Saturday, 27th July 2024

ಮಳೆಗಾಲವೆಂದರೆ ಎಲ್ಲವೂ ಮಧುರವೇನಲ್ಲ !

ಶಶಾಂಕಣ

shashidhara.halady@gmail.com

ಆಗಿನ ದಿನಗಳಲ್ಲಿ ವೈದ್ಯರು, ಮಾತ್ರೆಗಳು, ಇಂಜೆಕ್ಷನ್ ಇಲ್ಲದೆ ದಿನಚರಿ ನಡೆಯುತ್ತಿತ್ತು ಎಂಬುದನ್ನು ಸೂಚಿಸಲು. ಜತೆಗೆ ಮೂರು ಅಥವಾ ನಾಲ್ಕು ತಿಂಗಳು ಸುರಿಯುತ್ತಿದ್ದ ಮಳೆಯಿಂದಾಗಿ, ಹಳ್ಳಿಗಳಿಂದ ಪೇಟೆಗೆ ಹೋಗಿ ಔಷಧ ತರುವ ವ್ಯವಧಾ ನವೂ ಇರುತ್ತಿರಲಿಲ್ಲ.

ಮಳೆಗಾಲದ ನೆನಪುಗಳನ್ನು ಮಧುರ ಎನ್ನುವುದುಂಟು. ಹೊರಗೆ ಜಿರಾಪತಿ ಮಳೆ ಸುರಿಯುತ್ತಿರುವಾಗ, ಮನೆಯೊಳಗೆ ಕುಳಿತು, ಮಳೆಯನ್ನೇ ನೋಡುತ್ತಾ, ಅದರ ಸಂಗೀತವನ್ನು ಕೇಳುತ್ತಾ ಮನಸ್ಸಿನ ಲಗಾಮು ಕಳಚಿ ಬಿಡುವುದು ಒಂದು ಮಧುರ ಅನುಭವವೇ ಸೈ. ಒಲೆಯ ಕೆಂಡದಲ್ಲಿಟ್ಟು ಸುಟ್ಟ ಹಲಸಿನ ಹಪ್ಪಳ, ಅದರ ಮೇಲೆ ನಾಲ್ಕಾರು ಸುಟ್ಟ ಗೋಡಂಬಿಗಳಿದ್ದ ರಂತೂ, ಎಡೆಬಿಡದೆ ಸುರಿವ ಮಳೆಯ ಅನುಭವ ನಿಧಾನವಾಗಿ ಮನದೊಳಗೆ ಇಳಿಯುತ್ತದೆ; ಇತ್ತ ಹಪ್ಪಳ ಮತ್ತು ಸುಟ್ಟ ಗೋಡಂಬಿಯ ಕಾಂಬಿನೇಷನ್ ನ ರುಚಿ ಹೊಟ್ಟೆಯೊಳಗೆ ಇಳಿಯುತ್ತದೆ!

ಹಾಗಂತ ಮಲೆನಾಡಿನ ಮಳೆಗಾಲದ ದಿನಗಳ ನೆನಪುಗಳೆಲ್ಲವೂ ಮಧುರವೇ ಎಂದು ಕೇಳಿದರೆ ಇಲ್ಲ ಅಂತಲೇ ಅನ್ನಬೇಕು. ಮಲೆನಾಡಿನ ಅಂಚಿನಲ್ಲಿರುವ ನಮ್ಮೂರಿನಲ್ಲಿ ನನ್ನ ಬಾಲ್ಯದ ಮಳೆಗಾಲವನ್ನು ನೆನಪಿಸಿ ಕೊಂಡರೆ ವಾಸ್ತವವಾಗಿ ಅದು ಒಂದು ಮಿಶ್ರ ಅನುಭವ. ಆದರೂ ಬಾಲ್ಯದ ಮಳೆಗಾಲದ ಮಧುರ ಅನುಭವಗಳನ್ನು ಮಾತ್ರ ನೆನಪಿಸಿಕೊಂಡು, ನಾವೆಲ್ಲ ನಾಸ್ಟಾಲ್ಜಿಕ್ ಆಗುವುದುಂಟು.

