ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi Column: ಡಿಜಿಟಲ್ ಇಂಡಿಯಾದ ಒಂದು ದಶಕ

ಉದ್ದೇಶ ಸರಿಯಾಗಿದ್ದಾಗ, ನಾವೀನ್ಯವು ದುರ್ಬಲರನ್ನು ಸಬಲಗೊಳಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ವಿಧಾನವಿದ್ದಾಗ, ತಂತ್ರಜ್ಞಾನ ವಂಚಿತರ ಜೀವನದಲ್ಲಿ ಅದು ಬದಲಾವಣೆ ತರುತ್ತದೆ. ಈ ನಂಬಿಕೆ ಡಿಜಿಟಲ್ ಇಂಡಿಯಾಕ್ಕೆ ಬುನಾದಿ ಹಾಕಿತು. ಇದು ಲಭ್ಯತೆಯನ್ನು ಪ್ರಜಾಪ್ರಭುತ್ವಗೊಳಿಸುವ, ಎಲ್ಲರನ್ನೂ ಒಳಗೊಂಡ ಡಿಜಿಟಲ್ ಮೂಲಸೌಕರ್ಯ ನಿರ್ಮಿಸುವ ಮತ್ತು ಎಲ್ಲರಿಗೂ ಅವಕಾಶ ಒದಗಿಸುವ ಅಭಿಯಾನವಾಗಿದೆ.

ಡಿಜಿಟಲ್ ಇಂಡಿಯಾದ ಒಂದು ದಶಕ

Profile Ashok Nayak Jul 2, 2025 10:48 AM

ಸಾಧನಾಪಥ

ನರೇಂದ್ರ ಮೋದಿ

ಹತ್ತು ವರ್ಷಗಳ ಹಿಂದೆ, ನಾವು ಅಜ್ಞಾತ ಪ್ರದೇಶಕ್ಕೆ ಒಂದು ದಿಟ್ಟ ಪ್ರಯಾಣವನ್ನು ಬಹಳ ದೃಢ ನಿಶ್ಚಯದಿಂದ ಆರಂಭಿಸಿದೆವು. ಭಾರತೀಯರ ತಂತ್ರಜ್ಞಾನ ಬಳಕೆಯ ಸಾಮರ್ಥ್ಯದ ಬಗ್ಗೆ ದಶಕ‌ ಗಳಷ್ಟು ಕಾಲ ಸಂದೇಹವಿತ್ತು, ನಾವು ಈ ದೃಷ್ಟಿಕೋನ ಬದಲಿಸಿದೆವು ಮತ್ತು ಭಾರತೀಯರು ತಂತ್ರಜ್ಞಾನ ಬಳಸುವ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟೆವು.

ತಂತ್ರಜ್ಞಾನದ ಬಳಕೆಯು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ ಎಂದು ದಶಕಗಳಿಂದ ಭಾವಿಸಲಾಗಿತ್ತು, ಆದರೆ ನಾವು ಈ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ ಮತ್ತು ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ನಿರ್ಮೂಲನೆ ಮಾಡಲು ತಂತ್ರಜ್ಞಾನ ವನ್ನು ಬಳಸಿಕೊಂಡಿದ್ದೇವೆ.

ಉದ್ದೇಶ ಸರಿಯಾಗಿದ್ದಾಗ, ನಾವೀನ್ಯವು ದುರ್ಬಲರನ್ನು ಸಬಲಗೊಳಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವ ವಿಧಾನವಿದ್ದಾಗ, ತಂತ್ರಜ್ಞಾನ ವಂಚಿತರ ಜೀವನದಲ್ಲಿ ಅದು ಬದಲಾವಣೆ ತರುತ್ತದೆ. ಈ ನಂಬಿಕೆ ಡಿಜಿಟಲ್ ಇಂಡಿಯಾಕ್ಕೆ ಬುನಾದಿ ಹಾಕಿತು. ಇದು ಲಭ್ಯತೆಯನ್ನು ಪ್ರಜಾಪ್ರಭುತ್ವ ಗೊಳಿಸುವ, ಎಲ್ಲರನ್ನೂ ಒಳಗೊಂಡ ಡಿಜಿಟಲ್ ಮೂಲಸೌಕರ್ಯ ನಿರ್ಮಿಸುವ ಮತ್ತು ಎಲ್ಲರಿಗೂ ಅವಕಾಶ ಒದಗಿಸುವ ಅಭಿಯಾನವಾಗಿದೆ.

