Monday, 16th September 2024

ಉಳಿ ಮುಟ್ಟದ ಲಿಂಗಗಳು ಎಂದರೆ ಯಾರು ಗೊತ್ತೆ ?

ಪ್ರಾಣೇಶ್ ಪ್ರಪಂಚ್

ಗಂಗಾವತಿ ಪ್ರಾಣೇಶ್‌

ಶೀರ್ಷಿಕೆ ಓದಿ ಇದ್ಯಾವುದೋ ಈಶ್ವರ ಲಿಂಗಗಳ ಬಗ್ಗೆ ನಾನು ಬರೆದಿದ್ದೇನೆಂದು, ತಿಳಿಯಬೇಡಿ. ಹಾಗೆಂದು ಆಧ್ಯಾತ್ಮ, ಭಕ್ತಿ,
ಧರ್ಮದ ಲೇಖನವೆಂದು ಓದುವುದನ್ನು ಬಿಡಬೇಡಿ, ಅಥವಾ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಓದಲೂ ಶುರುಮಾಡಬೇಡಿ.

ಉಳಿ ಮುಟ್ಟದ ಲಿಂಗಗಳೆಂದರೆ ನಮ್ಮ ಕಡೆ ಯಾವ ಕೆಲಸವೂ ಮಾಡಲು ಬರದ, ಯಾವ ಮಾತನ್ನು ಎಲ್ಲಿ ಆಡಬೇಕೆಂದು ತಿಳಿಯದ, ನಯ ನಾಜೂಕು ತಿಳಿಯದೇ ನಾಲ್ಕು ಜನರ ಮಧ್ಯೆ ಜೋರಾಗಿ ಆಕಳಿಸುವ, ಅವಶ್ಯಕತೆ ಇಲ್ಲದೆ ಧ್ವನಿ ಎತ್ತರಿಸಿ ಮಾತನಾಡುವ, ಗೊತ್ತಿಲ್ಲದಿದ್ದರೂ ಗೊತ್ತಿದೆ, ಮೊದಲೇ ಗೊತ್ತಿತ್ತು ಎಂದು ಎಲ್ಲ ಕೇಳಿದ ಮೇಲೆ ಹೇಳುವ, ಇನ್ನೊಬ್ಬರ ಕಷ್ಟಗಳಿಗೆ ಕಿವಿಗೊಡದೇ, ತಾವು ಪಟ್ಟ, ಪಡುತ್ತಿರುವ ಸುಖಗಳ ಬಗ್ಗೆ ಮಾತ್ರ ಮಾತನಾಡುವ, ಇನ್ನೊಬ್ಬರ ತಮ್ಮದನ್ನು ಹೇಳುವ ಮೊದಲೇ ಎದ್ದು ಹೋಗಿ ಬಿಡುವ, ತಾವು ತಮ್ಮ ಮನೆತನ ಮಾತ್ರ ಶ್ರೇಷ್ಠ ಎಂದು ಹೇಳಿಕೊಳ್ಳುವ, ತಮ್ಮಲ್ಲಿ ಮಾತ್ರ ಮಾತನಾಡುವ, ಇನ್ನೊಬ್ಬರ ವಿಚಾರವನ್ನು ಕೇಳದೇ, ತನ್ನ ವಿಚಾರವನ್ನು ಮಾತ್ರ ಹೇಳಿ, ಇನ್ನೊಬ್ಬರು ತಮ್ಮದನ್ನು ಹೇಳುವ ಮೊದಲೇ ಎದ್ದು
ಹೋಗಿಬಿಡುವ, ತಾವು ತಮ್ಮ ಮನೆತನ ಮಾತ್ರ ಶ್ರೇಷ್ಠ, ತಮ್ಮಲ್ಲಿ ಮಾತ್ರ ಅಂದರೆ ತಮ್ಮ ಕುಟುಂಬದಲ್ಲಿ ಮಾತ್ರ ಒಗ್ಗಟಿದೆ, ಇಡೀ ದೇಶದಲ್ಲಿ ಒಗ್ಗಟ್ಟಿಲ್ಲ, ನಮ್ಮ ಮನೆಯಲ್ಲಿ ಎಲ್ಲವೂ ಟೈಮ್ ಟು ಟೈಮ್ ನಡೆಯಲೇ ಬೇಕು, ಏನು ಟೈಮ್ ಟು ಟೈಮ್ ನಡೆಯೋ ದು ಅಂದರೆ ಯಾವುದೇ ಘನ ಕಾರ್ಯವಲ್ಲ, ದೇಶ, ಧರ್ಮ ಚಿಂತನೆಯೂ ಅಲ್ಲ, ಅದು ಕೇವಲ ಊಟ, ತಿಂಡಿ, ಆಗಾಗ ಚಹಾ, ಸಂಡೆ ವಿಶೇಷ ಸೌಥ್, ನಾರ್ಥ್, ಡಿಶಸ್‌ಗಳು ಇತ್ಯಾದಿಗಳು ಮಾತ್ರ.