ಬಹುಶಃ ಮಳೆಗಾಲದ ಮಧುರ ನೆನಪುಗಳು ನಮ್ಮಲ್ಲಿ ಸ್ಥಾಯಿಯಾಗಲು ಬೇರೇನೋ ಭಾವನಾತ್ಮಕ  ಕಾರಣಗಳಿರಲೇ ಬೇಕು. ಏಕೆಂದರೆ ನಮ್ಮ ಹಳ್ಳಿಯ ಅಪ್ಪಟ ಗ್ರಾಮೀಣ ಜೀವಗಳಿಗೆ, ಮಳೆಗಾಲ ಎಂದರೆ ಸಣ್ಣಗೆ ಒಂದು ರೀತಿಯ ಭಯ, ನಡುಕ, ಅಳುಕು, ದಿಗಿಲು ಇತ್ತು. ‘ಈ ವರ್ಷದ ಮಳೆಗಾಲ ಬಂದು ಕಳೆದರೆ ನಾವು ಗೆದ್ದಂತೆ’ ಎಂದು ಪ್ರತಿವರ್ಷ ದೇವರಿಗೆ ಕೈ ಮುಗಿ ಯುತ್ತಿದ್ದ ಹಲವು ಕುಟುಂಬಗಳನ್ನು ನಾನು ಕಂಡಿದ್ದೆ. ಕೆಳ ಮಧ್ಯಮವರ್ಗ ಮತ್ತು ಕೃಷಿ ಕಾರ್ಮಿಕರ  ಕುಟುಂಬ ಗಳಿಗಂತೂ, ಮಳೆಗಾಲವೆಂದರೆ ಕಷ್ಟದ ದಿನಗಳು.

ನಾಲ್ಕು ತಿಂಗಳುಗಳ ಕಾಲ ಸುರಿಯುವ ಮಳೆಗಾಲವನ್ನು ಕ್ಷೇಮವಾಗಿ ಗೌರವ ಯುತವಾಗಿ ಕಳೆಯುವುದೇ ಹಲವರಿಗೆ ಒಂದು
ಸವಾಲು. ೨೦ನೇ ಶತಮಾನದ ಕೊನೆಯ ಮೂರು ನಾಲ್ಕು ದಶಕಗಳ ಆ ದಿನಗಳಲ್ಲಿ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಆಹಾರಧಾನ್ಯವನ್ನು ಸರಬರಾಜು ಮಾಡುವ ಪದ್ಧತಿ ಇನ್ನೂ ಆರಂಭವಾಗಿರಲಿಲ್ಲ. ಆದ್ದರಿಂದ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಮಳೆ ಸುರಿಯುವ ದಿನಗಳಲ್ಲಿ, ಸರಿಯಾಗಿ ಊಟ ಮಾಡಲು ಸಾಧ್ಯವಾಗದೆ ಕಾಲ ಕಳೆದ ಅದೆಷ್ಟೋ ಕುಟುಂಬಗಳು, ಮಳೆಗಾಲ ಎಂದರೆ ಹೆದರುತ್ತಿದ್ದುದರಲ್ಲಿ ಅಚ್ಚರಿ ಇಲ್ಲ.

ಈ ಪರಿಸ್ಥಿತಿಯನ್ನು ನೆನಪಿಸಿಕೊಂಡು, ಇಂದಿಗೆ ಹೋಲಿಸಿದರೆ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವ ಯೋಜ
ನೆಯು ಒಂದು ಹಂತದ ತನಕ ಉತ್ತಮ ಮತ್ತು ಹಲವರು ಮಳೆಗಾಲದಲ್ಲಿ ಮಾನವಂತರಾಗಿ ಊಟ ಮಾಡುವ ಅವಕಾಶ ಕಲ್ಪಿಸಿದೆ ಎಂದೇ ಹೇಳಬೇಕು. ಜೂನ್ ಮೊದಲ ವಾರ ಸುರಿಯಲಾರಂಭಿಸಿದ ಮಳೆಯು, ಜನಸಾಮಾನ್ಯರಿಗೆ ಮತ್ತು ಬಡವರಿಗೆ ತಂದಿಡುತ್ತಿದ್ದ ಕಷ್ಟಗಳಿಗೆ ಕೊನೆಯೇ ಇರಲಿಲ್ಲ.

ಕೃಷಿ ಕಾರ್ಮಿಕರಿಗೆ ಯಾವುದೇ ಕೆಲಸ ದೊರೆಯದೆ, ಮನೆಯಿಂದಾಚೆ ಹೋಗದಂತೆ ಮಾಡುವ ದಿನಗಳೆಂದರೆ ಈ ಮಳೆಗಾಲದ್ದು. ಸುರಿವ ಮಳೆಯ ನಾಟಿ ಮಾಡಿ, ಮೂರು ತಿಂಗಳ ನಂತರ ನಡೆಯುವ ಕೊಯ್ಲು ಕೆಲಸ ಬರುವ ತನಕ ಯಾರಿಗೂ ಹೆಚ್ಚಿನ ಕೆಲಸವಿಲ್ಲ. ಜೂನ್‌ನಲ್ಲಿ ಮಾಡಿದ ನಾಟಿ ಕೆಲಸದ ಮಜೂರಿಯನ್ನು, ಕೊಯ್ಲು ಮುಗಿದ ನಂತರ ಕೊಡುತ್ತೇವೆ ಎಂಬ ಸಿರಿವಂತರು ಸಹ ಕೆಲವರಿದ್ದರು.

ಆದರೂ ಹಠಮಾಡಿಯೋ, ಕಾಡಿಬೇಡಿಯೋ ಆ ಕೂಲಿಯನ್ನು ಅಕ್ಕಿಯ ರೂಪದಲ್ಲೋ ಬೇರೆ ಯಾವುದೋ ರೂಪದಲ್ಲೋ ಪಡೆದು ಬರುತ್ತಿದ್ದರು. ಆದರೆ ಆ ಸಂಪಾದನೆಯು ಎಷ್ಟು ದಿನಕ್ಕೆ ಸಾಕಾದೀತು? ಜುಲೈ ತಿಂಗಳ ಆಷಾಢ ಎಂದರೆ ಇನ್ನಷ್ಟು
ಕಷ್ಟ. ಕೆಲಸ ಹುಡುಕಿಕೊಂಡು ಹೋಗೋಣವೆಂದರೆ ನಿರಂತರ ಸುರಿವ ಮಳೆ. ಮನೆಯಲ್ಲಿ ಕುಳಿತು ಬರಬರನೆ ಸುರಿಯುವ ಮಳೆಯನ್ನು, ಮಾಡಿನ ಅಂಚಿನಿಂದ ಬೀಳುವ ನೀರನ್ನೇ ನೋಡುತ್ತಾ, ಈ ಮಳೆ ಯಾವಾಗ ಕಡಿಮೆಯಾಗುತ್ತದೆ ಎಂದು
ಧೇನಿಸುವುದೇ ಪ್ರತಿದಿನದ ದಿನಚರಿ.

ಮಳೆಗಾಲದ ಇಂತಹ ಕಷ್ಟದ ದಿನಗಳನ್ನು ಎದುರಿಸಲೆಂದೇ, ಬೇಸಿಗೆಯಲ್ಲಿ ಕೆಲವು ತಯಾರಿಗಳನ್ನು ಮಾಡುವುದುಂಟು. ಬಿಸಿಲುಕಾಲ ದಲ್ಲಿ ಸಾಕಷ್ಟು ಅಗ್ಗದ ಬೆಲೆಗೆ ದೊರೆಯುವ ಗೆಣಸನ್ನು ಖರೀದಿಸಿ, ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಚೆನ್ನಾಗಿ ಒಣಗಿಸಿ, ಅದನ್ನು ಮಳೆಗಾಲದಲ್ಲಿ ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳು ಹಲವು. ಡಬ್ಬಿಗಟ್ಟಲೆ ಹಲಸಿನ ಬೀಜಗಳನ್ನು ಸಂಗ್ರಹಿಸಿ ಅದನ್ನು ಸುಟ್ಟು ಅಥವಾ ಬೇಯಿಸಿ ತಿನ್ನುತ್ತಿದ್ದವರು ಹಲವರು.