ಇದನ್ನೂ ಓದಿ: Rangaswamy Mookanahalli Column: ನಿರ್ವೀಯತೆಯೇ ಸಾವು, ಆತ್ಮಾಭಿಮಾನವೇ ಬದುಕು !

2014ರಲ್ಲಿ, ಅಂತರ್ಜಾಲ ಲಭ್ಯತೆ ಸೀಮಿತವಾಗಿತ್ತು, ಡಿಜಿಟಲ್ ಸಾಕ್ಷರತೆ ಕಡಿಮೆಯಿತ್ತು ಮತ್ತು ಸರಕಾರಿ ಸೇವೆಗಳಿಗೆ ಆನ್‌ಲೈನ್ ಪ್ರವೇಶ ವಿರಳವಾಗಿತ್ತು. ಭಾರತದಂಥ ದೊಡ್ಡ ಮತ್ತು ವೈವಿಧ್ಯ ಮಯ ದೇಶ ನಿಜವಾಗಿಯೂ ಡಿಜಿಟಲ್ ಆಗಲು ಸಾಧ್ಯವೇ ಎಂದು ಹಲವರು ಅನುಮಾನಿಸಿದರು. ಇಂದು, ಆ ಪ್ರಶ್ನೆಗೆ ಕೇವಲ ಡೇಟಾ ಮತ್ತು ಡ್ಯಾಶ್ ಬೋರ್ಡ್‌ಗಳಲ್ಲಿ ಮಾತ್ರವಲ್ಲ, 140 ಕೋಟಿ ಭಾರತೀಯರ ಜೀವನದಲ್ಲಿಯೂ ಉತ್ತರ ಸಿಕ್ಕಿದೆ. ನಾವು ಹೇಗೆ ಆಡಳಿತ ನಡೆಸುತ್ತೇವೆ, ಹೇಗೆ ಕಲಿಯು ತ್ತೇವೆ, ವಹಿವಾಟು ನಡೆಸುತ್ತೇವೆ ಮತ್ತು ನಿರ್ಮಿಸುತ್ತೇವೆ ಎಂಬುದರಿಂದ ಹಿಡಿದು ಎಡೆಯೂ ಡಿಜಿಟಲ್ ಇಂಡಿಯಾ ಇದೆ.

ಡಿಜಿಟಲ್ ಅಂತರದ ನಿವಾರಣೆ: 2014ರಲ್ಲಿ, ಭಾರತದಲ್ಲಿ ಅಂದಾಜು 25 ಕೋಟಿ ಅಂತರ್ಜಾಲ ಸಂಪರ್ಕಗಳಿದ್ದವು. ಇಂದು, ಆ ಸಂಖ್ಯೆ 57 ಕೋಟಿಗೂ ಹೆಚ್ಚಾಗಿದೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರದ 11 ಪಟ್ಟು ದೂರಕ್ಕೆ ಸಮಾನವಾದ 42 ಲಕ್ಷ ಕಿ.ಮೀ.ಗಳಿಗೂ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್ ಈಗ ಅತ್ಯಂತ ದೂರದ ಹಳ್ಳಿಗಳನ್ನು ಸಹ ಸಂಪರ್ಕಿಸಿದೆ. ಭಾರತವು ವಿಶ್ವದ ಅತಿ ವೇಗದ 5-ಜಿ ಅಳವಡಿಕೆ ಹೊಂದಿದ್ದು, ಕೇವಲ ಎರಡು ವರ್ಷಗಳಲ್ಲಿ 4.81 ಲಕ್ಷ ಬೇಸ್ ಸ್ಟೇಷನ್‌ ಗಳನ್ನು ಸ್ಥಾಪಿಸಲಾಗಿದೆ. ಅತಿ ವೇಗದ ಅಂತರ್ಜಾಲ ಈಗ ನಗರ ಕೇಂದ್ರಗಳು ಮತ್ತು ಗಾಲ್ವಾನ್, ಸಿಯಾಚಿನ್ ಮತ್ತು ಲಡಾಖ್ ಸೇರಿದಂತೆ ಮುಂಚೂಣಿ ಸೇನಾನೆಲೆಗಳನ್ನು ತಲುಪಿದೆ.

