Wednesday, 24th April 2024

ಬಿಲ್ ಹಿಂಪಡೆವ ಹೊಸ ರಾಜಕೀಯ ಯುದ್ದ

ಅಶ್ವತ್ಥಕಟ್ಟೆ

ranjith.hoskere@gmail.com

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಬಹುಮತ’ವೊಂದೇ ಸರಕಾರ ರಚಿಸಲಿ ರುವ ಬಹುದೊಡ್ಡ ಅಂಶ. ಯಾವ ಪಕ್ಷಕ್ಕೆ
‘ಸಂಖ್ಯಾ’ಬಲವಿರುತ್ತದೋ, ಆ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಈ ರೀತಿ ಬಹುಮತವೊಂದೇ ಮಾನದಂಡವಾಗಿರುವು ದರಿಂದ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಆ ಪಕ್ಷದ ಮೂಗಿನ ನೇರಕ್ಕೆ ಆಡಳಿತ ವ್ಯವಸ್ಥೆಯೂ ಬದಲಾಗುತ್ತದೆ.

ಶಾಸಕಾಂಗ ಬದಲಾದಂತೆ ಕಾರ್ಯಾಂಗವೂ ಸಹಜ ವಾಗಿಯೇ ಬದ ಲಾಗುತ್ತದೆ. ಇದನ್ನು ತಪ್ಪು ಎನ್ನಲು ಆಗುವುದಿಲ್ಲ. ಆದರೀಗ ಇತ್ತೀಚಿನ ದಿನದಲ್ಲಿ ಸರಕಾರಗಳು ಬದಲಾದಂತೆ ಶಾಸಕಾಂಗ ಸಭೆಯಲ್ಲಿ ಪಾಸಾಗಿರುವ ‘ಕಾನೂನು, ಕಾಯಿದೆ’ಗಳನ್ನೇ ಬದಲಾಯಿಸುವ ಆಲೋಚನೆಗಳು ನಾಯಕರಿಗೆ ಬರುತ್ತಿರುವುದು ಅಪಾಯದ ಮುನ್ಸೂಚನೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಅದರಲ್ಲಿಯೂ ಕರ್ನಾಟಕದಂತಹ ರಾಜ್ಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ನಡೆಸುವವರು ಬದಲಾಗುವುದು ದಶಕದಿಂದ ನಡೆದು ಬಂದಿರುವ ಪದ್ಧತಿ. ಆದರೆ ಪಕ್ಷಗಳು ಬದಲಾದಂತೆ ಉಭಯ ಸದನದಲ್ಲಿ ಒಪ್ಪಿತ ವಾಗಿರುವ ಕಾಯಿದೆಗಳನ್ನೇ ಹಿಂಪಡೆಯುವುದು ಅಥವಾ ತಿರಸ್ಕರಿಸುವ ಸಂಪ್ರದಾಯ ಶುರುವಾದರೆ, ಮುಂದಿನ ದಿನದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಇದಕ್ಕೆ ತಾಜಾ ಉದಾಹರಣೆ ಎಂದರೆ, ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್
ನಾಯಕ ರು ‘ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿರುವ ಎಲ್ಲ ಕಾಯಿದೆಗಳನ್ನು ಹಿಂಪಡೆಯುತ್ತೇವೆ’ ಎನ್ನುವ ಹೇಳಿಕೆ
ನೀಡುತ್ತಿದ್ದಾರೆ. ಕಾಂಗ್ರೆಸ್ ಅಽಕಾರಕ್ಕೆ ಬಂದಾಗ, ಬಿಜೆಪಿ ಪಾಸ್ ಮಾಡಿರುವ ಕಾಯಿದೆಗಳನ್ನು ಹಿಂಪಡೆಯುವುದು,
ಬಿಜೆಪಿ ಅಽಕಾರಕ್ಕೆ ಬಂದಾಗ ಕಾಂಗ್ರೆಸ್ ಕಾಯಿದೆಗಳನ್ನು ಹಿಂಪಡೆಯುವುದು ಮಾಡುತ್ತಾ ಸಾಗಿದರೆ, ಕಾಯಿದೆ ಗಳಿಗಿರುವ ‘ಪಾವಿತ್ರ್ಯ’ವೇ ಉಳಿಯುವುದಿಲ್ಲ.