ಹಲಸಿನ ಹಪ್ಪಳ ಸಹ ಕೆಲವು ದಿನ ಮಳೆಗಾಲದ ಬೆಳಗಿನ ತಿನಿಸು. ಹಲಸಿನ ಹಣ್ಣನ್ನು ಸಹ ಒಂದು ಹೊತ್ತಿನ ಆಹಾರವಾಗಿ
ಸೇವಿಸುವ ಕುಟುಂಬಗಳು ಇದ್ದವು. ಹಾಗಂತ ದಿನದ ಮೂರೂ ಹೊತ್ತು ಇದನ್ನೇ ಮಾಡುತ್ತಿದ್ದಾರೆಂದು ಅರ್ಥವಲ್ಲ, ಒಂದು ಹೊತ್ತು ಅನ್ನವನ್ನೋ ಗಂಜಿಯನ್ನೋ ಸೇವಿಸಿ, ಇನ್ನೊಂದು ಹೊತ್ತು ಇಂತಹ ತಿನಿಸುಗಳು ಮಳೆಗಾಲದ ಆಹಾರದ ಪದ್ಧತಿ ಎನಿಸಿತ್ತು.

ನಿರಂತರ ಸುರಿವ ಮಳೆ, ಹಲವು ದಿನಗಳ ಕಾಲ ಮೋಡದ ಮರೆಯಿಂದ ಹೊರಗೆ ಬಾರದ ಸೂರ್ಯ, ಥಂಡಿ ಗಾಳಿ, ಇವೆಲ್ಲವೂ ಹಲವು ರೋಗಗಳಿಗೆ ಹೇಳಿ ಮಾಡಿಸಿದ ವಾತಾವರಣ. ನೆಗಡಿ, ಜ್ವರ, ಕೆಮ್ಮು, ಶೀತ, ಮೈ ಕೈ ನೋವು ಇವೆಲ್ಲಾ ನಮ್ಮೂರಿನ ಮಳೆಗಾಲದಲ್ಲಿ ತೀರಾ ಸಾಮಾನ್ಯ. ೧೯೭೦ರ ದಶಕದ ತನಕ ನಮ್ಮ ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲ ಆಸ್ಪತ್ರೆಗೆ
ಹೋಗುವ ಕ್ರಮ ಇರಲಿಲ್ಲ. ಜ್ವರ, ನೆಗಡಿಯಾದರೆ ಹಲವು ರೀತಿಯ ಕಷಾಯಗಳೇ ಚಿಕಿತ್ಸೆ.

ಮೆಣಸಿನಕಾಯಿ ಕಾಳಿನ ಕಷಾಯ, ಹಂಗಾರ ಕೆತ್ತೆ ಕಷಾಯಗಳು ವಿವಿಧ ರೀತಿಯ ಜ್ವರಗಳಿಗೆ ಔಷಧ. ಯಾವ ಜ್ವರಕ್ಕೆ ಯಾವ ಮರದ ಕೆತ್ತೆಯ ಕಷಾಯ ಮಾಡಬೇಕು ಎಂಬುದನ್ನು ಅನುಭವದ ಮೇಲೆ ನಿರ್ಣಯಿಸುತ್ತಿದ್ದವರು ಮನೆಯ ಅಜ್ಜಿಯರು. ಮೆಣಸಿನಕಾಯಿ ಕಾಳಿನ ಕಷಾಯವಂತೂ ಎಲ್ಲಾ ಜ್ವರಗಳಿಗೆ ರಾಮಬಾಣವೆಂದೇ ನಮ್ಮ ಹಳ್ಳಿಯವರ ಅನಿಸಿಕೆ. ಜಾಸ್ತಿ ಜ್ವರ ಬಂದು, ನಾಲಿಗೆಯ ರುಚಿ ಕೆಟ್ಟು, ಊಟ ಸೇರದೆ ಇದ್ದಾಗ, ಹುರಿದ ಅಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿ, ಜತೆಗೆ ಮೆಣಸಿನ
ಕಾಳಿನ ಕಷಾಯವನ್ನು ದಿನದ ಮೂರು ಹೊತ್ತು ಸೇವಿಸಿದರೆ, ನಾಲ್ಕಾರು ದಿನಗಳಲ್ಲಿ ಜ್ವರ ವಾಸಿಯಾಗುತ್ತದೆ ಎಂಬ ದೃಢವಾದ ನಂಬಿಕೆಯೇ, ಅಂದಿನ ಜನರನ್ನು ಮುನ್ನಡೆಸುವ ಶಕ್ತಿಯಾಗಿತ್ತು.