ಇಂತಹವರನ್ನೆ ನಮ್ಮಲ್ಲಿ ಅವನೇ ಉಳಿ ಮುಟ್ಟದ ಲಿಂಗ. ಅದು, ಯಾರೂ ಶ್ರದ್ಧೆಯಿಂದ ಕೆತ್ತಿಲ್ಲ ಕೊರೆದಿಲ್ಲ, ಕುಸುರಿ ಕೆಲಸ ಕಂಡಿಲ್ಲ, ನೆಲದಾಗಿಂದ ಕಲ್ಲು ಎದ್ದ ಹಾಗೆ ಇದೂ ತಾಯಿ ಗರ್ಭದಿಂದ ಹುಟ್ಟಿ ಬಂದಿದೆ ಅಷ್ಟೆ ಎನ್ನುತ್ತಾರೆ. ಇವರಿಗೂ ಊರಿನ ಸಮಾಜಿಕ, ಧಾರ್ಮಿಕ, ವೈಚಾರಿಕ, ಕಾರ್ಯಕ್ರಮಗಳಿಗೂ ಅಥವಾ ಯಾವ ಸಂಘಟನೆಗೂ ಸಂಬಂಧ ವಿರುವುದಿಲ್ಲ. ಊರಿನ ಜನಸಂಖ್ಯೆಯಲ್ಲಿ, ಮತದಾರರ ಪಟ್ಟಿಯಲ್ಲಿ ಮಾತ್ರ ಇವರ ಹೆಸರು ಇರುತ್ತದೆ, ಉಂಡದ್ದು ಅರಗಲು ಅಥವಾ ಅರಗಿಸಿಕೊಳ್ಳಲು ಮಾತ್ರ ಸಭೆ, ಸಮಾರಂಭಗಳಲ್ಲಿ, ಸಂಘ, ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುವ, ಬಿಳಿ ಅಥವಾ ಜರತಾರಿ ಬಟ್ಟೆೆಗಳ ಇವರು, ಕೂತಲ್ಲಿಯೇ ಆಕಳಿಸುತ್ತಲೋ, ಹಲ್ಲಲ್ಲಿ ಸಿಕ್ಕ ತಿಂಡಿಚೂರುಗಳನ್ನೊ, ಅಡಿಕೆಯನ್ನೋ, ಪಿನ್ನು, ಮುರಿದ ಕಡ್ಡಿ ಪೆಟ್ಟಿಗೆ ಕಡ್ಡಿಯ, ತುಂಡನ್ನೊ, ಇಲ್ಲವೆ ಊದಿನಕಡ್ಡಿ ಹಿಂಭಾಗದ ಕಡ್ಡಿಯನ್ನೊ ಹಲ್ಲಲ್ಲಿ ಹಾಕಿ ತೆಗೆಯುತ್ತಾ, ಮುಂಭಾಗದ ಸೀಟಿನಲ್ಲಿಯೇ ಕುಳಿತಿರುತ್ತಾರೆ.