ಸರಕಾರಗಳು ಯಾವುದಾದರೂ ಕಾಯಿದೆಯನ್ನು ಜಾರಿಗೊಳಿಸಿ ಮುಂದೆ ಬರುವ ಸರಕಾರ, ಆ ಬಿಲ್ ಅನ್ನು ಹಿಂಪಡೆಯುತ್ತದೆ ಎನ್ನುವ ಮನಃಸ್ಥಿತಿ ಸಾರ್ವಜನಿಕರಿಗೆ ಬಂದರೆ ಈ ಕಾಯಿದೆ ಅಥವಾ ಕಾನೂನನ್ನು ಜಾರಿಗೊಳಿಸಿದ ಉದ್ದೇಶವೇ ಬುಡಮೇಲಾ ಗುವುದರಲ್ಲಿ ಅನುಮಾನವಿಲ್ಲ. ಈ ರೀತಿಯ ಚರ್ಚೆಗೆ ಪ್ರಮುಖ ಕಾರಣವೆಂದರೆ ಇತ್ತೀಚಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಿಯಾಂಕ್ ಖರ್ಗೆ ಅವರು ಗೋಹತ್ಯೆ ನಿಷೇಧ, ಮತಾಂತರ ನಿಷೇಧದಂತಹ ಕಾನೂನುಗಳನ್ನು ಹಿಂಪಡೆ ಯುತ್ತೇವೆ ಎನ್ನುವ ಮಾತು ಗಳನ್ನು ಆಡಿದ್ದಾರೆ.

ಕೇವಲ ಪ್ರಿಯಾಂಕ್ ಮಾತ್ರವಲ್ಲದೇ ಹಲವು ಸಚಿವರು ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಂತೂ, ನಾವು ಅಧಿಕಾರಕ್ಕೆ ಬಂದರೆ ಮೀಸಲು ಕಾಯಿದೆಯನ್ನು ಹಿಂಪಡೆಯುತ್ತೇವೆ ಎನ್ನುವ ಘೋಷಣೆ ಮಾಡಿದ್ದರು. ಆ ಘೋಷಣೆಯೇ ಅವರ ಭಾಷಣದ ಪ್ರಮುಖ ಅಂಶವಾಗಿತ್ತು. ಇದರೊಂದಿಗೆ ಹಿಂದೂ ಪರ ಸಂಘಟನೆಗಳ ನಿಷೇಧದ ಮಾತುಗಳನ್ನು ಕಾಂಗ್ರೆಸ್
ನಾಯಕರು ಮಾತನಾಡಿದ್ದಾರೆ. ಆದರೆ ಈ ಹೇಳಿಕೆಗಳಿಂದ, ಒಂದು ಸಮುದಾಯಕ್ಕೆ ಖುಷಿ ಹಾಗೂ ಆನಂದವಾಗಬಹುದು.

ಆದರೆ ರಾಜ್ಯವನ್ನು ಒಟ್ಟಾರೆಯಾಗಿ ನೋಡಿದರೆ ಭವಿಷ್ಯದಲ್ಲಿ ಈ ರೀತಿಯ ನಡೆ ‘ತುಘಲಕ್’ನ ಆಡಳಿತವನ್ನು ಮೀರಿಸುವ ಆತಂಕ ಹಲವರಲ್ಲಿದೆ. ಇದು ಕೇವಲ ಕಾಂಗ್ರೆಸ್‌ಗೆ ಸೀಮಿತವಲ್ಲ. ೨೦೧೯ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಹಲವು ತೀರ್ಮಾನವನ್ನು ಮಾಡಿರುವ ಉದಾಹರಣೆಗಳಿವೆ. ಪಠ್ಯ ಪರಿಷ್ಕರಣೆ, ಹಿಂದೂ ಸಂಘಟನೆಯ ಮೇಲಿನ ಕೇಸ್‌ಗಳನ್ನು
ಹಿಂಪಡೆಯುವುದು, ಹಿಂದೂ ಪರ ಕಾನೂನು ಜಾರಿ, ಇಂದಿರಾ ಕ್ಯಾಂಟೀನ್‌ನ ಅನುದಾನಕ್ಕೆ ಕತ್ತರಿ ಸೇರಿದಂತೆ ಹಲವು ಕ್ರಮವನ್ನು ಕೈಗೊಂಡಿತ್ತು. ಕಾಂಗ್ರೆಸ್ ಸರಕಾರ ಜಾರಿ ಗೊಳಿಸಿದ ಕಾನೂನುಗಳನ್ನು ವಾಪಾಸು ಪಡೆಯಬೇಕು ಎನ್ನುವ ಮನಸ್ಥಿತಿಗಿಂತ, ಅಗತ್ಯ, ಅನಿವಾರ್ಯತೆಯ ಬಗ್ಗೆ ಯೋಚಿಸುವುದು ಸೂಕ್ತ.

