Monday, 16th September 2024

ಮಹಾ ಮಾತೆ ಕುಂತಿ ಕಣ್ದೆರೆದಾಗ…

ದಾಸ್ ಕ್ಯಾಪಿಟಲ್

dascapital1205@gmail.com

ಮಹಾಭಾರತದ ಯಾವ ಪಾತ್ರವೂ ಸುಖದ ಮುಖವನ್ನು ಸಹಜವೆಂಬಂತೆ ಅನುಭವಿಸಿದ್ದಿಲ್ಲ. ಬದುಕು ದ್ವಂದ್ವಗಳ ಸಮ್ಮಿಲನವಾದರೂ ಮಹಾ ಭಾರತದ ಸ್ತ್ರೀ ಪಾತ್ರಗಳು ದುಃಖದ ಮುಖವೊಂದನ್ನೇ ಬದುಕಾಗಿ ಉಂಡರು. ಸತ್ಯವತಿಯ ಅಪ್ಪ ಏನೇ ಷರತ್ತುಗಳನ್ನು ಹಾಕಿ ಮಗಳನ್ನು ಹಸ್ತಿನಾವತಿಗೆ ಮದುವೆ ಮಾಡಿಕೊಟ್ಟರೂ ಸತ್ಯವತಿ ಕಂಡ ಸುಖ ಅಂಥಾ ಪರಿಯದ್ದೇನೂ ಅಲ್ಲ.

ಗಾಂಧಾರಿಯ ಬದುಕಂತೂ ದುಃಖದ ಮುಗಿದು ಹೋಗುತ್ತದೆ. ಗಂಡ ಕಾಣದ ಈ ಜಗತ್ತನ್ನು ತಾನೂ ಕಾಣುವುದು ಬೇಡ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಹೆಣ್ಣಾಕೆ. ಪತಿಯೇ ಪರದೈವ ಎಂದು ನಂಬಿದ್ದ ಕಾಲವದು. ಮಾದ್ರಿ ಅನುಭವಿಸಿದ ಸುಖವಾದರೂ ಏನು? ದ್ರೌಪದಿಯ ಬದುಕು ಅನುಭವಿಸಿದಷ್ಟು ಹಿಂಸೆ, ಹೀನಾಯ, ಅವಹೇಳನಪಟ್ಟವರು ಇದ್ದಾರೆಯೇ? ಹಸ್ತಿನೆಯ ಪಟ್ಟದರಸಿ ಭಾನುಮತಿಗೆ ಅಂಥಾ ಪರಿಯ ಸುಖವೇನಿತ್ತೋ? ಹಸ್ತಿನೆಯ ಪಾಂಡುರಾಜನ ಮೊದಲ ಪತ್ನಿ ಕುಂತಿ ಅನುಭವಿಸಿದ ಪಾಡೋ! ಅಬ್ಬಾದೇವರೇ!!!

ಯಾವ ಹೆಣ್ಣೂ ಅನುಭವಿಸಲಾಗದ, ಅನುಭವಿಸಬಾರದ ಯಾತನೆಯ ಹೂಟ ಅವಳದು! ವಾನಪ್ರಸ್ಥದ ಕೊನೆಯವರೆಗೂ ಅನಿರೀಕ್ಷೆಯ ಆತಂಕ, ಭಯ, ದುಗುಡ, ತಲ್ಲಣಗಳ ಮಹಾಪೂgಗಳಿಂದಲೇ ಅವಳ ಬದುಕು ಮುಗಿದುಹೋಯ್ತು. ಬಯಸಿದ್ದೆಲ್ಲ, ಹಂಬಲಿಸಿದ್ದೆಲ್ಲ ಕನಸಲ್ಲಿ ಕಂಡು ಕನವರಿಸದಂತಾಯಿತು. ತನ್ನ ದುಃಖವನ್ನು ನುಂಗಿಕೊಂಡೇ ಹೊಟ್ಟೆ ತುಂಬಿಕೊಂಡವಳು ಕುಂತಿ. ತನ್ನ ಕಣ್ಣೀರು ಕುಡಿದೇ ತೃಷೆ ಅಡಗಿಸಿಕೊಂಡವಳು ಕುಂತಿ. ತನ್ನ ಪಾಡನ್ನು ಕುಂತಿ ತಾನೇ ತೋಡಿಕೊಳ್ಳಬೇಕು. ಏಕೆಂದರೆ ಮೂಲ ವ್ಯಾಸರಿಗೂ ಎಟುಕದ ದುಃಖ ತನ್ನದು ಎಂದು ಹೇಳುತ್ತಾಳೆ. ಏನು ಮಾರ್ಮಿಕ, ಮರ್ಮಾಘಾತಕ ವಾಕ್ಯವಿದು! ಆಕೆಯ ಹೃದಯಾಗ್ನಿಯಿಂದ ಹೊರಬಂದ ಉರಿ ಇದು, ಉಸಿರಲ್ಲ!

