Friday, 25th October 2024

‌Roopa Gururaj Column: ಸಾಕು ಪ್ರಾಣಿಗಳಿಗಿರುವ ನಿಯತ್ತು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ತಿಮಲಾಪುರದ ಶ್ರೀಮಂತ ತಿಮ್ಮಣ್ಣನಿಗೆ ಅವನ ನಾಯಿ ಎಂದರೆ ಬಹಳ ಪ್ರೀತಿ. ಒಂದು ದಿನರಾತ್ರಿ ತಿಮ್ಮಣ್ಣ ಬಹಳ ಸುಸ್ತಾಗಿ ತನ್ನ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ. ಒಳ್ಳೆಯ ನಿದ್ರೆ ಹತ್ತಿತ್ತು, ಕೋಣೆಯ ಕಿಟಕಿಯ ಬಳಿ ಅವನ
ಮುದ್ದಿನ ನಾಯಿ ಅವಗೆ ಕಾವಲಾಗಿ ಕುಳಿತಿತ್ತು.

ಮಧ್ಯರಾತ್ರಿಯ ಸಮಯದಲ್ಲಿ, ಮುಖವಾಡ ಧರಿಸಿದ ಕಳ್ಳನೊಬ್ಬ ತಿಮ್ಮಣ್ಣನ ಮನೆಯನ್ನು ಪ್ರವೇಶಿಸಿ, ಕಳ್ಳತನ ಮಾಡುವ ಉದ್ದೇಶದಿಂದ, ಮನೆಯ ಹೊರಗೆ ಹಾಕಿದ್ದ, ನೀರಿನ ಕೊಳವೆಯನ್ನು ಹಿಡಿದು ಏರ ತೊಡಗಿದ. ಇದನ್ನು ಕಂಡ ನಾಯಿ ಜೋರಾಗಿ ಬೊಗಳತೊಡಗಿತು. ನಾಯಿ ಬೊಗಳಿದ ಶಬ್ದವನ್ನು ಕೇಳಿ, ಕಳ್ಳ ತಾನು ಇನ್ನು ಸಿಕ್ಕಿ ಹಾಕಿ ಕೊಳ್ಳುತ್ತೇನೆ ಎಂದುಕೊಂಡು ಕೊಳವೆಯಿಂದ ಜಾರಿ ಕೆಳಗಿಳಿದು ವೇಗವಾಗಿ ಓಡಿ ಹೋದ.

ಇಷ್ಟಾದರೂ ತನ್ನ ಯಜಮಾನ ಎಚ್ಚರಗೊಳ್ಳಲಿಲ್ಲವೆಂದು, ಕಳ್ಳ ಓಡಿ ಹೋದ ಮೇಲೂ ನಾಯಿ ಬೊಗುಳುವುದನ್ನು ನಿಲ್ಲಿಸಲೇ ಇಲ್ಲ. ಇದರಿಂದ ಗಾಢ ನಿದ್ರೆಯಲ್ಲಿದ್ದ ತಿಮ್ಮಣ್ಣನಿಗೆ ನಿದ್ರಾ ಭಂಗವಾಗಿ ಎಚ್ಚರವಾಯಿತು. ಹೊರಗೆ ಎದ್ದು ಬಂದು ಅತ್ತ ಇತ್ತ ನೋಡಿದ, ಯಾರೂ ಕಾಣಿಸಲಿಲ್ಲ. ತಿಮ್ಮಣ್ಣನಿಗೆ ತನ್ನ ನಿದ್ರಾ ಭಂಗ ಮಾಡಿದ ನಾಯಿಯ ಮೇಲೆ ಬಹಳ ಕೋಪ ಬಂದು, ಅ ಬಿದ್ದಿದ್ದ ದೊಣ್ಣೆಯಿಂದ ಎರಡೇಟು ಬಿಗಿದು, ‘ನೋಡು ಇನ್ನೆಂದಾ ದರೂ ನಾನು ನಿದ್ರಿಸಿದಾಗ ಈ ರೀತಿಯಾಗಿ ಬೊಗಳಿದರೆ, ನಿನ್ನ ಕಾಲು ಮುರಿದು ಮನೆಯಿಂದ ಆಚೆ ಕಳಿಸುತ್ತೇನೆ’ ಎಂದು ಹೇಳಿ ಒಳಗೆ ಹೋಗಿ ಮತ್ತೆ ಮಲಗಿದ.