ಎಲ್ಲರೂ ಚಪ್ಪಾಳೆ ಹೊಡೆದಾಗ ತಾವೂ ಚಪ್ಪಾಳೆ ಹೊಡೆದು, ಎಲ್ಲರೂ ನಕ್ಕರೆ ತಾವೂ ನಕ್ಕು, ವೇದಿಕೆ ಮೇಲೆ ನಡೆದಿರುವ ಚರ್ಚೆ, ಭಾಷಣ, ಸಂಗೀತ, ಯಾವುದೆಂಬುದು ತಿಳಿಯದೇ ಹತ್ತರ ಜೊತೆ ಹನ್ನೊಂದಾಗಿ ಇರುವವರೇ ಉಳಿ ಮುಟ್ಟದ ಲಿಂಗಗಳು ಎನಿಸಿ ಕೊಳ್ಳುತ್ತಾರೆ. ಬರೀ ಇಷ್ಟೆ ಆಗಿದ್ದರೆ ಇವರನ್ನು ನಿರುಪದ್ರಗಳು, ದೇವರಂಥವರು ಎನ್ನಬಹುದಿತ್ತು. ಆದರೆ, ಹಿಂದೆ ಮುಂದೆ
ನೋಡದೆ ಮೆದುಳಿಗೂ, ನಾಲಿಗೆಗೂ ಲಿಂಕ್ ಇಲ್ಲದೇ ಆಡಿ ಬಿಡುವ ಮಾತುಗಳಿಂದಾಗಿ ಇವರನ್ನು ಯಾರೂ ಮಾತನಾಡಿಸುವು ದಿಲ್ಲ, ಇವರು ಮಾತನಾಡಿದರೂ ಆಲಿಸುವುದಿಲ್ಲ, ಇದೊಂದು ಟಾಕಿಂಗ್ ಡಾಲ್ ಎಂದೇ ಪರಿಗಣಿಸುತ್ತಾರೆ.

ಈ ಟಾಕಿಂಗ್ ಡಾಲ್‌ಗಳ ಕೀಲಿ ಕೈ ಎಂದರೆ ಇವರ ಪೂರ್ವಜರು, ಪಾಪ ಅವರು ಕಷ್ಟಪಟ್ಟು ಕೂಳು, ನೀರು ಕಟ್ಟಿ, ಗಳಿಸಿಟ್ಟ ಸಂಪತ್ತು ಅದನ್ನು ಮೆಲ್ಲಗೆ ಮೆಲ್ಲುತ್ತಾ ಸಾವಕಾಶವಾಗಿ ಕರಗಿಸುತ್ತಾ, ತಮ್ಮ ದೇಹದ ಆಯುಷ್ಯವನ್ನು ಸವೆಸುತ್ತಿರುತ್ತಾರೆ. ಪ್ರತಿಯೊಂದು ಊರಲ್ಲೂ ಇಂಥ ನಾಲ್ಕೆೆದು ಫ್ಯಾಮಿಲಿ ಗಳಿರುತ್ತವೆ, ಇದನ್ನು ಓದುವಾಗ ಅವರು ನಿಮ್ಮ ಕಣ್ ಮುಂದೆ ಬಂದೇ ತೀರುತ್ತಾರೆ. ಇವರು ಯಾವ ಕೆಲಸವನ್ನು ಮಾಡಿರದಿದ್ದರೂ ಯಾರಾದರೂ ಆ ಒಂದು ಕೆಲಸ ಮಾಡದಿದ್ದಾಗ ಓ ಅದೇನು ದೊಡ್ಡದೋ ಮಹರಾಯ ಅದನ್ನು ಮಾಡಲಾಗುವುದಿಲ್ಲವೆ? ಎನ್ನುತ್ತಾರೆ.

