Monday, 16th September 2024

ಬಿಜೆಪಿ ಪಾಳೆಯದಲ್ಲಿ ಇಂದಿರಾ ಜಪ !

ಮೂರ್ತಿ ಪೂಜೆ

ವಿಧಾನಪರಿಷತ್ ಚುನಾವಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಅವರಿಚ್ಚೆಯಾಗಿತ್ತು. ಆದರೆ ದೇವೇಗೌಡರ ಕಿಚನ್ ಕ್ಯಾಬಿನೆಟ್ಟು ಶರವಣ ಅವರಿಗೇ ಟಿಕೆಟ್ ಕೊಡಬೇಕು ಅಂತ ಪಟ್ಟು ಹಿಡಿಯಿತು.

ಈ ಬಾರಿಯ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬುದು ನಿರ್ಧಾರವಾಗುತ್ತಿದ್ದಂತೆಯೇ ಬಿಜೆಪಿ ಪಾಳೆಯ ದಲ್ಲಿ ಇಂದಿರಾ ಜಪ ಆರಂಭವಾಗಿದೆ. ಇಂದಿರಾಗಾಂಧಿ ನೆನಪಿಸಿಕೊಳ್ಳುವುದು ಬಿಜೆಪಿಗೆ ಹೊಸತೇನಲ್ಲ. ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾ ಪ್ರಭುತ್ವದ ಮೌಲ್ಯಗಳಿಗೆ ಇಂದಿರಾಗಾಂಧಿ ಕೊಡಲಿ ಪೆಟ್ಟು ಹಾಕಿದರು ಅಂತ ಪ್ರತಿವರ್ಷ ಬಿಜೆಪಿ ಪಾಳೆಯ ನೆನಪಿಸಿ ಕೊಳ್ಳುತ್ತದೆ.

ಅಂತಹ ಇಂದಿರಾಗಾಂಧಿ ಹೆಸರನ್ನು ಈ ಬಾರಿ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯ ಟಿಕೆಟ್ ಹಂಚಿಕೆಯಾಗುತ್ತಿದ್ದಂತೆ ಹಲವು ಬಿಜೆಪಿ ನಾಯಕರು ಜಪಿಸಿದರು. ಅವರಲ್ಲಿ ಬೊಮ್ಮಾಯಿ ಸಂಪುಟದ ಕೆಲ ಹಿರಿಯ ಸಚಿವರಿರುವುದೂ ವಿಶೇಷ. ಟಿಕೆಟ್ ಹಂಚಿಕೆಯ ವಿವರ ಗೊತ್ತಾಗುತ್ತಿದ್ದಂತೆಯೇ, ಬಿಜೆಪಿಯಲ್ಲಿ ಇಂದಿರಾಗಾಂಧಿ ಯುಗ ನಡೆಯುತ್ತಿದೆ ಎಂದವರು ಗೊಣಗಿಕೊಂಡರು. ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಪರಿಷತ್ ಚುನಾ ವಣೆಯ ಟಿಕೆಟ್ ನಿರಾಕರಿಸಿದ್ದೇ ಇರಬಹುದು ಅಥವಾ ಇನ್ನು ಕೆಲವರಿಗೆ ಪುರಸ್ಕರಿಸಿದ್ದೇ ಇರಬಹುದು. ಒಟ್ಟಿನಲ್ಲಿ ಇದು ಸರ್ವಾಧಿಕಾರದ ವರ್ತನೆ. ಇದಕ್ಕಾಗಿ ಪಕ್ಷ ದಂಡ ತೆರುವ ದಿನಗಳು ದೂರವಿಲ್ಲ ಎಂಬುದು ಈ ನಾಯಕರ ಆತಂಕ.