ಅಹುದು ನಾನು ಹೇಳುತ್ತಿರುವುದು ಆಚಾರ್ಯರ ಮಹಾಮಾತೆ ಕುಂತಿ ಕಂದೆರೆದಾಗ ಎಂಬ ಆತ್ಮಕಥಾರೂಪೀ ಕಾದಂಬರಿಯ ಬಗ್ಗೆ. It is simply amazing!  ಕುಂತಿಯಾಗಿ ಆಚಾರ್ಯರು ಕುಂತಿಯು ತನ್ನ ಬದುಕನ್ನು ಹೀಗೆ ಸಿಂಹಾವಲೋಕನ ಮಾಡಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತೆ ನಿರೂಪಿಸಿದ್ದಾರೆ. ಆಚಾರ್ಯರ ನೇರ ನಿಷ್ಠುರ ಗುಣಸ್ವಭಾವ ಇಲ್ಲಿ ಸತ್ತುಹೋಗಿ ಕೇವಲ ಭಾವಪ್ರಧಾನತೆಯೇ ಕಾದಂಬರಿ ಯುದ್ದಕ್ಕೂ ಹಾಸಿದೆ.

ಒಂದಂತೂ ಸತ್ಯ: ಆಚಾರ್ಯರು ಅಸಾಮಾನ್ಯ ಭಾವುಕರು. ಗುಣಗ್ರಾಹಿಗಳು. ತಾಯೀ ಭಾವವನ್ನು ಹೊಂದಿರುವವರು. ಶ್ರೀಕೃಷ್ಣನಡಿಯಲ್ಲಿ ಹುಟ್ಟಿ ಶ್ರೀಕೃಷ್ಣನಡಿಗಳನ್ನೇ ಸೇರಿದ ಭಾಗೀರಥಿಯಂತೆ ಕುಂತಿ ತನ್ನ ಜೀವನ ಭಾಗೀರಥಿಯನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಅಂತಿಮ ನಾಕು ಅನುವಾಕು ಗಳನ್ನು ಆಚಾರ್ಯರ ಮಾತುಗಳಲ್ಲಿ ಕೇಳಿ: ಕೃಷ್ಣ! ನಿನ್ನ ಸ್ಮರಣೆಯಲ್ಲಿ ಈ ಶರೀರ ಬಿಡುತ್ತಿದ್ದೇನೆ… ಸದ್ಯ ಮಕ್ಕಳಿಗೂ ಊರವರಿಗೂ ಯಾರಿಗೂ ತೊಂದರೆ ಇಲ್ಲದೆ ಈ ಮರಣ ಕೊಟ್ಟುದಕ್ಕಾಗಿ ನಾನು ತುಂಬಾ ಕೃತಜ್ಞಳು. ಕರ್ಣ, ನನ್ನನ್ನು ಕ್ಷಮಿಸು!

ಯುಧಿಷ್ಠಿರ, ಅರ್ಜುನ, ಭೀಮ! ಯಮಳರೇ! ಹೋಗಿ ಬರುತ್ತೇನೆ. ಬದುಕಿರುವಾಗ ಈ ಕುಂತಿಯಿಂದ ಯಾರಿಗೂ ಉಪಕಾರ ಆಗಲಿಲ್ಲ. ಈಗ ಸಾಯುವಾಗ ಯಾರಿಗೂ ನನ್ನಿಂದ ತೊಂದರೆಯಾಗಲಿಲ್ಲ ಎಂಬುದೇ ಅಲ್ಪ ತೃಪ್ತಿ! ಅರಗಿನಮನೆಯ ಸತ್ತಿದ್ದರೆ ಕೆಲವರಿಗೆ ಹೆಚ್ಚು ಉಪಯೋಗ ಆಗುತ್ತಿತ್ತೇನೋ! ಅಂತೂ ಬಯಸಿದಾಗ ಮೃತ್ಯು ಬರುವುದಿಲ್ಲ. ಈಗ ಬಂದಾಗಲೇ ಸ್ವಾಗತಿಸಬೇಕು….ಕೃಷ್ಣ! ಗೋವಿಂದ! ಗೋಕುಲಕಂದ, ಶರಣು, ಶರಣು, ಶರಣು…. ಆಹಾ ಎಂಥಾ ನಿರೂಪಣೆ! ಆಚಾರ್ಯರು ಬರೆದ ಈ ಅತ್ಮಕಥಾರೂಪೀ ಕಾದಂಬರಿಯಲ್ಲಿ ಒಟ್ಟೂ ೨೧ ಅಧ್ಯಾಯಗಳಿವೆ.