ನಮ್ಮ ಡಿಜಿಟಲ್ ಬೆನ್ನೆಲುಬಾಗಿರುವ ಇಂಡಿಯಾ ಸ್ಟ್ಯಾಕ್, ಯುಪಿಐನಂಥ ವೇದಿಕೆಗಳನ್ನು ಸಕ್ರಿಯ ಗೊಳಿಸಿದೆ, ಇದು ಈಗ ವರ್ಷಕ್ಕೆ 100+ ಬಿಲಿಯನ್ ವಹಿವಾಟು ನಿರ್ವಹಿಸುತ್ತಿದೆ. ಎಲ್ಲಾ ನೈಜ-ಸಮಯದ ಡಿಜಿಟಲ್ ವಹಿವಾಟುಗಳಲ್ಲಿ ಅಂದಾಜು ಅರ್ಧದಷ್ಟು ಭಾರತದಲ್ಲಿ ನಡೆಯು ತ್ತವೆ. ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ, 44 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ವನ್ನು ನೇರವಾಗಿ ನಾಗರಿಕರಿಗೆ ವರ್ಗಾಯಿಸಲಾಗಿದೆ, ಮಧ್ಯವರ್ತಿಗಳನ್ನು ತಪ್ಪಿಸಲಾಗಿದೆ ಮತ್ತು 3.48 ಲಕ್ಷ ಕೋಟಿ ರು.ನಷ್ಟು ಸೋರಿಕೆಯನ್ನು ಉಳಿಸಲಾಗಿದೆ.

ಸ್ವಾಮಿತ್ವದಂಥ ಯೋಜನೆಗಳು 2.4 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ವಿತರಿಸಿವೆ ಮತ್ತು 6.47 ಲಕ್ಷ ಹಳ್ಳಿಗಳನ್ನು ನಕ್ಷೆ ಮಾಡಿವೆ, ಇದರಿಂದಾಗಿ ಹಲವು ವರ್ಷಗಳ ಕಾಲದ ಭೂ ಸಂಬಂಧಿತ ಅನಿಶ್ಚಿತತೆ ಕೊನೆಗೊಂಡಿದೆ.

