Friday, 20th September 2024

ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!

-ಗುರುರಾಜ್ ಗಂಟಿಹೊಳೆ

ಚುನಾವಣೆ ಬಂದಾಗ ಜನರಿಗೆ ದುಡ್ಡು, ಸೀರೆ, ಟಿವಿ ಹಂಚಿ ಅಧಿಕಾರಕ್ಕೆ ಬರುವುದು, ವಂಶಪರಂಪರೆಯ ಮೂಲಕ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಸಾಧನೆಯಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಜನರ ನೋವು-ನಲಿವುಗಳನ್ನು ಹತ್ತಿರದಿಂದ ನೋಡಿ ಅರಿಯಬೇಕು. ಜನಸಾಮಾನ್ಯರೊಂದಿಗೆ ಸಾಮಾನ್ಯ ರೀತಿಯಲ್ಲಿ ಬದುಕಿದರೆ ಮಾತ್ರವೇ ಅವರ ಕಷ್ಟ ಅರ್ಥವಾದೀತು.

ನಮ್ಮದೇ ಮಣ್ಣಲ್ಲಿ ಹುಟ್ಟಿ, ನಮ್ಮ ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು, ಕೊನೆಗೆ ನಮ್ಮ ಧರ್ಮದ ಬಗ್ಗೆಯೇ ಟೀಕೆ ಮಾಡುವ, ಪ್ರಚಾರದ ತೆವಲು ಹಿಡಿದ ಸಾಕಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಈ ಗುಂಪಿನಲ್ಲಿ ಸಕ್ರಿಯವಾಗಿರುವ ಪ್ರಮುಖ ಹೆಸರು, ತಮ್ಮ ಅಪ್ಪ ಹಾಗೂ ಅಜ್ಜನ ಹೆಸರಿನಿಂದ ಅಧಿಕಾರಕ್ಕೆ ಬಂದ ಉದಯನಿಧಿ ಸ್ಟಾಲಿನ್. ಈತ ‘ಸನಾತನ ಧರ್ಮ ಡೆಂ, ಮಲೇರಿಯಾ ಇದ್ದಂತೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ, ಸನಾತನ ಧರ್ಮದ ಮೇಲೆ ನಿಂತಿರುವ ಭವ್ಯದೇಶ ಭಾರತಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಇವರ ತಂದೆ ಸ್ಟಾಲಿನ್, ತಾತ ಕರುಣಾನಿಧಿ ಹುಟ್ಟುವುದಕ್ಕೂ ಮುನ್ನ ಹುಟ್ಟಿರುವ ಹಾಗೂ ಇವರುಗಳಿಂದಲೇ ತೆಗೆಯಲಾಗದ ಸನಾತನ ಧರ್ಮವನ್ನು, ಅಪ್ಪನ ಕೃಪೆಯಿಂದ ಮಂತ್ರಿಯಾದ ಉದಯನಿಧಿ ಸ್ಟಾಲಿನ್ ತೆಗೆದುಬಿಡುತ್ತಾರೆ ಎನ್ನುವುದು ಕೇವಲ ತಿರುಕನ ಕನಸು, ಅಷ್ಟೇ!

