Tuesday, 22nd October 2024

CM Siddaramaiah: ಹಣ ಇಲ್ಲ ಅಂತ ಬಿಜೆಪಿಯವರು ಅಪಪ್ರಚಾರ ಮಾಡ್ತಿದಾರಲ್ಲಾ, ಮತ್ತೆ ಇದೆಂಗಾಯ್ತು ಹೇಳ್ರಪಾ ಎಂದ ಸಿದ್ದರಾಮಯ್ಯ!

CM Siddaramaiah

ಸಿಂಧನೂರು: ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇದ್ದ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಕೂಡ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದರು. ಮೊಟ್ಟ ಮೊದಲ ಬಾರಿಗೆ ಆರಂಭಿಸಲಾದ ವೈಭವದ ಸಿಂಧನೂರು ದಸರಾ ಉತ್ಸವವನ್ನು (Sindhanur Dasara Utsava) ಉದ್ಘಾಟಿಸಿ, ಮುಖ್ಯವೇದಿಕೆಯಲ್ಲಿ 1695.85 ಕೋಟಿ ವೆಚ್ಚದ ರಾಯಚೂರು ಕಲ್ಮಲಾ ಜಂಕ್ಷನ್ ನಿಂದ ಸಿಂಧನೂರು ಬಳಿ ಬಳ್ಳಾರಿ- ಲಿಂಗಸಗೂರು ರಸ್ತೆ ವರೆಗಿನ 78.45 ಕಿಮೀ ಉದ್ದದ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳಿಂದಾಗಿ ಬೇರೆ ಅಭಿವೃದ್ಧಿಗೆ ಹಣ ಇಲ್ಲ, ಹಣ ಇಲ್ಲ ಅಂತ ಬಿಜೆಪಿ ಅಪಪ್ರಚಾರ ಮಾಡ್ತಿದಾರಲ್ಲಾ ಹಾಗಿದ್ರೆ ಈಗ ಉದ್ಘಾಟಿಸಿದ 1695 ಕೋಟಿ ಹಣ ಎಲ್ಲಿಂದ ಬಂತು? ಒಂದೇ ವಿಶೇಷ ಕ್ಯಾಬಿನೆಟ್‌ನಲ್ಲಿ 11770 ಕೋಟಿ ಕಾಮಗಾರಿಗೆ ಅನುಮೋದನೆ ಕೊಟ್ವಲ್ಲಾ, ಇದೆಲ್ಲಾ ಹೇಗಾಯ್ತು ಹೇಳ್ರಪಾ ಎಂದು ವ್ಯಂಗ್ಯವಾಗಿ ಬಿಜೆಪಿಯನ್ನು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕದಲ್ಲಿ ವಹಿವಾಟು ವಿಸ್ತರಣೆಗೆ ಸನ್ಮಿನಾ, ಲೀಪ್‌ಫೈವ್‌ ಟೆಕ್ನಾಲಜಿ ಆಸಕ್ತಿ: ಎಂ.ಬಿ. ಪಾಟೀಲ

ಅಂಬಾ ದೇವಿ‌ ಕೂಡ ಚಾಮುಂಡೇಶ್ವರಿಯ ಅವತಾರ

ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ. ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ. ಅಂಬಾ ದೇವಿ‌ ಕೂಡ ಚಾಮುಂಡೇಶ್ವರಿಯ ಅವತಾರ. ಇದು ಸಾಂಸ್ಕೃತಿಕ ಹಿರಿಮೆ ಮತ್ತು ಚರಿತ್ರೆಯನ್ನು ಸಾರುವ ಹಬ್ಬ ಎಂದರು.

ತಾಯಿ ಅಂಬಾದೇವಿ ಮತ್ತು ಚಾಮುಂಡಿ ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿದೆ. ಜಲಾಶಯ, ಕೆರೆ ಕಟ್ಟೆಗಳು ತುಂಬಿವೆ. ಹೀಗಾಗಿ ಈ ಬಾರಿ ಸಮೃದ್ಧಿ ಕಾಣಲಿದ್ದೇವೆ ಎನ್ನುವ ನಂಬಿಕೆ ನನ ಗಿದೆ ಎಂದರು.

371 ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು ಎಂದು ತಿಳಿಸಿದ ಸಿಎಂ, 371 ಜೆ ಜಾರಿಯಾಗಿ ದಶಮಾನೋತ್ಸವ ಪ್ರಯುಕ್ತ ನಾವು ಕಲ್ಬುರ್ಗಿಯಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ ಅದೊಂದೇ ದಿನ 11770 ಕೋಟಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದು ಸಿಎಂ ತಿಳಿಸಿದರು.

ನಾನು ಬಜೆಟ್‌ನಲ್ಲಿ ಕಳೆದ ವರ್ಷ 3000 ಕೋಟಿ, ಈ ವರ್ಷ 5000 ಕೋಟಿಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಘೋಷಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಕಾರಣಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇದ್ದ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಕೂಡ ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರು, ಇದೆಲ್ಲಾ ಸಾಧ್ಯವಾಗಿದ್ದು 371 ಜೆ ಯಿಂದ. ಇದನ್ನು ಜಾರಿಗೆ ಸಹಕರಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನಾವೆಲ್ಲಾ ಸ್ಮರಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಜಾರಿಗೆ ಆಗ್ರಹಿಸಿ ಹೋರಾಟ ಸಂಘಟಿಸಿದ ಎಲ್ಲಾ ಜಾತಿ, ಧರ್ಮಗಳ ಹಿರಿಯ ಹೋರಾಟಗಾರರನ್ನು ಇದೇ ದಸರಾ ವೇದಿಕೆಯಲ್ಲಿ ಸನ್ಮಾನಿಸಿದ ಬಳಿಕ 371 ಜೆ ಸೃಷ್ಟಿಸಿದ ಅವಕಾಶದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದುಕೊಂಡ ಸಿಂಧನೂರಿನ 10 ಮಂದಿಯನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ | Lakshmi Hebbalkar: ಶ್ರೀ ದುರ್ಗಾದೇವಿ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜು ಸೇರಿ ಕೊಪ್ಪಳ‌ ಮತ್ತು ರಾಯಚೂರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು.