ಶಿವಕುಮಾರ್ ಬೆಳ್ಳಿತಟ್ಟೆ
ವಲಸಿಗರಿಗೆ ಗಾಳ, ಬಿಜೆಪಿ ಶಾಸಕರಿಗೆ ಒಳಗೊಳಗೇ ಬಲೆ
ಸರಕಾರದ ಆಡಳಿತ ವಿರೋಧಿ ಅಲೆ ನೆರವಾಗಲಿದೆ ಎಂದು ನಂಬಿರುವ ಕಾಂಗ್ರೆಸ್ಗೆ ಈಗ ಗೆಲ್ಲುವ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಆದರೆ ಇದನ್ನು ಸರಿದೂಗಿಸಿಕೊಳ್ಳಲು ಬಿಜೆಪಿ ಅತೃಪ್ತ ಆಕಾಂಕ್ಷಿಗಳನ್ನು ತನ್ನ ಸೆಳೆಯಲು ಕಾಂಗ್ರೆಸ್ ತೀವ್ರ ಕಸರತ್ತು ನಡೆಸುತ್ತಿದೆ. ಆರಂಭಿಕವಾಗಿ ವಲಸಿಗ ಸಚಿವರು, ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದ್ದು, ಇದರಲ್ಲಿ ಮೊದಲ ಪ್ರಯತ್ನವೇ ‘ಘರ್ ವಾಪ್ಸಿ’ ಬಿಜೆಪಿಗೆ ಹೋಗಿರುವ ಶಾಸಕರ ಪೈಕಿ ಕನಿಷ್ಠ ಅರ್ಧದಷ್ಟು ಮಂದಿಯನ್ನಾದರೂ ವಾಪಸು ಕರೆ ತರಲು ರಹಸ್ಯ ಕಾರ್ಯ ಕ್ರಮ ರೂಪಿ ಸಿದೆ. ಇದು ಈಗಾಗಲೇ ಜಾಲ್ತಿಯಲ್ಲಿದ್ದು ಶಾಸಕ ನಾಗೇಶ್ ಈಗಾಗಲೇ ಕಾಂಗ್ರೆಸ್ ಸೇರಿದ್ದರೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಕಡೆ ಬರುವ ಹಾದಿಯಲ್ಲಿದ್ದಾರೆ.
ಇದಲ್ಲದೆ ನಾಲ್ಕು ಶಾಸಕರು ಪಕ್ಷಕ್ಕೆ ವಾಪಸಾಗುವ ಆಸಕ್ತಿ ತೋರಿದ್ದು ತೆರೆಮರೆಯ ಚರ್ಚೆ ಗಳು ನಡೆಯುತ್ತಿವೆ. ಇದರ ಮಧ್ಯೆ ಇಬ್ಬರು ಶಾಸಕರು ಘರ್ ವಾಪ್ಸಿಗೆ ಆಸಕ್ತಿ ತೋರಿಸಿದರೂ ಅದಕ್ಕೆ ಕಾಂಗ್ರೆಸ್ ಒಲವು ತೋರಿಸುತ್ತಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಈಗಾಗಲೇ ನಡೆಸಿರುವ ನಾನಾ ಹಂತದ ಸಮೀಕ್ಷೆಗಳ ವರದಿಯನ್ನಾಧರಿಸಿ ಟಿಕೆಟ್ ಹಂಚಿಕೆ ಮಾಡಿದರೆ ಸುಮಾರು ೨೫ಕ್ಕೂ ಹೆಚ್ಚು ಶಾಸಕರು ಟಿಕೆಟ್ ವಂಚಿತರಾಗುತ್ತಾರೆ. ಇಂಥ ಸನ್ನಿವೇಶದಲ್ಲಿ ಬಿಜೆಪಿ ಯಾರಿಗೆಲ್ಲ ಟಿಕೆಟ್ ನಿರಾಕರಿಸುತ್ತದೆ ಎಂದು ಕಾಂಗ್ರೆಸ್ ನಿರೀಕ್ಷೆ ಮಾಡುತ್ತಿದೆ. ಸದ್ಯ ಟಿಕೆಟ್ ಸಿಗುವುದು ಅನುಮಾನ ಎನ್ನುತ್ತಿರುವ ಶಾಸಕರ ಸುಳಿವು ಪಡೆದಿರುವ ಕಾಂಗ್ರೆಸ್, ಅಂತಹವರಿಗೆ ಟಿಕೆಟ್ ಕೊಡುವ ಮುನ್ಸೂಚನೆ ನೀಡುತ್ತಿದೆ.