ಯಾರಾದರೂ ನನಗೆ ನನಗದು ಗೊತ್ತಿಲ್ಲ, ನಾ ಅದನ್ನು ಓದಿಲ್ಲ, ಕೇಳಿಲ್ಲ ಎಂದರೆ ಅಯ್ಯೋ ಶಿವನೆ, ಇದೂ ಗೊತ್ತಿಲ್ಲವೆ? ನಾನು ಚಿಕ್ಕವನಿದ್ದಾಗೆ ಇದನ್ನು ಓದಿನಿ, ಕೇಳಿನಿ, ಇದೂ ತಿಳಿಯದೇ ಇಷ್ಟು ಹೇಗೆ ದೊಡ್ಡವನಾದೆಯೋ ಎಂದು ಅವನಿಗೆ ಜನರ ಮಧ್ಯೆಯೇ ಅವಹೇಳನ ಮಾಡಿ ನಕ್ಕು ಬಿಡುತ್ತಾರೆ. ಸಂಗೀತ ನಡೆದಿರುವಾಗ ಪಾಪ ಯಾರಾದರೂ ಇವರ ಬಟ್ಟೆ, ಆ ಮೂರ್ಖಗತ್ತು, ಬಿಳಿಬಟ್ಟೆ, ದೇಶಿ ಸೇಂಟಿನ ಆ ಘಮ ಘಮಕ್ಕೆ ಮೈ ಮರೆತು ‘ಇದು ಯಾವ ರಾಗ ಇವರು ಹಾಡುತ್ತಿರೋದು ಎಂದು ಕೇಳಿದರೆ, ’ಇಷ್ಟು ಗೊತ್ತಿಲ್ಲವೆ? ಎನ್ನುವಂತೆ ಮುಖ ನೋಡಿ, ಮತ್ಯಾರಿಗೊ ಮುಂದೆ ಕೂತವರಿಗೆ ಭುಜಕ್ಕೆ ಹೊಡೆದು ಇವ ನೋಡಿ ಸಂಗೀತಕ್ಕೆ
ಒಂದು ಕೂತಿದಾನೆ, ಯಾವ ರಾಗ ಅಂತ ಗೊತ್ತಿಲ್ಲ ನೀವೇ ಹೇಳಿಯಪ್ಪಾ, ನನಗಿಂಥವರಿಗೆ ಉತ್ತರ ಕೊಡಲೂ ಮನಸ್ಸಾಗೋಲ್ಲ ಎಂದು ನಗುತ್ತಾ ಅವರ ಕೈಲಿ ಇವನಿಗೆ ಆ ರಾಗದ ಹೆಸರು ಹೇಳಿಸಿ, ತಾವೂ ತಿಳಿದು ಕೊಳ್ಳುತ್ತಾರೆ, ಅರಿತುಕೊಳ್ಳಲು ಅಲ್ಲ. ಕೇಳಿ ಮರುಕ್ಷಣ ಮರೆಯಲು.