ಕೆಲ ದಿನಗಳ ನಂತರ, ಮತ್ತೊಬ್ಬ ಕಳ್ಳ ಬಂದು ತಿಮ್ಮಣ್ಣನ ಮನೆಯ ಒಳಗೆ ಹೊಕ್ಕ. ಈಗ ಅವನ ನಾಯಿ ಕಳ್ಳನನ್ನು ನೋಡಿದರೂ ಬೊಗಳಲೇ ಇಲ್ಲ, ತನ್ನ ಯಜಮಾನ ಏನು ಹೇಳಿದ್ದ, ಅದರಂತೆ ನಡೆದುಕೊಂಡಿತು. ಒಳಗೆ ನುಗ್ಗಿದ ಕಳ್ಳ, ತಿಮ್ಮಣ್ಣನ ಮನೆಯ ಅಲೆಮಾರಿನಲ್ಲಿದ್ದ ಒಡವೆ ವಸ್ತುಗಳನ್ನು, ನಗ ನಾಣ್ಯಗಳನ್ನು, ಒಂದು ಗೋಣಿ ಚೀಲ ದಲ್ಲಿ ಹಾಕಿ ಕಟ್ಟಿಕೊಂಡು ಸದ್ದಿಲ್ಲದಂತೆ ಹೊರಟು ಹೋದ. ಬೊಗಳದ್ದಿದ್ದರೂ ನಾಯಿ, ಅವನಿಗೆ ಕಾಣದಂತೆ ಅವನನ್ನು ಬಿಡದೇ ಹಿಂಬಾಲಿಸಿತು.

ಕಳ್ಳ ಹತ್ತಿರದಲ್ಲಿದ್ದ ಒಂದು ಕಾಡನ್ನು ಹೊಕ್ಕು, ಒಂದು ಮರದ ಬುಡದಲ್ಲಿ ಗುಂಡಿಯನ್ನು ತೆಗೆದು ತಾನು ತಂದಿದ್ದ ಒಡವೆ ವಸ್ತು, ನಗನಾಣ್ಯಗಳ ಚೀಲವನ್ನು ಅದರಲ್ಲಿ ಇಟ್ಟು ಮಣ್ಣು ಮುಚ್ಚಿ, ಅಲ್ಲಿಂದ ಹೊರಟು ಹೋದ. ನಾಯಿ ಕಳ್ಳ ಮಾಡಿದ್ದನ್ನೆಲ್ಲ ನೋಡುತ್ತಾ, ಅವನು ಹೂತಿಟ್ಟಿದ್ದ ಜಾಗವನ್ನು ನೆನಪಿನಲ್ಲಿ ಇಟ್ಟುಕೊಂಡು ಮನೆಗೆ ಹಿಂತಿರು ಗಿತು. ತಿಮ್ಮಣ್ಣ ಮಲಗಿದ್ದವನು ಎದ್ದು ತನ್ನ ಅಲೆಮಾರಿನಲ್ಲಿದ್ದ, ನಗನಾಣ್ಯಗಳನ್ನು ಯಾರೊ ಅಪರಿಸಿಕೊಂಡು ಹೋಗಿರುವುದನ್ನು ನೋಡಿ ಕಂಗಾಲಾಗಿ, ಕಳ್ಳ ,ಕಳ್ಳ ಎಂದು ಕಿರುಚಾಡಿ ಸಹಾಯಕ್ಕಾಗಿ ನೆರೆಹೊರೆಯವರನ್ನು ಕೂಗಿದ.

