Saturday, 7th September 2024

ದುಡ್ಡಿದ್ದರೆ ಪಾಸ್ ಪೋರ್ಟ್, ಪೌರತ್ವ ಕೂಡ ಮಾರಾಟಕ್ಕಿದೆ

ಶಿಶಿರ ಕಾಲ

shishirh@gmail.com

ಈ ಜಗತ್ತಿನಲ್ಲಿ ಏನೇನೆಲ್ಲ ಮಾರಾಟಕ್ಕಿರಬಹುದು ಎಂದು ಆಗೀಗ ಆಶ್ಚರ್ಯವಾಗುತ್ತದೆ. ಜನರು ಏನನ್ನು ಮಾರಲು ಮುಂದಾದರೂ ಅದಕ್ಕೊಂದಿಷ್ಟು ಗ್ರಾಹಕರಿರುತ್ತಾರಲ್ಲ ಎಂದು ಅಚ್ಚರಿಯಾಗುತ್ತದೆ. ಕೆಲ ಸಮಯದ ಹಿಂದೆ ನ್ಯೂಯೋರ್ಕ್ ಟೈಮ್ಸ್ ನಲ್ಲಿ ಒಂದು ಮಜಕೂರಿನ ಸುದ್ದಿ ಪ್ರಕಟವಾಗಿತ್ತು.

ಒಬ್ಬಳು Ebay – ಆನ್ಲೈನ್ ಮಾರಾಟ ಮಳಿಗೆಯಲ್ಲಿ ತನ್ನ ಅಜ್ಜಿಯನ್ನೇ ಮಾರಾಟಕ್ಕೆ ಇಟ್ಟುಬಿಟ್ಟಿದ್ದಳು. ನನ್ನ ಅಜ್ಜಿ ಕೆಟ್ಟ ಕಿರಿ ಕಿರಿ ಮಾಡುತ್ತಾಳೆ.
ಅಜ್ಜ ತೀರಿಕೊಂಡ ಮೇಲೆ ಅವಳ ರಗಳೆ ಹೆಚ್ಚಾಗಿದೆ. ಅವಳಿಗೆ ಗಂಡಿನ ಆಸರೆ ಬೇಕಿದೆ. ಅಜ್ಜಿ ಮಾರಾಟಕ್ಕಿದೆ. ಅವಳು ಹಾಕಿದ್ದು ತಮಾಷೆಗಿರಬೇಕು. Ebayಯಲ್ಲಿ ಯಾರು ಬೇಕಾದರೂ ತಮ್ಮಲ್ಲಿರುವ ವಸ್ತುಗಳನ್ನು ಹರಾಜಿಗೆ ಹಾಕಬಹುದು. ಹರಾಜಿನ ಕೆಳ ಮಿತಿ ಹಾಕಿ, ಅನಂತರದಲ್ಲಿ ಯಾರು ಹೆಚ್ಚಿಗೆ ಬಿಡ್ ಕೂಗುತ್ತಾರೋ ಅವರಿಗೆ ಆ ವಸ್ತು ಮಾರಾಟವಾಗಿ ಹೋಗುತ್ತದೆ. ಇಲ್ಲಿಯ ಒಂದು ನಿಯಮವೆಂದರೆ, ಹರಾಜು ಕೂಗಿದವನು ಖರೀದಿಸು ತ್ತೇನೆ ಎಂದರೆ ಆ ವಸ್ತುವನ್ನು ಮಾರಲೇಬೇಕು. ಅವಳ ಅಜ್ಜಿಯನ್ನು ಹರಾಜಿನಲ್ಲಿ ಗೆದ್ದವನು ಕೋರ್ಟಿನಲ್ಲಿ ನನಗೆ ಅಜ್ಜಿ ಕೊಡಿಸಿ ಎಂದು ಕೇಸ್ ಹಾಕಿದ.

ಅವನಿಗೆ ಗೊತ್ತಿತ್ತು, ಈ ಕೇಸ್ ನಿಲ್ಲುವುದಿಲ್ಲ ಎಂದು. ಅವನದೂ ತಮಾಷೆಯೇ. ಜಡ್ಜ್ ನಿನ್ನನ್ನು ಉಗಿಯುತ್ತಾರೆ ಎಂದು ಅವನ ವಕೀಲರೇ ಹೇಳಿದರೂ ಆತ ಕೇಳಲಿಲ್ಲ. ಕೇಸ್ ನಿಲ್ಲಲಿಲ್ಲ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ ನಗುನಗುತ್ತಲೇ ಜಡ್ಜ್ ದಂಡ ವಿಧಿಸಿದರು. ಈ ಇಡೀ ಪೊಂಕು ಪ್ರಹಸನ ಮಾತ್ರ ಒಂದು ತಿಂಗಳು ತಮಾಷೆಯಾಗಿ ಸುದ್ದಿಯಾಯಿತು. ಇದೆಲ್ಲವನ್ನು ಒಂದು ಸರಕಾಗಿ ಮಾರಾಟ ಮಾಡಿ ಹಣ ಮಾಡಿದ್ದು ಮಾತ್ರ ಮಾಧ್ಯಮಗಳು!
ಅದೋ, ತಮಾಷೆ ಎಂದಾಯಿತು. ಹಿಂದಿನ ವರ್ಷ ವೈಟಾಲಿಟಿ ಏರ್ ಎಂಬ ಕಂಪನಿ ಕೆನಡಾದ ಗುಡ್ಡಗಾಡಿನ ಶುದ್ಧ ಆಮ್ಲಜನಕವನ್ನು ಚೀನಾದ ಆನ್ಲೈನ್ ಮಳಿಗೆ Taobao ದಲ್ಲಿ ಮಾರಾಟಕ್ಕಿಟ್ಟಿತ್ತು. ಅದರ ಮೊದಲ ಐದುನೂರು ಬಾಟಲಿಯಷ್ಟು ಆಮ್ಲಜನಕ ಮೂರೇ ದಿನದಲ್ಲಿ ಮಾರಾಟವಾ ಯಿತು.