ತಮಿಳುನಾಡಿನ ಜನರು ನಿಜಕ್ಕೂ ಮುಗ್ಧರು. ಇಂಥವರ ಭಾವನಾತ್ಮಕ ಹೇಳಿಕೆಗೆ ಮನಸೋತು ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುತ್ತಾರೆ. ಅವರ ಮತ ದಿಂದ ಅಧಿಕಾರಕ್ಕೇರಿದ ಉದಯನಿಧಿ ಈ ವಿವಾದಾತ್ಮಕ ಹೇಳಿಕೆ ನೀಡುವ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮಂತ್ರಿಗಳು ಅದೇ ಸಭೆಯಲ್ಲಿ ಕುಳಿತಿದ್ದು ಆ ಹೇಳಿಕೆಗೆ ಚಪ್ಪಾಳೆ ತಟ್ಟಿದ್ದರು. ಈ ಹಿಂದೆ ಕರ್ನಾಟಕದಲ್ಲೊಬ್ಬರು ಸನಾತನ ಧರ್ಮದ ಬಗ್ಗೆ ಅವಹೇಳನ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯು ಸಿರೆಳೆದರು. ಪ್ರತಿಬಾರಿ, ಪದೇ ಪದೆ ಹಿಂದೂಗಳ ಅಥವಾ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುವುದೇ ದೊಡ್ಡ ಸಾಧನೆ ಎಂದು ತಿಳಿದಿರುವ ಕೆಲ ಕಮಂಗಿ ರಾಜಕಾರಣಿಗಳಿಗೆ ನನ್ನದೊಂದು ಚಿಕ್ಕ ಸಲಹೆ. ತಮಿಳುನಾಡು ಸಾಕಷ್ಟು ಅಭಿವೃದ್ಧಿ ಕಾಣಬೇಕಾದ ಅಗತ್ಯವಿದೆ. ಈ ಹಿಂದೆ ಬಸವಣ್ಣ ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ ಎನಿಸಿಕೊಂಡರು. ಇದಕ್ಕೆ ಕಾರಣ ಬಸವಣ್ಣನಿಗೆ ಸಮಾಜದಲ್ಲಿನ ಅಸಮಾನತೆಯನ್ನು ತಿದ್ದುವ, ಸಮಾಜವನ್ನು ಸುಧಾರಿಸುವ ಅನೇಕ ಆಲೋಚನೆಗಳಿದ್ದವು. ಹಾಗೆಯೇ ಅವರು ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಅವರಿವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ’ ಎಂಬ ಬಸವಣ್ಣನ ಮಾತು ಇಂದಿಗೂ ನನಗೆ ನೆನಪಿಗೆ ಬರುತ್ತದೆ. ಬದಲಾವಣೆ ಎಂದರೆ, ಅದು ನಮ್ಮಲ್ಲಿ ಮೊದಲು ಆಗಬೇಕಾದ ಪರಿವರ್ತನೆ; ನಾವು ಬದಲಾಗದ ಹೊರತು ಸಮಾಜದ ಬದಲಾವಣೆ ನಿಜಕ್ಕೂ ಸಾಧ್ಯವಿಲ್ಲ.

ತಮಿಳು ನಾಡಿಗೆ ಪ್ರವಾಸಕ್ಕಾಗಿ ಜನರು ಈಗಲೂ ಬರುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಅಲ್ಲಿನ ಸನಾತನ ದೇವಾಲಯಗಳೇ. ಈ ದೇವಾಲಯಗಳಿಂದ ಸರಕಾರದ ಬೊಕ್ಕಸಕ್ಕೆ ದಂಡಿಯಾಗಿ ಬರುವ ಹಣ ಮಾತ್ರ ಸ್ಟಾಲಿನ್‌ಗೆ ಬೇಕು; ಆದರೆ ಸನಾತನ ಧರ್ಮ ಮಾತ್ರ ಇವರಿಗೆ ಡೆಂಘೀ, ಮಲೇರಿಯಾ ರೀತಿ ಕಾಣಿಸುತ್ತದೆ!  ‘ಉತ್ತರನ ಪೌರುಷ ಒಲೆಯ ಮುಂದೆ’ ಎಂಬ ಮಾತಿದೆ. ಸ್ಟಾಲಿನ್ ಮತ್ತು ಅವರ ಮಗನ ಪೌರುಷವನ್ನು ಕೇವಲ ‘ಉತ್ತರನ ಪೌರುಷ’ ಎನ್ನಬಹುದೇ ವಿನಾ, ಬೇರೆ ಯಾವುದೇ ವ್ಯಾಖ್ಯಾನಗಳು ನನಗೆ ಸಿಗುತ್ತಿಲ್ಲ. ಭಾರತದ ಅಖಂಡತೆಯಲ್ಲಿ ಹಿಂದೂ ಧರ್ಮದ ಪಾತ್ರ ಸಾಕಷ್ಟಿದೆ. ಇದಕ್ಕೆ ಕಾರಣ, ಸನಾತನ ಹಿಂದೂ ಧರ್ಮ ಕೇವಲ ಒಂದು ಧರ್ಮವಲ್ಲ, ಅದು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಇರುವ ಪರಿಪೂರ್ಣ ವ್ಯವಸ್ಥೆ. ವಿಶ್ವಕ್ಕೆ ಮಾನವತೆಯ ಪರಿಚಯ ಮಾಡಿಸಿದ್ದು ನಮ್ಮೀ ಸನಾತನ ಧರ್ಮ. ‘ಅತಿಥಿ ದೇವೋ ಭವ’ ಎಂದು ಕರೆದದ್ದು ನಮ್ಮ ಸನಾತನ ಧರ್ಮ.

