ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಂಜಯ್ ಗುಬ್ಬಿ ಮನೆ ನಿರ್ಮಿಸಿದ್ದಾರೆಂಬ ಆರೋಪ ಯಾವುದೇ ಕಾನೂನು ಉಲ್ಲಂಘಿಸಿಲ್ಲ,ಅನುಮತಿ ಪಡೆದೇ ಮನೆ ನಿರ್ಮಾಣವೆಂದ ಗುಬ್ಬಿ ?
ರಾಜ್ಯದಲ್ಲಿರುವ ಅರಣ್ಯ ಸಂರಕ್ಷಣೆ ಸಮಿತಿಯ ಮಾಜಿ ಹಾಗೂ ಆನೆಗಳ ಹಾವಳಿ ತಡೆಗಟ್ಟಲು ರಾಜ್ಯ ಸರಕಾರ ರಚಿಸಿರುವ ಆನೆ ಕಾರಿಡಾರ್ ಸಮಿತಿಯ ಸದಸ್ಯರೊಬ್ಬ ರಿಂದಲೇ ಅಕ್ರಮವಾಗಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮನೆ ನಿರ್ಮಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೌದು, ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಹಾಗೂ ಸದ್ಯ ಆನೆ ಕಾರಿಡಾರ್ ಸಮಿತಿಯ ಸದಸ್ಯರಾಗಿರುವ ಸಂಜಯ್ ಗುಬ್ಬಿ ಅವರು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮನೆ ನಿರ್ಮಾಣಕ್ಕೆ ಮುಂದಾಗಿ ದ್ದಾರೆ ಎಂದು ಪರಿಸರ ವಾದಿಗಳು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿರುವ ಸಂಜಯ್ ಗುಬ್ಬಿ, ‘ಅಗತ್ಯ ವಿರುವ ಎಲ್ಲ ಅನುಮತಿಗಳನ್ನು ಪಡೆದುಕೊಂಡೇ ಮನೆ ನಿರ್ಮಿಸುತ್ತಿದ್ದೇನೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಚಿಕ್ಕ ಎಲಚೆಟ್ಟಿಯ ಕಣಿಯನಪುರ ಆನೆ ಕಾರಿಡಾರ್ ಇರುವ ಭಾಗದಲ್ಲಿ ಯಾವುದೇ ಮನೆ, ಕಟ್ಟಡ, ರೆಸಾರ್ಟ್ಗಳನ್ನು ನಿರ್ಮಿಸುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆಯಿದೆ.
ಯಾವುದೇ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (ಇಎಸ್ ಝೆಡ್) ಶಾಶ್ವತ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ನಿಯಮವಿದೆ. ಆದರೂ, ಸಂಜಯ್ ಗುಬ್ಬಿ ಅವರು ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದಾರೆ ಎನ್ನುವ ಆರೋಪವನ್ನು ಪರಿಸರವಾದಿಗಳು ಮಾಡುತ್ತಿದ್ದಾರೆ.
ನಿರ್ಮಿಸದಂತೆ ನೋಟಿಸ್ ನೀಡಿದರೂ ನಿರ್ಮಾಣ: ವನ್ಯಜೀವಿ ಜೀವಶಾಸಜ್ಞ ಸಂಜಯ್ ಗುಬ್ಬಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಯೆಲ್ಚೆಟ್ಟಿ, ಕುಂದಕೆರೆ ವ್ಯಾಪ್ತಿಯಲ್ಲಿ ತಮ್ಮ ಫಾರ್ಮ್ ಹೌಸ್ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ೨೦೨೨ರ ಜೂ. ೩ರಂದು ಸಂಜಯ್ ಗುಬ್ಬಿ ಅವರ ೪.೧೮ ಎಕರೆ ಆಸ್ತಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸ ದಂತೆ ಸೂಚಿಸಿ ನೋಟಿಸ್ ನೀಡಿತ್ತು. ಬಳಿಕ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು, ಇದೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ನೋಟಿಸ್ ನೀಡಿದ್ದರು.
