Saturday, 27th July 2024

ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ; ಆರೋಗ್ಯ ಮತ್ತು ಶಿಕ್ಷಣಕ್ಜೆ ನಮ್ಮ ಆದ್ಯತೆ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ನಮ್ಮ ಕ್ಲಿನಿಕ್ ಯೋಜನೆಗೆ ಚಾಲನೆ

ಹುಬ್ಬಳ್ಳಿ : ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ಬು ತಲುಪಿಸಲು ರಾಜ್ಯ ಸರಕಾರ ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನ ಬಜೆಟ್ ದಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲಿಟ್ಟು ವಿನಿಯೊಗಿಸಲಾಗುತ್ತಿದೆ. ಜನವರಿಯೊಳಗೆ 438 ನಮ್ಮ ಕ್ಲೀನಿಕ್ ಆರಂಭಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರಕಾರ ಹೆಚ್ಚು ಆದ್ಯತೆ, ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಬುಧವಾರ ತಾಲೂಕಿನ ಬೈರಿದೇವರಕೋಪ್ಪದ ರೇಣುಕಾ ನಗರದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆ ನಮ್ಮ ಕ್ಲೀನಿಕ್ ಉದ್ಘಾಟಿಸಿ ಮತ್ತು ವಿವಿಧ ಜಿಲ್ಲೆಗಳಲ್ಲಿನ ನಮ್ಮ ಕ್ಲೀನಿಕ್ ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬಡವರಿಗೆ, ಜನಸಾಮಾನ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಆರೋಗ್ಯ ಕಾರ್ಯಕ್ರಮ ಇದು. ಶಹರದಲ್ಲಿನ ಬಡವರ ಆರೋಗ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸುವದರಿಂದ ತೊಂದರೆ ಆಗುತ್ತದೆ. ನಮ್ಮ ಸರಕಾರ ಸ್ಪಂದನಾಶೀಲವಾಗಿದೆ. ರಾಜ್ಯದ ತುಂಬ ನಗರದ ಜನಸಾಮಾನ್ಯರಿಗಾಗಿ, ಬಡವರಿಗಾಗಿ ನಮ್ಮ ಕ್ಲೀನಿಕ್ ಆರಂಭಿಸ ಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬಡತನ ಮತ್ತು ಅನಾರೋಗ್ಯ ಎರಡು ಅಭಿವೃದ್ಧಿಯ ಶತ್ರುಗಳು. ಬಡತನ ದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ದೊರೆಯುವಂತೆ ರಾಜ್ಯ ಸರಕಾರ ವಿವಿಧ ಯೋಜನೆ ಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ದಲ್ಲಿ 10 ಸಾವಿರ ಕೋಟಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಮೀಸಲಿಟ್ಟು , ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಲಾಗಿದೆ. ಮತ್ತು ಪ್ರಸಕ್ತ ಸಾಲಿನಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಹಿಂದುಳಿದ, ಆಸ್ಪರೇಶನ ತಾಲೂಕುಗಳನ್ನು ಗುರುತಿಸಿ, ಆರೋಗ್ಯ ಸೇವೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಸಕ್ಕರೆ ಖಾಯಿಲೆ ಇರುವವರಿಗೆ ಡಯಾಲಿಸಸ್ ಮಾಡುವ ದನ್ನು ಪ್ರಸ್ತುತ 30 ಸಾವಿರದಷ್ಟು ಇರುವದನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಹೊಸದಾಗಿ 12 ಕೆಮೊಥೆರಪಿ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜನವರಿಯಿಂದ 60 ವರ್ಷದಾಟಿದ ಪ್ರತಿಯೊಬ್ಬರಿಗೂ ಉಚಿತವಾಗಿ ಕಣ್ಣು ತಪಾಸಣೆ, ಚಿಕಿತ್ಸೆ ಉಚಿತ ಕನ್ನಡಕ ವಿತರಣೆ ಕ್ರಮ ವಹಿಸಲಾಗುವುದು. 500 ಕೋಟಿ ವೆಚ್ಚದಲ್ಲಿ ಹುಟ್ಟು ಕಿವಡರಿಗೆ ಶ್ರವಣಸಲಕರಣೆ ವಿತರಿಸಲಾಗುವುದು. ರೈತರಿಗೆ ಯಶ್ವನಿ ಯೋಜನೆ ಮುಂದುವರಿಕೆಗೆ‌ ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸುಮಾರು 350 (ಬೆಡ್) ಹಾಸಿಗೆ ಸೌಲಭ್ಯ ಇರುವ ರೂ.250 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಗೆ ಕಿಮ್ಸ್ ಆವರಣದಲ್ಲಿ ಬರುವ ಜನವರಿಯಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಹೊಸ ಉಪಕರಣ ಖರೀದಿಗೆ 10 ಕೋಟಿ ಅನುದಾನ ನೀಡಲಾಗಿದೆ. ನವನಗರ ಕ್ಯಾನ್ಸರ್ ಆಸ್ಪತ್ರೆ ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.