ಬಿಜೆಪಿಯ ಸುಮಾರು ೨೫ ಶಾಸಕರಿಗೆ ಕಾಂಗ್ರೆಸ್ ಈಗಾಗಲೇ ಗಾಳ ಹಾಕಲಾಗಿದ್ದು ಅವರಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು ಅಭ್ಯರ್ಥಿ ಗಳು ಕೈ ಪಾಲಾಗುತ್ತಾರೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಬಿಜೆಪಿಯೇ ಭದ್ರಕೋಟೆ: ವಲಸಿಗ ಶಾಸಕರ ಪೈಕಿ ಸಚಿವರಾಗಿರುವ ಸುಧಾಕರ್, ಭೈರತಿ ಬಸವರಾಜು, ಮುನಿರತ್ನ, ಆನಂದ್ ಸಿಂಗ್, ರಮೇಶ್ ಜಾರಕಿ ಹೋಳಿ, ಬಿ ಸಿ ಪಾಟೀಲ, ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ ಹಾಗೂ ಗೋಪಾಲಯ್ಯ ಅವರಿಗೆ ಸದ್ಯ ಬಿಜೆಪಿಯೇ ಭದ್ರಕೋಟೆಯಾಗಿದೆ. ಇವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನವಲ್ಲದ ಎಲ್ಲ ರೀತಿಯ ಭದ್ರತೆಗಳೂ ಲಭಿಸಿವೆ.
ಹೀಗಾಗಿ ಕಾಂಗ್ರೆಸ್ ಆಹ್ವಾನಿಸಿದರೂ ಇವರು ಹೋಗಲು ಸಿದ್ಧರಿಲ್ಲ ಎನ್ನಲಾಗಿದೆ. ಇವರಲ್ಲಿ ಕೆಲವರಿಗೆ ಬಿಜೆಪಿಯಿಂದ ಹೊರ ಬರುವುದು ಅಷ್ಟು ಸುಲಭವೂ ಅಲ್ಲ ಎನ್ನುವ ಸ್ಥಿತಿಯಿದೆ ಎಂದು ತಿಳಿದು ಬಂದಿದೆ.
ಘರ್ ವಾಪ್ಸಿ ಗಾಳ ಯಾರಿಗೆ ?
ಕಾಂಗ್ರೆಸ್ನ ನಾನಾ ಹಂತದ ನಾಯಕರು ಈಗಾಗಲೇ ಕೆಲವು ಬಿಜೆಪಿ ಶಾಸಕರಿಗೆ ಹಾಗೂ ವಲಸಿಗ ಶಾಸಕರಿಗೆ ಗಾಳ ಹಾಕಿದ್ದಾರೆ. ಅವರ ಪೈಕಿ ಶಾಸಕರಾದ ನಾಗೇಶ್ ಮತ್ತು ಎಚ್. ವಿಶ್ವನಾಥ್ ಕಾಂಗ್ರೆಸ್ ತೆಕ್ಕೆಯಲ್ಲಿದ್ದಾರೆ. ಇನ್ನು ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದ್ದು ಸೋಮಶೇಖರ್ ಮೌನ ವಹಿಸಿದ್ದಾರೆ. ಇದೆ ವೇಳೆ ಸಚಿವರಾದ ಶಿವರಾಮ್ ಮತ್ತು ಬಿಸಿ ಪಾಟೀಲ್ ಕೂಡ ಆಸಕ್ತಿ ತೋರಿದ್ದೂ ಇವರ ಬಗ್ಗೆ ಕಾಂಗ್ರೆಸ್ ಅಷ್ಟಾಗಿ ಒಲವು ತೋರುತ್ತಿಲ್ಲ ಎಂದು ಹೇಳಲಾಗಿದೆ. ಇದರ ಜತೆಗೆ ಸಚಿವ ಮಾಧುಸ್ವಾಮಿ, ಶಾಸಕರಾದ ಜ್ಯೋತಿ ಗಣೇಶ್ , ಶಿವನಗೌಡ ನಾಯಕ್, ಎ.ಎಸ್. ನಡಹಳ್ಳಿ ಸೇರಿ ಅನೇಕ ಶಾಸಕರಿಗೆ ಕಾಂಗ್ರೆಸ್ ಬಲೆ ಬೀಸಿದೆ ಎನ್ನಲಾಗಿದೆ.