ಇನ್ನು ಯಡಿಯೂರಪ್ಪ ಕ್ಯಾಂಪಿನ ನಾಯಕರೊಬ್ಬರು: ನೆನಪಿನಲ್ಲಿಡಿ ಇನ್ನು ನಾವು ಮರಳಿ ಅಧಿಕಾರ ಹಿಡಿಯುವುದು ಕನಸು. ಡಿಕೆಶಿ-ಸಿದ್ಧರಾಮಯ್ಯ ಒಗ್ಗೂಡಿ ಹೊರಟರಂತೂ 2013ರ ರಿಸಸ್ಟ್ ಗ್ಯಾರಂಟಿ ಎಂದು ಹಲವರ ಮುಂದೆ ಹೇಳತೊಡಗಿದರು. ಇಲ್ಲ, ಬಿಜೆಪಿ ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯದೆ ಇರಬಹುದು. ಆದರೆ ಜೆಡಿಎಸ್‌ನ ಕುಮಾರಸ್ವಾಮಿ ಜತೆಗೂಡಿ ಮೈತ್ರಿಕೂಟ ಸರಕಾರ ರಚಿಸಬಹುದಲ್ಲವೇ ಎಂದು ಆಪ್ತರೊಬ್ಬರು ಕೇಳಿದರೆ, ತಪ್ಪಿಯೂ ಅಂತಹ ಕನಸಿಟ್ಟುಕೊಳ್ಳಬೇಡಿ ಎಂದರು. ಅವರ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60 ಸೀಟುಗಳನ್ನು ಗೆಲ್ಲುವುದೂ ಕಷ್ಟ. ಬಿಜೆಪಿ ಇಂತಹ ಸ್ಥಿತಿಗಿಳಿದರೆ 40 ಸೀಟುಗಳ ಆಸುಪಾಸಿಗೆ ತಲುಪಬಹುದಾದ ಜೆಡಿಎಸ್ ಕೂಡಾ ನಿಸ್ಸಹಾಯಕವಾಗುತ್ತದೆ. ಆ ಮೂಲಕ 2013ರ ರಿಸಲ್ಟ್ ಮರುಕಳಿಸುತ್ತದೆ. ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಸರಕಾರ ರಚಿಸುತ್ತದೆ ಎಂದರ್ಥ.

ಅಂದ ಹಾಗೆ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೇಟ್‌ಗಳ ಹಂಚಿಕೆಯಲ್ಲಿ ಬಿ.ಎಲ್.ಸಂತೋಷ್ ಕೈ ಮೇಲಾಗಿದೆ ಎಂಬ ಮಾತುಗಳು ಬಿಜೆಪಿ
ಪಾಳಯದಲ್ಲಿನ ಇಂತಹ ಚರ್ಚೆಗೆ ಕಾರಣ ಎಂಬುದು ರಹಸ್ಯವಲ್ಲ. ಚರ್ಚೆಗಳೇನೇ ಇದ್ದರೂ ರಾಜ್ಯಸಭೆ ಚುನಾವಣೆ ಯಲ್ಲಿ ಬಿಜೆಪಿಯ ಮೂವರೂ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚು. ಈ ಪೈಕಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರನಟ ಜಗ್ಗೇಶ್ ತಮಗೆ ನಿಗದಿಯಾಗುವ ಮತಗಳಿಂದ ಗೆದ್ದರೆ, ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ತಮಗುಳಿದ ಮತ್ತು ಬೇರೆ ಪಕ್ಷಗಳಿಂದ ಬರುವ ಕಾಣಿಕೆಯ ಲಾಭ ಪಡೆದು ಗೆಲ್ಲುತ್ತಾರೆ ಎಂಬುದು ಸಧ್ಯದ ಲೆಕ್ಕಾಚಾರ.

ಚುನಾವಣೆ ಬಿಜೆಪಿ ಕ್ಯಾಂಪಿನಲ್ಲಿ ತರ ತರದ ಚಿತ್ರಗಳನ್ನು ಸೃಷ್ಟಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲೂ ಹಲವು ಚಿತ್ರಗಳನ್ನು ಮೂಡಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಹಗ್ಗ ಜಗ್ಗಾಟಕ್ಕಿಳಿದರು. ಈ ಪೈಕಿ ಶಿವಕುಮಾರ್ ಹಿರಿಯ ನಾಯಕ ಎಸ್.ಆರ್.ಪಾಟೀಲರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದರೆ ಸಿದ್ಧರಾಮಯ್ಯ ಅದಕ್ಕೆ ಪ್ರತಿಪಟ್ಟು ಹಾಕಿದರು. ಹೀಗೆ ಈ ಇಬ್ಬರು ನಾಯಕರ ಹಗ್ಗ ಜಗ್ಗಾಟದ ನಡುವೆ ಶಾಮನೂರು ಶಿವಶಂಕರಪ್ಪ ಅವರ ಆಪ್ತರಾದ ಅಬ್ದುಲ್ ಜಬ್ಬಾರ್ ಮೊದಲ ಟಿಕೆಟ್ ಪಡೆದರೆ ನಾಗರಾಜ ಯಾದವ್ ಎರಡನೇ ಟಿಕೆಟು ಪಡೆದರು. ಜಬ್ಬಾರ್ ಇದ್ದರೆ ನಾನು ವಿಧಾನಸಭೆ ಚುನಾವಣೆ ಗೆಲ್ಲುವುದು ಸುಲಭ ಎಂಬುದು ಶಿವಶಂಕರಪ್ಪ ಲೆಕ್ಕಾಚಾರ.

