Friday, 20th September 2024

ಸಿಡಿಮದ್ದುಗಳ ಮಾರಾಟ, ಬಳಕೆ ನಿಷೇಧಕ್ಕೆ ಎನ್.ಜಿ.ಟಿ ನಿರ್ದೇಶನ

ನವದೆಹಲಿ: ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಎಲ್ಲ ವಿಧದ ಪಟಾಕಿ ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಹೇರುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್‌ ನೇತೃತ್ವದ ಪೀಠ ನೀಡಿರುವ ಈ ನಿರ್ದೇಶನದಲ್ಲಿ ಗಾಳಿಯ ಗುಣಮಟ್ಟ ಮಧ್ಯಮಕ್ಕಿಂತ ಕಡಿಮೆ ಇರುವ ನಗರಗಳಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹಸಿರು ಪಟಾಕಿಗಳನ್ನು ಹೊಡೆಯುವಂತಿಲ್ಲ ಎಂದು ನಿಬಂಧನೆಯಲ್ಲಿ ತಿಳಿಸಿದೆ.

ಗಾಳಿಯ ಗುಣಮಟ್ಟ ಮಧ್ಯಮ ಹಂತದಲ್ಲಿರುವ ನಗರ/ಪಟ್ಟಣದಂತಹ ಪ್ರದೇಶಗಳಲ್ಲಿ ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55 ರಿಂದ 12.30ರವರೆಗೆ ಹಸಿರು ಪಟಾಕಿಗಳನ್ನು ಹೊಡೆಯಬಹುದೆಂದು ಎನ್‌ಜಿಟಿ ತಿಳಿಸಿದೆ.

ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಪೀಠ, ನಿಷೇಧಿತ ಪಟಾಕಿಗಳ ಮಾರಾಟವಾಗುತ್ತಿದ್ದರೆ ಅವುಗಳನ್ನು ವಶಪಡಿಸಿ ಕೊಳ್ಳಬೇಕು. ಕಾನೂನು ಉಲ್ಲಂಘಿಸಿದವರಿಗೆ ದಂಡ ಹಾಕಬೇಕು’ಎಂದು ಹೇಳಿದೆ.