ಹಾಗೇ ನೋಡಿದರೆ, ಕಳೆದ ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾನೂನುಗಳ ಹಿಂಪಡೆದಿದ್ದಕ್ಕಿಂತ, ‘ಭಾಗ್ಯ’ಗಳಿಗೆ ಕತ್ತರಿ ಪ್ರಯೋಗ ಮಾಡಿತ್ತು. ಕಾಂಗ್ರೆಸ್ ಅವಧಿಯಲ್ಲಿ ಜಾರಿಯಾಗಿದ್ದ ಯೋಜನೆಗಳನ್ನು ಹಿಂಪಡೆಯದಿದ್ದರೂ, ಅವುಗಳಿಗೆ ನೀಡಬೇಕಾದ ಅನುದಾನವನ್ನು ನೀಡದೇ ‘ನಿಷ್ಕ್ರಿಯ’ ಗೊಳಿಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡಿತ್ತು.
ಇದಕ್ಕೆ ಸೇಡಿನ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಇದಾ ಗಲೇ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವ ದಿನದಿಂದ
ಇಲಾಖೆವಾರು ಮಾಡಿರುವ ಆದೇಶ, ಸುತ್ತೋಲೆ, ಕಾನೂನು ತಿದ್ಧುಪಡಿ, ನೂತನ ಕಾಯಿದೆ, ಪರಿಷ್ಕರಣೆ ಸೇರಿದಂತೆ ಪ್ರತಿ
ಯೊಂದು ಅಂಶವನ್ನು ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ. ಈ ಎಲ್ಲವನ್ನು ಪರಿಶೀಲಿಸಿ, ಕಾಂಗ್ರೆಸ್
‘ತತ್ತ್ವ’ಕ್ಕೆ ವಿರುದ್ಧ ಎನಿಸುವ ಎಲ್ಲವನ್ನು ರದ್ದಗೊಳಿಸಲು ತೀರ್ಮಾನಿಸಿದ್ದಾರಂತೆ.

