Thursday, 19th September 2024

ಕ್ರಿಕೇಟ್ ಆಟದಲ್ಲೇಕೆ ನಾವು ಮೀಸಲು ತರಬಾರದು ?

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

ಅಮೆರಿಕದಲ್ಲೂ ಇಂದಿಗೂ ಮೂಲನಿವಾಸಿಗಳಿಗೆ ಸರಕಾರಿ ಮೀಸಲು ವ್ಯವಸ್ಥೆ ಜಾರಿಯಲ್ಲಿದೆ ಎಂಬುದು ವಾದಕ್ಕೆ ಸಮರ್ಥನೆ ಆಗಲು ಸಾಧ್ಯವಿಲ್ಲ. ಅದನ್ನೇ ಪ್ರತಿಪಾದನೆಗೆ ಇಳಿದರೆ ಜಾತಿವರ್ಗ ವ್ಯವಸ್ಥೆಯ ನಿರ್ಮೂಲನೆ ನಮ್ಮ ಆದ್ಯತೆಯಾಗಬೇಕು. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಈ ನೆಲದಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆ ಎಂದಿಗೂ ರುಚಿಸದು.

ಇತಿಹಾಸದಲ್ಲಿ ಮೀಸಲು ಚರ್ಚೆ ನಡೆದದ್ದು ಇದೇ ಮೊದಲಲ್ಲ. ಅವತ್ತು ರಾಜಮನೆತನದ ಕುರುವಂಶದ ಕುಡಿಗಳಿಗೆ ಆಚಾರ್ಯ ದ್ರೋಣರು ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು. ಅಲ್ಲಿಗೆ ಆಗಮಿಸಿದ ಬೇಟೆಗಾರ ಏಕಲವ್ಯ ತನಗೂ ವಿದ್ಯೆಯನ್ನ ಧಾರೆಯೆರೆಯಬೇಕೆಂಬ ಬೇಡಿಕೆ ಯನ್ನ ಮುಂದಿಟ್ಟಿದ್ದ. ಅರ್ಹತೆ ಆಕಾಂಕ್ಷೆ ಎಲ್ಲವೂ ಅವನಲ್ಲಿತ್ತು. ಆಗಿನ ವ್ಯವಸ್ಥೆ ಯಡಿಯಲ್ಲಿ ರಾಜಕುಮಾರರ ವಿನಃ ಬೇರೆಯವರಿಗೆ ಆಚಾರ್ಯ ದ್ರೋಣರು ಬಿಲ್ವಿದ್ಯೆಯನ್ನ ಬೋಽಸುವಂತಿರಲಿಲ್ಲ.

ಸಹಜವಾದ ನಿರಾಕರಣೆ ಏಕಲವ್ಯನನ್ನ ಧೃತಿಗೆಡಿಸಿದ್ದು ಸತ್ಯ. ಕೊನೆಗೆ ಅನಿವಾರ್ಯ ಸನ್ನಿವೇಶದಲ್ಲಿ ದ್ರೋಣರ ಮೃಣ್ವಮೂರ್ತಿಯನ್ನು ಪ್ರತಿಷ್ಠಾಪಿಸಿ ಛಲಬಿಡದ ಆತ ಸ್ವಯಂ ಗುರುವಾಗಿ ಬಿಲ್ವಿದ್ಯೆ ಕರಗತಗೊಳಿಸಿಕೊಂಡಿದ್ದ. ವ್ಯವಸ್ಥೆ ಆಗ ರಾಜಕುಟುಂಬದ ವಿರುದ್ಧ ಭಿನ್ನ ಧ್ವನಿ ಎತ್ತಿತ್ತು. ಗುರುಕುಲದಲ್ಲಿ ಸಾಮಾನ್ಯರಿಗೂ ವಿದ್ಯಾವಕಾಶ ಅಗತ್ಯವೆಂಬ ಪ್ರತಿಪಾದನೆ ವ್ಯಾಪಕವಾಗಿತ್ತು. ಏಕಲವ್ಯನಿಗೆ ಆಗುತ್ತಿರುವ, ಆಗಬಹುದಾದ ಅನ್ಯಾಯ ತಡೆಯುವ ಮನಃಸ್ಥಿತಿ ಖಂಡಿತ ಮೇಲ್ವರ್ಗದ ಮಂದಿಯಲ್ಲಿ ಉಳಿದಿರಲಿಲ್ಲ. ರಾಜವಂಶಸ್ಥರನ್ನೂ ಮೀರಿಸಿದ ಬಿಲ್ಲುಗಾರ ಏಕಲವ್ಯನೆಂಬುದನ್ನ ಒಪ್ಪಿಕೊಳ್ಳಲು ಗುರುಪೀಠವೂ ಸಿದ್ಧವಿ ರಲಿಲ್ಲ.