ನಮ್ಮ ಹಳ್ಳಿಯ ಅಜ್ಜಿಯಂದಿರು ಬಳಸುತ್ತಿದ್ದ ಇನ್ನೊಂದು ಪ್ರಬಲ ಔಷಧ ಎಂದರೆ ಅರಸಿನ. ಕೆಪ್ಪಟರಾಯ ಅಥವಾ ಮಂಪ್ಸ್ ಆದಾಗ, ದತ್ತೂರದ ಬೀಜವನ್ನು ಅರಿಶಿನ ಪುಡಿಯ ಜತೆ ಚೆನ್ನಾಗಿ ತೇಯ್ದು, ಕಪಾಲದ ಭಾಗಕ್ಕೆ ಹಚ್ಚುತ್ತಿದ್ದರು. ಗಂಟಲು ನೋವಾದರೆ ಅರಸಿನ ಮತ್ತು ಮುದ್ದೆ ಬೆಲ್ಲವನ್ನು ಮಿಶ್ರಣ ಮಾಡಿ ಹಚ್ಚುವ ಕ್ರಮ. ಸುಟ್ಟ ಗಾಯವಾದರೆ, ತೇಗದ ಎಲೆಯ ಕುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಗಾಯಕ್ಕೆ ಹಚ್ಚುತ್ತಿದ್ದರು.

ಕಿವಿ ನೋವಾದರೆ ಬೆಳ್ಳುಳ್ಳಿ ಮಿಶ್ರಿತ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕಿದರೆ ಕಿವಿನೋವು ಮಾಯ! ಇಂಥ ಹಲವು ಚಿಕಿತ್ಸೆಗಳು ನಮ್ಮ ಹಳ್ಳಿಯ ಅಜ್ಜಿಯಂದಿರಿಗೆ ಕಂಠಪಾಠ. ಅವರ ಜೀವನ ದುದ್ದಕ್ಕೂ ಇಂತಹ ಔಷಧಗಳನ್ನು ಅದೆಷ್ಟು ಬಾರಿ ಪ್ರಯೋಗಿಸಿ ಕೊಂಡಿದ್ದರೋ ಏನೋ, ಅಂತಹ ಕೆಲವು ಔಷಽಗಳು ಈಗಿನವರೆಗೆ ವಿಚಿತ್ರ ಎನಿಸಿದರೂ, ಅವನ್ನು ನಮ್ಮ ಮೇಲೆ ಅಂದರೆ ಮಕ್ಕಳ ಮೇಲೆ ನಮ್ಮ ಅಮ್ಮಮ್ಮ ಪ್ರಯೋಗಿಸುತ್ತಿದ್ದರು.