‘ಧರ್ಮೋ ರಕ್ಷತಿ ರಕ್ಷಿತಃ’ ಅಂದರೆ ‘ಧರ್ಮವನ್ನು ನೀನು ರಕ್ಷಣೆ ಮಾಡು, ಧರ್ಮ ನಿನ್ನನ್ನು ರಕ್ಷಿಸುತ್ತದೆ’ ಎಂದು ಸಮಾಜಕ್ಕೆ ಸಾರಿದ್ದು ನಮ್ಮ ಸನಾತನ ಧರ್ಮ, ಹಿಂದೂ ಧರ್ಮ. ಬದುಕಿನ ಅರ್ಥ ನೀಡಬಲ್ಲ ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳನ್ನು ಸಮಾಜಕ್ಕೆ ನೀಡಿದ ಭವ್ಯಧರ್ಮ ನಮ್ಮ ಸನಾತನ ಹಿಂದೂ ಧರ್ಮ. ಕೆಲವರು ತಿಳಿದುಕೊಂಡಿರುವಂತೆ ಕೇವಲ ಶಾಲು ತೊಟ್ಟು ತಿಲಕವನ್ನಿಟ್ಟ ಮಾತ್ರಕ್ಕೆ ಆತ ಹಿಂದೂ ಆಗಲು ಸಾಧ್ಯವಿಲ್ಲ. ತನ್ನ ಬದುಕಿನುದ್ದಕ್ಕೂ ನ್ಯಾಯ, ನಿಷ್ಠೆ, ಪ್ರಾಮಾಣಿಕತೆ, ತ್ಯಾಗ, ಕರುಣೆ ಇವೆಲ್ಲವನ್ನೂ ಕಾಪಾಡಿ ಕೊಂಡು, ಸಮಾಜದ ಏಳಿಗೆಗಾಗಿ ಶ್ರಮಿಸುವವನು ನಿಜವಾದ ಹಿಂದೂ. ಅದು ನಮ್ಮ ಧರ್ಮದ ಹಿರಿಮೆ. ಇಡೀ ವಿಶ್ವವೇ ನಮ್ಮ ಹಿಂದೂ ಧರ್ಮವನ್ನು ಒಪ್ಪಿಕೊಂಡಿದೆ. ಇದಕ್ಕೆ ಉತ್ತಮ ಉದಾಹರಣೆ, ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಕುರಿತಾಗಿ ಆಡಿದ ಮಾತುಗಳು. ಜೀವನದ ಮೌಲ್ಯವನ್ನು ಅರಿಯಲು ಸನಾತನ ಧರ್ಮ ನಮಗೆ ಸಹಾಯ ಮಾಡುತ್ತದೆ. ಮನುಷ್ಯನ ಹುಟ್ಟು ಮತ್ತು ಸಾವು ಎರಡೂ ವಿಧಿಲಿಖಿತ ವಾದದ್ದು; ಆದರೆ ಆತ ತನ್ನ ಬದುಕನ್ನು ಕಟ್ಟಿಕೊಂಡು ಭವ್ಯತೆ ಮತ್ತು ರಾಷ್ಟ್ರಪ್ರೇಮವನ್ನು ಸಾರುವುದಕ್ಕೆ ಅನುವುಮಾಡಿಕೊಡುವುದು ಧರ್ಮದ ಶಿಕ್ಷಣವೇ. ನಾವೆಲ್ಲರೂ ಇಂದು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇವೆ ಎಂದರೆ, ಅದಕ್ಕೆ ನಮ್ಮ ಪೂರ್ವಜನ್ಮದ ಪುಣ್ಯ ಕಾರಣವಿರಬಹುದು.