ಒಂದೊಂದು ಬಾಟಲಿಗೆ ೨೮ ಡಾಲರ್ – ೨.೩ ಸಾವಿರ ರುಪಾಯಿ. ಚೀನಾದಲ್ಲಿ ವಾಯು ಮಾಲಿನ್ಯ ಇತ್ತು, ಆದರೆ ಜನರೇನು ಇದರಿಂದ ಉಸಿರಾಡಬೇಕಾದ ಸ್ಥಿತಿಯಲ್ಲಿರಲಿಲ್ಲ. ಅಸಲಿಗೆ ಜನರು ಇದನ್ನು ಮುಗಿಬಿದ್ದು ಕೊಂಡದ್ದೇಕೆ ಗೊತ್ತೇ? ಇದು ಅನನ್ಯ, ಹಿಂದೆಂದೂ ಮಾರಾಟ ಮಾಡದ ವಸ್ತು, ಇದನ್ನು ತಾನು ಸಂಗ್ರಹಿಸಬೇಕು ಎಂದು. ಕೆನಡಾದ ಗುಡ್ಡದಲ್ಲಿ ಬೀಸಿದ ಶುದ್ಧ ಆಮ್ಲಜನಕ ಚೀನಾದಲ್ಲಿ ಒಂದಿಷ್ಟು ಕಾಲ ಡಿಮ್ಯಾಂಡು, ಸುದ್ದಿ ಎಲ್ಲವೂ ಆಯಿತು.

ಬ್ರಿಟ್ನಿ ಸ್ಪೀಯರ್ ಹೆಸರು ಕೇಳಿರಬಹುದು. ಪಾಪ್ ಸಂಗೀತ ತಾರೆ. ಅವಳಿಗೆ ಪ್ರಪಂಚದಲ್ಲ ಹಿಂಬಾಲಕರಿದ್ದಾರೆ. ಒಮ್ಮೆ ಲಂಡನ್ನಿನ ಸಂಗೀತ ಕಾರ್ಯ ಕ್ರಮದಲ್ಲಿ ವೇದಿಕೆ ಪ್ರವೇಶಿಸುವಾಗ ಅವಳಿಗೆ ಬಾಯಲ್ಲಿದ್ದ ಬಬಲ್ ಗಮ್ ಉಗುಳಲು ಮರೆತು ಹೋಗಿತ್ತು. ಅದನ್ನು ಅಲ್ಲಿಯೇ ವೇದಿಕೆಯ ಆಚೀಚೆ ಉಗಿದಿದ್ದಳು. ಅದನ್ನು ಯಾರೋ ಒಬ್ಬಳು ಎತ್ತಿಟ್ಟು ನಂತರ ಆನ್ಲೈನ್‌ನಲ್ಲಿ ಹರಾಜಿಗಿಟ್ಟಾಗ ಅದು ಮಾರಾಟವಾಯಿತು, ಅದೂ ೧೨ ಲಕ್ಷ ರುಪಾಯಿಗೆ!

ಹೀಗೆ ತಾರೆಯರ ಕೂದಲು, ಉಗುರು, ಹಲ್ಲು, ಅವರು ಬಳಸಿದ ಶೂ, ಪೋಷಾಕು ಇತ್ಯಾದಿ ಹರಾಜಾಗುವುದು, ಮಾರಾಟವಾಗುವುದಕ್ಕೆ ವಿಶೇಷ ವ್ಯವಸ್ಥಿತ ಮಳಿಗೆಗಳಿವೆ ಎಂಬುದು ವಾಸ್ತವ. ಇಂತಿರ್ಪ ಜಗತ್ತಿನೊಳ್, ಒಂದಿಷ್ಟು ದೇಶಗಳು ಪಾಸ್ಪೋರ್ಟ್, ಪೌರತ್ವ ಕೂಡ ಮಾರಾಟಕ್ಕಿಟ್ಟಿವೆ ಮತ್ತು ಅದಕ್ಕೆಷ್ಟು ಕ್ರಯ ಎಂಬುದನ್ನು ಸರಕಾರವೇ ನಿರ್ಧರಿಸುತ್ತದೆ ಎಂಬುದೇ ಇಂದಿನ ವಿಷಯ. ಈಗ ಕೆಲವು ತಿಂಗಳ ಹಿಂದೆ, OCCRN – ಜಾಗತಿಕ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ತನಿಖಾ ಸಂಸ್ಥೆ ಕೆಲವು ದೇಶಗಳನ್ನು ಆಳಿದ ಸರ್ವಾಧಿಕಾರಿಗಳು, ಅವರ ಅಧಿಕಾರ ವರ್ಗ ಇವರೆಲ್ಲರ ಒಂದಿಷ್ಟು ಮಾಹಿತಿಯನ್ನು
ಒಂದು ಕಡೆ ಸೇರಿಸಿ ವರದಿ ಮಾಡಿತ್ತು. ಆ ಪಟ್ಟಿಯಲ್ಲಿ ಲಿಬಿಯಾ ದೇಶವನ್ನು ಆಳಿದ್ದ ಸರ್ವಾಧಿಕಾರಿ ಮುಅಮ್ಮರ್ ಗದ್ದಾಫಿ, ಸದ್ದಾಂ ಹುಸೇನ್ ಜೊತೆ ಯಲ್ಲಿದ್ದ ಇರಾಕೀ ಅಣ್ವಸ್ತ್ರ ವಿಜ್ಞಾನಿಗಳು, ಉತ್ತರ ಕೊರಿಯಾ, ಚೀನಾದ ಉನ್ನತ ಹುದ್ದೆಯಲ್ಲಿದ್ದವರದ್ದಾಲ್ಲ ಹೆಸರಿತ್ತು.

