Monday, 16th September 2024

ಬಿಎಸ್’ವೈ ತಲೆಗೆ ’ಬಸವನ’ ಹುಳ

ತುಂಟರಗಾಳಿ

ಸಿನಿಗನ್ನಡ

ತೆಲುಗು ನಟ ಬಾಲಕೃಷ್ಟ ಅವರ 100 ನೇ ಚಿತ್ರ ಗೌತಮಿಪುತ್ರ ಶಾತಕರ್ಣಿಯಲ್ಲಿ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಹಾಡೊಂದರಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. ಈಗ ಶಿವಣ್ಣ ಅಭಿಮಾನಿಗಳಿಗೆ ಇನ್ನೊಂದು ಹೊಸ ಸುದ್ದಿ ಬಂದಿದೆ.

ಶಿವಣ್ಣ ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಂದಿಗೆ ಚಿತ್ರವೊಂದರಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಅಂದಹಾಗೆ ಈ ಚಿತ್ರವನ್ನು ಬೀ ಚಿತ್ರದ ನಿರ್ದೇಶಕ ನೆಲ್ಸನ್ ನಿರ್ದೇಶನ ಮಾಡಲಿದ್ದಾರಂತೆ. ಹಾಗಾಗಿ ರಜಿನಿ ಕಾಂತ್ ಮತ್ತು ಶಿವಣ್ಣನ ಕಾಂಬಿನೇಶನ್‌ನ ಈ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಜೈಲರ್ ಎಂದು ಹೆಸರಿಡಲಾಗಿರುವ ಈ ಚಿತ್ರ ದಲ್ಲಿ ಶಿವಣ್ಣ ಅವರ ಪಾತ್ರ ಏನಿರಬಹುದು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.

ಶಿವಣ್ಣ ಕೇವಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಅಥವಾ ರಜಿನಿ ಎದುರಿಗೆ ದೊಡ್ಡ ಪಾತ್ರದಲ್ಲಿ ಅಭಿನಯಿಸ್ತಾರಾ ಕಾದು ನೋಡಬೇಕು. ಆದರೆ ಮೊದಲ ಬಾರಿಗೆ ಪರಭಾಷಾ ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದ ನಟನಾಗಿ ಶಿವಣ್ಣ ಕಾಣಿಸಿ ಕೊಳ್ಳಲಿದ್ದಾರೆ ಅನ್ನೋದು ಸದ್ಯದ ಸುದ್ದಿ. ಇದು ರಜಿನಿ ಅಭಿನಯದ 169ನೇ ಚಿತ್ರ. ಒಟ್ಟಿನಲ್ಲಿ ನಮ್ಮ ಮಣ್ಣಿನ ಮಗ ಎನಿಸಿಕೊಂಡ ಶಿವಣ್ಣ, ಈಗ ಬೇರೆ ನೆಲದಲ್ಲಿ ತಮ್ಮ ಕಾಲಿಡುತ್ತಿದ್ದಾರೆ. ಮತ್ತು ಈ ಚಿತ್ರವನ್ನು ಅಲ್ಲಿನ ಮಣ್ಣಿನ ಮಗ ನೆಲ್ ಸನ್ ನಿರ್ದೇಶನ ಮಾಡ್ತಾ ಇದ್ದಾರೆ.

ಆದರೆ, ನೆಲ್ಸನ್ ನಿರ್ದೇಶನದ ಇತ್ತೀಚಿನ ಬೀ ಚಿತ್ರ ನೆಲಕಚ್ಚಿದ ರೀತಿ ನೋಡಿದ ಸಿನಿ ರಸಿಕರು ಮಾತ್ರ, ಆಲ್ ದಿ ಬೀ, ಸಾರಿ ಆಲ್ ದಿ ಬೆ ಶಿವಣ್ಣ ಎನ್ನುತ್ತಿದ್ದಾರೆ.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
?ನಮ್ ದೇಶದ್ ರೈತರಿಗೆ ತೊಂದ್ರೆ ಕೊಟ್ಟಿದ್ದು ಆಯ್ತು, ಈಗ ಅಗ್ನಿಪಥ್ ಮೂಲಕ ಭಾವಿ ಸೈನಿಕರ ಕಣ್ಣಲ್ಲಿ ನೀರು ಹಾಕಿಸ್ತಾ ಇದ್ದೀರ ಅಂತ ಆರೋಪ ಇದೆಯಲ್ಲ ನಿಮ್ಮ ಮೇಲೆ?
-ಅಯ್ಯೋ.. ದೊಂಬಿ ಮಾಡೋರನ್ನ ಚದುರಿಸೋಕೆ ಅಂತ ಟಿಯರ್ ಗ್ಯಾಸ್ ಹೊಡೆದ್ವಿ ಅದಕ್ಕೆ ಕಣ್ಣಲ್ಲಿ ನೀರ್ ಬಂದಿರಬೇಕು ಅಷ್ಟೇ. ಅದಕ್ಕೇ ಹಿಂಗೆಲ್ಲ ಅನ್ನೋದಾ…