ಅದರಲ್ಲೂ ಗುರುವಿನ ಪಟ್ಟಶಿಷ್ಯ ಅರ್ಜುನನಿಗೆ ಸಮಬಲನೆನಿಸುವ ಮತ್ತೊಬ್ಬನನ್ನು ಸ್ವೀಕರಿಸುವ ಔದಾರ್ಯಕ್ಕೆ ಸಮ್ಮತಿ ಇರಲಿಲ್ಲ. ಪರಿಣಾಮ ಗುರುಕಾಣಿಕೆಯಾಗಿ ಏಕಲವ್ಯನ ಹೆಬ್ಬೆರಳು, ಆ ಮೂಲಕ ಬಿಲ್ವಿದ್ಯಾ ನೈಪುಣ್ಯವೇ ಬಲಿಯಾಯಿತು. ಪರಶುರಾಮರ ಆಶ್ರಮ ದಲ್ಲಿ ಇಂತಹದೇ ಮತ್ತೊಂದು ಪ್ರಕರಣ. ಭೀಮ ಧುರ್ಯೋಧನನಿಗೆ ಸಾಟಿಯಾಗಬಲ್ಲಂತಹ, ಅರ್ಜುನನ ಹೆದೆಗೆ ಎದೆಗೊಟ್ಟು ನಿಲ್ಲ ಬಲ್ಲಂತಹ ಸೂತಪುತ್ರ ಕರ್ಣ ವಿದ್ಯಾಕಾಂಕ್ಷಿಯಾಗಿ ಬಂದುನಿಂತಿದ್ದ.

ತಾನು ಕೆಳವರ್ಗದವನೆಂಬ ಸತ್ಯವನ್ನು ಪ್ರಕಾಶಿತಗೊಳಿಸಿಕೊಂಡರೆ ಖಂಡಿತಾ ಆಶ್ರಮದಲ್ಲಿ ಚಣಕಾಲವೂ ನಿಲಗೊಡುವುದಿಲ್ಲ ಎಂಬುದರ ಸ್ಪಷ್ಟ ಅರಿವು ಕರ್ಣನೊಳಗಿತ್ತು. ಬಂಧಗಳೆಂಬೊ ಭಾವ ಕರುಳಿಗರಿವಿತ್ತೇ ವಿನಃ ಅರಿವಿಗೆ ದಕ್ಕದ ಸನ್ನಿವೇಶದಲ್ಲಿ, ಸಾಕಿದ ಸಾರಥಿಯ ಪತ್ನಿ ರಾಧೆ ಹೆತ್ತಮ್ಮ ನೆಂದುಕೊಂಡು ತನ್ನನ್ನು ತಾನು ಸೂತವಂಶಕ್ಕೆ ಮೀಸಲುಗೊಳಿಸಿಕೊಂಡಿದ್ದ ರಾಧೇಯ ಜಾತಿಯನ್ನ ಮುಚ್ಚಿಟ್ಟು
ಬ್ರಾಹ್ಮಣರ ಸೋಗಿನಲ್ಲೇ ಪರಶುರಾಮರಲ್ಲಿ ವಿದ್ಯೆಗೆ ನಿಂತಿದ್ದ.

ಅದೊಂದು ಹಗಲು, ಗುರುವಿಗೆ ಜಾಣ ನಿದ್ರೆ. ಪಟ್ಟ ಶಿಷ್ಯ ಕರ್ಣನ ತೊಡೆಯ ಮೇಲೆ ಮೈ ಮರವಿನಲ್ಲಿ ಮಲಗಿದ್ದರು. ಅದೆಲ್ಲಿತ್ತೋ ವಿಘ್ನ ಸಂತೋಷಿ ದುಂಬಿ. ಶಿಷ್ಯನ ತೊಡೆಯನ್ನೇ ಕೊರೆಯಲಾರಂಭಿಸಿತು. ಬಿಸಿರಕ್ತದ ಯುವಕನ ನೆತ್ತರು ಕಾವಿನೊಂದಿಗೆ ಗುರುವಿನ ತಲೆಯ ತೋಯಿಸಹತ್ತಿತ್ತು. ವಿಧಿ ಅಲ್ಲೂ ಆಡಿದ್ದು ಆಟವನ್ನೇ. ಎಚ್ಚರಾದ ಪರಶುರಾಮರಿಗೆ ಸನ್ನಿವೇಶ ಕಂಡು ಮೆಚ್ಚುಗೆಯ ಬದಲು ಕೋಪ ಉಕ್ಕಿತ್ತು.