ಕುಂತಿಯೇ ತನ್ನ ಬದುಕಿನ ಪ್ರಮುಖ ಘಟನೆಗಳನ್ನು, ಕಾಲದೇಶವನ್ನೂ ಮೀರಿದ ಸಂದರ್ಭಗಳನ್ನು ಅವಲೋಕನ ಮಾಡುತ್ತ ಮಾಡುತ್ತ
ಪ್ರಾಂಜಲ ಮನಸ್ಸಿನಿಂದ ತಪ್ಪೊಪ್ಪಿಗೆಯನ್ನು ಮಾಡಿಕೊಳ್ಳುತ್ತಾಳೆ, ದುಃಖಿಸುತ್ತಾಳೆ, ನ್ಯಾಯಾನ್ಯಾಯದ, ಧರ್ಮಾ ಧರ್ಮದ ವಿವೇಚನೆಯನ್ನು ದರ್ಶಿಸುತ್ತಾಳೆ. ಬದುಕೂ ತನ್ನದೇ, ಅವಲೋಕನವೂ ತನ್ನದೇ, ಆದರೆ ಎಲ್ಲಿಯೂ ತನ್ನನ್ನು ಸಮರ್ಥಿಕೊಳ್ಳುವ ಜಾಣತನವಿಲ್ಲದ, ಮೂಲವನ್ನೇ
ಆಧಾರವಾಗಿಟ್ಟುಕೊಂಡು ಬರೆದ ಆಚಾರ್ಯರು ಎಲ್ಲಿಯೂ ಕಲ್ಪನೆಯನ್ನು ಹರಿಯಬಿಡಲಿಲ್ಲವೇನೋ ಅನಿಸುತ್ತದೆ.

ಗಂಡು ಗಂಡಷ್ಟೇ ಅಲ್ಲ, ಹೆಣ್ಣೂ ಹೌದು. ಆZoಜ್ಚಿZqs qsಟ್ಠ Zಛಿ Seಟ್ಠಜeಠಿ ಎನ್ನುತ್ತಾನೆ ಓಶೋ ರಜನೀಶ. ಗಂಡಿನಲ್ಲಿ ಹೆಣ್ತನದ ಭಾವವೂ ಮನೆಮಾಡಿರುತ್ತದೆ. ಆಡುಮಾತಿನಲ್ಲಿ ಹೇಳುತ್ತೇವಲ್ಲ; ಅವನು ಹೆಣ್ಣಿಗ ಅಂತ. ಹಾಗೆ ಹೆಣ್ಣಿಗರಾದ ಆಚಾರ್ಯರು ಹೆಣ್ಣಾಗಿ ಬರೆದ ಕಾದಂಬರಿಯಿದು. ಹೆಣ್ಣಾಗಿ ಬರೆದ ಸತ್ಯವಿದು! ಪ್ರಾಯಃ ಆಚಾರ್ಯರು ಮಾತ್ರ ಬರೆಯಬಹುದಾದ ಕೃತಿಯಿದೇನೋ! ಅವರ ಚಾಣಕ್ಯ, ದೇವಕಿಯ ಚಿಂತನೆಗಳು, ಮಹಾಪ್ರಸ್ಥಾನ, ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು- ಇವೆಲ್ಲ ಸತ್ಯವನ್ನು ನಿರ್ವಚಿಸುವ ಕಾದಂಬರಿ ರೂಪದ್ದವು.

