Saturday, 27th April 2024

ಚಾಂದ ಗಿರಗಾಂವಿ ಯುವ ಸಮೂಹಕ್ಕೆ ಮಾದರಿ: ಸಲೀಮ ಅತ್ತಾರ

ಕೊಲ್ಹಾರ: ಅಸ್ಸಫಾ ಟ್ರಸ್ಟ್ ಅಧ್ಯಕ್ಷ, ಉದ್ಯಮಿ, ಸಮಾಜ ಸೇವಕ ಚಾಂದ ಗಿರಗಾಂವಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಅಮಾನತ್ ಬ್ಯಾಂಕಿನ ಅಧ್ಯಕ್ಷ ಸಲೀಮ್ ಅತ್ತಾರ ಹೇಳಿದರು.

ಚಾಂದ ಗಿರಗಾಂವಿ ನೇತೃತ್ವದ ಅಸ್ಸಫಾ ಟ್ರಸ್ಟ್ ವತಿಯಿಂದ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರವಟಿಗೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. “ಹಂಚಿಕೊಂಡು ತಿನ್ನುವ ಬುದ್ಧಿ ಮಾನವರಿಗೆ ಬಂದರೆ ಕಲ್ಯಾಣ ಸಿದ್ಧಿ” ಎನ್ನುವ ಅಣ್ಣ ಬಸವಣ್ಣನವರ ಹಿತ ನುಡಿಯ ಹಾಗೆ ಚಾಂದ್ ಗಿರಗಾಂವಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಇತರರಿಗೆ ಪ್ರೇರಣಾದಾಯಕ ಬದುಕು ಸಾಗಿಸುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಮಾತನಾಡುತ್ತಾ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ದೆಸೆ ಯಿಂದ ಅರವಟಿಗೆಗಳನ್ನು ಸ್ಥಾಪಿಸಿರುವ ಅಸ್ಸಫಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.

ಟ್ರಸ್ಟ್ ಅಧ್ಯಕ್ಷ ಚಾಂದ ಗಿರಗಾಂವಿ ಮಾತನಾಡುತ್ತಾ ಸಮಾಜ ಸೇವೆಯ ತುಡಿತದೊಂದಿಗೆ ಅಸ್ಸಫಾ ಟ್ರಸ್ಟ್ ಅಡಿಯಲ್ಲಿ ಅಳಿಲು ಸೇವೆ ಎಂಬಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಸನಡೋಂಗ್ರಿ ಗಿರಗಾಂವಿ, ಡೋಂಗ್ರಿಸಾಬ ಹೊನ್ಯಾಳ, ಸಲೀಂ ಸಾರವಾಡ, ಜಾವೀದ ಬೀಳಗಿ, ಅಬ್ದುಲ ಪಕಾಲಿ, ರಿಯಾಜ ಕಂಕರಪೀರ, ನಜೀರ ಕಾಜಿ ಅಸ್ಸಫಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

error: Content is protected !!