ಕ್ಷತ್ರಿಯರ ವಿನಃ ಬ್ರಾಹ್ಮಣ ವಟುವಿನೊಬ್ಬನಿಂದ ಇಂಥಾ ಸೈರಣೆ ಸಾಧ್ಯವೇ ಇಲ್ಲ ಎಂಬ ಖಚಿತ ನಿರ್ಧಾರಕ್ಕೆ ಬಂದು ಶಾಪವಿತ್ತಿದ್ದರು. ಪರಿಣಾಮ ಆಪತ್ಕಾಲದಲ್ಲಿ ಕರ್ಣನಿಗೆ ಕಲಿತ ವಿದ್ಯೆ ನೆನಪಿಗೆ ಬಾರದೇ ಹೋಗಿತ್ತು. ಮಗದೊಮ್ಮೆ ಮೀಸಲಿನ ಚರ್ಚೆ ಬಂದದ್ದು ಕುರು
ವಂಶಜ ರಾಜಕುಮಾರರ ವಿದ್ಯಾ ಪ್ರದರ್ಶನದ ವೇದಿಕೆ ಯಲ್ಲಿ. ಭೀಮ ಪಾರ್ಥರಾದಿಯಾಗಿ ಎಲ್ಲರ ಪ್ರತಿಭೆಗೆ ಮಹಾಸಭೆ ತಲೆದೂಗುತ್ತಿದ್ದಾಗಲೇ ಕರ್ಣನ ಪ್ರವೇಶ. ಕುರುಕುವರರನ್ನೂ ಮೀರಿಸಬಲ್ಲೆನೆಂಬ ಕರ್ಣನ ಆತ್ಮವಿಶ್ವಾಸಕ್ಕೆ ಆಘಾತ ನೀಡಿದ್ದು ಮತ್ತದೇ ಜಾತಿ ಅಂತಸ್ತುಗಳ ಪ್ರಶ್ನೆ.

ರಾಜ ವಂಶಸ್ಥರಲ್ಲದವರಿಗೆ ವೇದಿಕೆ ನಿರಾಕರಿಸಲ್ಪಟ್ಟಾಗ ‘ರಾಜಕಾರಣ ನಡೆ’ಯನ್ನು ಮೆರೆದಿದ್ದ ಸುಯೋಧನ. ದಾಯಾದಿಗಳ
ಅವಮಾನಿಸುತ್ತಿದ್ದವನಿಗೆ ಅಸವಾಗಿ ಸಿಕ್ಕವನು ಕರ್ಣ. ಅಲ್ಲೇ ಅಂಗದೇಶದ ಪಟ್ಟ ನೀಡಿ ಪರೋಕ್ಷವಾಗಿ ಮೀಸಲನ್ನ ಜಾರಿಗೊಳಿಸಿದ್ದ.
ಆಧುನಿಕ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ, ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲೂ ಮೀಸಲು ಚರ್ಚೆ ದೇಶಾದ್ಯಂತ ಆಂದೋಲನದ ಸ್ವರೂಪ ಪಡೆದಿತ್ತು.

ಇದಕ್ಕೂ ಮುನ್ನ ೧೯೭೯ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದ ಜನತಾ ಪಕ್ಷದ ಕೇಂದ್ರ ಸರಕಾರ ಮೊಟ್ಟಮೊದಲ ಬಾರಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶಿಕ್ಷಣದಲ್ಲಿ ಮೀಸಲು ನೀಡುವ ವಿಚಾರಕ್ಕೆ ಮಂಡಲ್ ಆಯೋಗವನ್ನ ರಚಿಸಿತ್ತು. ಸಂಸದ ಬಿ.ಪಿ. ಮಂಡಲ್ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಸಮಾನತೆಯ ನಿವಾರಣೆಗಾಗಿ, ಜಾತಿತಾರತಮ್ಯವನ್ನ ಬಗೆಹರಿಸಲು
ಹಿಂದುಳಿದವರೂ ಹಾಗೂ ಪರಿಶಿಷ್ಟ ಜಾತಿ ವರ್ಗದವರಿಗೆ ಮೀಸಲು ಜಾರಿಗೊಳಿಸುವಂತೆ ಶಿಫಾರಸು ಮಾಡಿದ್ದರು.

