Thursday, 24th October 2024

Bengaluru Building Collapse:ಕುಸಿದ ಕಟ್ಟಡದ ಮಾಲೀಕ, ಪುತ್ರ, ಕಾಂಟ್ರಾಕ್ಟರ್‌ ಬಂಧನ

bengaluru building collapse

ಬೆಂಗಳೂರು: ಬಾಬು ಸಾ ಪಾಳ್ಯದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿದ (Bengaluru Building Collapse) ಪ್ರಕರಣದಲ್ಲಿ ಕಟ್ಟಡದ ಮಾಲೀಕ, ಆಂಧ್ರಪ್ರದೇಶದ ಮುನಿರೆಡ್ಡಿ, ಅವರ ಪುತ್ರ ಭುವನ್‌ ರೆಡ್ಡಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಮೊದಲನೇ ಗುತ್ತಿಗೆದಾರ ಮುನಿಯಪ್ಪ ಅವರನ್ನು ಹೆಣ್ಣೂರು ಠಾಣೆ ಪೊಲೀಸರು ಬುಧವಾರ (Bengaluru news) ಬಂಧಿಸಿದ್ದಾರೆ.

ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಎರಡನೇ ಗುತ್ತಿಗೆದಾರ ಏಳುಮಲೈ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು, ಅವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನೂ ಪತ್ತೆಯಾಗಿಲ್ಲ.

‘ಸಿವಿಲ್‌ ಎಂಜಿನಿಯರ್, ಗುತ್ತಿಗೆದಾರರು, ಮೇಸ್ತ್ರಿ ಅವರ ಜೊತೆಗೆ ಕಟ್ಟಡದ ಮಾಲೀಕರು ಸೇರಿಕೊಂಡು ಜನವಸತಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿ ಬಳಸದೇ ಹಣ ಉಳಿಸುವ ಉದ್ದೇಶದಿಂದ ಕಳಪೆ ಸಾಮಗ್ರಿ ಬಳಸಿ ಕಟ್ಟಡ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯ ಅರಿವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಕಟ್ಟಡ ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ. ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಮುನಿರಾಜು ರೆಡ್ಡಿ ಅವರು ಕೆಲವು ವರ್ಷಗಳ ಹಿಂದೆಯೇ ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದರು. ಮಲ್ಲೇಶ್ವರದಲ್ಲಿ ನೆಲಸಿದ್ದರು. ಬಾಬು ಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನಲ್ಲಿ ಕೆಲವು ವರ್ಷಗಳ ಹಿಂದೆ 60X40 ಅಡಿ ಅಳತೆಯ ನಿವೇಶನ ಖರೀದಿಸಿದ್ದರು. ಅಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಮುನಿರಾಜು ಕಟ್ಟಡ ನಿರ್ಮಾಣದ ಸ್ಥಳಕ್ಕೆ ಹೆಚ್ಚಾಗಿ ಬರುತ್ತಿರಲಿಲ್ಲ. ಭುವನ್‌ ರೆಡ್ಡಿಯೇ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು’ ಎಂದು ಸ್ಥಳೀಯ ತಿಳಿಸಿದ್ದಾರೆ.

ಭುವನ್​ ರೆಡ್ಡಿ ಯಾವುದೇ ಅನುಮತಿ ಪಡೆಯದೇ ಏಳು ಮಹಡಿಯ ಕಟ್ಟಡ ಕಟ್ಟಿಸುತ್ತಿದ್ದರು. ಅಲ್ಲದೇ ಕಟ್ಟಡ ಕುಸಿಯಲು ಕಳಪೆ ಕಾಮಗಾರಿ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ‘ಬಾಡಿಗೆ ಉದ್ದೇಶಕ್ಕೆ ಮನೆ ನಿರ್ಮಿಸುತ್ತಿದ್ದರು. ಆರನೇ ಅಂತಸ್ತಿನಲ್ಲಿ ಮಾಲೀಕರು ವಾಸಕ್ಕೆ ಡ್ಯುಪ್ಲೆಕ್ಸ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಸಿದ್ದರು’ ಎಂದು ಸ್ಥಳೀಯರು ಹೇಳಿದರು.

‘ತಳಪಾಯದಲ್ಲಿ ಕಬ್ಬಿಣದ ರಾಡುಗಳನ್ನು ಸರಿಯಾಗಿ ಅಳವಡಿಕೆ ಮಾಡಿರಲಿಲ್ಲ. ಕಾಂಪೌಂಡ್​ ನಿರ್ಮಾಣಕ್ಕೆ ಅಗೆಯಲಾಗಿದ್ದ ಗುಂಡಿಯಲ್ಲಿ ಅಪಾರ ಪ್ರಮಾಣದ ಮಳೆ ನೀರು ಶೇಖರಣೆಗೊಂಡು ಭೂಮಿ ಸಡಿಲವಾಗಿತ್ತು. ತಳಪಾಯದಲ್ಲಿ 22 ಎಂ.ಎಂನ ಕಬ್ಬಿಣದ ರಾಡು ಬಳಸಬೇಕಿತ್ತು. 12 ಹಾಗೂ 16 ಎಂ.ಎಂ ಕಬ್ಬಿಣದ ರಾಡು ಬಳಸಲಾಗಿದೆ. ಮಣ್ಣು ಪರೀಕ್ಷೆ ಮಾಡಿಸಿ ವರದಿ ಆಧರಿಸಿ ಕಟ್ಟಡದ ಸಾಮರ್ಥ್ಯ ಹೆಚ್ಚಿಸಬೇಕಿತ್ತು. ಮಣ್ಣು ಸಡಿಲವಾಗಿದ್ದರೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾಮಗಾರಿ ನಡೆಸಬೇಕಿತ್ತು. ಈ ರೀತಿಯ ಕ್ರಮ ಅನುಸರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಅಗ್ನಿಶಾಮಕದ ದಳದ ಅಧಿಕಾರಿಯೊಬ್ಬರು ತಿಳಿಸಿದರು.

ಡಿಆರ್‌ಡಿಒ ಸಾಧನ ಬಳಸಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಪತ್ತೆ ಹಚ್ಚಲಾಯಿತು. ಗ್ಯಾಸ್‌ ಕಟ್ಟರ್‌ ಸಹಾಯದಿಂದ ಕಬ್ಬಿಣದ ರಾಡು ತುಂಡು ಮಾಡಿ ಕಾರ್ಯಾಚರಣೆ ನಡೆಸಲಾಯಿತು. ಸ್ಥಳದಲ್ಲಿ ನಾಲ್ಕು ಆಂಬುಲೆನ್ಸ್‌ಗಳು ಬೀಡುಬಿಟ್ಟಿದ್ದವು. ಗಾಯಾಳುಗಳನ್ನು ಹೊರಕ್ಕೆ ತಂದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘ಕಟ್ಟಡದ ಪಕ್ಕದಲ್ಲೇ ಶೆಡ್‌ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರ ಮೇಲೆ ಅವಶೇಷಗಳು ಬಿದ್ದಿರುವ ಸಾಧ್ಯತೆ ಇದೆ. ಕಟ್ಟಡದ ಅವಶೇಷಗಳನ್ನು ಪೂರ್ಣ ತೆರವುಗೊಳಿಸಿದ ಬಳಿಕ ಕಾರ್ಯಾಚರಣೆ ಸ್ಥಗಿತ ಮಾಡಲಾಗುವುದು’ ಎಂದು ಎನ್‌ಡಿಆರ್‌ಎಫ್‌ ಸಿಬ್ಬಂದಿ ತಿಳಿಸಿದರು.