು ಕೊಟ್ಟಿದ್ದ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಕೊನೆ ಕ್ಷಣದಲ್ಲಿ ಲೋಕಸಭೆ ಟಿಕೆಟ್ ಕೈತಪ್ಪಿತ್ತು. ಆದರೂ ಆಗ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು.

ನಂತರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿ ಅವರ ಅಸಮಾಧಾನ ಸರಿಪಡಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದ್ದರು. ಇದೀಗ ರಾಜ್ಯಸಭೆ ಟಿಕೆಟ್ ನೀಡಿದಲ್ಲಿ ಹಿಂದಿನ  ಪ್ರಮಾದ ಸರಿಪಡಿಸಿದಂತಾಗಲಿದೆ ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಇದಕ್ಕೆ ಬೆಂಗಳೂರಿನ  ಶಾಸಕರ ಸಹಮತವೂ ಇದೆ ಎನ್ನಲಾಗಿದೆ. ಆದರೆ ಈವರೆಗೂ ತೇಜಸ್ವಿನಿ ಅನಂತ್ ಕುಮಾರ್ ರಾಜ್ಯಸಭಾ ಟಿಕೆಟ್‌ಗೆ ಬೇಡಿಕೆ ಸಲ್ಲಿಸಿಲ್ಲ. ಒಂದು ವೇಳೆ ಟಿಕೆಟ್ ನೀಡದೇ ಇದ್ದರೂ ಅವರು ಪಕ್ಷದ  ವಿರುದ್ಧ ನಿಲ್ಲುವುದಿಲ್ಲ. ತೇಜಸ್ವಿನಿ ಅನಂತ್ ಕುಮಾರ್‌ಗೆ  ಟಿಕೆಟ್ ನೀಡುವುದು ಬೇಡ  ಎನ್ನುವ ನಿರ್ಧಾರಕ್ಕೆ ಬಂದರೂ ಅಚ್ಚರಿ ಇಲ್ಲ.

ಇನ್ನು ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಯಡಿಯೂರಪ್ಪ ಅವರ ಕೈ ಬಲಪಡಿಸಿರುವ ಮುರಳೀಧರ ರಾವ್ ಹೆಸರು ಕೂಡ ಸಿಎಂ ಬಿಎಸ್‌ವೈ ಚಿಂತನೆಯಲ್ಲಿದೆ. ಆದರೆ ಕಳೆದ ಬಾರಿ ಕನ್ನಡಿಗರಿಗೇ ರಾಜ್ಯಸಭೆ ಟಿಕೆಟ್ ನೀಡಬೇಕು ಎಂದು ನಡೆದ ’ವೆಂಕಯ್ಯ ಸಾಕಯ್ಯ’ ಅಭಿಯಾನದಿಂದ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್  ನೀಡಲಾಯಿತು. ಹಾಗಾಗಿ ಮುರುಳಿಧರ ರಾವ್‌ಗೆ  ಟಿಕೆಟ್ ನೀಡಿದಲ್ಲಿ ಮತ್ತೊಮ್ಮೆ ಅಂತಹ  ಅಭಿಯಾನ ಆರಂಭವಾಗುವ ಸಾಧ್ಯತೆ ಇದ್ದು, ಈ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆ  ನಡೆಯುತ್ತಿದೆ.

ಪ್ರಭಾಕರ್ ಕೋರೆ ಪರ ಸವದಿ ಕುಟುಂಬ ಮತ್ತು ಜೊಲ್ಲೆ ಕುಟುಂಬ ನಿಂತಿದ್ದರೂ  ಉತ್ತರ ಕರ್ನಾಟಕ ಭಾಗದ ಮೂರ್ನಾಲ್ಕು ಜಿಲ್ಲೆಗಳ ಶಾಸಕರು ಕತ್ತಿ ಕುಟುಂಬದ ಬೆನ್ನಿಗೆ  ನಿಂತಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಬೆನ್ನಿಗೆ ಬೆಂಗಳೂರು ಶಾಸಕರು ಇದ್ದು,  ಬಿಎಸ್‌ವೈ ಒಲವು  ಇದೆ. ಹಾಗಾಗಿ ಬಹುತೇಕ ಈ ಇಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ನಡೆಸಲಿದ್ದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ  ಕಳುಸಿಕೊಡಲಿದ್ದಾರೆ. ಹೈಕಮಾಂಡ್ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ  ಮಾಡಲಿದೆ. ರಾಜ್ಯದ ಶಿಫಾರಸನ್ನು ಹೈಕಮಾಂಡ್ ಒಪ್ಪುುತ್ತದೆ ಎನ್ನುವಂತೆಯೂ ಇಲ್ಲ. ಕೊನೆ  ಕ್ಷಣದಲ್ಲಿ ರಾಜ್ಯ ನಾಯಕರು ಕಳಿಸಿದ ಪಟ್ಟಿಯಲ್ಲಿ ಇಲ್ಲದ ಹೆಸರನ್ನೂ ಪ್ರಕಟಿಸಿದ  ನಿದರ್ಶನಗಳಿದ್ದು, ಹೈಕಮಾಂಡ್ ಲೆಕ್ಕಾಚಾರ ಏನಿದೆ ಎನ್ನುವುದರ ಮೇಲೆ ಆಕಾಂಕ್ಷಿಗಳ  ರಾಜಕೀಯ ಭವಿಷ್ಯ ನಿಂತಿದೆ.