ಸಮುದಾಯ ಆಸ್ಪತ್ರೆಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಡವರಿಗೆ, ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಹೊಸ ಸಂಶೋಧನೆಗಳ ಲಾಭ ಸೀಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಆರೋಗ್ಯ ಕ್ಷೇತ್ರದ ನೂತನ ಸಂಶೋದನೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ರಾಜ್ಯ ಸರಕಾರ ಹೆಚ್ಚು ಕಾಳಜಿ ವಹಿಸಿದೆ.

ಪ್ರತಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಆಗಬೇಕು. ಜಿಲ್ಲೆಯ ಮಕ್ಕಳ ಚಿಕಿತ್ಸೆ, ಆರೋಗ್ಯ ದಾಖಲೆ ಆಗಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚುವಂತೆ ಮಾಡಬೇಕು ಎಂದು ಮುಖ್ಯಮಂತಿ ಬಸವರಾಜ ಬೋಮ್ಮಾಯಿ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿ, ರಾಜ್ಯ ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಳನ್ನು ನೀಡಲಾಗುತ್ತಿದೆ. ಇಂದು ಏಕಕಾಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ 114 ನಮ್ಮ ಕ್ಲೀನಿಕ್ ಉದ್ಘಾಟನೆ ಮಾಡಿರುವುದು ಐತಿಹಾಸಿಕ ದಾಖಲೆ ಯಾಗಿದೆ. ಪ್ರತಿಯೊಬ್ಬ ಬಡವನ ಬದುಕನ್ನು ಹಸನುಗೊಳಿಸುವ ಕಾರ್ಯವನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಮ್ಮ ಸರಕಾರ ಮಾಡುತ್ತಿದೆ ಎಂದರು.

ರಾಜ್ಯದಾದ್ಯಂತ ಉದ್ದೇಶಿತ 438 ಕ್ಲೀನಿಕ್ ಗಳನ್ನು ಬರವ ಜನವರಿ ಒಳಗಾಗಿ ಆರಂಭಿಸಲಾಗುವುದು.ಆಯುಷ್ಮಾನ್ ಭಾರತ ಕಾರ್ಡ್ ಇಡಿ ದೇಶಕ್ಕೆ ಒಂದೇ ಆಗಿದೆ. ಆರೋಗ್ಯದಲ್ಲಿ ಅಭಿವೃದ್ಧಿ ಆದರೆ ನಾಡು ಸಂಪತ್ತಭರಿತವಾಗಲು ಸಾಧ್ಯ. ಆದ್ದರಿಂದ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ ಎಂದರು.

ನಾಡಿನ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ಸುಧಾರಣೆ ನಮ್ಮ ಸರಕಾರ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ನಗರವಾಸಿಗಳ ಉತ್ತಮ ಆರೋಗ್ಯಕ್ಕಾಗಿ ನಮ್ಮ ಕ್ಲೀನಿಕ್ ಆರಂಭಿಸಲಾಗಿದೆ.