ಜೊತೆಯಲ್ಲಿ ವಿವಿಧ ದೇಶಗಳ ಖ್ಯಾತ ಉದ್ಯಮಿಗಳ, ರಾಜಕಾರಣಿಗಳ, ಹಣವಂತ ಇಂಡಸ್ಟ್ರಿಯಲಿಗಳದ್ದಾಲ್ಲ ಹೆಸರಿತ್ತು. ಅವರೆಲ್ಲರ ಬದುಕು, ಅದು ನಡೆದ ರೀತಿ, ಅವರಿಗಿದ್ದ ಶತ್ರುವರ್ಗ, ರಾಜಕೀಯ ವೈಷಮ್ಯ ಇವೆಲ್ಲವೂ ಬೇರೆ ಬೇರೆಯಾಗಿದ್ದವು. ಆದರೆ ಅವರೆಲ್ಲರಲ್ಲಿ ಒಂದು ವಿಷಯ ಸಾಮಾನ್ಯ ವಾಗಿತ್ತು. ಅವರೆಲ್ಲರೂ ಅವರ ದೇಶದ ಪೌರತ್ವದ ಜೊತೆಯಲ್ಲಿ ‘ಡೊಮಿನಿಕಾ’ ಎಂಬ ದೇಶದ ಪೌರತ್ವ, ಪಾಸ್ಪೋರ್ಟ್ ಅನ್ನು ಹೊಂದಿದ್ದರು.
ದಕ್ಷಿಣ ಮತ್ತು ಉತ್ತರ ಅಮೆರಿಕಾದ ನಡುವೆ ಕೆಲವು ಚಿಕ್ಕಪುಟ್ಟ ದ್ವೀಪ ದೇಶಗಳಿವೆ. ಕೆರಬ್ಬಿಯನ್ ದೇಶಗಳು.

ವೆಸ್ಟ್ ಇಂಡೀಸ್ ಎಂಬ ಹೆಸರಿನ ಯಾವುದೇ ದೇಶವಿಲ್ಲ. ಬದಲಿಗೆ ಅದೊಂದು ಹದಿಮೂರು ಚಿಕ್ಕ ದ್ವೀಪ ದೇಶಗಳು, ಮತ್ತು ಕೆಲವು ದೇಶವಾಗದ, ಇನ್ನೊಂದು ದೇಶಕ್ಕೆ ಸೇರದ ದ್ವೀಪಗಳ ಒಕ್ಕೂಟ. ಈ ದ್ವೀಪಗಳೆಲ್ಲ ಒಂದು ಕಾಲದಲ್ಲಿ ಬ್ರಿಟಿಷ್ ಮತ್ತು ಇತರೆ ಯುರೋಪಿಯನ್ ಲೂಟಿಕೋರರ ವಸಾಹತಾಗಿತ್ತು. ಕ್ರಮೇಣ ಭಾರತ ಮೊದಲಾದ ದೇಶಗಳನ್ನು ಸಂಭಾಳಿಸಲಿಕ್ಕಾಗದೆ ಜಾಗ ಖಾಲಿ ಮಾಡಿದ ಯುರೋಪಿಯನ್ನರು, ಈ ದ್ವೀಪಗಳಿಂದಲೂ ಕಾಲು ಕಿತ್ತರು. ಆದರೆ ಹೋಗುವಾಗ ಅತಂತ್ರ ಮಾಡಿ ಹೋಗಿಬಿಟ್ಟರು. ಈ ದ್ವೀಪಗಳೆಂದರೆ ನಮ್ಮ ಕಡೆಯ ತಾಲೂಕಾಗುವಷ್ಟು ಅಥವಾ ಒಂದು ದೊಡ್ಡ ಊರಾಗುವಷ್ಟು ದೊಡ್ಡ ಜಾಗ. ನಾನು ವೆಸ್ಟಿಂಡೀಸ್‌ನ ಬಹಾಮಾಸ್‌ಗೆ ನಾಲ್ಕು ವರ್ಷದ ಹಿಂದೆ ಹೋಗಿದ್ದೆ.