ರಾಜ್ಯಸಭೆ ಚುನಾವಣೆಯ ವಿಷಯ ಬಂದಾಗಲೂ ಇವರ ಲೆಕ್ಕಾಚಾರ ಬೇರೆ ಬೇರೆಯಾಗಿತ್ತು. ಹೇಗಿದ್ದರೂ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗುವುದು ಒಂದು ಸೀಟು ಮಾತ್ರ. ಹೀಗಾಗಿ ಪಕ್ಷದ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಕೊಟ್ಟರಾಯಿತು ಅಂತ ಡಿಕೆಶಿ ಯೋಚಿಸಿದ್ದರು. ಅಂದ ಹಾಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಗೆ ಪರಮಾಪ್ತರು. ಹೀಗಾಗಿ ರೆಡ್ಡಿಯನ್ನು ಬೆಂಬಲಿಸುವುದು ತಮಗೆ ಲಾಭದಾಯಕ ಎಂಬುದು ಡಿಕೆಶಿ ಯೋಚನೆ. ಅಂದುಕೊಂಡ ಪ್ರಕಾರ ನಡೆದಿದ್ದರೆ ರೆಡ್ಡಿ ನಿರಾಯಾಸವಾಗಿ ಆಯ್ಕೆಯಾಗುತ್ತಿದ್ದರು. ಯಾಕೆಂದರೆ ಜೆಡಿಎಸ್‌ನ 32 ಮತಗಳ ಜತೆ ಕಾಂಗ್ರೆಸ್‌ನಲ್ಲಿ ಹೆಚ್ಚುವರಿಯಾಗಿ ಉಳಿಯುವ ಮತಗಳ ಬೆಂಬಲ ಪಡೆದಿದ್ದರೆ ಅವರಿಗೆ ಸಾಕಿತ್ತು. ಆದರೆ ಈ ಲೆಕ್ಕಾಚಾರ ನಡೆಯುತ್ತಿದ್ದಂತೆಯೇ ಸಿದ್ಧರಾಮಯ್ಯ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸೋಣ ಅಂತ ಎಲೆ ಮಗುಚಿ ಹಾಕಿದರು.

ಶುರುವಿನಲ್ಲಿ ಜೈರಾಮ್ ರಮೇಶ್ ಅವರೊಬ್ಬರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿತ್ತಾದರೂ, ಸಿದ್ಧರಾಮಯ್ಯ ಆಟದ ನಿಯಮವನ್ನೇ ಬದಲಿಸಿ ಬಿಟ್ಟರು. ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬುದೇನೋ ನಿಜ. ಹಾಗಂತ ಸುಮ್ಮನಿದ್ದು ಬಿಟ್ಟರೆ ಜೆಡಿಎಸ್ ಆಟ ಆಡಲು ಅವಕಾಶ ಕೊಟ್ಟಂತಾಗುತ್ತದೆ. ನಾವು ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರೊಬ್ಬರನ್ನು ಕಣಕ್ಕಿಳಿಸೋಣ. ಹೇಗಿ ದ್ದರೂ ಜೆಡಿಎಸ್ ಸೆಕ್ಯುಲರಿಸಂ ಬಗ್ಗೆ ಉದ್ದುದ್ದ ಮಾತನಾಡುತ್ತದೆ. ಅವರದು ಬೈ ಹಾರ್ಟ್ ಸೆಕ್ಯುಲರಿಸಂ ಆದರೆ ನಾವು ನಿಲ್ಲಿಸಿದ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಲಿ ಎಂಬುದು ಅವರ ಮಾತು. ಸಿದ್ಧರಾಮಯ್ಯ ಅವರ ಈ ಮಾತಿಗೆ ದುಸುರಾ ಹೇಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡಾ ಇರಲಿಲ್ಲ. ಹೀಗಾಗಿ ಮನ್ಸೂರ್ ಅಲಿ ಖಾನ್‌ನನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಹೈಕಮಾಂಡ್ ಒಪ್ಪಿಗೆ ನೀಡಿತು. ನಂತರ ಸಿದ್ಧರಾಮಯ್ಯನವರ ನಡೆಯಬಗ್ಗೆ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆಗಳು ಶುರುವಾದವು.