30 ವರ್ಷ ದಾಟಿದ ಪ್ರತಿಯೊಬ್ಬರು ಪ್ರತಿ ವರ್ಷ ಒಂದು ಸಲ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಬಿ.ಪಿ., ಶುಗರ್ ಖಾಯಿಲೆಗಳಿಗಾಗಿ ರಾಜ್ಯದಲ್ಲಿ ಶೇ.60 ರಷ್ಟು ಜನರ ತಪಾಸಣೆ ಪ್ರತಿ ವರ್ಷ ಆಗುತ್ತದೆ. ಎನ್ ಸಿ.ಡಿ. ಕ್ಲೀನಿಕ್ ಗಳ ಮೂಲಕ ಜನವರಿಯಿಂದ ಬಿ.ಪಿ., ಶುಗರ್ ಕುರಿತು ಹೆಚ್ಚು ತಪಾಸಣೆ ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ 1 ಕೋಟಿ 20 ಲಕ್ಷ ದಷ್ಟು, ಆಯುಷ್ಮಾನ ಭಾರತ ನಗರ ಆರೋಗ್ಯ ಕಾರ್ಡ್ ಮಾಡಲಾಗಿದೆ. ಜನವರಿಯಲ್ಲಿ ಪ್ರಧಾನಮಂತ್ರಿಗಳು ಆಯುಷ್ಮಾನ್ ಭಾರತ ನಗರ ಆರೋಗ್ಯ ಕಾರ್ಡ್ ವಿತರಣೆಗೆ ಚಾಲನೆ ನೀಡಲಿದ್ದಾರೆ.

ಪ್ರತಿ ವರ್ಷ ಪ್ರತಿ ಬಡ ಕುಟುಂಬಕ್ಕೆ 5 ಲಕ್ಷ ದವರೆಗೆ ಆರೋಗ್ಯ ಚಿಕಿತ್ಸೆಗೆ ಸರಕಾರದಿಂದ ವೆಚ್ಚ ಮಾಡಲಾಗುತ್ತಿದೆ. ಮತ್ತು ಎಪಿಎಲ್ ಕಾರ್ಡ ದಾರರಿಗೂ ಆರೋಗ್ಯ ಸೇವೆಯಲ್ಲಿ ಶೇ.30 ರಷ್ಟು ವೆಚ್ಚವನ್ನು ಸರಕಾರದಿಂದ ಭರಿಸಲಾಗುತ್ತಿದೆ ಎಂದು ಸಚಿವ ಡಾ. ಸುಧಾಕರ ತಿಳಿಸಿದರು.

ಇಲ್ಲಿವರೆಗೆ ಆಯುಷ್ಮಾನ್ ಭಾರತ ಯೋಜನೆಯಡಿ ಸುಮಾರು 5 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ
ಶೇ. 70 ರಷ್ಟು ಜನ ಸರಕಾರಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದು ಸರಕಾರಿ ಆಸ್ಪತ್ರೆ ಮೇಲೆ ಜನರ ವಿಶ್ವಾಸ ತೋರಿಸುತ್ತದೆ ಎಂದು ಸಚಿವರು ಹೆಮ್ಮೆಪಟ್ಟರು.

ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಆಯುಷ್ಮತಿ ಆಸ್ಪತ್ರೆಗಳನ್ನು ಜನವರಿಯಲ್ಲಿ ಆರಂಭಿಸಲಾಗುವುದು. ಪ್ರಸಕ್ತ ಆಯವ್ಯಯ ದಲ್ಲಿ ಘೋಷಿಸಿರುವ ಜಯದೇವ ಹೃದಯರೋಗ ಆಸ್ಪತ್ರೆ ಶಾಖೆಯ ಶಂಕುಸ್ಥಾಪನೆಯನ್ನು ಹುಬ್ಬಳ್ಳಿಯಲ್ಲಿ ಜನವರಿಯಲ್ಲಿ ಮಾಡಲಾಗುವುದು ಎಂದು ಸಚಿವ ಡಾ.ಸುಧಾಕರ ತಿಳಿಸಿದರು.

ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗ್ರಾಮೀಣ ಭಾಗದ ಸೊಗಡು ಇರುವ ಬೈರಿದೇವರಕೊಪ್ಪದಲ್ಲಿ ನಮ್ಮ ಕ್ಲೀನಿಕ್ ಚಾಲನೆ ನೀಡಿರುವುದು ನಮಗೆ ಹೆಮ್ಮೆ ಮೂಡಿಸಿದೆ. ಬಜೆಟ್ ದಲ್ಲಿ ಘೋಷಿಸಿರುವಂತೆ ಮಹತ್ವದ ಆರೋಗ್ಯ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಿವೆ. ಕೋವಿಡ್ ಮಹಾಮಾರಿ ಯನ್ನು ವಿಶ್ವಕ್ಕೆ ಮಾದರಿ ಆಗುವಂತೆ ನಿರ್ವಹಿಸಿ, ಯಶಸ್ವಿಯಾಗಿ ಕೋವಿಡ್ ರೋಗ ಹಿಮ್ಮೆಟ್ಟಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅದ್ಭುತವಾದ ಸೇವೆ ನೀಡಿ, ಲಕ್ಷಾಂತರ ಜನರ ಜೀವ, ಕೋಟ್ಯಾಂತರ ಜನರ ಆರೋಗ್ಯ ಉಳಿಸಿದೆ. ಅನೇಕ ಆಸ್ಪತ್ರೆಗಳಿಂದ ಸೀಗುವ ಸೌಲಭ್ಯಗಳನ್ನು ನಮ್ಮ ಕ್ಲೀನಿಕ್ ಮೂಲಕ ಕಲ್ಪಿಸುವ ಕಾರ್ಯ ಈ ನಮ್ಮ ಕ್ಲೀನಿಕ್ ದಿಂದ ಆಗಲಿದೆ ಎಂದು ಹೇಳಿದರು.