ಈ ತುದಿಯಿಂದ ಆ ತುದಿಗೆ ಕಾರಿನಲ್ಲಿ ಅರ್ಧ ಗಂಟೆ. ಅಷ್ಟಕ್ಕೇ ದೇಶವೇ ಮುಗಿದುಬಿಡುತ್ತದೆ. ಒಂದೆರಡು ಚಿಕ್ಕ ಊರೇ ದೇಶ. ಅಲ್ಲಿ ಇರುವ ಏಕೈಕ ಮುಖ್ಯ ರಸ್ತೆಯಲ್ಲಿ ಹತ್ತು ನಿಮಿಷ ನಡೆದರೆ ದೇಶದ ಪಾರ್ಲಿಮೆಂರ್ಟ್, ಚರ್ಚ್, ಪೋ ಆಫೀಸ್, ಮುನ್ಸಿಪಾಲ್ಟಿ ಇವೆಲ್ಲವೂ ಸಿಕ್ಕಿಬಿಡುತ್ತದೆ. ಅದರಾಚೆ ಮೂರನೆ ಯ ಮನೆ ಅಲ್ಲಿನ ರಾಷ್ಟ್ರಾಧ್ಯಕ್ಷನದು, ನಾಲ್ಕನೆಯದು ಪ್ರಧಾನಿಯದು. ಎಂಟನೇ ಮನೆ ನಮ್ಮ ಟೂರ್ ಗೈಡ್‌ನದು. ಮನೆಗಳಿರುವ ಕೇರಿಯೆಂದರೆ ದನ, ಕುರಿ, ಕೋಳಿಗಳೆಲ್ಲ ಓಡಾಡುತ್ತಿರುತ್ತವೆ. ಯಾವುದೊ ಒಂದು ಬಡ ಹಳ್ಳಿಯಲ್ಲಿ ಸಂಚರಿಸಿದಂತಿದೆ ದೇಶ. ಇದೆಲ್ಲದರಿಂದ ಸ್ವಲ್ಪವೇ ದೂರದಲ್ಲಿ, ಕೂಗಳತೆಯ ಇನ್ನೊಂದು ದ್ವೀಪವಿದೆ. ಬ್ರಿಡ್ಜ್ ನಲ್ಲಿ ಸಮುದ್ರದಲ್ಲಿ ಎರಡು ನಿಮಿಷ ದಾಟಿ ಹೋಗ ಬೇಕು. ಆ ಇಡೀ ದ್ವೀಪವನ್ನು ಒಂದು ಐಷಾರಾಮೀ ಹೋಟೆಲ್ ಆವರಿಸಿಕೊಂಡಿದೆ.

ಅಲ್ಲಿ ಬರುವವರೆಲ್ಲ ಅಮೆರಿಕ, ಯುರೋಪ್ ಇನ್ನಿತರ ದೇಶಗಳ ಆಗರ್ಭ ಶ್ರೀಮಂತರು. ಆ ಲೋಕವೇ ಬೇರೆ, ಈ ಲೋಕವೇ ಬೇರೆ. ಅದು ಪಾತಾಳ –
ಇದು ಸ್ವರ್ಗ. ಆ ಹೋಟೆಲ್ಲಿನಿಂದಲೇ ದೇಶ ತಿನ್ನಬೇಕು. ಈ ಕೆರಬ್ಬಿಯನ್ ದ್ವೀಪ ದೇಶಗಳಲ್ಲಿ ಉತ್ಪಾದನೆ ಎಂಬುದು ಏನೂ ಇಲ್ಲ. ಅವರಿಗೆ ಬೇಕಾಗುವ ಆಹಾರ, ನೀರು ಕೂಡ ಬೇರೆ ದೇಶದಿಂದ ದಾನವಾಗಿ ಬರಬೇಕು. ಹೀಗಿರುವಾಗ ಅವರೇನು ರಫ್ತು ಮಾಡುವುದು? ಪ್ರವಾಸೋಧ್ಯಮ, ಪ್ರವಾಸಿ ಗರು, ರೆಸಾರ್ಟ್‌ಗಳು ಇಡೀ ದೇಶವನ್ನು ಸಲಹಬೇಕು. ಅವರದದ zಂಬ ಮಿಲಿಟರಿ ಎಂಬಿತ್ಯಾದಿ ಇಲ್ಲವೇ ಇಲ್ಲ. ಈ ರೀತಿ ಉತ್ಪಾದನೆಯಿಲ್ಲದ ಚಿಕ್ಕ ದ್ವೀಪ ದೇಶವನ್ನು ನಡೆಸಿಕೊಂಡು ಹೋಗುವುದು ಸುಲಭವಲ್ಲ. ಪರಾವಲಂಬನೆ ಅನಿವಾರ್ಯತೆ.

ಹೀಗಿರುವಾಗ ಈ ಕೆರಬ್ಬಿಯನ್ ಮತ್ತು ಇಂಥಹುದೇ ಅನ್ಯ ಸ್ಥಳಗಳಲ್ಲಿರುವ ಚಿಕ್ಕ ದೇಶಗಳು ತನ್ನ ಅಸ್ತಿತ್ವದ ಅನಿವಾರ್ಯತೆಯಿಂದಾಗಿ ಆದಾಯಕ್ಕೆ ಕೆಲವು ಮಾರ್ಗ ಗಳನ್ನು ಮಾಡಿಕೊಂಡಿವೆ. ಇವೆಲ್ಲ ಶುರುವಾಗಿದ್ದು ಈಗ ಒಂದೆರಡು ದಶಕದಿಂದೀಚೆ. ಮೊದಲು ಆ ದೇಶಗಳ ಬ್ಯಾಂಕುಗಳನ್ನು ಅಂತಾರಾಷ್ಟ್ರೀಯ ಗ್ರಾಹಕರಿಗೆ ತೆರೆದುಕೊಂಡವು. ಅದರ ಉದ್ದೇಶ;ಅನ್ಯ ದೇಶದ ಶ್ರೀಮಂತರು ತಮ್ಮಲ್ಲಿರುವ ಕಳ್ಳ ಹಣವನ್ನು ತೊಡಗಿಸುವ ವ್ಯವಸ್ಥೆ ಕಲ್ಪಿಸುವುದು, ಆ ಮೂಲಕ ಹಣದ ಒಳಹರಿವಿಗೆ ದಾರಿ ಮಾಡಿಕೊಡುವುದು. ಅಲ್ಲಿನ ಸರಕಾರಗಳು ಇದಕ್ಕೆ ಬೇಕಾದ ಕಾನೂನನ್ನು ರಚಿಸಿಕೊಂಡವು.