ಸಾಹಿತ್ಯದಲ್ಲಿ ಈ ಕೃತಿಗಳೆಲ್ಲ ಯಾವುದೇ ರೂಪವನ್ನು ಪಡೆದರೂ ಪಡೆಯದಿದ್ದರೂ ವಾಸ್ತವವನ್ನು ಹೇಳುತ್ತದೆ. ಸುಮ್ಮನೆ ಏನೋ ಬರೆದು ಆಚಾರ್ಯರು ಕಳಚಿಕೊಳ್ಳುವವರಲ್ಲ! ಕಳಚಿಕೊಂಡವರೂ ಅಲ್ಲ! ಮಹಾಮಾತೆ ಕುಂತಿ ಕಣ್ತೆರೆದಾಗ ಅಂದರೆ ಕುಂತಿ ತನ್ನ ಬದುಕನ್ನು ಜೀವನಸಂಧ್ಯೆ ಯಲ್ಲಿ ನಿಂತು ಬಾಳಿ ಬಂದ ಬದುಕಿನ ಹಾದಿಯನ್ನು ಹಿಂತಿರುಗಿ ನೋಡುವುದು. ಎಲ್ಲವನ್ನೂ ಶ್ರೀಕೃಷ್ಣನಲ್ಲಿ ಹೇಳಿಕೊಳ್ಳುವುದು. ಅಪರೋಕ್ಷವಾಗಿ ಇಟ್ಞ್ಛಛಿoo ಮಾಡಿಕೊಳ್ಳುವುದು. ತನ್ನಿಂದಾದ ತಪ್ಪುಗಳನ್ನು, ತನಗರಿವಿಲ್ಲದೇ ಆದ ತಪ್ಪು ಗಳನ್ನು ತೆರೆದ ಮನಸ್ಸಿನಿಂದ ಸಾಕ್ಷಾತ್ಕರಿಸಿಕೊಳ್ಳುವುದು. ತಪ್ಪು ಒಪ್ಪುಗಳನ್ನು ನಿವೇದಿಸುತ್ತ ಸ್ವೀಕರಿಸುವುದು.

ಮಹಾಪ್ರಸ್ಥಾನಕ್ಕೆ ಹೊರಟ ಕುಂತಿ ಶ್ರೀಕೃಷ್ಣನಲ್ಲಿ ಆಡುವ ಈ ಮಾತುಗಳನ್ನು ನೋಡಿ: ನಾನು ನಿಜ ಜೀವನದಲ್ಲೂ ನಡಿಗೆ ತಿಳಿಯದವಳು; ಈ ಅಂತ್ಯಯಾತ್ರೆಯಲ್ಲೂ, ಗತಿ, ಗಮ್ಯ, ಲಯ ಒಂದೂ ತಿಳಿಯದವಳು… ಎಲ್ಲರ ಹಿಂದೆ ನಾನು! ಈ ಯಾತ್ರೆಯಲ್ಲೂ ಪರಾವಲಂಬಿಯಾಗಿಲ್ಲದವಳು ಈ ಪೈಕಿ ನಾನೊಬ್ಬಳೇ ಎಂಬುದೇ ಒಂದು ಹಿಗ್ಗು! ನನಗೀಗ ೮೮-೮೯ ವರ್ಷ ವಯಸ್ಸಾಗಿರಬೇಕು! ಕೃಷ್ಣ, ನನ್ನ ಕಥೆ ಹೇಳಲೇಬೇಕೆಂಬ ಹುಚ್ಚು ನನಗಿಲ್ಲ! ಎಲ್ಲರ ಅಂತರ್ಯಾಮಿ ಆದ ನಿನಗೆ ನಾನು ಹಾಗೊಂದು ಕಥೆ ಹೇಳಲೂ ಬೇಕಿಲ್ಲ.

ಎಲ್ಲರ ಕಥೆ ವ್ಯಥೆ ನಿನಗೆ ಗೊತ್ತೇ ಇದೆಯಲ್ಲ! ಆದರೆ ಹೊರಡುವಾಗ ನನ್ನ ಹೃದಯ ಹಗುರವಾಗಲಿ; ಶರೀರದ ಭಾರವಂತೂ ತಿಂಗಳಿಗೊಮ್ಮೆ ಸಿಕ್ಕ
ಹಣ್ಣುಗಳ ಅಶನದಿಂದ ಎಷ್ಟೋ ಹಗುರವಾಗಿದೆ ಎನಿಸಿ ಹೇಳಿಕೊಳ್ಳುತ್ತಿದ್ದೇನೆ. ಕೃಷ್ಣಾ, ನಿನ್ನ ಬಿಟ್ಟು ಬೇರೇನು ಇದೆ ನನ್ನೀ ಬದುಕಲ್ಲಿ! ನೀನೇ ನಡೆಸಿದವನು ತಾನೆ ಇಲ್ಲಿಯವರೆಗೆ! ಯಾವ ಭಾರವೂ ಇಲ್ಲದೇ ಸಾಯಬೇಕೆಂದು ಹೇಳುತ್ತಾರೆ, ತಿಳಿದವರು. ಆ ದೃಷ್ಟಿಯಲ್ಲಿ ನನ್ನ ಹೃದಯದ ಗೂಢಗಳನ್ನೂ, ಗಾಢನೋವುಗಳನ್ನೂ, ಒತ್ತಡಗಳನ್ನೂ ಗಾಳಿಗೆ ಎರಚುತ್ತಿದ್ದೇನೆ.