ನಮ್ಮ ಕ್ಲೀನಿಕ್ ಮೂಲಕ ಬಡವರಿಗೆ, ಜನಸಾಮಾನ್ಯರಿಗೆ ಉಚಿತವಾಗಿ ಚಿಕಿತ್ಸೆ, ಔಷಧಿ ವಿತರಣೆಗೆ ಕ್ರಮವಹಿಸಲಾಗಿದೆ‌. ಇದು ಸರಕಾರದ ಜನಪರ ಧೋರಣೆ ತೋರಿಸುತ್ತದೆ ಎಂದು ಹೇಳಿದರು. ಜಯದೇವ ಆಸ್ಪತ್ರೆಯ ಶಾಖೆ ಆಗುವದರಿಂದ ಉತ್ತರ ಕರ್ನಾಟಕ ಜನರಿಗೆ ಹೆಚ್ಚು ಸಹಾಯವಾಗುತ್ತದೆ. ಇದು ಆದಷ್ಟು ಬೇಗ ಅನುಷ್ಠಾನವಾಗಲಿ ಎಂದು ಅವರು ಆಶಿಸಿದರು.

ಕಾರ್ಯಕ್ರಮ ವೇದಿಕೆಯಲ್ಲಿ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ ಹಾಲಪ್ಪ ಬಸಪ್ಪ, ಲೋಕೋಪ ಯೋಗಿ ಮತ್ತು ಬಂದರು ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಅರವಿಂದ ಬೆಲ್ಲದ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ರಾಜೇಶ ಕೋಟೆನ್ನವರ, ಮಹಾಪೌರ ಈರೇಶ ಅಂಚಟಗೇರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ., ಆಯುಕ್ತ ರಂದೀಪ್ ಡಿ., ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಮಹಾನಗರಪಾಲಿಕೆ ಆಯುಕ್ತ ಡಾ.ಗೋಪಾಲ ಕೃಷ್ಣ ಬಿ., ಮಹಾನಗರಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಆರ್.ಸಿ.ಎಚ್.ಓ.ಡಾ.ಎಸ್.ಎಂ.ಹೊನಕೇರಿ,ಡಾ.ಮಂಜುನಾಥ ಸೊಪ್ಪಿಮಠ, ಡಾ. ಅಯ್ಯನಗೌಡರ ಪಾಟೀಲ, ಡಾ. ಎಸ್.ಬಿ.ಕಳಸೂರಮಠ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ.ನವೀನ್ ಭಟ್.ವಾಯ್. ಅವರು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಾಟೀಲ ಶಶಿ ಅವರು ವಂದಿಸಿದರು. ಧಾರವಾಡ ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರ್ಚುವಲ್ ಮೂಲಕ ವಿವಿಧ ಜಿಲ್ಲೆಗಳ 114 ನಮ್ಮ ಕ್ಲೀನಿಕ್ ಗಳಿಗೆ ಚಾಲನೆ