ಆದರೆ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯರು ಇಲಾಖೆ ನೀಡಿದ ನೋಟಿಸ್ಗಳನ್ನು ನಿರ್ಲಕ್ಷಿಸಿ, ಆನೆ ಕಾರಿಡಾರ್ನಲ್ಲಿ ೩ ಶಾಶ್ವತ ಕಟ್ಟಡ ನಿರ್ಮಾಣ ಮುಂದುವರಿಸಿzರೆ ಎಂದು ಆರೋಪಿ ಅರಣ್ಯ ಇಲಾಖೆ ಮತ್ತು ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಪ್ರಭಾವ ಬಳಸಿ ಒಪ್ಪಿಗೆ: ಸಂಜಯ್ ಗುಬ್ಬಿ ಅವರು ಆನೆ ಕಾರಿಡಾರ್ ಸಮಿತಿಯ ಸದಸ್ಯರು ಮಾತ್ರವಲ್ಲದೆ, ಈ ಹಿಂದೆ ವನ್ಯಜೀವಿ ಸಮಿತಿಯ ಸದಸ್ಯರಾಗಿದ್ದರು. ಆದ್ದರಿಂದ ಅವರು ತಮ್ಮ ಪ್ರಭಾವ ಬಳಸಿ ಕೇವಲ ೨ ದಿನದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಜಾನುವಾರುಗಳಿಗೆ ಕಟ್ಟಡ ನಿರ್ಮಿಸಲು ಅನುಮೋದನೆ ಪಡೆಯುತ್ತಾರೆ. ಆದರೆ ಸ್ಥಳೀಯರಿಗೆ ಇದೇ ಅನುಮತಿ ಪಡೆಯಲು ೧೪ರಿಂದ ೧೬ ತಿಂಗಳು ಬೇಕಿರುತ್ತದೆ. ಆದರೆ ತಮ್ಮ ಪ್ರಭಾವವನ್ನು ಬಳಸಿಕೊಂಡು ಅಕ್ರಮವಾಗಿ ಅನುಮತಿ ಪಡೆದಿದ್ದಾರೆ
ಎಂದು ಆರೋಪಿಸಲಾಗಿದೆ.
ತೆರವಿಗೆ ಪತ್ರ ಬರೆಯಲು ಆಗ್ರಹ: ಆನೆ ಕಾರಿಡಾರ್ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಅಕ್ರಮ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸುವಂತೆ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರಕಾರ ಸೂಚನೆ ನೀಡಬೇಕು ಹಾಗೂ ಸಂಜಯ್ ಗುಬ್ಬಿ ಅವರನ್ನು ಕಾರಿಡಾರ್ ಸಮಿತಿಯಿಂದ ವಜಾಗೊಳಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ವಿರೋಧಿಸುವವರ ವಾದವೇನು?
ವನ್ಯ ರಕ್ಷಕರಿಂದಲೇ ಈ ರೀತಿಯ ಕಾನೂನು ಉಲ್ಲಂಘನೆ ಖಂಡನೀಯ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ೫ ಗುಂಟೆಗೂ ಮೀರಿ ಮನೆ ನಿರ್ಮಾಣ ತಪ್ಪು. ವನ್ಯಜೀವಿ ಸಮಿತಿ ಸದಸ್ಯರಾಗಿದ್ದಾಗಲೇ ಸಂಜಯ್ ಗುಬ್ಬಿ ಅವರಿಂದ ಈ ಅಕ್ರಮ. ಸದ್ಯ ಗುಬ್ಬಿ ಅವರು ಆನೆ ಕಾರಿಡರ್ ಸಮಿತಿಯ ಸದಸ್ಯರು. ಅವರೇ ಈ ರೀತಿ ಮಾಡಿದರೆ, ಬೇರೆಯವರಿಗೆ ಏನು ಹೇಳಲು ಸಾಧ್ಯ? ಕಣಿಯನಪುರ ಕಾರಿಡರ್ ನಲ್ಲಿ ಹೆಚ್ಚುವರಿ ಮನೆ ನಿರ್ಮಿಸಿದಂತೆ ಸೂಚನೆಯಿದ್ದರೂ ನಿರ್ಮಾಣ ಮಾಡಿದ್ದೇಕೆ?