ಸರಕಾರ ಎಂದರೆ ನಮ್ಮ ತಾಲೂಕಾ ಪಂಚಾಯತಿ ಗಾತ್ರ. ಅವರು ಮಾಡಿಕೊಂಡದ್ದೇ ಕಾನೂನು – ಪ್ರಶ್ನಿಸುವವರು ಯಾರು? ಇದರಿಂದಾಗಿ ಅಲ್ಲಿನ
ಆರ್ಥಿಕ ವ್ಯವಸ್ಥೆ ಬಹು ಬೇಗ ಸುಧಾರಿಸಲು ಶುರುವಾಯಿತು. ಹೀಗೆ ಈ ದೇಶಗಳು ಕಳ್ಳ ಹಣ, ಕಳ್ಳ ಕಂಪನಿಗಳ ಸೇಫ್ ಹೆವನ್ – ಭೂ ಸ್ವರ್ಗಗಳಾದವು. ಸೈಪ್ರಸ್, ಡೊಮಿನಿಕಾ, ಜಮೈಕಾ, ಸೈ ಕೀಟ್ಸ್, ನೆವಿಸ್, ಹೈಟಿ, ಬಾರ್ಬಡೋಸ್ ಹೀಗೊಂದು ಮೂವತ್ತು ದೇಶಗಳಿವೆ.

ಇಂತಹ ತೆರಿಗೆ ಮುಕ್ತ ಸ್ವರ್ಗಗಳಲ್ಲಿ ಪ್ರತಿಷ್ಠಿತ ಕಂಪನಿಗಳು ಕೂಡ ಕಾನೂನಾತ್ಮಕವಾಗಿಯೇ ತಮ್ಮ ಬ್ರಾಂಚ್ ಅನ್ನು ತೆರೆದವು. ಬ್ರಾಂಚ್ ಎಂದರೆ ಏನೋ ದೊಡ್ಡ ಆಫೀಸ್ ಅಲ್ಲ, ಅಂದು ಚಿಕ್ಕ ಕೊಣೆಯ ಬಾಡಿಗೆ, ಅದಕ್ಕೊಂದು ಕಂಪನಿಯ ಹೆಸರು, ಅದರ ಮೇಲೊಂದಿಷ್ಟು ತೆರಿಗೆ ಮುಚ್ಚಿಡಲು ಕಂಪನಿಗಳ ಪದರುಗಳು. ಇದೆಲ್ಲ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಮಾಡಿಕೊಳ್ಳುವ ವ್ಯವಸ್ಥೆಗಳು.

ಆದರೆ ಇವೆಲ್ಲ ಇಷ್ಟಕ್ಕೇ ನಿಲ್ಲುವುದಿಲ್ಲವಲ್ಲ. ಕ್ರಮೇಣ ಕ್ರಿಮಿನಲ್ಲುಗಳು, ಮೋಸದಿಂದ ಕೊಳ್ಳೆ ಹೊಡೆದವರು, ದೇಶ ಬಿಟ್ಟು ತಲೆ ಮರೆಸಿಕೊಂಡವರು, ಗ್ಯಾಂಗ್‌ಸ್ಟರ್‌ಗಳು, ಹೀಗೆ ಸಮಾಜದ ಕ್ರಿಮಿಗಳು ಕೂಡ ಈ ಮಾರ್ಗವನ್ನು ಹಿಡಿದರು. ದೇಶದ ಆಶ್ರಯ ಪಡೆದವು. ಆಶ್ರಯ ಎಂದರೆ ಇದೊಂದು ವಿಚಿತ್ರ ವ್ಯವಸ್ಥೆ. ಈ ದೇಶಗಳೆಲ್ಲ ಮೊದಲು ಯುರೋಪಿಯನ್ನರ ವಸಾಹತಾಗಿದ್ದವು ಎಂದೆನಲ್ಲ. ಅವರು ಬಿಟ್ಟು ಹೋಗುವಾಗ ಈ ದೇಶದ ನಾಗರೀಕರಿಗೆ ವೀಸಾ ಇಲ್ಲದೆ ತಮ್ಮ ಯುರೋಪ್ ದೇಶದಲ್ಲಿ ಬಂದಿರಬಹುದು ಎಂಬ ಸವಲತ್ತು ಕೊಟ್ಟಿದ್ದವು. ಇದರರ್ಥ ಆ ದೇಶದ ನಾಗರೀಕರಾದರೆ ಅವರು ವೀಸಾ ಇಲ್ಲದೆ ಎಷ್ಟು ಕಾಲ ಬೇಕಾದರೂ ಯೂರೋಪಿನ ಮತ್ತು ಕೆಲವು ಮಾಜಿ ವಸಾಹತು ದೇಶಗಳಲ್ಲಿ ನೆಲೆಸಬಹುದು ಎಂಬ ಒಡಂಬಡಿಕೆ. ಅದು ಇಂದಿಗೂ ಜೀವಂತವಿದೆ.

