Sunday, 19th May 2024

ಬದುಕು ಬೆಳಗುವುದೇ ಶಿಕ್ಷಣ: ಅಲ್ಲಾಭಕ್ಷ ಬಿಜಾಪುರ

ಕೊಲ್ದಾರ: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಕುಟುಂಬದ ಪಾತ್ರವು ಪ್ರಮುಖವಾಗಿರುತ್ತದೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಹೇಳಿದರು.

ಪಟ್ಟಣದ ಇಕ್ರಾ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಮಕ್ಕಳ ಬೆಳವಣಿಗೆಯಲ್ಲಿ ಕುಟುಂಬದ ಅದರಲ್ಲೂ ತಾಯಿಯ ಪಾತ್ರ ಹಿರಿದಾಗಿರುತ್ತದೆ ಎಂದರು. ಥಾಮಸ್ ಅಲ್ವಾ ಎಡಿಸನ್ ಬಾಲ್ಯದಲ್ಲಿ ವೈಫಲ್ಯತೆ ಗಳನ್ನು ಹೊಂದಿದ್ದರು ಕೂಡ ಆತನ ತಾಯಿಯು ಮನೆಯಲ್ಲಿ ಓದು ಬರಹ ಕಲಿಸುವ ಮೂಲಕ ವಿಶ್ವದ ಚರಿತ್ರೆಯಲ್ಲಿ ಥಾಮಸ್ ಅಲ್ವಾ ಎಡಿಸನ್ ಅವರನ್ನು ಚಾರಿತ್ರಿಕ ವ್ಯಕ್ತಿಯನ್ನಾಗಿ ರೂಪಿಸಿ ಅನೇಕ ಕ್ರಾಂತಿಕಾರಿ ಸಂಶೋಧನೆಗಳ ಮೂಲ ಜಗತ್ತಿಗೆ ಬೆಳಕು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ದರು ಎಂದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡುತ್ತಾ ಶಿಕ್ಷಣ ಜೀವನಕ್ಕೆ ಸಂಜೀವಿನಿಯಂತೆ, ಪ್ರಬುದ್ಧತೆಯ ಜೊತೆಗೆ ಸೌಹಾರ್ದತೆಯ ಬದುಕು ಸವೆಸಲು ಪ್ರೇರಣೆ ನೀಡುತ್ತದೆ ಎಂದರು.

ಇಕ್ರಾ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಮಾತೃಭಾಷೆ ಬೇರೆಯಾಗಿದ್ದರು ಕೂಡ ಕನ್ನಡ ಮಾಧ್ಯಮದಲ್ಲಿ ಶಾಲೆ ತೆರೆದು ಉತ್ಕೃಷ್ಟ ಶಿಕ್ಷಣ ನೀಡುತ್ತಿರುವ ಅವರ ಕಾರ್ಯ ಪ್ರಶಂಸನಿಯ ಇದು ಭಾವೈಕ್ಯತೆ, ಭಾತೃತ್ವ, ಸಹೋದರತ್ವಕ್ಕೆ ಉದಾಹರಣೆಯಾಗಿದೆ ಎಂದರು.

ಪ್ರೋಪೆಸರ್ ಸೈಯದ ವಾಜೀದ ಪೀರಾಂ ಹಾಶ್ಮೀ ಮಾತನಾಡುತ್ತಾ ವಿಶ್ವದ ಚರಿತ್ರೆಯಲ್ಲಿ ನಮ್ಮ ಭಾರತ ದೇಶದ ಸಂವಿಧಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ, ಪ್ರಜಾಪ್ರಭುತ್ವದ ಮೌಲ್ಯಗಳಿಂದ ರೂಪಿತವಾದ ಶಿಕ್ಷಣ ಗುಣಾತ್ಮಕ ನಾಯಕತ್ವ ರೂಪಿಸುತ್ತದೆ. ಮಗುವಿಗೆ ನೀಡುವ ಶಿಕ್ಷಣ ದೇಶದ ಭವಿಷ್ಯಕ್ಕೆ ಬುನಾದಿ ಹಾಕಿದಂತೆ ಇಕ್ರಾ ಶಾಲೆಯು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಭವಿಷ್ಯದಲ್ಲಿ ಶಾಲೆಯು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಸಂಗಮೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಜಿ ಜಮಖಂಡಿ, ಮುಖಂಡ ಸಿ.ಎಂ ಗಣುಕುಮಾರ ಸಹಿತ ಅನೇಕರು ಮಾತನಾಡಿದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಸಲೀಮ ಕೊತ್ತಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಪಿ.ಕೆ ಗಿರಗಾಂವಿ, ಹಸನಸಾಬ ಚೌಧರಿ, ಇಸ್ಮಾಯಿಲ್ ತಹಶೀಲ್ದಾರ, ಬಿ.ಕೆ ಗಿರಗಾಂವಿ, ಜಿ.ಐ ಗೋಡ್ಯಾಳ, ದಸ್ತಗೀರ ಕಾಖಂಡಕಿ, ದಾದಾ ಗೂಗಿಹಾಳ, ಸಂಸ್ಥೆಯ ಅಧ್ಯಕ್ಷ ಜಾವೀದ ಬಿಜಾಪುರ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಅನೇಕರು ಉಪಸ್ತಿತರಿದ್ದರು.

ಶಾಲೆಯ ಮುಖ್ಯ ಗುರುಗಳಾದ ಪ್ರಕಾಶ ಮುದ್ದಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *

error: Content is protected !!