Friday, 18th October 2024

ಸಿಜೆಐ ಎನ್.ವಿ.ರಮಣ ಅಧಿಕಾರಾವಧಿ ಇಂದು ಅಂತ್ಯ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ. ಸುಪ್ರೀಂ ಕೋರ್ಟ್‌ನ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿದರು. ಏಪ್ರಿಲ್ 24, 2021 ರಿಂದ ಸಿಜೆಐ ಆಗಿ ಮುಂದುವರಿದ ಅವರು ಒಂದು ವರ್ಷ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿ ದ್ದಾರೆ.

ರಮಣ ಅವರು 13 ವರ್ಷಗಳ ಕಾಲ ಜಂಟಿ ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನಂತರ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 17, 2014 ರಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಾಗಿ ಸೇವೆ ಸಲ್ಲಿಸಿದರು.

ನ್ಯಾಯಮೂರ್ತಿ ಯು.ಯು.ಲಲಿತ್ ಅವರು ನಾಳೆ ಸುಪ್ರೀಂ ಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಯುಯು ಲಲಿತ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಎನ್‌ವಿ ರಮಣ ಅವರು ನಿವೃತ್ತಿಯ ಮೊದಲು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಐದು ಪ್ರಕರಣಗಳ ತೀರ್ಪುಗಳನ್ನು ನೀಡಲಿದ್ದಾರೆ.

‘ಚುನಾವಣಾ ಫ್ರೀಬಿಸ್’, 2007 ರ ಗೋರಖ್‌ಪುರ ಗಲಭೆ ಪ್ರಕರಣ, ಕರ್ನಾಟಕ ಗಣಿಗಾರಿಕೆ, ರಾಜಸ್ಥಾನ ಗಣಿಗಾರಿಕೆ ಗುತ್ತಿಗೆ ಸಮಸ್ಯೆ, ದಿವಾಳಿತನ ಕಾನೂನಿನ ಅಡಿಯಲ್ಲಿ ದಿವಾಳಿ ನಿಬಂಧನೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಪ್ರಕರಣಗಳ ತೀರ್ಪು ಬರಲಿದೆ. ನ್ಯಾಯಮೂರ್ತಿ ವೈ.ಯು.ಲಲಿತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಜತೆ ಪೀಠವನ್ನು ಎನ್.ವಿ.ರಮಣ ಹಂಚಿಕೊಳ್ಳಲಿದ್ದಾರೆ.

ಈ ಪ್ರಕರಣಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನೇರ ಪ್ರಸಾರ ಮಾಡಲಿದೆ.