ಈ ದೇಶಗಳು ಇದನ್ನು ಹೊಸತೊಂದು ಸ್ಕೀಮ್ ಅನ್ನು ಜಾರಿಗೆ ತಂದವು. ಅದರ ಪ್ರಕಾರ ಇಂತಿಷ್ಟು ಹಣ ಆ ದೇಶದ ವ್ಯವಹಾರದಲ್ಲಿ ತೊಡಗಿಸಿದರೆ, ಯಾರೇ ಇರಬಹುದು ಅವರಿಗೆ ತಮ್ಮ ದೇಶದ ಪೌರತ್ವ ಕೊಡಲಾಗುತ್ತದೆ ಎಂದು. ಇದನ್ನು ಈ ವಂಚಕರು, ಕ್ರಿಮಿನಲ್‌ಗಳು ಬಳಸಿಕೊಳ್ಳಲು ಶುರು ಮಾಡಿದರು. ಒಂದಿಷ್ಟು ಹಣವನ್ನು ತೊಡಗಿಸಿ ಆ ದೇಶದ ಪೌರತ್ವ, ಪಾಸ್ಪೋರ್ಟ್ ಪಡೆದುಕೊಳ್ಳುವುದು. ಇವರ್ಯಾರು ಈ ಕೆರಬ್ಬಿಯನ್ ದೇಶದಲ್ಲಿ ಆಶ್ರಯ ಪಡೆದಿರುವುದಿಲ್ಲ. ಬದಲಿಗೆ, ಅಲ್ಲಿನ ನಾಗರೀಕರಾಗಿ ಯೂರೋಪಿನ ದೇಶಗಳಲ್ಲಿ ಅಡಗಿರುತ್ತಾರೆ. ಈ ದೇಶದ ಪಾಸ್ಪೋರ್ಟ್ ಯುರೋಪ್ ದೇಶಗಳಲ್ಲಿ, ಅಮೆರಿಕದಲ್ಲಿ ವಾಸಿಸಲಿಕ್ಕೆ ಅನುವು ಮಾಡಿಕೊಡುತ್ತದೆ. ಅವರು ಅಲ್ಲಿನ ನಾಗರೀಕರಂತೆ ಉಳಿದು ಕೊಳ್ಳಬಹುದು.

ಈ ರೀತಿಯ ಎರಡನೇ ನಾಗರೀಕತೆ ದೇಶದಲ್ಲಿಯೇ ಇದ್ದು, ಅಲ್ಲಿ ಲೂಟಿ, ಮೋಸ, ಅರಾಜಕೀಯ ಮಾಡಿಕೊಂಡವರಿಗೆಲ್ಲ ಬದಲಿ ಆಯ್ಕೆ, ಎಸ್ಕೇಪ್ ರೂಟ್. ಈ ಪೌರತ್ವಕ್ಕೆಲ್ಲ ಜಾಸ್ತಿಯೇನು ಖರ್ಚಿಲ್ಲ. ಭವಾನಿ ರೇವಣ್ಣನವರ ಕಾರಿನಷ್ಟು ಹಣ ವನ್ನು ಈ ದೇಶದಲ್ಲಿ ತೊಡಗಿಸಿಬಿಟ್ಟರೆ ಆ ದೇಶದ
ಪಾಸ್ಪೋರ್ಟ್ ಪಡೆಯಬಹುದು. ಅದಕ್ಕೆ ಆ ದೇಶಕ್ಕೆ ಒಂದೇ ಒಂದು ಬರಿ ಹೋಗಬೇಕೆಂದಿಲ್ಲ. ಹಣ ವರ್ಗಾಯಿಸಿದರೆ ನಾವಿರುವ ಊರಿಗೇ ಆ ದೇಶದ ಪೌರತ್ವದ ಪಾಸ್ಪೋರ್ಟ್ ಬಂದು ಬಿಡುತ್ತದೆ. ಇದು ಆ ವ್ಯಕ್ತಿ ಇರುವ ದೇಶದ ಸರಕಾರದ ಗಮನಕ್ಕೂ ಬರದೇ ಇರುವಂತೆ ಮಾಡಲಿಕ್ಕೆ ಸಾಧ್ಯ. ತಾನು
ಮಾಡುವ ಅವ್ಯವಹಾರ ಬಹಿರಂಗವಾದರೆ ತಕ್ಷಣ ಈ ಪಾಸ್ಪೋರ್ಟ್ ಕೈಗೆತ್ತಿಕೊಂಡರಾಯಿತು. ಆ ಪಾಸ್ಪೋರ್ಟ್ ಬಳಸಿ ದೇಶ ಬಿಟ್ಟು ಹೋದರೆ ಕೆಲವೊಮ್ಮೆ ಗೊತ್ತೇ ಆಗುವುದಿಲ್ಲ.

ಏಕೆಂದರೆ ಅಲ್ಲಿನ ಕಂಪ್ಯೂಟರಿನಲ್ಲಿ ಯಾರೋ ಒಬ್ಬ  ವಿದೇಶಿ ವ್ಯಕ್ತಿ ಭಾರತ ತೊರೆದು ಹೋಗಿzನೆ ಎಂದಷ್ಟೇ ಇರುತ್ತದೆ. ಇಷ್ಟೆ ಮಾಡಿದವರು ತಮ್ಮ ಹೆಸರನ್ನು ಹೊಸ ದೇಶದಲ್ಲಿ ಬೇರೆಯದಾಗಿ ನಮೂದಿಸದೇ ಇರುತ್ತಾರೆಯೇ? ಇದು ಬಡ ದೇಶಗಳ ಕಥೆಯಾದರೆ ಶ್ರೀಮಂತ ದೇಶ ಗಳಲ್ಲಿಯೂ ಇಂತಹ ಮಾರ್ಗಗಳು ಇವೆ. ಅಲ್ಲಿನ ವ್ಯವಸ್ಥೆಯೂ ಪೌರತ್ವವನ್ನು ಪರೋಕ್ಷವಾಗಿ ಮಾರಾಟಮಾಡು ವುದು ಇದೆ. ಉದಾಹರಣೆಗೆ ಅಮೆರಿಕ ದೇಶ ಉಆ೫ ಎಂಬ
ವೀಸಾವನ್ನು ಹಣ ತೊಡಗಿಸುವವರಿಗಾಗಿಯೇ ನೀಡುತ್ತದೆ.