ನನ್ನ ಜೀವನದ ಮೂವತ್ತು, ಮೂವತ್ತೆದು ವರ್ಷ ನಾನು ಇಂಥ ಜನರನ್ನೆ ನೋಡಿದ್ದೇನೆ, ಮತ್ತು ನಮ್ಮ ಜನ, ರಾಜಕೀಯ ಮುಖಂಡರು, ಸ್ವಾಮಿಗಳು, ಇವರನ್ನೇ ಹುಡುಕಿ ಬಂದು ಇವರನ್ನೇ ಹರಿಸಿ ಇವರೊಂದಿಗೆ ಬೆರೆತು, ಇವರಿಗೆ ಪದ, ಪುರಸ್ಕಾರ, ಸನ್ಮಾನ ಮಾಡುವುದನ್ನು ಕಂಡು ‘ಹಣವೊಂದನೇ ಗಳಿಸು ಫಲವಿಲ್ಲ ಕಲೆಗೆ’ ಎಂಬ ನುಡಿಯೇ ಸತ್ಯವೇನೋ ಎನಿಸಿದ ಕ್ಷಣಗಳು ಸಾವಿರಾರು. ‘ವಿದ್ವಾನ ಸರ್ವತ್ರ ಪೂಜ್ಯತೆ’ ಎಂಬುದು ಪುರಾಣ ಕಾಲದ ಮಾತಾಯಿತು, ಧನವಾನ್, ಅಧಿಕಾರ ವಾನ್ ಪೂಜ್ಯತೆ
ಎಂಬುದು ಪುರಾಣ ಕಾಲದ ಮಾತಾಯಿತು. ‘ಧನವಾನ್, ಅಧಿಕಾರ ವಾನ್ ಪೂಜ್ಯತೆ ಎಂಬುದು ಇಂದಿನ ಸುಭಾಷಿತ.

ರಾಜಕಾರಣದಲ್ಲೂ ಇಂಥ ಉಳಿ ಮುಟ್ಟದ ಲಿಂಗಗಳಿಗೇ ಪೂಜೆ, ಅಭಿಷೇಕ, ಯಥೇಚ್ಛ ನೈವೇದ್ಯ, ಛತ್ರ, ಚಾಮರ, ಬಡ ವಿದ್ವಾಂಸ, ಪಂಡಿತರಿಗೆ ಧರ್ಮ ಛತ್ರದಲ್ಲೇ ವಾಸ, ಚಾಪೆಯ ಮೇಲೇ ಶಯನ. ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆ ಸಂಪುಟ ಗಳನ್ನು ಓದುವಾಗ ಎಂಥೆಂಥ ಮಹನೀಯರು ಆಗಿ ಹೋಗಿದ್ದಾರೆ, ಎಂಥೆಂಥ ಪ್ರಾಮಾಣಿಕರಿದ್ದರು, ಸತ್ಯಸಂಧರಿದ್ದರು ಎಂಬು ದನ್ನು ಕಂಡು ಆಶ್ಚರ್ಯವಾಗುತ್ತದೆ. ಅವರ ಪುಣ್ಯದ ಫಲವೆ ಕರ್ನಾಟಕ ಇಂದು ಸಂಪದ್ಭರಿತವಾಗಿದೆ, ಕ್ಷಾಮ, ಭೂಕಂಪ, ಬರಗಾಲ ಪ್ರಕೃತಿ ವಿಕೋಪಗಳಿಲ್ಲದೆ ಸುಖವಾಗಿದೆ ಎನಿಸುತ್ತದೆ. (ಈ ಕೋವಿಡ್ ವರ್ಷ ಬಿಟ್ಟು) ದೇಶದ ನಾನಾ ಭಾಗಗಳಿಂದ ಮಹನೀಯರಿಂದ ಹಿಡಿದು ಕಡು ಮೂರ್ಖರವರೆಗೂ ಕರ್ನಾಟಕದಲ್ಲೇ ಬಂದು ಬಂದು ನೆಲೆ ಊರುತ್ತಿದ್ದಾರೆ ಎನಿಸುತ್ತಿದೆ. ಅಂಥ ಹಳೆಯ ಹಿರಿಯ ಸಾತ್ವಿಕರ ಹೆಸರುಗಳು ಯಾವ ಬೀದಿ, ಸರ್ಕಲ್, ರಸ್ತೆಗಳಿಗಿಲ್ಲ, ಬದಲಿಗೆ ಮತ್ತೆ ಪುಂಡ ಪೋಕರಿಗಳ, ರೌಡಿಗಳ
ಹೆಸರೇ ರಾರಾಜಿಸುತ್ತಿದೆ.

