Thursday, 19th September 2024

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ಅನು ಪ್ರಭಾಕರ್ ಅಭಿನಯದ ‘ಹಗ್ಗ’ ಚಿತ್ರ

Kannada New Movie

ಬೆಂಗಳೂರು: ಅನು ಪ್ರಭಾಕರ್ (Anu Prabhakar) ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 25 ವರ್ಷಗಳನ್ನು ಪೂರೈಸಿದ್ದಾರೆ. ಅನು ಪ್ರಭಾಕರ್ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ‘ಹೃದಯ ಹೃದಯ’ 1999ರ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಆ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಅವರು, ಈ 25 ವರ್ಷಗಳಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ಅನು ಪ್ರಭಾಕರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹಗ್ಗ’ ಚಿತ್ರವು (Kannada New Movie) ಸೆಪ್ಟೆಂಬರ್ 20ರಂದು ಬಿಡುಗಡೆಯಾಗುತ್ತಿದೆ.

ಅನು ಪ್ರಭಾಕರ್ ಅಭಿನಯದ ಮೊದಲ ಚಿತ್ರ ಬಿಡುಗಡೆಯಾದ ದಿನವೇ ‘ಹಗ್ಗ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಅನು ಪ್ರಭಾಕರ್ ಅವರನ್ನು ಗೌರವಿಸಿದ್ದಾರೆ. ಕೇಕ್‍ ಕಟ್ ಮಾಡುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಾಚ್ಛ ಅವರ ಸೀಮಂತಶಾಸ್ತ್ರವನ್ನೂ ಚಿತ್ರತಂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ಗಾಯತ್ರಿ ಪ್ರಭಾಕರ್ ಮತ್ತು ರಘು ಮುಖರ್ಜಿ ಸಹ ಹಾಜರಿದ್ದರು.

ನಾನು ಈ ಚಿತ್ರ ಒಪ್ಪಿದ್ದು ನಿರ್ದೇಶಕ ಅವಿನಾಶ್ ಹೇಳಿದ ಕಥೆಗಾಗಿ ಎಂದು ಮಾತನಾಡಿದ ಅನು ಪ್ರಭಾಕರ್, ನನಗೆ ಹಾರರ್ ಚಿತ್ರಗಳೆಂದರೆ ಇಷ್ಟವಿಲ್ಲ. ನಾನು ಹಾರರ್ ಚಿತ್ರಗಳನ್ನು ನೋಡುವುದಿಲ್ಲ. ಆದರೂ ನಾನು ಒಪ್ಪಿದ್ದು ಅವರು ಹೇಳಿದ ಕಥೆಗಾಗಿ. ನನಗೆ ಅವರ ಸ್ಪಷ್ಟತೆ ಇಷ್ಟವಾಯಿತು. ಅವರು ಏನು ಹೇಳಿದ್ದರೊ, ಅದನ್ನು ತೆರೆಯ ಮೇಲೆ ತಂದಿದ್ದಾರೆ. ಮೊದಲ ಚಿತ್ರದಲ್ಲೇ ಇಷ್ಟೊಂದು ಚೆನ್ನಾಗಿ ಕೆಲಸ ಮಾಡಿದ್ದು ನೋಡಿ ಖುಷಿಯಾಯಿತು. ಹಾಗಂತ ಚಿತ್ರೀಕರಣ ಸುಲಭವಾಗಿರಲಿಲ್ಲ. ನನ್ನ ಭಾಗದ ಚಿತ್ರೀಕರಣ ರಾತ್ರಿ 7ಕ್ಕೆ ಶುರುವಾಗಿ ಬೆಳಗ್ಗಿನ ಜಾವಕ್ಕೆ ಮುಗಿಯುತ್ತಿತ್ತು. ಆದರೆ, ನಾನು ಎಲ್ಲ ಹೋದ ಮೇಲೆ ಹೋಗಬೇಕಿತ್ತು. ಏಕೆಂದರೆ, ಮೇಕಪ್‍ ಹಾಕುವುದಕ್ಕೆ, ತೆಗೆಯುವುದಕ್ಕೆ ಎರಡು ತಾಸು ಬೇಕಾಗುತ್ತಿತ್ತು. ನನ್ನ ಜತೆಗೆ ತಾಳ್ಮೆಯಿಂದ ಕಾದಿದ್ದ ನನ್ನ ತಂಡಕ್ಕೆ ಧನ್ಯವಾದ ಹೇಳಬೇಕು ಎಂದರು.

ನಮ್ಮ ಟೀಸರ್ ಬಹಳ ಯಶಸ್ವಿಯಾಯಿತು. ಹಲವು ದಿನಗಳ ಕಾಲ ಟ್ರೆಂಡ್‍ ಆಗಿತ್ತು. ಈ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ. ಅದರಲ್ಲೂ ಅನು ಪ್ರಭಾಕರ್ ಅವರು ದ್ವಿತೀಯಾರ್ಧವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಮತ್ತು ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.