ಶಿಕ್ಷಣದ ವಿಚಾರದಲ್ಲಿ ಅವಕಾಶ ವಂಚಿತರಾಗುವುದು ಯಾವುದೇ ನಾಗರಿಕ ಸಮಾಜಕ್ಕೆ ಸಮ್ಮತವಲ್ಲವೆಂಬ ಉದಾರ
ಭಾವನೆಯ ಫಲವಾಗಿ ದೇಶದಲ್ಲಿ ಶೈಕ್ಷಣಿಕ ಮೀಸಲು ಕೊನೆಗೂ ಜಾರಿಗೊಂಡಿತು. ಏತನ್ಮರ್ಧಯೆ ೨೦೧೬ರಲ್ಲಿ ಖಾಸಗಿ ಉದ್ಯೋಗ ಕ್ಷೇತ್ರದಲ್ಲೂ ಹಿಂದುಳಿದ ವರ್ಗದವರಿಗೆ ಶೇಕಡಾ ೨೭ರಷ್ಟು ಮೀಸಲು ನೀಡಬೇಕೆಂದು ರಾಷ್ಟ್ರೀಯ ಹಿಂದುಳಿದ ವರ್ಗ ಶಿಫಾರಸು ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ರಾಜಕೀಯ ಮೀಸಲಿನ ಚರ್ಚೆ ಮುನ್ನೆಲೆಗೆ ಬಂದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತವೇ ವರ್ಷಗಳಿಂದ ಇಲ್ಲದಂತೆ ಮಾಡಿದ ಎಈ ಮೀಸಲು ವಿಚಾರ. ಇನ್ನೊಂದೆಡೆ ಒಳಮೀಸಲಿನ ಗದ್ದಲವೂ ಆಗಾಗ ಬಲಗೊಂಡು ಪಂಚಮಸಾಲಿಗಳು, ಮಾದಿಗರು, ಒಕ್ಕಲಿಗರೂ ಹೀಗೆ ಹಲವು ಸಮುದಾಯದ ಹೆಸರಲ್ಲಿ ನಿತ್ಯ
ಸಂತೆ ನಡೆಯುತ್ತಿದೆ.

ಸಮಾಜದಲ್ಲಿನ ತಾರತಮ್ಯಕ್ಕೆ ಮೀಸಲು ಮಾತ್ರವೇ ಪರಿಹಾರ ಎಂಬುದಾಗಿದ್ದರೆ ದೇಶ ಒಕ್ಕೊರಲಿನಿಂದ ಇಂಥವೆಲ್ಲ ಶಿಫಾರಸ್ಸನ್ನು, ಬೇಡಿಕೆಗಳನ್ನು ಒಪ್ಪಲೇಬೇಕಿತ್ತು. ಒಪ್ಪುವ ಬಿಡುವ ವಿಚಾರದಲ್ಲಿ ಅದರ ಸಾಧ್ಯಾಸಾಧ್ಯತೆ ಧನ-ಋಣಾತ್ಮಕ ಅಂಶಗಳಿಗಿಂತ ಹೆಚ್ಚು ಕಂಡುಬರುತ್ತಿರುವುದು ರಾಜಕೀಯವೇ. ಈ ದೇಶಕ್ಕೆ ಮೀಸಲಿನ ಅಗತ್ಯ ಇದೆಯೋ ಇಲ್ಲವೋ ಎಂಬುದರ ಚರ್ಚೆಗೆ ಮುನ್ನ ಮೀಸಲಿನ ಹೆಸರಿನ ರಾಜಕೀಯದ ಅಗತ್ಯದ ಬಗ್ಗೆ ಚರ್ಚೆ ನಡೆಯಬೇಕಿದೆ. ಕರ್ಣ, ಏಕಲವ್ಯನ ವಿಚಾರದಲ್ಲೂ ಆದ ಅನ್ಯಾಯಕ್ಕೆ ಕಾರಣ ರಾಜಕಾರಣವೇ ಹೊರತು ಅಲ್ಲಿ ಸಾಮಾಜಿಕ, ನ್ಯಾಯದ ಪುನರ್ ಸ್ಥಾಪನೆಗೆ ಎಡೆಗೊಡಲಿಲ್ಲ.