ಇವನ್ನೆಲ್ಲ ನೋಡಿದಾಗ ಮತ್ತೆ ಉಳಿಮುಟ್ಟದ ಲಿಂಗಗಳಿಗೇ ಪೂಜೆಯಲ್ಲವೇ ಎನಿಸುತ್ತಿದೆ. ಹೆಚ್ಚು ಪೆಟ್ಟು ತಿಂದ ಕಲ್ಲುಗಳೇ ಮೂರ್ತಿಯಾಗುತ್ತವೆ. ಪೆಟ್ಟಿಗೆ ಅಂಜಿ ಉದ್ದಕ್ಕೆ ಮಲಗುವ ಕಲ್ಲುಗಳೇ ಪಾವಟಿಗೆ, ಮೆಟ್ಟಿಲುಗಳಾಗುತ್ತವೆ. ಆದರೆ ಇಂದು ಮೆಟ್ಟಿಲು ಗಳಾಗುವ ಯೋಗ್ಯತೆಯೂ ಇಲ್ಲದ ಕಲ್ಲುಗಳಿಗೇ ಪೂಜೆ ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಂತೂ ಎಲ್ಲರಂಗಗಳಲ್ಲಿ ಅಯೋಗ್ಯರು, ಅಪ್ರಯೋಜಕರನ್ನೆ ನೋಡುತ್ತಿದ್ದೇವೆ. ಅವರ ಹಿಂಬಾಲಕರು
ಬೇರೆ ಅವರಿಗೆ ಹುಲಿ, ಸಿಂಹ, ಕೊರಡು, ಬಂಡೆ, ಸಿಡಿಲು ಎಂದು ಹೆಸರಿಟ್ಟು ಅವರನ್ನು ಓಲೈಸುತ್ತಿರುತ್ತಾರೆ. ಪರಮಹಂಸ ಯೋಗಾ ನಂದರ ಪುಸ್ತಕವಾದ ‘ಯೋಗಿಯ ಆತ್ಮಕಥೆ’ ಪುಸ್ತಕವನ್ನು ನಾನು ಪ್ರತಿವರ್ಷ ಓದುತ್ತೇನೆ, ಕೆಲವು ಗ್ರಂಥಗಳನ್ನು ಪ್ರತಿವರ್ಷ ಓದಬೇಕು. ಏಕೆಂದರೆ, ನಮ್ಮ ಒಂದು ವರ್ಷದ ವಯಸ್ಸಿನ ಹೆಚ್ಚಳ, ಅನುಭವ, ಬವಣೆಗಳು ನಮಗೆ ಅಂಥ ಗ್ರಂಥಗಳ ಸಾರವನ್ನು ಹೊಸದಾಗಿಯೇ ಅರ್ಥೈಸುತ್ತವೆ.

ಹೀಗೆ ಪ್ರತಿ ವರ್ಷ ಓದುವ ಗ್ರಂಥಗಳ ಪಟ್ಟಿಯಲ್ಲಿ ಭಗವದ್ಗೀತೆ, ಮಂಕುತಿಮ್ಮನ ಕಗ್ಗ, ಪುರಾಣ ಗ್ರಂಥಗಳು, ಭಾಗವತ, ಅಲ್ಲಮನ ವಚನಗಳು, ಪುರಂದರ ಕನಕದಾಸರ ಸಾಹಿತ್ಯಗಳು ಪುಸ್ತಕ ಹಳೆಯದಾದರೂ ನಮಗೆ ಹೊಸ ದೃಷ್ಟಿಯನ್ನು ನೀಡುತ್ತದೆ, ನಾನು ಊರೂರು ಸುತ್ತಿದ್ದರೆ ಬೇರೆ ಬೇರೆ ಜನರೊಡನೆ ಬೆರೆತಿದ್ದರೆ , ಕಷ್ಟ ಕೋಟಲೆಗಳ ರುಚಿ ಕಂಡಿದ್ದರೆ, ಹಳೆ ಪುಸ್ತಕಗಳೆ ಹೊಸರುಚಿ ನೀಡುತ್ತವೆ. ಇದು ನನ್ನ ಅನುಭವ. ಯಾವದನ್ನೂ ಹೇಳಿದರೂ, ಕೇಳಿದರೂ ‘ಓ ನಾ ಎಂದೋ ಓದಿ ಒಗೆದು ಬಿಟ್ಟಿನಿ’ ಎನ್ನುವವ ರಿರುತ್ತಾರಲ್ಲ ಅವರೇ ಉಳಿ ಮುಟ್ಟದ ಲಿಂಗಗಳು. ಓದುವವನಿಗೆ – ಎಂತೆಂತಹ ಮಾತುಗಳಿವೆ ಗೊತ್ತೆ?