ಅಷ್ಟು ಹೊತ್ತಿಗೆ, ಕಳ್ಳನನ್ನು ಹಿಂಬಾಲಿಸಿಕೊಂಡು ಹೋಗಿದ್ದ ನಾಯಿ ಹಿಂದಿರುಗಿ ಬಂದು ಅವನ ಬಳಿ ನಿಂತು ಕೊಂಡಿತು. ‘ಇಷ್ಟು ಹೊತ್ತು ಎಲ್ಲಿ ಅಲೆಯಲು ಹೋಗಿದ್ದಿ? ಕಳ್ಳ ಬಂದಾಗ ಬೊಗಳಲು ನಿನಗೇನಾಗಿತ್ತು?’ ಎಂದು ಅದರ ಮೇಲೆ ಸಿಡಿಮಿಡಿಗೊಂಡ. ನಾಯಿ ಅವನ ಮೇಲಂಗಿಯನ್ನು ಕಚ್ಚಿ ಎಳೆಯತೊಡಗಿತು, ತಿಮ್ಮಣ್ಣನಿಗೆ ನಾಯಿ ತನ್ನನ್ನು ಎಲ್ಲಿಗೊ ಕರೆಯುತ್ತಿದೆ ಎಂಬುದರ ಸುಳಿವು ಸಿಕ್ಕಿತು. ಅವನು ನಾಯಿಯನ್ನೇ ಹಿಂಬಾಲಿಸಿಕೊಂಡು ಹೋದ. ನಾಯಿ, ಅವನನ್ನು ಕಾಡಿಗೆ ಕರೆದುಕೊಂಡು ಬಂದು, ಮರದ ಕೆಳಗೆ ಕಳ್ಳ ಹೂತಿಟ್ಟಿದ್ದ ಜಾಗವನ್ನು ಕಾಲಿನಿಂದ ಕೆರೆದು, ಕೆರೆದು ತೋರಿಸಿತು.

ಅದು ತೋರಿಸಿದ ಜಾಗವನ್ನು ಅಗೆದು ನೋಡಿದಾಗ, ತಿಮ್ಮಣ್ಣ ತನ್ನ ಕಣ್ಣುಗಳನ್ನು ತಾನೇ ನಂಬದಾದ. ಆ ನೆಲದಲ್ಲಿ ಅವನ ಕಳುವಾದ ನಗ ನಾಣ್ಯಗಳ ಗಂಟು ಕಾಣಿಸಿತು. ಥಟಕ್ಕೆಂದು ಅದನ್ನು ಎತ್ತಿಕೊಂಡು ಬೇಗನೆ ಮನೆ ಸೇರಿದ. ನಾವು ಸಾಕುಪ್ರಾಣಿಗಳಿಗೆ ತೋರಿಸಿದ ಪ್ರೀತಿ ನೂರು ಪಟ್ಟಾಗಿ ನಮಗೆ ಮರಳಿ ಬರುತ್ತದೆ. ಸಾಕು ಪ್ರಾಣಿಗಳನ್ನು ಎಂದಿಗೂ ನಿಮ್ಮ ಸಿಟ್ಟು, ಉದಾಸೀನಕ್ಕೆ ಗುರಿಯಾಗಿಸಬೇಡಿ. ಅವುಗಳಿಗೆ ಎಂತದ್ದೇ ಸಂದರ್ಭದಲ್ಲೂ ಸದಾ ಪ್ರೀತಿ
ಹಂಚಿಕೊಳ್ಳುವುದಷ್ಟೇ ಗೊತ್ತು.

ಇದನ್ನೂ ಓದಿ: Roopa Gururaj Column: ಸ್ವರ್ಗ- ನರಕದ ಯಾತ್ರೆ