ಗಾಳಿಯಲ್ಲೂ ನೀನೇ ಇಲ್ಲವೇ? ಈ ಅನುಭವದ ಕುಸುಮಗಳು ನಿನಗೆ ಅರ್ಚನೆಯಾಗಲಿ. ಒಂದೇ ಬಗೆಯ ಹೂಗಳು ಇವು ಅಲ್ಲ; ಜೀವನದಲ್ಲಿ ನಾನು ಸುಖಪಡಲೇ ಇಲ್ಲ ಎಂದು ಹೇಳುವಷ್ಟು ನಾನು ದುಃಖಪ್ರೇಮಿಯಲ್ಲ! ಅದೂ ಒಂದು ರೋಗ ಎಂದು ನಾನು ಬ! ನಾನೀಗ ಹೃದಯವನ್ನು ಹಗುರ
ಮಾಡಿಕೊಳ್ಳುತ್ತ ಹಿಮಾಲಯದ ಕಾಡುಗಳ ಎತ್ತರಗಳನ್ನು ಸ್ವಲ್ಪ ಸ್ವಲ್ಪ ಏರುತ್ತಿದ್ದೇನೆ. ಓದು ಬರೆಹ ನಾನು ಬಹಳ ಬಲ್ಲವಳಲ್ಲ!

ಕಲಿತದ್ದೇ ಜೀವನದಿಂದಲೇ ಎಂದರೆ ಇದರಲ್ಲಿ ಯಾವ ಹೊಸದೂ ಇಲ್ಲ! ಹಾಗೆ ಕಲಿತದ್ದು ಮುಂದಿನ ಯಾರಿಗಾದರೂ ಪ್ರಯೋಜನವಾದರೆ, ಈ ನಿರ್ಭಾಗ್ಯೆ, ಕುಂತಿ, ಕೊನೆಯುಸಿರ ಬಿಸಿಗಾಳಿಯಲ್ಲಿ ಈ ಅನುಭವ ಕುಸುಮಗಳನ್ನು, ಹಾರಿದಷ್ಟು ಎತ್ತರಕ್ಕೆ ಎರಚಿದ್ದೂ ಒಂದು ಸಾರ್ಥಕ ಎಂದು ಭಾವಿಸುತ್ತೇನೆ. ನನ್ನ ವಂಶದ ಹಿರಿಯ ದ್ವೈಪಾಯನ ವ್ಯಾಸರು ಅದೇನೋ ನನ್ನ ಮಕ್ಕಳ ಕಥೆ ಬರೆಯುತ್ತಾರಂತೆ! ಈ ಕಥೆಯಲ್ಲಿ ನಾನು
ಇದ್ದೇನಾಗಿ ಅದರ ಹೊರಗಿಂದ ಅದನ್ನು ಕಾಣುವ ಅವರ ಅಲೌಕಿಕ ಕಣ್ಣು ನನಗಿಲ್ಲ!

ನನ್ನ ಹೃದಯದೊಳಗಿಂದ ನಾನು ಕಂಡದ್ದನ್ನು ಪ್ರಾಯಃ ನನ್ನಂತೆ ಅವರು ವರ್ಣಿಸಿಯಾರೋ, ಇಲ್ಲವೋ, ಅವರ ದೃಷ್ಟಿಗೆ ಅದು ಪ್ರಸ್ತುತ ವೋ, ಅಲ್ಲವೋ, ನಾನು ಹೇಗೆ ಹೇಳಲಿ? ಆದುದರಿಂದ ಕವಯಿತ್ರಿಯೋ, ಕತೆಗಾರಳೋ, ಕಲಾವಿದೆಯೋ ಅಲ್ಲದ ಈ ಅತ್ತೆಯ ನಿವೇದನೆಗೆ ನೀನು ಬೇಸರಪಡಬೇಡ! ಹೀಗೆ ಹೇಳುತ್ತಾ ತನ್ನ ಕಥೆಯನ್ನು ಎಲ್ಲಿಂದ ಆರಂಭಿಸಲಿ ಎಂದು ಕೃಷ್ಣನನ್ನು ಕೇಳುತ್ತ ತನಗೆ ಅರುಳು-ಮರುಳು ಆಗಲಿಲ್ಲ ಎನ್ನುತ್ತಾಳೆ. ತನ್ನ ಹುಟ್ಟಿನಿಂದ ಕಥೆಯನ್ನು ಹೇಳಲು ತೊಡಗುತ್ತಾಳೆ.