1.ಯಾವುದಕ್ಕೂ ತಲೆ ಬಾಗದೆ ಇರುವವನು, ತನ್ನ ಭಾರವನ್ನೇ ತಾನು ಎಂದೂ ಹೊರಲಾರ ಹಾಗೆಯೆ

2. ಇತರರ ತಲೆಗಳನ್ನು ಕತ್ತರಿಸಿ ಹಾಕಿ ತಾವು ಎತ್ತರವಾಗಲು ಪ್ರಯತ್ನ ಮಾಡಬಾರದು, ಅದು ಬೆಳವಣಿಗೆಯ ಲಕ್ಷಣವಲ್ಲ. 3.ಸ್ವಯಂ ಕತ್ತಲೆಯನ್ನು ತಾವೇ ಸೃಷ್ಟಿಸಿಕೊಂಡು ಕತ್ತಲೆಯಲ್ಲೇ ಅಜ್ಞಾತವಾಗಿರುವುದರಿಂದಲೇ ಕೆಲವರು ಬೆಳಕನ್ನೆ ಸಹಿಸಲಾರದವರಾಗಿದ್ದಾರೆ. ಎಂತಹ ಮಾತುಗಳು ಇವೆಲ್ಲ!

ಬುದ್ಧನ ಕಥೆಗಳಲ್ಲಿ ಈ ಕೆಳಕಂಡ ಒಂದು ಘಟನೆಯ ಉದಾಹರಣೆಯನ್ನು ನಾನು ಆಗುಂಬೆ ನಟರಾಜರ ಒಂದು ಪುಸ್ತಕದಲ್ಲಿ ಓದಿದಾಗ ಬರೆದಿಟ್ಟುಕೊಂಡಿದ್ದೆ, ಬಹುಶಃ ಈರೋಡು ರಾಮಸ್ವಾಮಿ ಎಂಬ ಪುಸ್ತಕದಿಂದ ಆಯ್ದದ್ದು. ಇದು ಈ ಉಳಿಮುಟ್ಟದ ಲಿಂಗದಂಥ ವ್ಯಕ್ತಿತ್ವ ಉಳ್ಳವರಿಗೆ ಹೇಳಿ ಮಾಡಿಸಿದಂತೆ ಕಥೆ ಬುದ್ಧನ ದಾನ ಮಾಡಬೇಕೆಂಬ ಪ್ರವಚನ ಕೇಳಿದ ಬಡವನೊಬ್ಬ ಒಮ್ಮೆೆ ‘ನಾನು ಬಡವ ಹೇಗೆ ದಾನ ಮಾಡಲಿ? ನನ್ನಲ್ಲೇನೂ ಇಲ್ಲ’ ಎಂದನಂತೆ. ಆಗ ಬುದ್ಧ ‘ಸುಳ್ಳು, ನಿನ್ನಲ್ಲಿ ಐದು ಅತ್ಯಮೂಲ್ಯ ನಿಧಿಗಳಿವೆ.