ಇನ್ನು ಜುಲೈನಲ್ಲಿ ಆರಂಭವಾಗಲಿರುವ ಬಜೆಟ್ ಅಽವೇಶನದಲ್ಲಿ, ಬಿಜೆಪಿ ಸರಕಾರದ ಅವಧಿಯಲ್ಲಿ ಪಾಸಾಗಿರುವ ಬಿಲ್‌ಗಳನ್ನು ಹಿಂಪಡೆಯುವುದೇ ಕಾಂಗ್ರೆಸ್‌ನ ಕೆಲ ನಾಯಕರ ಲೆಕ್ಕಾಚಾರವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ರೀತಿ ಕಾಂಗ್ರೆಸ್ ಕಾಯಿದೆ ಗಳನ್ನು ಹಿಂಪಡೆದರೆ, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮುಂದಿನ ಐದು ವರ್ಷ ಕಾಂಗ್ರೆಸ್ ಪಾಸ್ ಮಾಡಿಕೊಳ್ಳುವ ಬಿಲ್‌ಗಳನ್ನು ಹಿಂಪಡೆಯುವ ಕೆಲಸವನ್ನೇ ಮಾಡುತ್ತದೆ. ಈ ಮೂಲಕ ಅವರು ಬಂದಾಗ ಇವರ ತೀರ್ಮಾನಗಳ ಹಿಂಪಡೆಯುವುದು, ಇವರು ಬಂದಾಗ ಅವರ ತೀರ್ಮಾನಗಳನ್ನು
ಹಿಂಪಡೆಯುವುದೇ ಕೆಲಸವಾಗುತ್ತದೆ ಹೊರತು, ರಾಜ್ಯಕ್ಕೆ ಹೊಸತನ್ನು ಏನು ನೀಡಬಹುದು ಎನ್ನುವ ಆಲೋಚನೆಗಳೇ
ಕಳೆದು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅದರಲ್ಲಿಯೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ರೀತಿಯ ತೀರ್ಮಾನಗಳು ಕೈಗೊಂಡರೆ, ಇಡೀ ಒಂದು ಜನರೇಷನ್
ಅನ್ನೇ ಗೊಂದಲ, ದ್ವಂದ್ವಕ್ಕೆ ಸಿಲುಕಿಸುವ ಸಾಧ್ಯತೆಯಿರುತ್ತದೆ. ಪ್ರಮುಖವಾಗಿ ಬಿಜೆಪಿ ಸರಕಾರ ಜಾರಿಗೊಳಿಸಿರುವ
ರಾಷ್ಟ್ರೀಯ ಶಿಕ್ಷಣ ನೀತಿ ಈಗಾಗಲೇ ಪದವಿ ಹಂತದಲ್ಲಿ ಜಾರಿಯಲ್ಲಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಈ ವರ್ಷದಿಂದ ಆರಂಭಿಸಲು ಸಿದ್ಧತೆ ನಡೆಸಿಕೊಳ್ಳಲಾಗಿತ್ತು. ಆದರೀಗ ಈ ಶಿಕ್ಷಣ ನೀತಿಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದೇ ರೀತಿ ಪಠ್ಯವನ್ನು ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ ಎನ್ನುವ ಮಾತು ಗಳು ಕೇಳಿಬರುತ್ತಿದೆ. ಹಾಗಾದರೆ, ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಓದಬೇಕೋ ಅಥವಾ ರಾಜ್ಯಕ್ಕೆ ಪ್ರತ್ಯೇಕ ನೀತಿಯೋ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನು ಪಠ್ಯ ಪರಿಷ್ಕರಣೆಯಾದರೆ ಏನೆಲ್ಲ ಬದಲಾವಣೆಗಳಾಗುತ್ತದೆ ಎನ್ನುವ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದಾರೆ.

ಈ ರೀತಿ ಕಾಂಗ್ರೆಸ್ ಯಿದ್ದಾಗ ಒಂದು ರೀತಿಯ ಶಿಕ್ಷಣ, ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೊಂದು ಶಿಕ್ಷಣ, ಜೆಡಿಎಸ್ ಸರಕಾರ ರಚಿಸಿದರೆ ಅವರಿಗೆ ಬೇಕಾದ ಹಾಗೂ ಅವರ ತತ್ತ್ವ ಸಿದ್ಧಾಂತವನ್ನು ಮಕ್ಕಳ ಮೇಲೆ ಹೇರಲು ಮುಂದಾದರೆ, ಮಕ್ಕಳಿಗೆ ಉಂಟಾಗುವ ಸಮಸ್ಯೆ ಅಥವಾ ವರ್ಷಕ್ಕೊಮ್ಮೆ ಪಠ್ಯಪುಸ್ತಕವನ್ನು ಬದಲಾಯಿಸಿದರೆ ಶುರುವಾಗುವ ದ್ವಂದ್ವಕ್ಕೆ ಹೊಣೆ ಯಾರು? ಇದರಿಂದ ಭವಿಷ್ಯದಲ್ಲಿ ಶೈಕ್ಷಿಣಿಕ ವ್ಯವಸ್ಥೆಯ ಮೇಲೆ ಬೀರುವ ಪರಿಣಾಯವನ್ನು ರಾಜಕೀಯ ನಾಯಕರು
ಹೋರುವರೇ? ಎನ್ನುವುದು ಹಲವರಲ್ಲಿ ಪ್ರಶ್ನೆಯಾಗಿದೆ.