ಇದನ್ನೇಕೆ ಇಷ್ಟು ವಿವರವಾಗಿ ಹೇಳುತ್ತಿರುವೆ ಎಂದರೆ, ಮಳೆಗಾಲವಿದ್ದರೂ, ಆಗಿನ ದಿನಗಳಲ್ಲಿ ವೈದ್ಯರು, ಮಾತ್ರೆಗಳು, ಇಂಜೆಕ್ಷನ್ ಇಲ್ಲದೆ ದಿನಚರಿ ನಡೆಯುತ್ತಿತ್ತು ಎಂಬುದನ್ನು ಸೂಚಿಸಲು. ಜತೆಗೆ ಮೂರು ಅಥವಾ ನಾಲ್ಕು ತಿಂಗಳು ಸುರಿಯುತ್ತಿದ್ದ
ಮಳೆಯಿಂದಾಗಿ, ಹಳ್ಳಿಗಳಿಂದ ಪೇಟೆಗೆ ಹೋಗಿ ಔಷಧ ತರುವ ವ್ಯವಧಾನವೂ ಇರುತ್ತಿರಲಿಲ್ಲ. ನಮ್ಮ ಅಜ್ಜಿಗೆ ತಾವು ಉಪಯೋಗಿಸುತ್ತಿದ್ದ ಔಷಧಗಳ ಮೇಲೆ ಅದೆಷ್ಟು ದೃಢವಾದ ನಂಬಿಕೆ ಇತ್ತೆಂದು ಒಮ್ಮೆ ನನಗೆ ಗೊತ್ತಾಗುವ ಸಂದರ್ಭ ಬಂತು. ಆ ಪ್ರಯೋಗಕ್ಕೆ ಒಡ್ಡಿಕೊಂಡವನು ನಾನೇ!

ಆಗ ನಾಲ್ಕನೆಯ ತರಗತಿಯಲ್ಲಿದ್ದೆ; ಜುಲೈ ತಿಂಗಳಿನ ವಿಪರೀತ ಮಳೆ. ಎಲ್ಲಾ ಕಡೆ ಥಂಡಿ ವಾತಾವರಣ. ಹೊರಗೆ ಬಿರುಸಾಗಿ ಮಳೆ ಸುರಿದಾಗ ನೀರಿನ ಅಂಶವು ಮನೆಯೊಳಗೆ ಸಲೀಸಾಗಿ ಬರುತ್ತಿತ್ತು. ಅಂಗಳಕ್ಕೂ ಮನೆಗೂ ನಡುವೆ ಇದ್ದದ್ದು ಮರದ
ತಳಿ. ಆದ್ದರಿಂದ ಗಾಳಿಸಹಿತ ಮಳೆ ಸುರಿದಾಗ ಸಣ್ಣ ಸಣ್ಣ ನೀರಿನ ಕಣಗಳು ಮನೆಯೊಳಗೆ ತುಂಬಿಕೊಳ್ಳುತ್ತಿದ್ದವು. ಇದು ಕೇವಲ ನಮ್ಮ ಮನೆ ಮಾತ್ರವಲ್ಲ ನಮ್ಮೂರಿನ ಎಲ್ಲಾ ಮನೆಗಳಲ್ಲೂ ಇದೇ ಸ್ಥಿತಿ.

ಇಂತಹ ಥಂಡಿಯ ದಿನಗಳಲ್ಲಿ, ನನ್ನ ತೊಡೆಯ ಸಂದಿಯಲ್ಲಿ ಒಂದು ಕುರ ಆಯಿತು. ಒಂದು ದಿನವಾಯಿತು, ಎರಡು ದಿನವಾಯಿತು, ಕುರ ದೊಡ್ಡದಾಗುತ್ತಾ ಹೋಯಿತು. ನಮ್ಮ ಅಮ್ಮಮ್ಮ ಅರಿಶಿನವನ್ನು ಎಣ್ಣೆಯಲ್ಲಿ ಬಿಸಿ ಮಾಡಿ ಹಚ್ಚಿದರು.
ನಾಲ್ಕಾರು ದಿನಗಳಾದವು. ಕುರದ ಗಾತ್ರ ದೊಡ್ಡದಾಯಿತು. ಈಗ ನಮ್ಮ ಅಮ್ಮಮ್ಮ ಹೊಸ ಔಷಧ ಪ್ರಯೋಗಿಸಿದರು. ತೊಂಡೆಯ ಎಲೆಯನ್ನು ಬಿಸಿಮಾಡಿ, ಅದರ ರಸ ಹಚ್ಚಿದರು.