ಅದರ ಪ್ರಕಾರ, ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಸಿದ್ಧರಾಮಯ್ಯ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆ ಯಲು ಹೊರಟಿದ್ದಾರೆ. ಮೊದಲನೆಯದಾಗಿ, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆಶಿಗೆ ಇದು ಚೆಕ್‌ಮೇಟ್. ಯಾಕೆಂದರೆ ಅವರಿಬ್ಬರಿಗೂ ಕುಪೇಂದ್ರ ರೆಡ್ಡಿ ಗೆದ್ದು ಬರುವುದು ಬೇಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಇದು ಕಷ್ಟ. ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಲು ಮನಸ್ಸು ಮಾಡದ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಲು ಅನುವು ಮಾಡಿಕೊಟ್ಟರೆ. ಅದರ ನಿಜವಾದ ಸೆಕ್ಯುಲರಿಸಂ ಫೇಸ್ ಇದು ಎಂದು ಎಲ್ಲರೆದುರು ಕೂಗಾಡುವ ಜತೆಗೆ ಚುನಾವಣೆಯಲ್ಲಿ ಜೆಡಿಎಸ್‌ನ ಅತೃಪ್ತ ಶಾಸಕರು ಕಾಂಗ್ರೆಸ್ ಇಲ್ಲವೇ ಬಿಜೆಪಿಗೆ ಮತ ನೀಡು ವಂತಾದರೆ, ಆ ಪಕ್ಷ ಆಗಲೇ ಛಿದ್ರವಾಗಿದೆ ಎಂದು ತೋರಿಸುವುದೂ ಸಿದ್ಧರಾಮಯ್ಯ ಅವರ ಲೆಕ್ಕಾಚಾರ.

ಜೆಡಿಎಸ್ ಲೆಕ್ಕಾಚಾರದ ಪ್ರಕಾರ ಆಟ ನಡೆದಿದ್ದರೆ ಪಕ್ಷದ ಅಭ್ಯರ್ಥಿ ಕುಪೇಂದ್ರರೆಡ್ಡಿ ನಿರಾಯಾಸವಾಗಿ ಗೆಲುವು ಸಾಧಿಸಿದಂತಾಗುತ್ತಿತ್ತು. ಆದರೆ ಸಿದ್ಧರಾಮಯ್ಯ ಈಗ ಹಾಕಿರುವ ಆಟದಿಂದ ಅದು ಕನಿಷ್ಟ ಪಕ್ಷ ತನ್ನ ಅಸ್ತಿತ್ವಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕಿದೆ. ಅಂದ ಹಾಗೆ ಕಾಂಗ್ರೆಸ್‌ನಲ್ಲಿ ಕೆಲ ಶಾಸಕರಿಗೆ ಅಸಮಾಧಾನ ಇದೆ. ಆದರೆ ಈ ಅಸಮಾಧಾನ ಜೆಡಿಎಸ್ ಪರವಾಗಿ ಅಡ್ಡಮತದಾನ ಮಾಡುವಷ್ಟು ಧೈರ್ಯವನ್ನು ಅವರಿಗೆ ಕೊಡುವುದು ಕಷ್ಟ. ಒಂದು ವೇಳೆ
ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರ ಪರವಾಗಿ ಮತದಾನ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆದರೂ ಸಿಗುತ್ತದೆ. ಆದರೆ ಜೆಡಿಎಸ್‌ನ್ನು ಬೆಂಬಲಿಸಿ ದರೆ ಫಲವೇನು? ಎಂಬುದು ಈ ಅಸಮಾಧಾನಿತ ಶಾಸಕರ ಯೋಚನೆ. ಹೀಗಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್‌ನಿಂದ ಎಷ್ಟು ಮತ ಪಡೆಯ ಬಹುದು ಎಂದು ಯೋಚಿಸುವುದಕ್ಕಿಂತ, ತಮ್ಮ ಮತಗಳು ಬಿಜೆಪಿ ಕಡೆ ಹೋಗಬಾರದು ಎಂದು ಯೋಚಿಸುವ ಸ್ಥಿತಿ ಇದೆ.

