Thursday, 19th September 2024

ಗುರುಮನೆ ಮೇಲೆ ಹೆಚ್ಚಾಗುತ್ತಿದೆ ಅರಮನೆಯ ಹಿಡಿತ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 36

ಆಳುವವರಿಗೆ ಅರ್ಹತೆ ನಿರ್ಣಯ ಮಾಡುವ ವ್ಯವಸ್ಥೆ ಬರಬೇಕು

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಮತ

ಬೆಂಗಳೂರು: ಹಿಂದೆ ಅರಮನೆ ಮೇಲೆ ಗುರುಮನೆಯ ಹಿಡಿತವಿತ್ತು. ಈಗ ಗುರುಮನೆ ಮೇಲೆ ಅರಮನೆಗಳು ಹಿಡಿತ ಸಾಧಿಸುತ್ತಿರುವ ಪರಿಣಾಮವೇ ಇಂದಿನ
ವ್ಯವಸ್ಥೆ ಅಯೋಮಯವಾಗಲು ಕಾರಣ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿಗಳು ಪ್ರಸ್ತುತ ರಾಜಕಾರಣದ ಬಗ್ಗೆ ಸೂಚ್ಯವಾಗಿ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಳುವವರಿಗೆ ಧರ್ಮದ ಮಾರ್ಗದಲ್ಲಿ ಸಾಗುವಂತೆ ಸೂಚನೆ ನೀಡು ವುದು ಹಿಂದಿನಿಂದಲೂ ಇದೆ. ಹೀಗಾಗಿ, ಅರಮನೆಗಳು ಗುರುಮನೆಯ ಅಣತಿಯಂತೆ ನಡೆಯುತ್ತಿತ್ತು. ಆದರೆ, ಈಗ ಅರಮನೆಗಳೇ ಗುರುಮನೆಗಳನ್ನು ನಿಯಂತ್ರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಇಷ್ಟೆಲ್ಲ ಸಮಸ್ಯೆ ಗಳಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರೀಕ್ಷೆ ನಿಗದಿಪಡಿಸಿ: ದೇಶದಲ್ಲಿ ರಾಜಕಾರಣಿಯಾಗಲು ಒಂದು ಪರೀಕ್ಷೆ ನಿಗದಿಪಡಿಸಿ, ಅಲ್ಲಿ ಸಂವಿಧಾನದ ಮೂಲ ವಿಷಯಗಳ ಪರೀಕ್ಷೆ ನಡೆಸುವ ಪದ್ಧತಿಯನ್ನು ಚುನಾವಣ ಆಯೋಗ ಅಳವಡಿಸಿಕೊಳ್ಳಬೇಕು. ವೈದ್ಯ ನಾಗಲು, ವಕೀಲನಾಗಲು ವಿದ್ಯೆಯ ಅಗತ್ಯವಿದೆ. ಆದರೆ, ರಾಜಕಾರಣಿಯಾಗಲು ವಿದ್ಯಾರ್ಹತೆಯಿಲ್ಲ.

ಸಂವಿಧಾನ ಮತ್ತು ರಾಜಕಾರಣದ ಬಗ್ಗೆ ಗೊತ್ತಿಲ್ಲದೆ ಇರುವ ವ್ಯಕ್ತಿಗಳು ರಾಜಕಾರಣಕ್ಕೆ ಬರುವುದರಿಂದ  ರಾಜಕಾರಣ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣ ಮಂತ್ರಿಯಾಗುವವನಿಗೆ ಶಿಕ್ಷಣದ ಬಗ್ಗೆ, ಆರೋಗ್ಯ ಮಂತ್ರಿಯಾಗುವವನಿಗೆ ಆರೋಗ್ಯದ ಬಗ್ಗೆ ಜ್ಞಾನ ಇರಬೇಕು. ಆದರೆ, ಇಲ್ಲಿ ಅದು ಆಗುತ್ತಿಲ್ಲ. ಹೀಗಾಗಿ, ಚುನಾವಣಾ ಆಯೋಗ ಜನಪ್ರತಿನಿಧಿಯಾಗಲು ಅರ್ಹತೆ ನಿಗದಿ ಮಾಡಬೇಕು ಎಂದರು.

ಶ್ರೀಗಳ ಬಗ್ಗೆ ಆಣಿಮುತ್ತು!
ಶ್ರೀಗಳ ಕುರಿತು ಮಾತನಾಡಿದ ಅಂಕಣಕಾರ ಎಸ್. ಷಡಕ್ಷರಿ ಅವರು, ಜೆ.ಎಚ್. ಪಟೇಲರು ಮತ್ತು ಶ್ರೀಗಳ ನಡುವಿನ ಒಡನಾಟ ನೆನೆದರು. ಪಟೇಲರ ಕಡೆಯ ದಿನಗಳಲ್ಲಿ ಅವರಿಗೆ ಓದಿನ ಹುಚ್ಚು ಹತ್ತಿಸಿದ್ದು ಮತ್ತು ಅವರ ಸಾವಿನ ಹಿಂದಿನ ದಿನ ಗುರುಗಳಿಗೆ ಪುಸ್ತಕವೊಂದನ್ನು ನೀಡಿದ್ದನ್ನು ಉಲ್ಲೇಖ ಮಾಡಿದ ಅವರು, ನಂತರ ಜಗದೀಶ್ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಸರಕಾರ ಎಲ್ಲ ಮಠಗಳಂತೆ ಬೇಲಿ ಮಠಕ್ಕೂ ಅನುದಾನ ಬಿಡುಗಡೆ ಮಾಡಿದ್ದನ್ನು ತಿರಸ್ಕಾರ ಮಾಡಿದ್ದರ ಬಗ್ಗೆ ನೆನಪು ಮಾಡಿಕೊಂಡರು.

Leave a Reply

Your email address will not be published. Required fields are marked *