?ಆದ್ರೂ ನಮ್ಮ ದೇಶದ ಯುವಕರನ್ನು ಬೀದಿಗೆ ತರೋ ಪ್ರೋಗ್ರಾಮ್ ಹಾಕಿರೋದು ಸರಿನಾ? 
-ನೋಡಿ, ಮತ್ತದೇ ತಪ್ಪು ತಿಳುವಳಿಕೆ. ನಮ್ಮ ಯುವಕರು, ಬೀದಿಗೆ ಬಂದಿಲ್ಲ, ಪ್ರತಿಭಟನೆಗೆ ಅಂತ ರಸ್ತೆಗೆ ಇಳಿದಿದ್ದಾರೆ ಅಷ್ಟೇ.

?ಆದ್ರೂ ಸಡಕ್ ಮೇಲೆ ಇಳಿದಿರೋ ನಮ್ಮ ಭಾವಿ ಸೈನಿಕರು ಯಾಕೋ ಸಿಕ್ಕಾಪಟ್ಟೆ ಖಡಕ್ ಆಗಿದ್ದಾರಲ್ಲ?

-ಅದಕ್ಕೆ ಕಾರಣ, ಸೈನಿಕರ ಹೆಸರಲ್ಲಿ ಸಿಕ್ಕ ಸಿಕ್ಕವರೆಲ್ಲ ಸಡಕ್‌ಗೆ ಇಳಿದಿರೋದು. ಅವರಿಗೆ ಸರಿಯಾದ ಸಬಕ್ ಸಿಖಾವೂಂಗ.

?ಸರಿ, ಅವರ ಜತೆಗೆ ಮಾತುಕತೆ ಮಾಡಿ ಈ ವಿಷಯದಲ್ಲಿ ಏನಾದ್ರೂ ಪ್ರೋಗ್ರೆಸ್ ಮಾಡೋ ಯೋಚನೆ ಇದೆಯಾ?
-ಪ್ರೋಗ್ರೆಸ್ ಆಗೋಕೆ ಈ ಕಾಂಗ್ರೆಸ್ ನೋರು ಬಿಟ್ರೆ ತಾನೇ?

?ನೋಡಿ, ಮತ್ತೆ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅಂತೀರಾ?
-ಹೌದು ಮತ್ತೆ, ನಾವು ಎಷ್ಟೋ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರೋಕೂ ಆಪರೇಶನ್ ಕಮಲ ಮಾಡಿಸಿಕೊಂಡ ಅವರ ಶಾಸಕರೇ ಕಾರಣ ಅಲ್ವಾ?

ನೆಟ್ ಪಿಕ್ಸ್
ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ೧೮ ವರ್ಷದ ಹುಡುಗ ತಾನು ಮಾಡಿದ ಒಂದು ತಪ್ಪನ್ನು ಕನ್ ಫ್ಯೂಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಅಲ್ಲಿಗೆ ಹೋಗಿ ಫಾದರ್ ಅವರನ್ನು ಕಂಡು ಫಾದರ್ ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್ ಫ್ಯೂಸ್ ಮಾಡಿಕೊಳ್ಳುತ್ತಿದ್ದೇನೆ ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿಗಳನ್ನೆ ಮುಗಿಸುವ ಮುಂಚೆ ಫಾದರ್ ಸರಿ ಕಣಪ್ಪಾ, ನಿನ್ನ ಕನ್ ಫ್ಯೂಷನ್‌ಗೆ ವ್ಯವಸ್ಥೆ ಮಾಡುತ್ತೇನೆ. ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು? ಅಂತ ಕೇಳಿದ.

ಅದಕ್ಕೆ ಹುಡುಗ ಉತ್ತರಿಸಿದ ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ. ಫಾದರ್ ಕೇಳುತ್ತಲೇ ಹೋದ. ಹುಡುಗ ಉತ್ತರಿಸುತ್ತಲೇ ಹೋದ.

ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ? ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ
ಚರ್ಚ್ ಹಿಂದಿನ ರೋಡಿನ ತೆರೆಸಾನಾ? ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ ಲೈಬ್ರೆರಿಯನ್ ಕ್ಯಾಥಿನಾ?
ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ? ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ ಸರಿ ಫಾದರ್‌ಗೆ ಇವನು ಬಾಯಿ ಬಿಡಲ್ಲ ಅಂತ ಗೊತ್ತಾಯ್ತು.