ಹಾಗೊಮ್ಮೆ ಆಗಿದ್ದರೆ ಹಿಂದುಳಿದ ಕೆಳವರ್ಗದ ಪ್ರತಿನಿಧಿಗಳಾಗಿದ್ದ ಅವರಿಬ್ಬರಿಗೂ ವಿದ್ಯೆಯ ಆಮೂಲಕ ಅಧಿಕಾರದ ಲಾಭ ಧಕ್ಕಲೇ ಬೇಕಿತ್ತು. ಇವತ್ತಿಗೂ ಮೀಸಲು ಯಾವುದೇ ಸಮಾಜ ವರ್ಗದ ತಾರತಮ್ಯವನ್ನು ತೊರೆದುಹಾಕುತ್ತಿಲ್ಲ. ಕಳೆದೆರಡು ದಶಕಗಳ ಶೈಕ್ಷಣಿಕ ಮೀಸಲಿನ ಬಳಿಕ ಔದ್ಯೋಗಿಕ ಮೀಸಲಿನ ಪ್ರಮೇಯವೇ ಬರುತ್ತಿರಲಿಲ್ಲ. ಅಂದುಕೊಂಡಂತೆ ನಡೆದಿದ್ದರೆ ಮೀಸಲು ಫಲಾನುಭವಿಗಳು ಪ್ರತಿನಿಽಸುವ ಸಮುದಾಯ ಇವತ್ತಿಗೂ ‘ಹಿಂದುಳಿದ’ ಹಣೆಪಟ್ಟಿಯಡಿಯಲ್ಲೇ ಮುಂದುವರಿಯುವ ಪ್ರಸಂಗವೂ ಇರುತ್ತಿರಲಿಲ್ಲ. ಅಂದರೆ
ಮೀಸಲು ರಾಜಕೀಯ ಲಾಭಕ್ಕಷ್ಟೇ ಈ ದೇಶದಲ್ಲಿ ಪ್ರತಿಪಾದನೆಯಾಗುತ್ತಿದೆ ಎಂಬುದನ್ನು ಸಮಾಜ ಅರಿಯಲೇಬೇಕು.

ಸರಕಾರಿ ವ್ಯವಸ್ಥೆಯಲ್ಲಿ ಸಬ್ಸಿಡಿ, ಸಾಲಸೌಲಭ್ಯಗಳು ಹೇಗೆ ಸಮಾಜದ ಒಂದು ವರ್ಗವನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಯ ಸಾಲಿಗೆ ಬಾರದಂತೆ ಹತ್ತಿಕ್ಕುತ್ತಿವೆಯೋ ಮೀಸಲೂ ಸಹ ಅಂತದೇ ಮುಳ್ಳಾಗಿ ಮೊಳೆತು ಸಮಾಜದ ಅಭಿವೃದ್ಧಿಯನ್ನ ಚಿವುಟುತ್ತಿದೆ, ಪರೋಕ್ಷವಾಗಿ ಸಮಾನತೆಯ ಮಟ್ಟಕ್ಕೆ ನೀವು ಅರ್ಹರಲ್ಲ ಎಂಬ ಸಂದೇಶ ಸರಕಾರ ದಿಂದಲೇ ಹಿಂದುಳಿದ ಹಾಗೂ ಕೆಳವರ್ಗದ ಮಂದಿಗೆ ರವಾನೆ ಆಗುತ್ತಿದೆ ಎಂಬುದನ್ನ ಗ್ರಹಿಸಬೇಕು. ಅದಿಲ್ಲದಿದ್ದರೆ ಸಮಾನತೆಯ ಪ್ರತಿಪಾದನೆಯಲ್ಲಿ ಮೀಸಲಿನ ಪ್ರಶ್ನೆ ಬರುವುದಾದರೂ ಹೇಗೆ? ಇಷ್ಟಕ್ಕೂ ಶೈಕ್ಷಣಿಕ ಮೀಸಲಿನ ಬಳಿಕ ಮತ್ತೆ ಉದ್ಯೋಗ ಮೀಸಲಿನ ಪ್ರಶ್ನೆ ಉದ್ಭವಿಸಿತಾದರೂ ಹೇಗೆ? ಅಮೆರಿಕದಂತಹ ದೇಶದಲ್ಲೂ ಇಂದಿಗೂ ಅಲ್ಲಿನ ಮೂಲ ನಿವಾಸಿಗಳಿಗೆ ಸರಕಾರಿ ಮೀಸಲು ವ್ಯವಸ್ಥೆ ಜಾರಿಯಲ್ಲಿದೆ ಎಂಬುದು ವಾದಕ್ಕೆ ಸಮರ್ಥನೆ ಆಗಲು ಸಾಧ್ಯವಿಲ್ಲ.
ಅದನ್ನೇ ಪ್ರತಿಪಾದನೆಗೆ ಇಳಿದರೆ ಜಾತಿವರ್ಗ ವ್ಯವಸ್ಥೆಯ ನಿರ್ಮೂಲನೆ ನಮ್ಮ ಆದ್ಯತೆಯಾಗಬೇಕು.

ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಈ ನೆಲದಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆ ಎಂದಿಗೂ ರುಚಿಸದು. ಜಾತಿ ಲೆಕ್ಕಾಚಾರಗಳಿಲ್ಲದ ನಮ್ಮ ಚುನಾವಣೆಗಳನ್ನಾಗಲೀ ರಾಜಕೀಯ ಪ್ರಕ್ರಿಯೆಗಳನ್ನಾಗಲೀ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸರಕಾರೀ ವಲಯದ ಉದ್ಯೋಗ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಸಾಮಾಜಿಕ ನ್ಯಾಯ ಪರಿಪಾಲನೆಯ ದೃಷ್ಟಿಯಿಂದ ಮೀಸಲು ಅಗತ್ಯ ಎಂಬ
ವಾದ ಬಹಳಷ್ಟು ದಿನಗಳಿಂದ ಕೇಳಿಬರುತ್ತಲೇ ಇದೆ.

ನಮ್ಮ ಸಂವಿಧಾನದಲ್ಲಿ ಮೀಸಲು ಅವಕಾಶವನ್ನು ಕಲ್ಪಿಸುವ ಸಂದರ್ಭದಲ್ಲಿ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆ ಹೋಗುವವರೆಗೂ ಮೀಸಲು ಅಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ಹಾಗಿದ್ದರೆ ಶೈಕ್ಷಣಿಕ ಮೀಸಲು ಜಾರಿಗೊಂಡು ಇಷ್ಟು ವರ್ಷಗಳ ಬಳಿಕವೂ ಜಾತಿನಿರ್ಮೂಲನೆ ಅಸಾಧ್ಯವಾದದ್ದಾದರೂ ಹೇಗೆ? ಸಾಮಾಜಿಕ ತಾರತಮ್ಯ ಮುಂದುವರೆ
ದುಕೊಂಡು ಬಂದದ್ದು ಏಕೆ? ಮೀಸಲೊಂದೇ ಪರಿಹಾರವೆಂಬುದಾದರೆ ಇಷ್ಟರಲ್ಲಾಗಲೇ ಭಾರತ ಜಾತಿಮುಕ್ತ ವಾಗಿರಬೇಕಲ್ಲವೇ? ಬದಲಾಗಿ ದಿನದಿಂದ ದಿನಕ್ಕೆ ಜಾತಿ ಉಪಜಾತಿಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ.

ಗಮನಾರ್ಹ ಸಂಗತಿಯೆಂದರೆ ದೇಶದಲ್ಲಿ ಮೀಸಲು ಸಹ ತನ್ನ ಪಾವಿತ್ರ ಮತ್ತು ಮಹತ್ತ್ವವನ್ನು ಕಳೆದುಕೊಂಡು ಬಿಟ್ಟಿದೆ. ಮೀಸಲು ಕೋಟಾದಲ್ಲಿ ಬರುವ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ದಡ್ಡರು, ಅಸಮರ್ಥರು, ಅಯೋಗ್ಯರು ಎಂಬ ಭಾವ ಈ ಸಮಾಜದಲ್ಲಿ ಜಾತಿವ್ಯವಸ್ಥೆಯಷ್ಟೇ ಬೇರೂರಿದೆ. ಹೀಗಾಗಿ ಮೀಸಲಿನಂಥ ವ್ಯವಸ್ಥೆಯಿಂದ ಸಾಮಾಜಿಕ ವರ್ಗೀಕರಣ ಮತ್ತು ಅಸಮಾನತೆ ಹೆಚ್ಚುತ್ತದೆ ಎಂಬುದನ್ನು ಸ್ವತಃ ಸರ್ಕಾರಗಳೇ ಸಾಬೀತು ಗೊಳಿಸಿದಂತಾಗುತ್ತದೆ.

