Thursday, 19th September 2024

Covid Scam: ಕೋವಿಡ್‌ ಹಗರಣ; ತಿಂಗಳಲ್ಲಿ ವರದಿ ನೀಡಲು ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ

Cabinet Meeting

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ಕರೋನಾ ಹಗರಣದಲ್ಲಿ (Covid Scam) ಬಿಜೆಪಿ ನಾಯಕರಿಗೆ ಇನ್ನೊಂದು ತಿಂಗಳ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ನೀಡುವ ವರದಿಯ ಆಧಾರದಲ್ಲಿ ಮುಂದಿನ ಕ್ರಮವಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರೋನಾ ಹಗರಣಕ್ಕೆೆ ಸಂಬಂಧಿಸಿದಂತೆ ನ್ಯಾ. ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯ ಬಗ್ಗೆೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಸಿದ್ದಾರೆ. ವರದಿಯಲ್ಲಿರುವ ಅಂಶಗಳು, ನೀಡಿರುವ ಶಿಫಾರಸು ಸೇರಿ ವಿವಿಧ ಅಂಶಗಳನ್ನು ಪರಿಶೀಲಿಸಿ ಮುಂದೆ ಯಾವ ರೀತಿಯ ಕ್ರಮವಹಿಸಬಹುದು ಎನ್ನುವ ಬಗ್ಗೆೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಆಯೋಗ ನೀಡಿರುವ ವರದಿಯಲ್ಲಿ ಐದಾರು ಸಂಪುಟಗಳಿದ್ದು, ಆ ಎಲ್ಲವನ್ನು ವಿಶ್ಲೇಷಣೆ ಮಾಡಿ ಮುಂದಿನ ಹೆಜ್ಜೆೆ ಇಡಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಧ್ಯಂತರ ವರದಿಯಲ್ಲಿ ಸಾವಿರಾರು ಕೋಟಿ ಅವ್ಯವಹಾರವಾಗಿರುವ ಬಗ್ಗೆೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಕೆಲವೊಂದಷ್ಟು ಕಡತ ಕಣ್ಮರೆ ಬಗ್ಗೆೆ ತಿಳಿಸಲಾಗಿದೆ. ಇನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಕೊಟ್ಟ ವರದಿ, ಹಲವಾರು ವಿವರವನ್ನೂ ಗಮನಿಸಿದ್ದು, ಮುಂದೆ ಏನು ಕ್ರಮ ಕೈಗೊಳ್ಳಬೇಕೆಂದು ಮುಂದೆ ತಿಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ವರದಿಯನ್ನು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಿದ್ದು, ತಿಂಗಳೊಳಗೆ ಶಿಫಾರಸು ಮಾಡಲು ಈ ಜವಾಬ್ದಾರಿ ನೀಡಲಾಗಿದೆ. ಪ್ರಮುಖವಾಗಿ ಕರೋನಾ ಹೆಸರಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ, ಅನೇಕ ಕಡತ ಕಾಣಿಸುತ್ತಿಲ್ಲ. ಕೆಲವೊಂದಷ್ಟು ಕಡತವನ್ನು ಆಯೋಗದ ಮುಂದೆ ಹಾಜರು ಪಡಿಸಿಲ್ಲ. ಯಾರು ಕಡತ ಕೊಟ್ಟಿಲ್ಲ, ಏಕೆ ಕೊಟ್ಟಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ನಂತರ ಸಂಪುಟದ ಮುಂದೆ ವಿಶ್ಲೇಷಣೆಯನ್ನು ಹಾಜರುಪಡಿಸಲು ತಿಳಿಸಲಾಗಿದೆ. ವಿಚಾರಣೆ ಆಯೋಗಕ್ಕೆೆ ಆರು ತಿಂಗಳ ವಿಸ್ತರಣೆ ಅವಕಾಶ ನೀಡಲಾಗಿದೆ.

ಪ್ರಾಧಿಕಾರ ರಚನೆಯಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಮೈಸೂರು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ತರಲಾಗಿತ್ತು. ಈ ಬಗ್ಗೆೆ ಪ್ರಮೋದಾ ದೇವಿ ಅವರು ಪ್ರಕರಣ ನ್ಯಾಯಾಲಯದಲ್ಲಿವಾಗ ಸಭೆ ನಡೆಸಿರುವುದು ಕಾನೂನು ಉಲ್ಲಂಘನೆ ಎಂದು ಹೇಳಿದ್ದಾರೆ. ಆದರೆ ಈ ವಿಷಯದಲ್ಲಿ ಯಾವುದೇ ನ್ಯಾಯಾಂಗ ಉಲ್ಲಂಘನೆಯಾಗಿಲ್ಲ. ಮಧ್ಯಂತರ ಆದೇಶ ಮುಂದುವರಿಯಲ್ಲ ಎಂದು ಕೋರ್ಟ್ ಹೇಳಿದೆ. ಹೀಗಾಗಿ ನ್ಯಾಯಾಂಗ ಆದೇಶ ಉಲ್ಲಂಘನೆಯಾಗಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ವಪಕ್ಷ ಸಭೆ, ಪ್ರಧಾನಿ ಬಳಿ ನಿಯೋಗ
ಇನ್ನು ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆೆ ಯೋಜನೆಯಾಗಿರುವ ಮಹದಾಯಿಗೆ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಿಕ್ಕಿಲ್ಲ. ಮಂಡಳಿಯು 79ನೇ ಸಭೆಯಲ್ಲಿ ಆ ವಿಷಯವನ್ನು ಕೆಲವು ಕಾರಣ ಕೊಟ್ಟು ಮುಂದೂಡಿದೆ. ಇದರಿಂದ ಕರ್ನಾಟಕಕ್ಕೆೆ ಸಮಸ್ಯೆೆಯಾಗುತ್ತಿದೆ. ಕರ್ನಾಟಕಕ್ಕೆೆ ಅರಣ್ಯ ಇಲಾಖೆಯ ಹಲವು ಸಮಸ್ಯೆೆಗಳಿದ್ದರೆ ಇದೇ ಮಾರ್ಗದಲ್ಲಿ ಗೋವಾಕ್ಕೆೆ ವಿದ್ಯುತ್ ಮಾರ್ಗವನ್ನು ಮಾಡಲು ಮಂಡಳಿ ಒಪ್ಪಿಗೆ ನೀಡುತ್ತದೆ. ಆದ್ದರಿಂದ ಈ ವಿಷಯದಲ್ಲಿ ಸರ್ವಪಕ್ಷ ಸಭೆ ಕರೆದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗ ತೆರಳಲು ತೀರ್ಮಾನಿಸಲಾಗಿದೆ.

ಈ ಬಗ್ಗೆೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ನಮ್ಮ ಸರಕಾರ ಬಂದಾಗಿನಿಂದಲೂ ಪ್ರಯತ್ನ ನಡೆದಿದೆ. ಕೆಲವರು ಕಾಗದ ತೋರಿಸಿದ್ದರು, ಗೋವಾ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದಿದ್ದರು. ಯಾವುದೇ ಕೆಲಸ ಮಾಡದಂತೆ ಕೇಂದ್ರ ಸರಕಾರ ವನ್ಯಜೀವಿ ಮಂಡಲಿ ತೀರ್ಮಾನಿಸಿದೆ. ಆದ್ದರಿಂದ ಸಂಪುಟ ಸಭೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನದಲ್ಲಿ ಸರ್ವಪಕ್ಷ ಸಭೆ ಕರೆದು ನಿಯೋಗವನ್ನು ಪ್ರಧಾನಿ ಬಳಿಗೆ ಒತ್ತಾಯ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.