೮೦ ಸಾವಿರ ಡಾಲರ್ (೬೬ಲಕ್ಷ ರೂಪಾಯಿ) ಹಣವನ್ನು ತೊಡಗಿಸಿ ಅಲ್ಲಿನ ಹತ್ತು ಜನರ ಉದ್ಯೋಗಕ್ಕೆ ಕಾರಣವಾದರೆ ತಕ್ಷಣ ಅಮೆರಿಕದ ಶಾಶ್ವತ ವೀಸಾ ಕೊಡುತ್ತದೆ. ಅಲ್ಲದೆ ಐದೇ ವರ್ಷದಲ್ಲಿ ಅಮೆರಿಕನ್ ಪೌರತ್ವ ಪಡೆಯಬಹುದು. ಯುಕೆ, ಯುರೋಪಿಯನ್ ಒಕ್ಕೂಟದ ದೇಶಗಳು, ಸ್ವಿಟ್ಜರ್ಲ್ಯಾಂಡ್
ಇವೆಲ್ಲ ದೇಶಗಳು ಹೇಗೆ ತೆರಿಗೆಗಳ್ಳರ ಸ್ವರ್ಗವೋ ಹಾಗೆಯೇ ಅಂತಾರಾಷ್ಟ್ರೀಯ ಅಪರಾಽಗಳ ಆಶ್ರಯಸ್ವರ್ಗವಾಗಿರುವುದು ಹೀಗೆ.

ಅಮೆರಿಕ, ಕೆನಡಾ ಮೊದಲಾದ ದೇಶಗಳು ದ್ವಿಪೌರತ್ವವನ್ನು ಮಾನ್ಯ ಮಾಡುತ್ತವೆ. ಇದರರ್ಥ ಅಮೇರಿಕನ್ ಪ್ರಜೆ ಇನ್ನೊಂದು ದೇಶದ ಪೌರತ್ವ ಪಡೆದ ನಂತರವೂ ಅಮೇರಿಕನ್ ಪೌರತ್ವ ಮತ್ತು ಪಾಸ್ಪೋರ್ಟ್ ಅನ್ನು ಮುಂದೆಯೂ ಹೊಂದಿರ ಬಹುದು. ಹೊಸ ದೇಶದ ಪೌರತ್ವ ಬಂದಾಕ್ಷಣ ಇರುವ ಪೌರತ್ವ ಬಿಡಬೇಕಿಲ್ಲ. ಆದರೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹೀಗಿಲ್ಲ. ಭಾರತೀಯ ಇನ್ನೊಂದು ದೇಶದ ಪೌರತ್ವ ಪಡೆದರೆ ಭಾರತದ ಪೌರತ್ವವನ್ನು ಬಿಟ್ಟು ಕೊಡಬೇಕು. ಇಲ್ಲದಿದ್ದರೆ ಅದು ಅಪರಾಧ. ಪಾಸ್ಪೋರ್ಟ್ ಯಾವತ್ತೂ ಆಯಾ ದೇಶದ ಸ್ವತ್ತು. ಅದು ವೈಯಕ್ತಿಕವಲ್ಲ. ಹಾಗಾಗಿ ಭಾರತದ ಪಾಸ್ಪೋರ್ಟ್ ಮರಳಿಸಬೇಕಾಗುತ್ತದೆ. ಇದು ಕಾನೂನು. ಆದರೆ ಈ ಕೆಲವು ದೇಶಗಳು ಹೇಗೆಂದರೆ ಅವರು ಪೌರತ್ವ ಕೊಟ್ಟರೆ ಅದನ್ನು
ಎಲ್ಲಿಯೂ ಬಹಿರಂಗ ಮಾಡುವುದಿಲ್ಲ.

ಹೀಗಾಗಿ ಈ ರೀತಿ ದ್ವಿಪೌರತ್ವ ಹೊಂದಿದ್ದರೂ ಮಾತೃ ದೇಶಕ್ಕೆ ತಿಳಿಸದಂತೆ ಸಂಭಾಳಿಸಲು ಸಾಧ್ಯವಿದೆ. ಒಟ್ಟಾರೆ ಪೌರತ್ವ, ಪಾಸ್ಪೋರ್ಟ್ ಸುಮಾರು ಮೂವತ್ತರಿಂದ ನಲವತ್ತು ದೇಶಗಳಲ್ಲಿ ಸಧ್ಯ ಮಾರಾಟಕ್ಕಿದೆ. ಕೆಲವೊಂದು ದೇಶಗಳಲ್ಲಿ ನೇರ ಹೂಡಿಕೆಯ ಕೆಳ ಮಿತಿಯಿದೆ. ಇನ್ನು ಕೆಲವು ಕಡೆ ನೀವು ಅಲ್ಲಿನ ಇಂತಿಷ್ಟು ಹಣದ ಸರಕಾರೀ ಬಾಂಡ್ ಖರೀದಿಸಿದರೆ ಸಾಕು. ಅದನ್ನು ನಾಲ್ಕಾರು ವರ್ಷ ಇಟ್ಟುಕೊಂಡು, ಪೌರತ್ವ ಪಡೆದ ನಂತರ ಹಿಂದಿರುಗಿ ಸಿದರೆ ಖರ್ಚಿಲ್ಲದೆ ಪೌರತ್ವ ಪಡಯಲಿಕ್ಕೆ ಕೂಡ ಮಾರ್ಗವಿದೆ. ಪೌರತ್ವವನ್ನು ಯಾವುದೇ ದೇಶ ಒಮ್ಮೆ ಕೊಟ್ಟರೆ ಹಿಂದೆ ಪಡೆಯಲಿಕ್ಕಾಗುವುದಿಲ್ಲ.