ಗುಣವಾಗಲಿಲ್ಲ. ನಮ್ಮೂರಿನ ಪಂಡಿತರ ಬಳಿಗೆ ಹೋಗಿ ಅದಾವುದೋ ಬೇರು ತಂದು ಅದರ ರಸವನ್ನು ಹಚ್ಚಿದರು. ಮನೆತುಂಬ ನಾರು ಬೇರುಗಳ ವಾಸನೆ ತುಂಬಿಹೋಯಿತು. ಆದರೆ ಕುರ ವಾಸಿಯಾಗಲಿಲ್ಲ. ಅದರ ನೋವಿನಿಂದಾಗಿ ನಡೆಯಲು ಸಾಧ್ಯವಾಗಿಸಲು ಮಲಗಿದೆ. ಶಾಲೆಗೆ ರಜೆ. ಕುರದ ನೋವು ಜಾಸ್ತಿ ಆಗುತ್ತಾ ಹೋಯಿತು. ಒಟ್ಟು ೧೭ ದಿನ
ಶಾಲೆಗೆ ರಜೆ ಹಾಕಿದ್ದು ನೆನಪಿದೆ. ೧೬ ನೆಯ ದಿನ ಮೂರು ಕಿ.ಮೀ. ದೂರದಲ್ಲಿದ್ದ ಹೈಕಾಡಿಗೆ ಹೋಗಿ ಒಂದೆರಡು ಮಾತ್ರೆ ತಂದರು. ಆ ದಿನ ಅರ್ಧ ಮಾತ್ರೆ ತಿಂದೆ. ಮರುದಿನ ಕುರ ಒಡೆದು, ಜ್ವರ ಬಿಟ್ಟು ನಾನು ನಡೆಯುವಂತಾದೆ!

ಮಳೆ ಇರಲಿ, ಚಳಿ ಇರಲಿ, ತಮ್ಮ ರೋಗಗಳಿಗೆ ಮನೆಯಲ್ಲೇ ಔಷಧ ಮಾಡಿಕೊಳ್ಳುತ್ತಿದ್ದರು ಎಂಬುದಕ್ಕೆ ಒಂದು ಉದಾಹರಣೆಯಾಗಿ ಮೇಲಿನ ಘಟನೆ ಹೇಳಿದನಷ್ಟೇ. ನಂತರದ ದಿನಗಳಲ್ಲಿ ಜ್ವರ, ನೆಗಡಿ ಬಂದಾಗ ಹೈಕಾಡಿ ಡಾಕ್ಟರ್ ಬಳಿ ಓಡುವುದು ಸಾಮಾನ್ಯ ಎನಿಸಿತು. ಹಾಗಂತ ಆ ಓಟ ಸುಲಭದ್ದಾಗಿರಲಿಲ್ಲ. ನಮ್ಮ ಮನೆಯಿಂದ ಮೂರು ಕಿ.ಮೀ. ದೂರದಲ್ಲಿದ್ದ ಅವರ ಕ್ಲಿನಿಕ್‌ಗೆ ಹೋಗಲು ಇದ್ದ ತೊಡಕೆಂದರೆ, ಆ ದಾರಿಯೂ ಬಹುಪಾಲು ಕಾಡುದಾರಿ. ಮೊದಲಿಗೆ ಅರ್ಧ ಕಿಮೀ ಗದ್ದೆಯಂಚಿನ ದಾರಿ. ನಂತರ ಹರನ ಗುಡ್ಡ ಎಂಬ ನಿರ್ಜನ