ಎಲ್ಲರಿಗೂ ಸಮಾನ ಅವಕಾಶಗಳು: ಭಾರತದ ಡಿಜಿಟಲ್ ಆರ್ಥಿಕತೆಯು ಎಂಎಸ್‌ಎಂಇಗಳು ಮತ್ತು ಸಣ್ಣ ಉದ್ಯಮಿಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಸಬಲೀಕರಣಗೊಳಿಸುತ್ತಿದೆ. ಒಎನ್‌ಡಿಸಿ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಒಂದು ಕ್ರಾಂತಿಕಾರಿ ವೇದಿಕೆ ಯಾಗಿದ್ದು, ಇದು ಖರೀದಿದಾರರ ಮತ್ತು ಮಾರಾಟಗಾರರ ವಿಶಾಲ ಮಾರುಕಟ್ಟೆಯೊಂದಿಗೆ ತಡೆ ರಹಿತ ಸಂಪರ್ಕ ಒದಗಿಸುವ ಮೂಲಕ ಅವಕಾಶಗಳ ಹೊಸ ಕಿಟಕಿ ತೆರೆದಿದೆ. ಜಿಇಎಂ (ಸರಕಾರಿ ಇ-ಮಾರ್ಕೆಟ್ ಪ್ಲೇಸ್) ಸಾಮಾನ್ಯ ಜನರಿಗೆ ಸರಕಾರದ ಎಲ್ಲಾ ಇಲಾಖೆಗಳಿಗೆ ಸರಕು ಮತ್ತು ಸೇವೆ ಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ಇದು ಜನಸಾಮಾನ್ಯರಿಗೆ ದೊಡ್ಡ ಮಾರುಕಟ್ಟೆ ಒದಗಿಸುವುದಲ್ಲದೆ, ಸರಕಾರಕ್ಕೆ ಹಣ ಉಳಿಸುತ್ತದೆ. ಇದನ್ನು ಕಲ್ಪಿಸಿಕೊಳ್ಳಿ- ನೀವು ಮುದ್ರಾ ಸಾಲಕ್ಕೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುತ್ತೀರಿ. ನಿಮ್ಮ ಸಾಲದ ಅರ್ಹತೆಯನ್ನು ಖಾತೆ ಸಂಗ್ರಾಹಕ ಚೌಕಟ್ಟಿನ ಮೂಲಕ ನಿರ್ಣಯಿಸಲಾಗುತ್ತದೆ. ನೀವು ಸಾಲ ಪಡೆಯುತ್ತೀರಿ ಮತ್ತು ನಿಮ್ಮ ಉದ್ಯಮ ಪ್ರಾರಂಭಿಸುತ್ತೀರಿ.

ನೀವು ಜಿಇಎಂನಲ್ಲಿ ನೋಂದಾಯಿಸಿಕೊಳ್ಳುತ್ತೀರಿ, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತೀರಿ ಮತ್ತು ನಂತರ ಒಎನ್‌ಡಿಸಿ ಮೂಲಕ ಉದ್ಯಮ ವಿಸ್ತರಿಸುತ್ತೀರಿ. ಒಎನ್‌ಡಿಸಿ ಇತ್ತೀಚೆಗೆ 20 ಕೋಟಿ ವಹಿವಾಟುಗಳನ್ನು ದಾಟಿದೆ, ಕೊನೆಯ 10 ಕೋಟಿ ವಹಿವಾಟುಗಳು ಕೇವಲ ಆರು ತಿಂಗಳಲ್ಲಿ ನಡೆದಿವೆ. ಬನಾರಸಿ ನೇಕಾರರಿಂದ ಹಿಡಿದು ನಾಗಾಲ್ಯಾಂಡಿನ ಬಿದಿರು ಕುಶಲಕರ್ಮಿ ಗಳವರೆಗೆ, ಮಾರಾಟಗಾರರು ಈಗ ಮಧ್ಯವರ್ತಿಗಳು ಅಥವಾ ಡಿಜಿಟಲ್ ಏಕಸ್ವಾಮ್ಯವಿಲ್ಲದೆ ದೇಶಾ ದ್ಯಂತ ಗ್ರಾಹಕರನ್ನು ತಲುಪುತ್ತಿದ್ದಾರೆ.