ಇದಕ್ಕೂ ಮೊದಲು ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಒಂದು ಕಿರುಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ಹಗ್ಗವನ್ನು ಆಯುಧವನ್ನಾಗಿ ಬಳಸಿಕೊಳ್ಳಲಾಗಿದೆ. ಒಳ್ಳೆಯ ವಿಷಯಕ್ಕಾಗಿ ಹಗ್ಗ ಹೋರಾಟ ಮಾಡುತ್ತದೆ. ಇದೊಂದು ಹಾರರ್ ಫ್ಯಾಂಟಸಿ ಆ್ಯಕ್ಷನ್‍ ಥ್ರಿಲ್ಲರ್ ಚಿತ್ರ. ಇಲ್ಲಿ ಸಂದೇಶವಿದೆ, ಸಾಕಷ್ಟು ಗ್ರಾಫಿಕ್ಸ್ ಇದೆ. ಒಂದು ಪಾತ್ರಕ್ಕಾಗಿ ಅನು ಪ್ರಭಾಕರ್ ಇದ್ದರೇ ಚೆನ್ನ ಎಂದನಿಸಿತು. ಅವರೂ ಒಪ್ಪಿಕೊಂಡರು. ಆ ನಂತರ ಆ ಪಾತ್ರವನ್ನು ಅವರು ಬಿಟ್ಟರೆ ಯಾರಿಂದಲೂ ಸಾಧ್ಯವಿಲ್ಲ ಎಂದನಿಸಿತು ಎಂದರು ನಿರ್ದೇಶಕ ಅವಿನಾಶ್.

ಈ ಸುದ್ದಿಯನ್ನೂ ಓದಿ | Designer Velvet Gown Fashion: ಸೆಲೆಬ್ರಿಟಿ ಲುಕ್‌‌‌ಗೆ ಸಾಥ್‌ ನೀಡುವ ವೆಲ್ವೆಟ್‌ ಡಿಸೈನರ್‌ ಗೌನ್‌

ಕಾರ್ಯಕಾರಿ ನಿರ್ಮಾಪಕ ದಯಾಳ್ ಪದ್ಮನಾಭನ್‍ ಮಾತನಾಡಿ, ಇದೊಂದು ಮಹಿಳಾ ಪ್ರಧಾನ ಚಿತ್ರ. ರಾಷ್ಟ್ರೀಯ ಸಮಸ್ಯೆಯ ಕುರಿತಾದ ಕಥೆ ಇದೆ. ಈ ಬಗ್ಗೆ ಯಾರೂ ಚಿತ್ರ ಮಾಡಿರಲಿಲ್ಲ. ದ್ವಿತೀಯಾರ್ಧದಲ್ಲಿ VFX ಸಹಕಾರದೊಂದಿಗೆ ಅದನ್ನು ಚೆನ್ನಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ದ್ವಿತೀಯಾರ್ಧ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ನಿರ್ಮಾಪಕರು ಎಲ್ಲೂ ರಾಜಿ ಆಗಿಲ್ಲ. ಇತ್ತೀಚೆಗೆ ಚಿತ್ರದ ಹಿಂದಿ ಡಬ್ಬಿಂಗ್‍ ಹಕ್ಕುಗಳ ಬೇಡಿಕೆ ಬಂದಿತ್ತು. ಆದರೆ, ನಿರ್ಮಾಪಕರು ಮಾರುವುದಕ್ಕೆ ಒಪ್ಪಲಿಲ್ಲ. ಮುಂದೆ ಇನ್ನೂ ಒಳ್ಳೆಯ ಅವಕಾಶಗಳು ಬರಬಹುದು ಎಂದು ಸುಮ್ಮನಾದರು. ಅವರಿಗೆ ಒಳ್ಳೆಯದಾಗಬೇಕು. ನನಗೆ ಅವರ ಶ್ರದ್ಧೆ ಇಷ್ಟವಾಯಿತು. ಚಂದನ್‍ ಫಿಲಂಸ್‍ ಸಂಸ್ಥೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದರು.

ಅನು ಪ್ರಭಾಕರ್ ಅವರನ್ನು ನೋಡಿದರೆ, ಅವರಿಗೆ 25 ವರ್ಷ ಆಗಿದೆ ಎಂದನಿಸುತ್ತದೆಯೇ ಹೊರತು, ಚಿತ್ರರಂಗದಲ್ಲಿ ಅವರು 25 ವರ್ಷಗಳಿಂದ ಇದ್ದಾರೆ ಎಂದನಿಸುವವುದಿಲ್ಲ. ನಮಗೆಲ್ಲ ಸ್ಫೂರ್ತಿ ಅವರು. ಅವರು ನಮ್ಮ ಪಾಲಿಗೆ ‘ಟೈಟಾನಿಕ್‍ ಹೀರೋಯಿನ್‍ʼ. ಅವರ 25ನೇ ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿದ್ದು ಒಂದೊಳ್ಳೆಯ ಅನುಭವ. ನಿರ್ದೇಶಕರಿಗೆ ತಾವೇನು ಮಾಡುತ್ತಿದ್ದೀನಿ ಎಂದು ಚೆನ್ನಾಗಿ ಗೊತ್ತಿತ್ತು. ನಾವು ಕೇಳುವುದಕ್ಕಿಂತ ಮೊದಲೇ ನಿರ್ಮಾಪಕರು ಸಂಭಾವನೆ ಕೊಡುತ್ತಿದ್ದರು. ಇಂಥಾ ನಿರ್ಮಾಪಕರು ಕಡಿಮೆ. ಇಂಥವರನ್ನು ಚಿತ್ರರಂಗ ಉಳಿಸಿಕೊಳ್ಳಬೇಕು ಎಂದರು ನಟಿ ಹರ್ಷಿಕಾ ಪೂಣಚ್ಛ.

ಈ ಸುದ್ದಿಯನ್ನೂ ಓದಿ | Money Tips: ನಿಮ್ಮ CIBIL Score ಕಡಿಮೆ ಇದ್ಯಾ? ಚಿಂತೆ ಬಿಡಿ; ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಗಾಯತ್ರಿ ಪ್ರಭಾಕರ್, ತಬಲಾ ನಾಣಿ, ರಘು ಮುಖರ್ಜಿ ಮುಂತಾದವರು ಮಾತನಾಡಿದರು.

Leave a Reply

Your email address will not be published. Required fields are marked *