ಗುಡ್ಡದ ಮೇಲು ಸಾಗಬೇಕಿತ್ತು. ಬೈಲಿನಿಂದ ಗುಡ್ಡವೇರಲು, ಮುರಕಲ್ಲಿನ ೧೫೦ ಮೆಟ್ಟಿಲುಗಳನ್ನು ಏರಬೇಕಿತ್ತು. ಅಷ್ಟು ಕಷ್ಟಪಟ್ಟು ಹೋಗಿ, ‘ಒಳ್ಳೆಯ ಕೈಗುಣ’ ಇದ್ದ ಕೈಗುಣವಿದ್ದ ಆ ಡಾಕ್ಟರ ಬಳಿ ಔಷಧ ತಂದರೆ, ಕಾಯಿಲೆ ವಾಸಿಯಾಗುತ್ತಿದ್ದು ಖಚಿತ ಎಂಬ ನಂಬಿಕೆ. ಆ ದಿನಗಳಲ್ಲಿ ಅವರು ಕೊಡುತ್ತಿದ್ದುದು ಕೆಂಪು ಬಣ್ಣದ ಔಷಽಗಳು, ಕೆಲವು ಮಾತ್ರೆಗಳು ಮಾತ್ರ. ಅವರ
ಕ್ಲಿನಿಕ್ ಹೊರತುಪಡಿಸಿದರೆ, ನಮ್ಮ ಹಳ್ಳಿಯ ಆರು ಕಿ.ಮೀ. -ಸಲೆಯಲ್ಲಿ ಬೇರೆ ಡಾಕ್ಟರ್ ಇರಲಿಲ್ಲ, ಆಸ್ಪತ್ರೆಯೂ ಇರಲಿಲ್ಲ. ಆದ್ದರಿಂದಲೇ ಮಳೆಗಾಲದಲ್ಲಿ ವೈದ್ಯರನ್ನು ಹುಡುಕಿಕೊಂಡು ಹೋಗುವುದೆಂದರೂ ಅಂದಿನ ದಿನಗಳಲ್ಲಿ ಅದೊಂದು ಸಾಹಸ.
ನಾಲ್ಕು ತಿಂಗಳು ಮಳೆ ಸುರಿಯುವ ಮಳೆಗಾಲವು, ನಮ್ಮ ಹಳ್ಳಿಯಲ್ಲಿ ಸಣ್ಣ ಮಟ್ಟದ ‘ಖಳನಾಯಕ’.

ನಾವು ಇಂದು ಪೇಟೆಯಿಂದ ಹಳ್ಳಿಗೆ ಹೋಗಿ, ಅಲ್ಲಿನ ಹಸಿರು ತುಂಬಿದ ಬಯಲು, ಕಾಡಿನಿಂದ ತುಂಬಿದ ಬೆಟ್ಟ ಗುಡ್ಡ, ರಭಸವಾಗಿ ಹರಿಯುವ ನೀರು ತುಂಬಿದ ತೊರೆ ಮತ್ತು ನದಿಗಳನ್ನು ನೋಡಿ ಸಂತಸ ಪಡುವುದುಂಟು. ಆದರೆ ೨೦ನೇ ಶತಮಾನದ ಕೊನೆಯ ಭಾಗದ ತನಕ ಮಳೆಗಾಲವೆಂದರೆ ಕಷ್ಟದ ದಿನಗಳು ಎಂದೇ ಹೇಳಬಹುದು. ಅದನ್ನು ನಮ್ಮೂರಿ ನವರು ಸರಿಯಾಗಿ ಗ್ರಹಿಸಿದ್ದು ಹೀಗೆ.

‘ವಯಸ್ಸಾದವರು ಈ ವರ್ಷದ ಮಳೆಗಾಲದಲ್ಲಿ ಬದುಕಿ ಉಳಿದರೆ, ಇನ್ನು ಒಂದು ವರ್ಷ ತೊಂದರೆ ಇಲ್ಲ!’ ಕಟುಸತ್ಯವೊಂದು ನಮ್ಮೂರಿನಲ್ಲಿ ನಾಣ್ಣುಡಿಯ ಸ್ವರೂಪ ಪಡೆದಿತ್ತು. ಮಧುರ ನೆನಪಿನ ಮಳೆಗಾಲವು ಕಷ್ಟದ ದಿನಗಳನ್ನು ಸಹ ಒಳಗೊಂಡಿದೆ ಎಂಬುದನ್ನು ಇದಕ್ಕಿಂತ ಸಮರ್ಪಕವಾಗಿ ಸೂಚಿಸುವ ಇನ್ನೊಂದು ನುಡಿಗಟ್ಟು ಇರಲಿಕ್ಕಿಲ್ಲ..

error: Content is protected !!