ಇದು ಕಾನೂನು, ಕಾಯಿದೆಗಳ ವಿಷಯ. ಇನ್ನುಳಿದಂತೆ ಯೋಜನೆಯ ವಿಷಯದಲ್ಲಿಯೂ ಇದೇ ರೀತಿ ಕಿತ್ತಾಡುತ್ತಿರುವುದನ್ನು ನೋಡುತ್ತಿದ್ದೇವೆ. ಅಽಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ, ಮೂರು ಪಕ್ಷಗಳು ‘ಉಚಿತ’ ಘೋಷಣೆಗಳನ್ನು ಎಗ್ಗಿಲ್ಲದೇ ಮಾಡಿವೆ. ಅಽಕಾರಕ್ಕೆ ಬಂದ ಪಕ್ಷ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುತ್ತವೆ. ಆದರೆ ಮುಂದೆ ಬರುವ ಸರಕಾರ ಗಳಿಗೆ, ಆ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಷ್ಟೇ ಅಲ್ಲದೇ, ತಮ್ಮ ಪ್ರಣಾಳಿಕೆಯ ಘೋಷಣೆಗಳನ್ನು ಈಡೇರಿಸಬೇಕಾಗುತ್ತದೆ. ಈ ಮೂಲಕ ರಾಜ್ಯ ಬಜೆಟ್‌ನ ಬಹುಪಾಲು ಅನುದಾನ ‘ಸಮಾಜದ ಕಲ್ಯಾಣ’ಕ್ಕಾಗಿಯೇ ಮೀಸಲಿಟ್ಟರೆ, ಅಭಿವೃದ್ಧಿಗೆ ಅನುದಾನ ಎಲ್ಲಿಂದ ಒದಗಿಸುತ್ತವೆ ಎನ್ನುವುದೇ ಬಹುದೊಡ್ಡ ಯಕ್ಷಪ್ರಶ್ನೆ.

ಈ ಹಿಂದೆ ಕಾಂಗ್ರೆಸ್ ಸರಕಾರ ಉಚಿತ ಭಾಗ್ಯದ ಯೋಜನೆಗಳಿಗೆ, ಬಿಜೆಪಿ ಸರಕಾರ ಘೋಷಿಸಿರುವ ಕಲ್ಯಾಣ ಯೋಜನೆಗಳು ಸೇರಿಕೊಂಡಿವೆ. ಇದೀಗ ಇವುಗಳೊಂದಿಗೆ ಗ್ಯಾರಂಟಿ ಯೋಜನೆಗಳು ಸೇರಿಕೊಳ್ಳುತ್ತವೆ. ಆದರೆ ಈಗಾಗಲೇ ಬಜೆಟ್‌ನ ಶೇ.೬೫ಕ್ಕಿಂತ ಹೆಚ್ಚು ಅನುದಾನ ಪಿಂಚಣಿ, ಸರಕಾರಿ ವೇತನ, ಸಾಲ ಹಾಗೂ ಕಲ್ಯಾಣಾಭಿವೃದ್ಧಿಗೆ ಇದರ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ. ಹೀಗಾದರೆ, ರಾಜ್ಯಕ್ಕೆ ಅತ್ಯಗತ್ಯ ಎನಿಸುವ ನೀರಾವರಿ, ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ಎಲ್ಲಿಂದ ಹೊಂದಿಸಲಾಗುತ್ತದೆ? ಭಾರತದ ಚುನಾವಣೆ ವ್ಯವಸ್ಥೆಯಲ್ಲಿ ಪಕ್ಷಗಳ ಆಧಾರದಲ್ಲಿಯೇ ಅಧಿಕಾರದ ಗದ್ದುಗೆ ಏರಬೇಕು. ಆ ಕಾರಣಕ್ಕಾಗಿ ತಮ್ಮ ತಮ್ಮ ಬೆಂಬಲಿಗರನ್ನು ಓಲೈಸಲು, ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಪ್ರತಿಯೊಂದು ಪಕ್ಷವೂ ಚುನಾವಣೆಯ ಸಮಯದಲ್ಲಿ ಈ ರೀತಿಯ ಘೋಷಣೆ ಮಾಡುವುದು ಸಾಮಾನ್ಯ.

ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಸರಕಾರದಲ್ಲಾಗಿರುವ ಲೋಪಗಳನ್ನು ಸರಿಪಡಿಸಿಲು ಕೆಲವೊಂದು ಬದಲಾವಣೆ ಮಾಡುವುದು ಸಹಜ. ಹಾಗೆಂದ ಮಾತ್ರಕ್ಕೆ, ಪ್ರತಿಯೊಂದು ಕಾನೂನು, ಕಾಯಿದೆಗಳನ್ನು ಹಿಂಪಡೆಯುವ ಪಠ್ಯಪುಸ್ತಕಗಳನ್ನು ಬದಲಾಯಿಸುವ ಮನಸ್ಥಿತಿ ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದ್ದಲ್ಲ. ಒಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ, ಪಕ್ಷದ ಶಾಸಕರಾಗಷ್ಟೇ ಯೋಚಿಸದೇ ಇಡೀ ವ್ಯವಸ್ಥೆಯನ್ನು ನೋಡಿಕೊಂಡು ತೀರ್ಮಾನಗಳನ್ನು ಕೈಗೊಳ್ಳುವುದು ಉತ್ತಮ.

ಇಲ್ಲದಿದ್ದರೆ, ಶಾಸನಗಳನ್ನು ರಚಿಸುವ ಶಾಸಕಾಂಗಕ್ಕೆ ಭವಿಷ್ಯದಲ್ಲಿ ಇರುವ ಮೌಲ್ಯವೂ ಕಳೆದು ಹೋಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ತಮಗೆ ಬೇಕಾದ ರೀತಿಯಲ್ಲಿ ಸರಕಾರದ ಯೋಜನೆಗಳನ್ನು ಬದಲಾಯಿಸುತ್ತ ಸಾಗಿದರೆ ಸರಕಾರಗಳು ಬದಲಾದಂತೆ, ನೆಲದ ಕಾನೂನುಗಳೇ ಬದಲಾಗುವ ಸ್ಥಿತಿ ಬರುವ ಆತಂಕವಿದೆ.
ಇದೇ ರೀತಿ ಪ್ರತಿ ಚುನಾವಣೆಯಲ್ಲಿಯೂ ‘ಉಚಿತ’ಗಳ ಭಾಗ್ಯವನ್ನು ನೀಡುತ್ತಾ ಸಾಗಿದರೆ ಮುಂದೊಂದು, ಸರಕಾರದ ಇಡೀ ಬಜೆಟ್ ಅನ್ನು ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟು, ಸರಕಾರಿ ನೌಕರರಿಗೆ ವೇತನವನ್ನು ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವುದಷ್ಟೇ ನಮ್ಮ ಯೋಚನೆ. ಅದಕ್ಕಾಗಿ ಏನು ಬೇಕಾದರು ಮಾಡುತ್ತೇವೆ ಎನ್ನುವ ಮನಸ್ಥಿತಿಯಿಂದ ಪಕ್ಷಗಳು ಹೊರಬರಬೇಕಿದೆ.

ಇಲ್ಲವಾದಲಿ, ಮುಂದಿನ ದಿನದಲ್ಲಿ ಯಾವುದೇ ಸರಕಾರ ರಚಿಸಿದ ಕಾನೂನು ‘ಆ ಸರಕಾರ ಇರುವಷ್ಟು ದಿನ ಮಾತ್ರ’ ಎನ್ನುವ ತಾತ್ಸರ ಜನರಲ್ಲಿ ಮೂಡುವುದರಲ್ಲಿ ಅನುಮಾನವೇ ಇಲ್ಲ.

error: Content is protected !!