ಜಿಇಎಂ 50 ದಿನಗಳಲ್ಲಿ 1 ಲಕ್ಷ ಕೋಟಿ ರು. ಜಿಎಂವಿ ದಾಟಿದೆ, ಇದರಲ್ಲಿ 1.8 ಲಕ್ಷಕ್ಕೂ ಹೆಚ್ಚು ಮಹಿಳಾ ನೇತೃತ್ವದ ಎಂಎಸ್‌ಎಂಇಗಳು ಸೇರಿದಂತೆ 22 ಲಕ್ಷ ಮಾರಾಟಗಾರರು 46000 ಕೋಟಿ ರು. ಮೌಲ್ಯದ ಬೇಡಿಕೆಗಳನ್ನು ಪೂರೈಸಿದ್ದಾರೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ: ಆಧಾರ್, ಕೋವಿನ್, ಡಿಜಿಲಾಕರ್ ಮತ್ತು ಫಾಸ್‌ ಟ್ಯಾಗ್‌ನಿಂದ ‘ಪಿಎಂ-ವಾಣಿ’ ಮತ್ತು ‘ಒಂದು ದೇಶ, ಒಂದು ಚಂದಾದಾರಿಕೆ’ಯವರೆಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಈಗ ಜಾಗತಿಕವಾಗಿ ಅಧ್ಯಯನಕ್ಕೆ ಒಳಗಾಗುತ್ತಿದೆ ಮತ್ತು ಅಳವಡಿಸಿಕೊಳ್ಳಲ್ಪಡುತ್ತಿದೆ. ಕೋವಿನ್ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಸಕ್ರಿಯಗೊಳಿಸಿತು, 220 ಕೋಟಿ ಕ್ಯೂಆರ್-ಪರಿಶೀಲಿಸಬಹುದಾದ ಪ್ರಮಾಣ ಪತ್ರಗಳನ್ನು ನೀಡಿತು. 54 ಕೋಟಿ ಬಳಕೆದಾರರನ್ನು ಹೊಂದಿರುವ ಡಿಜಿಲಾಕರ್, 775 ಕೋಟಿಗೂ ಹೆಚ್ಚು ದಾಖಲೆಗಳನ್ನು ಸರಾಗ ಮತ್ತು ಸುರಕ್ಷಿತವಾಗಿರಿಸಿದೆ.

ನಮ್ಮ ಜಿ-20 ಅಧ್ಯಕ್ಷತೆ ಮೂಲಕ, ಭಾರತವು ಜಾಗತಿಕ ಡಿಪಿಐ ಭಂಡಾರ ಮತ್ತು 25 ದಶಲಕ್ಷ ಸಾಮಾಜಿಕ ಪರಿಣಾಮ ನಿಧಿ ಪ್ರಾರಂಭಿಸಿತು, ಇದು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ್ಯಂತದ ರಾಷ್ಟ್ರ ಗಳಿಗೆ ಅಂತರ್ಗತ ಡಿಜಿಟಲ್ ಪರಿಸರ ವ್ಯವಸ್ಥೆ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

‘ಆತ್ಮನಿರ್ಭರ ಭಾರತ’ ಸಂಕಲ್ಪದ ಈಡೇರಿಕೆ: ಭಾರತ ಈಗ 1.8 ಲಕ್ಷಕ್ಕೂ ಹೆಚ್ಚು ನವೋದ್ಯಮ ಗಳನ್ನು ಹೊಂದಿರುವ ವಿಶ್ವದ ಅಗ್ರ 3 ನವೋದ್ಯಮ ಪೂರಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆದರೆ, ಇದು ಕೇವಲ ನವೋದ್ಯಮ ಚಳವಳಿಗಿಂತ ಹೆಚ್ಚಿನದಾಗಿದೆ, ಇದು ತಂತ್ರಜ್ಞಾನದ ಪುನರುಜ್ಜೀವನ ವಾಗಿದೆ.

ನಮ್ಮ ಯುವಜನರಲ್ಲಿನ ಕೃತಕ ಬುದ್ಧಿಮತ್ತೆ (ಎಐ) ಕೌಶಲ ಮತ್ತು ಎಐ ಪ್ರತಿಭೆಯ ವಿಷಯದಲ್ಲಿ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 1.82 ಶತಕೋಟಿ ಇಂಡಿಯಾ ಎಐ ಮಿಷನ್ ಮೂಲಕ, ಭಾರತ ಜಾಗತಿಕವಾಗಿ ಪ್ರತಿ ಗಂಟೆಗೆ 1/ ಜಿಪಿಯುಗಿಂತ ಕಡಿಮೆ ಬೆಲೆಯಲ್ಲಿ 34000 ಜಿಪಿಯುಗಳಿಗೆ ಪ್ರವೇಶ ಸಕ್ರಿಯಗೊಳಿಸಿದೆ, ಇದು ಭಾರತವನ್ನು ಅಗ್ಗದ ಅಂತರ್ಜಾಲ ಆರ್ಥಿಕತೆ ಮಾತ್ರವಲ್ಲದೆ ಅತ್ಯಂತ ಕೈಗೆಟುಕುವ ಗಣನೆಯ ತಾಣವನ್ನಾಗಿ ಮಾಡಿದೆ.