ಇನ್ನು ಈ ಬಾರಿಯ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಬಂದ ನಂತರ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತುಂಬ ಇರುಸು ಮುರುಸಿಗೆ ಒಳಗಾಗಿದ್ದರಂತೆ. ಕಾರಣ? ಪಕ್ಷದ ನೆಲೆಗಟ್ಟನ್ನು ಭದ್ರಪಡಿಸಲು ದೊಡ್ಡ ಮಟ್ಟದಲ್ಲಿ ಹೋರಾಡುವುದು ಅವರೇ ಆದರೂ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಅವರ ಮಾತು ನಡೆದಿಲ್ಲವಂತೆ. ವಿಧಾನಪರಿಷತ್ ಚುನಾವಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಅವರಿಚ್ಚೆ ಯಾಗಿತ್ತು.

ಆದರೆ ದೇವೇಗೌಡರ ಕಿಚನ್ ಕ್ಯಾಬಿನೆಟ್ಟು ಶರವಣ ಅವರಿಗೇ ಟಿಕೆಟ್ ಕೊಡಬೇಕು ಅಂತ ಪಟ್ಟು ಹಿಡಿಯಿತು. ಯಾವಾಗ ಶರವಣ ಪರವಾಗಿ ಕಿಚನ್ ಕ್ಯಾಬಿನೆಟ್ಟು ಧ್ವನಿ ಎತ್ತಿತೋ? ಆಗ ದೇವೇಗೌಡರು ಅನಿವಾರ್ಯವಾಗಿ ಅದರ ಜತೆ ನಿಲ್ಲಬೇಕಾಯಿತು. ಕುಮಾರಸ್ವಾಮಿ ಏಕಾಂಗಿಯಾಗಿ ನಿಲ್ಲಬೇಕಾಯಿತು. ರಾಜ್ಯಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವಿಷಯದಲ್ಲೂ ಅಷ್ಟೇ. ಪಕ್ಷದ ಸೆಕ್ಯುಲರ್ ಫೇಸ್ ಕಟ್ಟಿಗೆ ಫಾರ್ ನೆಸ್ಕ್ರೀಮ್ ಹಚ್ಚಲು ಬಿ.ಎಂ.ಫಾರೂಕ್‌ಗೆ ಟಿಕೆಟ್ ಕೊಡಬೇಕು ಎಂಬುದು ಕುಮಾರಸ್ವಾಮಿ ಇಚ್ಚೆಯಾಗಿತ್ತು. ಆದರೆ ಎಚ್.ಡಿ.ರೇವಣ್ಣ ಈಗ ಪಕ್ಷಕ್ಕೆ ಟಾನಿಕ್ ಕೊಡುವವರು ಬೇಕು. ಹೀಗಾಗಿ ಕುಪೇಂದ್ರರೆಡ್ಡಿ ಅವರಿಗೇ ಟಿಕೆಟ್ ಕೊಡೋಣ ಎಂದು ಹಟ ಹಿಡಿದರಂತೆ. ಅವರ ಹಟಕ್ಕೆ ಯಥಾಪ್ರಕಾರ ದೇವೇಗೌಡರು ಮಣಿದರು. ಕುಮಾರಸ್ವಾಮಿ ಅವರ ಏಕಾಂಗಿ ಗೆಟಪ್ಪು ಕಂಟಿನ್ಯೂ ಆಯಿತಂತೆ. ಭಾರ ಹೊರುವವರ ನೆತ್ತಿಗೆ ಖಾರ ಅರೆಯುವವರು ಜಾಸ್ತಿ ಅನ್ನುವುದು ಇದಕ್ಕೇ ಇರಬೇಕು.