ಅವನ್ನು ದಾನ ಮಾಡು, ಬರೀ ಬಂಗಾರ, ಹಣ ಮಾತ್ರ ನಿಧಿಯಲ್ಲ ಎಂದನಂತೆ, ಐದು ನಿಧಿಗಳೇ? ಎಲ್ಲಿ? ಎಂದನಂತೆ ಆ ಬಡವ. ಬುದ್ಧ ಆ ಐದು ನಿಧಿಗಳನ್ನು ಹೀಗೆ ಬಿಡಿಸಿ ಹೇಳಿದ ಒಂದನೆಯ ನಿಧಿ ನಿನ್ನ ಮುಖ ಹಾಗೂ ಅದರಲ್ಲಿರೋ ನಗು, ನಗುತ್ತಿರು, ನಗಿಸುತ್ತಿರು ಅದರ ಪ್ರಭಾವ ಅಗಾಧವಾದದ್ದು. ಎರಡನೆಯ ನಿಧಿ ನಿನ್ನ ಕಣ್ಣುಗಳು. ಆ ಕಣ್ಣಿನಿಂದ ಜನರನ್ನು ಪ್ರೀತಿ  ಶ್ವಾಸಗಳಿಂದ ನೋಡು, ಲಕ್ಷಾಂತರ ಜನರ ಮೇಲೆ ಆ ಎರಡೇ ಕಣ್ಣುಗಳಿಂದ ನೀನು ಪ್ರಭಾವ ಬೀರಬಹುದು. ಮೂರನೆಯ
ನಿಧಿ ನಿನ್ನಬಾಯಿ, ಅದರಿಂದ ಸದಾ ಒಳ್ಳೆಯ ಮಾತನಾಡುತ್ತಿರು. ಅದು ಹಣಕ್ಕಿಂತ ಹೆಚ್ಚು ಅನುಕೂಲಗಳನ್ನು ನಿನಗೆ ತೋರಿಸಿ ಕೊಡುತ್ತದೆ. ನಾಲ್ಕನೇಯ ನಿಧಿಯೇ ಹೃದಯ, ಯಾರನ್ನೆ ಆಗಲಿ ಹೃದಯ ಪೂರ್ವಕವಾಗಿ ಪ್ರೀತಿಸು. ಆಗ ನೋಡುವಿಯಂತೆ ಅದರ ಚಮತ್ಕಾರ. ಐದನೆಯ ನಿಧಿಯೇ ಇಡೀ ನಿನ್ನ ದೇಹ , ದೇಹ ದಂಡಿಸಿ ಇತರರಿಗೆ ಸಹಾಯ ಮಾಡು, ನಿನ್ನ ಶ್ರದ್ಧಾಸಕ್ತ ಸೇವೆ ಅವರ ಜೀವನವನ್ನು ಬೆಳಗಿದರೆ ನೀನು ಧನವಂತನಾಗುವುದು ತಡವಿಲ್ಲ, ಇದನ್ನೆ ಈಗಿನ ಧನವಂತರು ಪೂರ್ವಜನ್ಮದಲ್ಲಿ ಮಾಡಿದ್ದು ಎಂದು ತಿಳಿದಿಕೊ ಅದಕ್ಕೇ ಅವರು ಧನವಂತರು. ಎಂದನಂತೆ.

ನಾ ಹೇಳಿದ ಉಳಿ ಮುಟ್ಟಿದ ಲಿಂಗಗಳಿಗೆ ಈ ಕಥೆ ಬಹಳ ಅನ್ವಹಿಸುತ್ತದೆ ಅಲ್ಲವೇ? ದೇಹದ ಅಮೂಲ್ಯ ಅವಯವಗಳನ್ನು ಪರರಿಗಾಗಿ ಬಳಸಬಲ್ಲವನೆ, ಮಹಾತ್ಮನೂ ಆಗಬಲ್ಲ, ದೈವತ್ವವನ್ನು ಪಡೆಯಬಲ್ಲ, ಪೂಜೆಗೊಳ್ಳುವ ಲಿಂಗವೂ ಆಗಬಲ್ಲ.

Leave a Reply

Your email address will not be published. Required fields are marked *