ಸಂಜಯ ಗುಬ್ಬಿ ಸಮರ್ಥನೆ ಏನು?
ಮನೆ ನಿರ್ಮಿಸುವಂತಿಲ್ಲ ಎಂದು ಯಾವ ಕಾನೂನೂ ಹೇಳಿಲ್ಲ. ಅರಣ್ಯ ಸಂರಕ್ಷಣೆಗೆ ಯಾವುದೇ ಸಮಸ್ಯೆಯಾಗದಂತೆ ನಿರ್ಮಾಣ. ಇದಕ್ಕಾಗಿ ಎಲ್ಲ ರೀತಿಯ ಪರವಾನಗಿ ಪಡೆದುಕೊಂಡಿದ್ದೇನೆ. ಕಾನೂನು ಉಲ್ಲಂಘಿಸಿ ನಿರ್ಮಿಸುತ್ತಿದ್ದೇನೆನ್ನುವುದು ಸುಳ್ಳು. ಯಾರಿಗೆ ಈ ಬಗ್ಗೆ ಅನುಮಾನವಿದ್ದರೂ, ದೂರು ನೀಡಲಿ. ಸರಕಾರ ತೀರ್ಮಾನಿಸುತ್ತದೆ.
ವನ್ಯ ಜೀವಿ ಮಂಡಳಿಯ ಸದಸ್ಯರಾಗಿದ್ದ ಹಾಗೂ ಹಾಲಿ ಆನೆ ಕಾರಿಡಾರ್ ಸಮಿತಿಯ ಸದಸ್ಯರಾಗಿರುವ ಸಂಜಯ್ ಗುಬ್ಬಿ ಅವರೇ ಈ ರೀತಿ ಕಾನೂನು ಉಲ್ಲಂಘಿಸಿ ಮನೆ ಕಟ್ಟಿದರೆ ಬೇರೆಯವರಿಗೆ ಏನು ಹೇಳಲು ಆಗುತ್ತದೆ. ಕೂಡಲೇ ಅಕ್ರಮವಾಗಿ ನಿರ್ಮಿಸಿರುವ ಈ ಕಟ್ಟಡವನ್ನು ತೆರವುಗೊಳಿಸಲು ಸರಕಾರ ಆದೇಶ ಹೊರಡಿಸಬೇಕು.
– ಜೋಫೆಸ್ ಹೂವರ್ ಪರಿಸರವಾದಿ
ಚಾಮರಾಜನಗರದ ಚಿಕ್ಕ ಎಲಚೆಟ್ಟಿ ಗ್ರಾಮದಲ್ಲಿರುವ ನಮ್ಮ ಜಮೀನಿನಲ್ಲಿ ನಾನು ಮನೆ ಕಟ್ಟುತ್ತಿದ್ದೇನೆ. ಇದಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದುಕೊಂಡಿದ್ದೇನೆ. ಅರಣ್ಯ ಸಂರಕ್ಷಣಾಧಿಕಾರಿಗಳು ಹಾಕಿರುವ ಎಲ್ಲಾ ಷರತ್ತುಗಳನ್ನು ನಾನು ಪೂರೈಸಿದ್ದೇನೆ. ಆದರೂ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
– ಸಂಜಯ್ ಗುಬ್ಬಿ ಆನೆ ಕಾರಿಡಾರ್ ಸಮಿತಿ ಸದಸ್ಯ