ಭವ್ಯ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದದ್ದು ನಮ್ಮ ಶ್ರೇಷ್ಠ ಹಿಂದೂ ಧರ್ಮ. ಭರತ ಭೂಮಿಯಿಂದ ಸೃಷ್ಟಿಯಾದ ಹೆಸರೇ ಭಾರತ. ಇಂಥ ಸನಾತನ ಭೂಮಿ, ಅದರ ಗಾಳಿ, ಬೆಳಕು, ನೀರನ್ನು ಸವಿದು, ಈಗ ಅದೇ ಸನಾತನ ಧರ್ಮದ ಬಗ್ಗೆ ಎಲುಬಿಲ್ಲದ ನಾಲಿಗೆಯಿಂದ ಮಾತನಾಡುವ ಉದಯನಿಧಿಯಂಥವರಿಗೆ, ತಥಾಕಥಿತ ಬುದ್ಧಿಜೀವಿಗಳಿಗೆ ನಮ್ಮ ಜನರು ಮುಂಬರುವ ದಿನಗಳಲ್ಲಿ ಸರಿಯಾಗಿ ಉತ್ತರ ನೀಡಲಿದ್ದಾರೆ.
ಮನುಷ್ಯ ಜನ್ಮ ಒಂದು ಅದ್ಭುತ ಜನ್ಮ. ಈ ಜನ್ಮವನ್ನು ನಾವು ನಮಗೆ ಬೇಕಾದ ರೀತಿಯಲ್ಲಿ ಬದುಕಬಹುದು ಎಂದ ಮಾತ್ರಕ್ಕೆ, ಮನಸ್ಸಿಗೆ ತೋಚಿದ ಹಾಗೆ ಮಾತನಾಡಿ, ಅದು ವಿವಾದವಾಗಿ, ಅದರ ಮೂಲಕ ಒಂದಿಷ್ಟು
ಸಮುದಾಯದ ಮತಗಳನ್ನು ಸೆಳೆಯಬಹುದು ಎನ್ನುವ ಹುಚ್ಚು ಕಲ್ಪನೆಗೆ ಜನರು ಸರಿಯಾದ ಉತ್ತರವನ್ನು ಕೊಟ್ಟೇ ಕೊಡುತ್ತಾರೆ. ಸನಾತನ ಧರ್ಮವನ್ನು ಟೀಕಿಸುವ ಭರದಲ್ಲಿ ಉದಯನಿಧಿ ಸ್ಟಾಲಿನ್ ತಮ್ಮ ಅವನತಿಯ ಮೊದಲ ಹೆಜ್ಜೆಯನ್ನು ಇಟ್ಟಾಗಿದೆ. ಸಮಾಜದಿಂದ ಸನಾತನತೆಯನ್ನು ಹೋಗಲಾಡಿಸಬೇಕು ಎನ್ನುವ ಉದಯನಿಧಿ, ಅದನ್ನು ಮೊದಲು ತಮ್ಮ ಮನೆಯಲ್ಲಿ ಅನುಸರಿಸಲು ಸಾಧ್ಯವಿದೆಯಾ ಎನ್ನುವುದನ್ನು ಅರಿತುಕೊಳ್ಳಲಿ. ಉದಯನಿಧಿ ಅವರ ತಾಯಿಗೆ ದೇವರು, ಹಿಂದೂ ಸಂಸ್ಕೃತಿ ಎಂದರೆ ಎಲ್ಲಿಲ್ಲದ ಭಕ್ತಿ. ಇದೇ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಲು ಅನೇಕ ಪೂಜೆ ಪುನಸ್ಕಾರಗಳನ್ನು ಮಾಡಿದ್ದು ಈ
ತಾಯಿಯೇ! ಉದಯನಿಧಿ ಅವರಿಗೆ ತಮ್ಮ ಮನೆಯವರನ್ನು, ಸ್ವತಃ ತಮ್ಮ ತಾಯಿಯವರನ್ನೇ ಸನಾತನತೆಯಿಂದ ದೂರಮಾಡಲು ಸಾಧ್ಯವಿಲ್ಲ.