ಭಾರತವು ಮಾನವೀಯತೆಗೆ ಮೊದಲ ಆದ್ಯತೆ ನೀಡುವ ಎಐ ಅನ್ನು ಪ್ರತಿಪಾದಿಸಿದೆ. ಎಐ ಕುರಿತ ನವದೆಹಲಿ ಘೋಷಣೆಯು ಜವಾಬ್ದಾರಿಯೊಂದಿಗೆ ನಾವೀನ್ಯವನ್ನು ಉತ್ತೇಜಿಸುತ್ತದೆ. ನಾವು ದೇಶಾದ್ಯಂತ ಎಐ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ.

ಮುಂದಿನ ಹಾದಿ: ಮುಂದಿನ ದಶಕ ಇನ್ನಷ್ಟು ಪರಿವರ್ತನಾತ್ಮಕವಾಗಿರುತ್ತದೆ. ನಾವು ಡಿಜಿಟಲ್ ಆಡಳಿತದಿಂದ ಜಾಗತಿಕ ಡಿಜಿಟಲ್ ನಾಯಕತ್ವದತ್ತ, ‘ಭಾರತ ಮೊದಲು’ ಎಂಬುದರಿಂದ ‘ಜಗತ್ತಿಗೆ ಭಾರತ ಮೊದಲು’ ಎಂಬುದರತ್ತ ಸಾಗುತ್ತಿದ್ದೇವೆ. ಡಿಜಿಟಲ್ ಇಂಡಿಯಾ ಕೇವಲ ಸರಕಾರಿ ಕಾರ್ಯಕ್ರಮವಾಗಿ ಉಳಿದಿಲ್ಲ, ಅದು ಜನಾಂದೋಲನವಾಗಿ ಮಾರ್ಪಟ್ಟಿದೆ. ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ಮತ್ತು ಭಾರತವನ್ನು ಜಗತ್ತಿಗೆ ವಿಶ್ವಾಸಾರ್ಹ ನಾವೀನ್ಯದ ಪಾಲುದಾರನನ್ನಾಗಿ ಮಾಡುವಲ್ಲಿ ಇದು ಕೇಂದ್ರಬಿಂದುವಾಗಿದೆ.

ಎಲ್ಲಾ ನಾವೀನ್ಯಕಾರರು, ಉದ್ಯಮಿಗಳು ಮತ್ತು ಕನಸುಗಾರರಿಗೆ ನಾನು ಹೇಳುವುದಿಷ್ಟೇ: ಮುಂದಿನ ಮಹತ್ವದ ಡಿಜಿಟಲ್ ಸಾಧನೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ. ಯಾವುದು ಸಶಕ್ತಗೊಳಿಸು ತ್ತದೋ ಅದನ್ನು ನಾವು ನಿರ್ಮಿಸೋಣ. ನಿಜವಾಗಿಯೂ ಮುಖ್ಯವಾದುದನ್ನು ಪರಿಹರಿಸೋಣ. ಒಗ್ಗೂಡಿಸುವ, ಒಳಗೊಳ್ಳುವ ಮತ್ತು ಉನ್ನತಿಗೇರಿಸುವ ತಂತ್ರಜ್ಞಾನದೊಂದಿಗೆ ನಾವು ಮುನ್ನಡೆಯೋಣ.

(ಲೇಖಕರು ಭಾರತದ ಪ್ರಧಾನ ಮಂತ್ರಿ)