ಮುಖ್ಯಮಂತ್ರಿಗಳು ಇಂದಿನಿಂದ ವಿವಿಧ ಜಿಲ್ಲೆಗಳಲ್ಕಿ ಆರಂಭವಾಗುವ ನಮ್ಮ ಕ್ಲೀನಿಕ್ ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ ನಂತರ, ಉತ್ತರ ಕನ್ನಡ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು, ಅಧಿಕಾರಿಗಳೊಂದಿಗೆ, ಸಾರ್ವಜನಿಕರೊಂದಿಗೆ ವರ್ಚುವಲ್ ಮೂಲಜ ಸಂವಾದ ಮಾಡಿದರು. ಒಮ್ಮೆ ಆರಂಭವಾದ ಮೇಲೆ ನಮ್ಮ ಕ್ಲೀನಿಕ್ ನಿಲ್ಲಬಾರದು. ಅಗತ್ಯ ಸಂಪನ್ಮೂಲಗಳನ್ನು ನೀಡಲಾಗಿದೆ. ಯಾವುದೇ ಬೇಡಿಜೆಗಳಿದ್ದರೆ ತಿಳಿಸಿ, ಮುಂದಿನ ದಿನಗಳಲ್ಲಿ ನಮ್ಮ ಕ್ಲೀನಿಕ್ ಗಳಲ್ಲಿ ನೀಡಲು ಉದ್ದೇಶಿಸಿರುವ ಈಗಿನ 14 ಸೇವೆಗಳ ಜೊತೆಗೆ ಬಡವರಿಗೆ ತೀರಾ ಅಗತ್ಯವಿರುವ ಇನ್ನು ಹೆಚ್ಚು ಸೇವೆಗಳನ್ಬು ನೀಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

ವರ್ಚುವಲ್ ಸಂವಾದದಲ್ಲಿ ಚಾಮರಾಜನಗರದ ಫಲಾನುಭವಿ ಸುಧಾ ಅವರು ಮಾತನಾಡಿ, ಇದು ತುಂಭಾ ಒಳ್ಳೆಯ ಯೋಜನೆ ಮತ್ತು ಆಸ್ಪತ್ರೆ ಆಗಿದೆ. ಈ ಉಪಕಾರ ನಮ್ಮ ಪಾಲಿನ ಶ್ರೀರಕ್ಷೆ. ನಿಮಗೆ ದೇವರು ನೂರು ವರ್ಷ ಆಯುಷ್ ನೀಡಲಿ ಎಂದು ಶುಭ ಹಾರೈಸಿದರು.

ಕಾರವಾರ ನಗರದ ನಾಗರಿಕರೊಬ್ಬರು ಮಾತನಾಡಿ, ಈ ಯೋಜನೆಯಿಂದ ಬಹಳ ಅನಕೂಲವಾಗುತ್ತದೆ. ಸಣ್ಣಪುಟ್ಟ ಚಿಕಿತ್ಸೆ, ತಪಾಸಣೆಗೆ ದೂರದ ಊರಿಗೆ ಹೋಗಬೇಕಿತ್ತು. ಇದರಿಂದ ಅನಕೂಲವಾಗಿದೆ ಎಂದರು.

ರಾಯಚೂರಿನ ಪಲಾನುಭವಿ ಉಮಾ ಅವರು ಮಾತನಾಡಿ, ನಾನು ಮನೆಯಲ್ಲಿ ಇರುತ್ತೇನೆ. ನನ್ನ ಗಂಡ ಕೂಲಿ ಮಾಡುತ್ತಾನೆ. ನಮಗೆ ಆಸ್ಪತ್ರೆ ದೂರದಲ್ಲಿತ್ತು. ಅಟೊಚಾರ್ಜ್, ಆಸ್ಪತ್ರೆ ಫೀಜ್ ಹೆಚ್ಚಾಗಿತ್ತು. ನಮ್ಮ ಕ್ಲೀನಿಕ್ ಬಂದಿದೆ. ಇದರಿಂದ ತುಂಬಾ ಸಹಾಯವಾಗುತ್ತದೆ. ಬೇರೆ ಆಸ್ಪತ್ರೆಗಳಲ್ಲಿ ಯೋಗ ಮಾಡಿಸುವದಿಲ್ಲ. ನಮ್ಮ ಕ್ಲೀನಿಕ್ ದಲ್ಲಿ ಯೋಗ ತರಬೇತಿ ಇರುವದರಿಂದ ನಮಗೆ ಹೆಚ್ಚು ಅನಕೂಲವಾಗುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ, ಕಾಳಜಿವಹಿಸುತ್ತಾರೆ. ಬಡವರ ಬಗ್ಗೆ ಕನಿಕರ ಇರುವ ನಮ್ಮ ಮುಖ್ಯಮಂತ್ರಿಗಳಿಗೆ ತುಂಬಾ ಧನ್ಯವಾದಗಳು ಎಂದು ಹೇಳಿದರು.

error: Content is protected !!