ಹೀಗಿರುವಾಗ ಇಡೀ ದೇಶದಿಂದ ಸನಾತನತೆಯನ್ನು ತೊಡೆದುಹಾಕಲು ಅವರಿಗೆ ಸಾಧ್ಯವೇ?! ಕೈಲಾಗದವನ ಕೊನೆಯ ಅಸವೇ ಅಪಪ್ರಚಾರ. ಅಂಥದ್ದೇ ದಾರಿಯಲ್ಲಿ ನಡೆಯಲು ಉದಯನಿಧಿ ಮುಂದಾಗಿದ್ದು, ಇವರ ಅಸವನ್ನು ಒಪ್ಪುವ ಹಾಗೂ ಅದರಂತೆ ನಡೆಯುವ ಯಾವ ಕೆಲಸಗಳೂ ಜನರ ಅಭಿವೃದ್ಧಿಗೆ ಗುಲಗಂಜಿಯಷ್ಟೂ ಪ್ರಯೋಜನಕಾರಿಯಾಗುವುದಿಲ್ಲ. ಚುನಾವಣೆ ಬಂದಾಗ ಜನರಿಗೆ ಆಸೆ ತೋರಿಸಿ ದುಡ್ಡು, ಸೀರೆ, ಟಿವಿಯನ್ನು ಹಂಚಿ ಅಧಿಕಾರಕ್ಕೆ ಬರುವುದು, ವಂಶಪರಂಪರೆಯ ಮೂಲಕ ರಾಜಕೀಯದಲ್ಲಿ ಒಂದಿಷ್ಟು ಅಧಿಕಾರವನ್ನು ಪಡೆದುಕೊಳ್ಳುವುದು ಸಾಧನೆಯಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಜನರ ನೋವು-ನಲಿವು
ಗಳನ್ನು ಹತ್ತಿರದಿಂದ ನೋಡಿ ಅರಿಯಬೇಕು. ಸಾಮಾನ್ಯ ಜನರೊಂದಿಗೆ ಸಾಮಾನ್ಯ ರೀತಿಯಲ್ಲಿ ಬದುಕಿದರೆ ಮಾತ್ರವೇ ಅವರ ಕಷ್ಟ ಅರ್ಥವಾಗಲು ಸಾಧ್ಯ. ಅದನ್ನು ಹೇಳಿಕೊಡುವುದು ಕುಟುಂಬ ರಾಜಕಾರಣವಲ್ಲ, ಸನಾತನ ಧರ್ಮ.

