ಅಂಬರೀಶ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ಪುತ್ರ ಅಭಿಷೇಕ್ ಜೊತೆ ಯಲ್ಲಿ ಆಗಮಿಸಿದ ಸುಮಲತಾ ಅವರು, ಅಂಬರೀಶ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದ ಬಳಿಕ ವರನಟ ರಾಜ್ಕುಮಾರ್, ನಿಮಾರ್ಪಕಿ ಪಾರ್ವತಮ್ಮ ರಾಜಕುಮಾರ್, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೂ ಸುಮಲತ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ, ಕ್ರೀಡೆ, ವೈದ್ಯಕೀಯ ಕ್ಷೇತ್ರಗಳಿಗೆ ನೆರವು ನೀಡುವುದು ಸೇರಿದಂತೆ ಹಲವು ರಂಗಗಳಲ್ಲಿ ಫೌಂಡೇಷನ್ ಕೆಲಸ ಮಾಡಲಿದೆ ಎಂದು ಹೇಳಿದರು.
ಅಂಬರೀಶ್ ಅವರು ಜೀವಮಾನದಲ್ಲಿ ಸ್ವಾಭಿಮಾನಿಯಾಗಿ ಬದುಕಿದ್ದರು. ಯಾರ ಬಳಿಯೂ ಕೈ ಚಾಚಿರಲಿಲ್ಲ. ನನಗೆ ಈ ರೀತಿಯ ಪ್ರಶಸ್ತಿ ಬೇಕು ಎಂದು ಯಾರ ಬಳಿಯೂ ಕೇಳಿಲ್ಲ. ಅಭಿಮಾನಿಗಳು ಅಂಬರೀಶ್ ಅವರ ಸ್ವಾಭಿಮಾನವನ್ನು ಗೌರವಿಸಿ ಅವರ ಹಾದಿಯಲ್ಲೇ ಮುನ್ನಡೆಯಬೇಕು.
ಅಂಬರೀಶ್ ಅವರಿಗೆ ಸೂಕ್ತ ಗೌರವ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸುವ ಮಾತುಗಳನ್ನಾಡಬಾರದು. ಪುನೀತ್ಗೆ ಕರ್ನಾಟಕ ರತ್ನ ಸಿಕ್ಕರೆ ಅದು ಅಂಬರೀಶ್ಗೆ ಸಿಕ್ಕಂತೆ ಎಂದು ಸುಮಲತಾ ಹೇಳಿದರು.