ಕನ್ ಫ್ಯೂಷನ್ ಮುಗಿಸಿ, ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು.
ಹಾಗಾಗಿ ನೀನು ೪ ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ ಅಂತ ಹೇಳಿ ಕಳುಹಿಸಿದ. ಹೊರಗೆ ಬಂದ ಹುಡುಗನ್ನು ಅವನ ಸ್ನೇಹಿತ ಕೇಳಿದ, ‘ನೋಡಿದ್ಯಾ ಸತ್ಯ ಹೇಳಿ ಏನ್ ಉಪಯೋಗ? ಅದರಿಂದ ನಿಂಗೇನ್ ಸಿಕ್ತು?’. ಅದಕ್ಕೆ ಕಿಲಾಡಿ ಹುಡುಗ ತುಂಟತನದಿಂದ ಹೇಳಿದ ನಾಲ್ಕು ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ ೩ ಹುಡುಗಿಯರ ಡೀಟೈಲ್ಸ್.

ಲೈನ್ ಮ್ಯಾನ್

?ಕನ್ನಡಿಗರ ವಿಶಾಲ ಹೃದಯದ ಬಗೆಗಿನ ಮಾತು  
-ಈ ಪ್ರಪಂಚ ‘ಕನ್ನಡಿ’ಗರಿದ್ದಂತೆ. ನೀವು ಅವರನ್ನ ಬೇರೆ ಭಾಷೆಯಲ್ಲಿ ಮಾತಾಡಿಸಿದ್ರೆ ಅವರೂ ಅದೇ ಭಾಷೆಯಲ್ಲಿ ಮಾತಾಡ್ತಾರೆ.

?ಎಡಗಣ್ಣು ಹೊಡಕೊಂಡ್ರೆ ಏನ್ ಮಾಡಬೇಕು?
-ಮೊನ್ನೆ ಬಲಗಣ್ಣು ಹೊಡಕೊಂಡಾಗ ಯಾವ್ ಸೀಮೆಗಿಲ್ಲದ ಒಳ್ಳೇದೂ ಆಗಿರಲಿಲ್ಲ ಬಿಡು ಅಂತ ಸಮಾಧಾನ ಮಾಡ್ಕೋಬೇಕು.

?ಫುಡ್ ಮಾರುವ ಫುಟ್‌ಪಾತ್ – ಫುಡ್ ಪಾತ್

?ನಿರ್ಮಾಪಕರ ಹತ್ರ ದುಡ್ಡು ಕಮ್ಮಿ ಇದ್ದಾಗ ಹೇಳೋ ಮಾತು
-ಚಿತ್ರೀಕರಣ ‘ಬರ’ದಿಂದ ಸಾಗುತ್ತಿದೆ

?ಕುಡುಕರ ಕಷ್ಟ
-ಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ, ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆ ಮಾತಾಡ್ತಿದ್ದಾನೆ ಅಂತಾರೆ.
ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ ಅಂತಾರೆ.

?ಸದ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಜೆಗಳು ಕುಡಿಯೋ ಅಭ್ಯಾಸ ಕಡಿಮೆ ಮಾಡೋದು ಹೇಗೆ ?
-ಏನಿಲ್ಲ, ಬೇಜಾರಾದಾಗೆಲ್ಲ ಕುಡಿಯೋದ್ ಬಿಟ್ಟು, ಬರೀ ಖುಷಿ ಆದಾಗ್ ಮಾತ್ರ ಕುಡಿಯೋ ಅಭ್ಯಾಸ ಮಾಡಿಕೊಂಡ್ರೆ ಸಾಕು.

?ಅಡಿಗೆ ಭಟ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?
ಕಾಫಿ ಮಾಡುವಾಗ ಒಂದ್ ಟೀ ಸ್ಪೂನ್, ಕಾಫಿ ಪುಡಿ ಹಾಕಿ ಅಂತ ಹೇಳ್ಬೇಕು

?ಬಿಎಸ್‌ವೈ ಮತ್ತು ವಿಜಯೇಂದ್ರ ಅವರ ಮೇಲೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್
ಆರೋಪ
-ಇದನ್ನ ಕೇಳಿ, ಈ ಯತ್ನಾಳ್ ನಿಜವಾಗ್ಲೂ ಬಿಜೆಪಿಯವರೇನಾ ಅಂತ ಬಿಎಸ್‌ವೈ ತಲೆಯಲ್ಲಿ ‘ಬಸವನ’ ಹುಳ ಬಿಟ್ಕೊಂಡ್ರಂತೆ.

?ಬೊಮ್ಮಾಯಿ ಅವ್ರು ಯಾರನ್ನ ಕೇಳಿ ಹೊಸ ಮಿನಿಸ್ಟರ್‌ಗೆ ಅವಕಾಶ ಕೊಡ್ತಾರೆ?
-ಮಂತ್ರಿ ಡೆವಲಪರ್ಸ್
?ಅದೇ, ಯಡಿಯೂರಪ್ಪ ಸಿ.ಎಂ ಆಗಿದ್ದಾಗ?
-ಶೋಭಾ ಡೆವಲಪರ್ಸ್