Friday, 20th September 2024

’ರಿವಾಲ್ವರ್ ರಾಣಿ’ ಅನುರಾಧ ಚೌಧರಿ, ’ಕಾಲಾ ಜತೆಡಿ’ ಸಂದೀಪ್ ಬಂಧನ

ನವದೆಹಲಿ: ಉತ್ತರ ಭಾರತದಲ್ಲೇ ಮೋಸ್ಟ್ ವಾಂಟೆಡ್ ಆಗಿದ್ದ ರಿವಾಲ್ವರ್ ರಾಣಿ ಕುಖ್ಯಾತಿಯ ಅನುರಾಧ ಚೌಧರಿ ಮತ್ತು ಕಾಲಾ ಜತೆಡಿ ಎಂದೇ ಹೆಸರಾಗಿದ್ದ ಸಂದೀಪ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಂದೀಪ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಲೆಗೆ ಗುತ್ತಿಗೆ ಪಡೆಯುವುದು, ಬೂಟ್ ಲೆಗ್ಗಿಂಗ್, ಜಮೀನು ಒತ್ತುವರಿ ಸೇರಿದಂತೆ ಹಲವು ಅಕ್ರಮಗಳ ಸಿಂಡಿಕೇಟ್ ನಡೆಸುತ್ತಿದ್ದ ಸಂದೀಪ್ ಬಂಧನಕ್ಕೆ ದೆಹಲಿ ಮತ್ತು ಹರಿಯಾಣ ಪೊಲೀಸರು 6 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

ಸಂದೀಪ್ ಕಳೆದ ಫೆಬ್ರವರಿಯಲ್ಲಿ ಹರಿಯಾಣ ಪೊಲೀಸ್ ವಶದಿಂದ ಪರಾರಿಯಾಗಿದ್ದ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಅನುರಾಧ ಚೌಧರಿ ರಾಜಸ್ಥಾನದಲ್ಲಿ ಲೇಡಿ ಡಾನ್- ರಿವಾಲ್ವರ್ ರಾಣಿ ಎಂದು ಕುಖ್ಯಾತಿ ಪಡೆದಿದ್ದಳು. ಈಕೆಯ ಸುಳಿವು ನೀಡಿದವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಈಕೆ ಅಪಹರಣ, ಬೆದರಿಕೆ, ಶಸ್ತ್ರಾಸ್ತ್ರ, ವಂಚನೆ ಮತ್ತು ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆ ಗಳಲ್ಲಿ ಪಾಲ್ಗೊಂಡಿದ್ದಳು.