ಹೀಗೆ ಕುಂತಿ ಕಥೆಯನ್ನು ಸಾದ್ಯಂತವಾಗಿ ನಿರೂಪಣೆ ಮಾಡುವ ಆಚಾರ್ಯರು ನಿನ್ನತ್ತಲೇ ಹೊರಟೆ ಕೃಷ್ಣ, ದುರ್ವಿಧಿ, ಕನ್ಯೆ ಇರುತ್ತಾ ತಾಯಿಯಾದೆ, ಗಂಗೆ! ತಾಯಿ! ಮಗುವನ್ನು ರಕ್ಷಿಸು, ಅಯ್ಯೋ! ನ್ಯಾಯ ಕಾಣದ ಕರ್ಣ!!, ವಿವಾಹದ ಆಮೇಲಿನ ನೆನಪುಗಳು, ನೆನಪುಗಳು-೨, ದೇವಸಮ ಪುತ್ರರಾಗಿಯೂ ಇನ್ನೊಂದು ಆಪತ್ತು, ಹಳೆಯ ಗೂಡಿ ನಲ್ಲಿ ಹೊಸ ಹಕ್ಕಿಗಳು, ಅಡವಿಯಲ್ಲಿ ಎಡವಿದರೂ ಕೈ ಹಿಡಿದ ನಾರಾಯಣ, ತಾಯಿಯಾಗಿ ನಾನೇ ತಂದ ಮಕ್ಕಳ ಆಪತ್ತು!, ಈ ಸಲ ಇಂದ್ರಪ್ರಸ್ಥಕ್ಕೆ, ರಾಜಸೂಯ ತಂದ ಅನರ್ಥ, ಜೂಜು ತಡೆಯದ ಜನಾರ್ದನ, ಗಂಡಂದಿರೇ ಕೈ ಬಿಟ್ಟ ಹೆಂಡತಿ! ದ್ರೌಪದಿಯ ಪಾಡು!! ಎಂಥ ಮಕ್ಕಳು?, ಓ! ಆಪದ್ಬಾಂಧವ!, ನನ್ನ ಬೇಸರ ಯಾರಿಗೆ ಹೇಳಲಿ?, ವ್ಯಾಸ-ವಿದುರರ ನೆನಪುಗಳು, ಅಗೋ ಅಗ್ನಿನಾರಾಯಣನೇ ಶರಣು- ಎಂಬೀ ಹೆಜ್ಜೆಗಳ ಮೂಲಕ ಕುಂತಿಯ ಮೂಲಕವೇ ಕುಂತಿಯ ಕಥೆ ಯನ್ನು ಆತ್ಮಾವಲೋಕನ ರೀತ್ಯ ಹೇಳುತ್ತಾರೆ. ಮಹಾಕಾವ್ಯದ ಪಾತ್ರವೊಂದು ತನ್ನ ಬದುಕನ್ನು ಸಿಂಹಾವಲೋಕನ ಕ್ರಮದಿ ಹೀಗೆ ಅವಲೋಕಿಸಿ ತಪ್ಪು ಒಪ್ಪುಗಳನ್ನು ತನ್ನ ಆತ್ಮಸಾಕ್ಷಿಯ
ಮೂಲಕವೇ ಹೇಳಿಕೊಳ್ಳುವುದು ಅಥವಾ ಹೇಳಿಸುವುದನ್ನೇ ಮುನ್ನುಡಿಯಲ್ಲಿ ಎನ್ಕೆಯವರು ಹೀಗೆ ಅಂದಿರಬೇಕು: ಇದೊಂದು ಆತ್ಮಕಥಾರೂಪೀ ಕಾದಂಬರಿ. ಅಂತಿಂತಹ ಕಾದಂಬರಿಯಲ್ಲ. ನೀವೂ ಒಮ್ಮೆ ಓದಿ ನೋಡಿ.

 
Read E-Paper click here