ಬೀದರ: ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಸಾವಿನ ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿದ್ದೇ ಡಾ. ಅರ್ಚನಾ ಶರ್ಮಾ ಅವರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿರುವ ಬೀದರ್ ಸ್ತ್ರೀರೋಗ ತಜ್ಞರ ಸಂಘವು (ಬೀದರ್ ಆಬ್ಸ್ಟೆಟ್ರಿಕ್ಸ್, ಗೈನಿಕಾಲಜಿಕಲ್ ಸೊಸೈಟಿ) ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಸಂಘದ ಅಧ್ಯಕ್ಷೆ ಡಾ. ಸರಿತಾ ಭದಭದೆ, ಕಾರ್ಯದರ್ಶಿ ಡಾ.ವಿಜಯಾ ಹತ್ತಿ ನೇತೃತ್ವ ದಲ್ಲಿ ಸಂಘದ ಸದಸ್ಯರು, ಸ್ತ್ರೀರೋಗ ತಜ್ಞರು ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.
ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಸ್ತ್ರೀರೋಗತಜ್ಞೆ ಡಾ.ಅರ್ಚನಾ ಶರ್ಮಾ ಅವರ ಆತ್ಮಹತ್ಯೆ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಮೃತಪಟ್ಟ ಪ್ರಕರಣದಲ್ಲಿ ವೈದ್ಯೆ ವಿರುದ್ಧ 302 ಅಡಿ ಪ್ರಕರಣ ದಾಖಲು ಮಾಡಿರುವುದು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ವೈದ್ಯರು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವಂತಹ ಸ್ಥಿತಿ ಸೃಷ್ಟಿಸ ಬೇಕು.
ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಡಾ. ಅರ್ಚನಾ ಶರ್ಮಾ ಪರಿವಾರಕ್ಕೆ ನ್ಯಾಯ ದೊರೆಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.