ಚಿಕ್ಕಬಳ್ಳಾಪುರ: ಗೋವಾ ರಾಜ್ಯದ ಮಡಗಾಂವ್ನ ಗೋಮತಿ ಆಡಿಟೋರಿ ಯಂನಲ್ಲಿ ಇತ್ತೀಚೆಗೆ ಚಿಗುರು ಚಾರಿಟಬಲ್ ಟ್ರಸ್ಟ್ ಬೆಂಗಳೂರು ಹಾಗೂ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಚಿವಾಲಯ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ಇಲಾಖೆ ಸಂಯುಕ್ತಾಾಶ್ರಯದಲ್ಲಿ ‘ಓಂಕಾರ್ ಫೆಸ್ಟಿವಲ್ ಆಫ್ ಡ್ಯಾನ್ಸ್’ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ-2023 ನಡೆಯಿತು.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಕಾಡೆಮಿ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರಿಗೆ, ಸ್ಥಳೀಯ ಹಾಗೂ ಗ್ರಾಮೀಣ ಮಕ್ಕಳ ಭರತನಾಟ್ಯ ಕಲಿಕಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆ ಸ್ಮರಿಸಿ ಗಣ್ಯರ ಸಮ್ಮುಖದಲ್ಲಿ ‘ನವ ನಕ್ಷತ್ರ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂತಾರಾಜ್ಯ ಗೋವಾ ಸಾಂಸ್ಕೃತಿಕ ಮೇಳದಲ್ಲಿ ಭರತನಾಟ್ಯ ಗುರುಗಳಾದ ಪರಿಮಳ ಅರಳುಮಲ್ಲಿಗೆ ಶಿಷ್ಯರಾದ ಅಸ್ಮಿತಾ, ದೀಕ್ಷಿತಾ, ಶ್ರೇಯ, ಚಿರಂತ್, ಪಾವನಿ, ಸುಮಿತಾ, ನಿಶ್ಚಿತಾ, ಅಕ್ಷಯ, ಪೂರ್ವಿಕಾ, ರಶ್ಮಿ, ತನುಶ್ರೀ, ಶ್ರೀಲಕ್ಷ್ಮೀ, ಗುಣಶ್ರೀ, ಲಿಪಿ ಎಸ್.ಗೌಡ, ರೀತು ರೆಡ್ಡಿ, ನಿಹಾರಿಕ ಶ್ರೀ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿದ್ದು, ‘ನವ ನಕ್ಷತ್ರ ಪುರಸ್ಕಾರ’ ಪ್ರಶಸ್ತಿಗೆ ಭಾಜನರಾದರು.
ಸಹಸ್ರಾರು ಮಕ್ಕಳು ಮತ್ತು ನೃತ್ಯಪಟುಗಳಿಗೆ ಚಿಗುರು ಚಾರಿಟಬಲ್ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಸಂತೋಷಿ, ಪ್ರಶಾಂತ್ ನಾಯಕ್ ವೇದಿಕೆ ಕಲ್ಪಿಸುತ್ತಿರುವುದು ಪ್ರಶಂಸನೀಯ ಎಂದು ಗಣ್ಯರು ಶ್ಲಾಘಿಸಿದರು.