ಪಾಸ್ಪೋರ್ಟ್ ರದ್ದು ಮಾಡ ಬಹುದು, ಅಮಾನ್ಯಗೊಳಿಸಬಹುದು. ಆದರೆ ದೇಶ ದ್ರೋಹಿಯೇ ಆಗಿರಲಿ, ಅವನ ಪೌರತ್ವ ಹಿಂಪಡೆಯಲು ಆಯಾ ಸರಕಾರಕ್ಕೆ ಸಾಧ್ಯವಿರುವುದಿಲ್ಲ. ಹುಟ್ಟಿನಿಂದ ಪಡೆಯುವ ಪೌರತ್ವವನ್ನು ಬಿಟ್ಟು ಬೇರೆಯದನ್ನು ಪಡೆಯುವುದು ವ್ಯಕ್ತಿಯ ಆಯ್ಕೆ. ಇದಕ್ಕೆ ಆ ಪೌರತ್ವ ಕೊಡುವ ಸರಕಾರ ಮಾಡಿಕೊಂಡ ಕಾನೂನೇ ಅಂತಿಮ. ಹೀಗಾಗಿ ಭಾರತದಿಂದ ಓಡಿ ಹೋದವನು ಇನ್ನೊಂದು ದೇಶದ ಪೌರತ್ವ ಪಡೆದು ಕೊಂಡು ಕೂತು ಬಿಟ್ಟರೆ ಆ ವ್ಯಕ್ತಿ ಆ ದೇಶದವನು, ನಮ್ಮ ದೇಶಕ್ಕೆ ವಿದೇಶಿಗ. ಅವನಿಗೆ ಆ ದೇಶದ ರಾಜತಾಂತ್ರಿಕ ಹಿನ್ನೆಲೆ, ಬೆನ್ನಿಗೆ ನಿಂತಿರುತ್ತದೆ. ಹಾಗಾಗಿಯೇ ಕೆಲವೊಮ್ಮೆ ದೇಶ ಬಿಟ್ಟು ಹೋದವರನ್ನು ಕರೆಸಿಕೊಳ್ಳುವುದು ಕಾನೂನಿಗೂ ಸಾಧ್ಯವಾಗುವುದಿಲ್ಲ. ಹೆಣಗಾಡಬೇಕಾಗುತ್ತದೆ.

ಅಪರಾಧಿ ಸ್ನೇಹಿತದೇಶದಲ್ಲಿಯೇ ಅಡಗಿಕೊಂಡರೂ ಆ ವ್ಯಕ್ತಿ ಈಗ ಇನ್ನೊಂದು ದೇಶದ ಪ್ರಜೆ. ಹಾಗಾಗಿ ಕಾನೂನಿನ ಪಟ್ಟುಗಳು ರಾಜತಾಂತ್ರಿಕ ಸಂಬಂಧವನ್ನೂ ಮೀರಿದ ಜಟಿಲತೆಗೆ ಕಾರಣವಾಗುತ್ತದೆ. ಹೆಚ್ಚು ಹಣವಿದ್ದಷ್ಟು ಹೆಚ್ಚಿನ ಜಟಿಲ ವ್ಯವಸ್ಥೆಯನ್ನು ಕಲ್ಪಿಸಿ ಕೊಳ್ಳಲು ಸಾಧ್ಯ. ಎಷ್ಟೋ ಬಾರಿ ಹೀಗೆ ಹಣ ದೋಚಿ, ರೇಪ್ ಮಾಡಿ ಓಡಿ ಹೋದವರೆಲ್ಲ ವಾರ ತಿಂಗಳು ಅಥವಾ ಮುಂಚೆಯೇ ಭಾರತದ ಪ್ರಜೆಯೇ ಆಗಿರುವುದಿಲ್ಲ. ಇಂದು
ತಲೆಮರೆಸಿಕೊಂಡು ವಿದೇಶಕ್ಕೆ ಹಾರುವ ಕ್ರಿಮಿನಲ್ಲುಗಳು ಭಾರತಕ್ಕೆ ಮರಳುತ್ತಿzರೆ ಎಂದರೆ ಸಾಮಾನ್ಯವಾಗಿ ಅದು ಅನಿವಾರ್ಯತೆ ಆಗಿರುವುದಿಲ್ಲ. ಬದಲಿಗೆ ಕಾನೂನು, ಸರಕಾರೀ ನ್ಯಾಯ ವ್ಯವಸ್ಥೆ ಇದೆಲ್ಲವನ್ನು ಮೀರಿ ಗೆಲ್ಲಬ ಎಂಬ ಧೈರ್ಯವಿರುವವರಷ್ಟೇ ದೇಶಕ್ಕೆ ಮರಳುತ್ತಾರೆ. ಹಣ ವಿದ್ದರೆ ಪಾಸ್ಪೋರ್ಟ್, ಪೌರತ್ವ ಮಾರಾಟಕ್ಕಿರುವಾಗ ದೇಶ ಅನಿವಾರ್ಯವಲ್ಲ

Leave a Reply

Your email address will not be published. Required fields are marked *

error: Content is protected !!