ಸರಕಾರಿ ಕೆಲಸಕ್ಕಿಂತ ಖಾಸಗಿ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದೆ ಎಂಬ ಮಾತ್ರಕ್ಕೆ ಹಿಂದುಳಿದ ಸಮುದಾಯದವರು ಸ್ಪರ್ಧೆಗಿಳಿಯದೇ ಉದ್ಯೋಗ ಗಿಟ್ಟಿಸುವ ಒಳರಸ್ತೆಯಲ್ಲಿ ಸಾಗುವ ಸೌಲಭ್ಯ ಪಡೆಯಬೇಕೆಂಬುದು ಎಷ್ಟು ಮಾತ್ರಕ್ಕೆ ಸರಿ? ಮೀಸಲು ರಾಜಕೀಯವನ್ನ ಬಿಟ್ಟು ದೇಶಕ್ಕಾಗಿ ಅಭಿವೃದ್ಧಿಗಾಗಿ ಇರುವ ಅದೆಷ್ಟೋ ಅಗತ್ಯ ಚರ್ಚೆಗಳತ್ತ ಹೋರಾಟ ಚಳವಳಿಗಳನ್ನ ನಾವು ರೂಪಿಸುವುದು ಅಗತ್ಯವಿದೆ.
ಅದಿಲ್ಲದಿದ್ದರೆ ಈ ದೇಶದಲ್ಲಿ ಪ್ರತೀ ಜಾತಿ ಪ್ರತೀ ವರ್ಗ ಪ್ರತೀ ಸಮುದಾಯ ಪ್ರತೀ ಪಂಗಡಕ್ಕೊಂದು ಕಾನೂನುಗಳು ಮಾರ್ಪಟ್ಟು ರಾಷ್ಟ್ರವ್ಯವಸ್ಥೆ ನುಚ್ಚುನೂರಾಗಲಿದೆ ಎಂಬುದು ಅತಿಶಯವಲ್ಲ.

ಈ ಒಳಮೀಸಲಾತಿಯಿಂದ ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಅನುಕೂಲಕರ ಎಂಬ ಹಿನ್ನಲೆಯಲ್ಲಿ ನಿಜವಾಗಿ ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದವರನ್ನು ಮೇಲೆತ್ತುವ ಸಂವಿಧಾನದ ಮೂಲ ಉದ್ದೇಶವನ್ನು ಮರೆಮಾಚುವುದಿಲ್ಲವೇ? ಈ ಹಿನ್ನಲೆ ಯಲ್ಲಿಯೇ ಒಳ ಮೀಸಲು ಅಪ್ರಸ್ತುತ/ಅಸಂವಿಧಾನಿಕ ಎಂದು ೨೦೦೪ರಲ್ಲೇ ಸುಪ್ರೀಂ ಕೋರ್ಟು ತೀರ್ಪು ನೀಡಿದೆ.

೨೦೦೦ರಲ್ಲಿ ಆಂಧ್ರಪ್ರದೇಶ ಸರಕಾರ ರೂಪಿಸಿದ ‘ಆಂಧ್ರಪ್ರದೇಶ ಪರಿಶಿಷ್ಟಜಾತಿ ೨೦೦೦ರ ಕಾಯಿದೆ’ಯ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನ ಮೇಲೆ ಸುಪ್ರೀಂಕೋರ್ಟಿನ ಮೂವರು ನ್ಯಾಯಮೂರ್ತಿಗಳಾದ ಡಾ.ಸಂತೋಷ ಹೆಗ್ಡೆ, ಸಿನ್ಹಾ, ಸೀಮಾರವರು ೨೦೦೪ರಲ್ಲಿ
ಏಕಾಭಿಪ್ರಾಯವುಳ್ಳ ತೀರ್ಪನ್ನು ನೀಡಿ, ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಂಕೀರ್ಣತೆ ಸೃಷ್ಟಿಸುವ ಕಾರಣಕ್ಕೆ ಕಾಯ್ದೆಯನ್ನು ಅಸಂವಿಧಾನಿಕವೆಂದು ಹೇಳಿದೆ. ಅಲ್ಲದೇ ಸಂವಿಧಾನದ ೧೪ನೇ ವಿಧಿಯ ಉಲ್ಲಂಘನೆಯ ಅಪಾಯವನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು.