ಜನರ ಅಸಹಾಯಕತೆಯನ್ನು ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಉಪಯೋಗಿಸಿಕೊಂಡು, ಸತ್ತು ಹೆಣವಾದವರ ಅನುಕಂಪದ ಅಲೆಯಲ್ಲಿ ರಾಜಕೀಯಮಾಡಿ, ಇನ್ನೊಬ್ಬರನ್ನು ತುಳಿದು ಅಧಿಕಾರದ ಕುರ್ಚಿಗೆ
ಏರುವ ಅಂಧಮನಸ್ಸಿನ ಜನರಿಗೆ ‘ಸನಾತನ’ ಎಂದರೇನು ಎಂಬುದನ್ನು ತಿಳಿಯಲು ಏಳೇಳು ಜನ್ಮ ಕೊಟ್ಟರೂ ಸಾಲದು. ಸನಾತನ ಧರ್ಮವನ್ನು ಟೀಕಿಸುವ ಉದಯನಿಧಿ ಸ್ಟಾಲಿನ್‌ರಿಗೆ ತಮ್ಮ ರಾಜ್ಯದ ಬಾವುಟದ ಚಿಹ್ನೆ ನೆನಪಿದೆಯೇ? ಅದು ಕೂಡ ಸನಾತನತೆಯ ಪ್ರತೀಕ. ಹಾಗೆಂದು ಆ ಬಾವುಟದ ಚಿಹ್ನೆಯನ್ನೇ ಬದಲಿಸುತ್ತಾರಾ? ಯಾವುದೇ ತರ್ಕ/ಲಾಜಿಕ್ ಇಲ್ಲದೆಯೇ, ತಮ್ಮ ತಮಿಳುನಾಡಿನ ಸಂಸ್ಕೃತಿ, ಪರಂಪರೆಯನ್ನು
ತಿಳಿಯದೆಯೇ ಯಾರದೋ ಮೇಲಿನ ಅಂಧಭಕ್ತಿಯಿಂದ, ಓಲೈಕೆಯ ರಾಜಕಾರಣದಿಂದ ಜನರನ್ನು ಮರುಳುಮಾಡಬಹುದು ಎಂದು ಅವರು ಭಾವಿಸಿದ್ದರೆ, ಅದು ಕೇವಲ ಅವರ ಭ್ರಮೆಯಷ್ಟೇ. ಉದಯನಿಧಿಯವರೇ, ಜನರು ನಿಮ್ಮನ್ನು ಅಧಿಕಾರದ ಕುರ್ಚಿಯಲ್ಲಿ ಕೂರಿಸಿದ್ದಾರೆ. ಅದರ ಸಲುವಾಗಿಯಾದರೂ ಕೆಲಸದಲ್ಲಿ ಬದ್ಧತೆಯನ್ನು ತೋರಿಸಿ. ಕನಿಷ್ಠಪಕ್ಷ ಜನರ ಹಿತಕ್ಕಾಗಿ ದುಡಿಯುವ ಹಾಗೆಯೇ, ಜನರ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿ. ಸಮಾಜ ಸುಧಾರಣೆಯ ತತ್ತ್ವಗಳನ್ನು ಪಾಲಿಸಿ ನಿಮ್ಮಲ್ಲಿರುವ ಕೆಲ ಮೌಢ್ಯಗಳನ್ನು ದೂರಮಾಡಿಕೊಳ್ಳಿ.

ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ್ದಕ್ಕೆ ಒಂದಷ್ಟು ಪ್ರಚಾರ ಸಿಕ್ಕಿದೆ ಎಂದು ನೀವಂದುಕೊಂಡರೆ, ಅದು ನಿಮ್ಮ ಮೂರ್ಖತನದ ಪರಮಾವಧಿ. ಜನರ ಉದ್ದೇಶಗಳನ್ನು, ಕನಸುಗಳನ್ನು ಈಡೇರಿಸುವ ಬಗ್ಗೆ ಅವಲೋಕಿಸಿ. ಅದನ್ನು ಬಿಟ್ಟು, ಅನಾಯಾಸವಾಗಿಸಿಕ್ಕಿರುವ ಕುರ್ಚಿಯಲ್ಲಿ ಕುಳಿತು ರಾಜ್ಯದ ಜನರ ಒಂದು ಕಣ್ಣಿಗೆ ಬಣ್ಣ, ಇನ್ನೊಂದಕ್ಕೆ ಸುಣ್ಣ ಹಾಕುವ ಕೆಲಸ ಮಾಡಬೇಡಿ. ಅಂದಹಾಗೆ, ನೀವು ಮಾಡಿದ ತಪ್ಪಿಗೆ ಕ್ಷಮೆ
ಕೇಳಿದರೆ ನಾವು ಹಿಂದೂಗಳು ಕ್ಷಮಿಸುತ್ತೇವೆ. ಏಕೆಂದರೆ, ತಪ್ಪು ಮಾಡುವ ಮನುಷ್ಯರನ್ನು ಕ್ಷಮಿಸುವ ಔದಾರ್ಯವನ್ನು ನಮ್ಮ ಧರ್ಮ ನಮಗೆ ಹೇಳಿಕೊಟ್ಟಿದೆ. ಹಾಗೆಯೇ, ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿದರೆ,
ಅದಕ್ಕೆ ಶಿಕ್ಷೆ ನೀಡಲು ಕೂಡ ನಮ್ಮ ಸನಾತನ ಧರ್ಮ ನಮಗೆ ಹೇಳಿಕೊಟ್ಟಿದೆ.