ಇದಲ್ಲದೇ ೨೦೨೦ರಲ್ಲಿ ಸುಪ್ರಿಂ ಕೋರ್ಟ್ ಮಹತ್ವದ ಇನ್ನೊಂದು ಅಭಿಪ್ರಾಯ ವ್ಯಕ್ತಪಡಿಸಿ, ‘ಮೀಸಲು ಎಂಬುದು ಮೂಲಭೂತ ಹಕ್ಕು ಅಲ್ಲ’ ಎಂದಿದೆ. ತಮಿಳು ನಾಡಿನ ವೈದ್ಯ ಕಾಲೇಜುಗಳಲ್ಲಿ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಮೀಸಲು ನೀಡಿಲ್ಲ. ಇದರಿಂದ ತಮ್ಮ ಮೂಲ ಭೂತ ಹಕ್ಕಿಗೆ ಚ್ಯುತಿ ಆಗಿದೆ ಎಂದು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ ಎಲ್,.ನಾಗೇಶ್ವರರಾವ್ ಅವರಿದ್ದ ಪೀಠ, ‘ಮೀಸಲು ಹಕ್ಕು ಎನ್ನುವುದು ಮೂಲಭೂತ ಹಕ್ಕು ಅಲ್ಲ. ಇದು ಇಂದಿನ ಕಾನೂನು’ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

ಅದೇ ವರ್ಷ ಫೆಬ್ರವರಿಯಲ್ಲಿ ಉತ್ತರಾಖಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರಿಂ ಕೋರ್ಟ್, ಸರಕಾರಿ
ಉದ್ಯೊಗದಲ್ಲಿ ಮೀಸಲು ಎಂಬುದು ಮೂಲಭೂತ ಹಕ್ಕು ಅಲ್ಲ. ಎಸ್ಸಿ-ಎಸ್ಟಿ ವರ್ಗದವರಿಗೆ ಮೀಸಲು ನೀಡಿ ಎಂದು ಕೋರ್ಟ್‌ಗಳಿಗೆ ಆದೇಶ ನೀಡಲು ಅಧಿಕಾರವಿಲ್ಲ’ ಎಂದಿತ್ತು. ಅರ್ಹತೆಯ ಮಾನದಂಡದ ಬದಲು ಹೀಗೊಂದು ವಿತಂಡವಾದಕ್ಕಿಳಿಯುವುದು ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲ ಜಾತಿವರ್ಗದ ಜನರೂ ಇರಬೇಕೆಂದು ಪ್ರತಿಪಾದಿಸಿ ದಂತಲ್ಲವೆ? ಕ್ರಿಕೇಟ್ ತಂಡದ ಆಯ್ಕೆಗೆ ಕ್ರೀಡಾಳು ಒಬ್ಬನ
ದೈಹಿಕ ಸಾಮರ್ಥ್ಯ, ಮಾನಸಿಕ ಚಾಕಚಕ್ಯತೆ, ಸಂದರ್ಭಕ್ಕನುಗುಣವಾದ ನಿರ್ಧಾರ ಕೈಗೊಂಡು ತಂಡವನ್ನು ಗೆಲುವಿನ ದಡ ಮುಟ್ಟಿಸುವ ಜವಾಬ್ದಾರಿಯುತ ಮನೋಭಾವ ಮಾನದಂಡವಾಗಬೇಕೇ ವಿನಃ ಜಾತಿ ಸಮುದಾಯಗಳು ಆಗಿರಕೂಡದು.

ಒಂದೊಮ್ಮೆ ಹಿಂದುಳಿದವರಿಗೆ ಆಟದ ನಿಯಮದಲ್ಲಿ ವಿನಾಯಿತಿ ನೀಡಬೇಕು, ಕ್ರಿಕೆಟ್ ಬೌಂಡರಿ ಅವರಾಡುವಾಗ ಚಿಕ್ಕದಾಗಬೇಕು, ೬೦ ರನ್‌ಗಳಿಗೆ ಶತಕವೆಂದು ಪರಿಗಣಿತವಾಗಬೇಕು, ಅವರಾಡುವಾಗ ಮಾತ್ರ ಓವರಿಗೆ ೮ ಬೌಲ್ ಗಳಿಸಬೇಕು… ಎಂಬಿತ್ಯಾದಿಗಳು
ಜಾರಿಗೊಂಡರೆ ಎಷ್ಟು ಹಾಸ್ಯಾಸ್ಪದವಾದೀತು?