Monday, 16th September 2024

ವೈಟ್ ಫೀಲ್ಡ್ ನ ಶ್ರೀ ಸತ್ಯಸಾಯಿ ನರ್ಸಿಂಗ್ ಕಾಲೇಜ್ ನ ನೂತನ ಕಟ್ಟಡ ಉದ್ಘಾಟನೆ

ಬೆಂಗಳೂರು: ವೈಟ್ ಫೀಲ್ಡ್ ನ ಶ್ರೀ ಸತ್ಯಸಾಯಿ ನರ್ಸಿಂಗ್ ಕಾಲೇಜ್ ನ ನೂತನ ಕಟ್ಟಡ ಉದ್ಘಾಟನೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ನೆರವೇರಿಸಿ, ಮಾತನಾಡಿದರು.

ನಾನು ಸಾಯಿ ಬಾಬಾ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಈ ಇನ್ಸ್ಟಿಟ್ಯೂಷನ್ ಗೆ ಬರುತ್ತಿದೆ. ಬಲರಾಮ್ ನಿಚಾರಿ ಹಾಗೂ ಎಸ್.ಎಂ ಕೃಷ್ಣ ಅವರು ನನ್ನನ್ನು ಇಲ್ಲಿಗೆ ಕರೆತರುತ್ತಿದ್ದರು. ಕೃಷ್ಣಾ ಅವರು ತಮ್ಮ ಜನ್ಮದಿನದ ಸಂದರ್ಭದಲ್ಲಿ ಸಾಯಿಬಾಬ ಅವರ ಆಶೀರ್ವಾದ ಪಡೆಯಲು ಪುಟ್ಟಪರ್ತಿಗೆ ಹೋಗಿದ್ದ ಸಾಯಿಬಾಬ ಅವರು ಕೃಷ್ಣ ಅವರಿಗೆ ಒಂದು ಮಾತು ಹೇಳಿದ್ದರು. ನೀನು ಈ ಹುಡುಗನನ್ನು ಬಿಡುವುದಿಲ್ಲ. ಕೊನೆವರೆಗೂ ನಿನ್ನ ಜೊತೆ ಯಲ್ಲಿಟ್ಟುಕೊಳ್ಳುತ್ತೀಯ ಎಂದು ಹೇಳಿದ್ದರು. ಅವರು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ.

ಸಾಯಿಬಾಬ ಅವರು ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಕುಂಬಳಗೋಡಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಾಯಿಬಾಬ ಅವರು ಹೈದರಾಬಾದ್ ಕನ್ನಡ, ಮೈಸೂರು ಕನ್ನಡ, ತೆಲುಗು ಕನ್ನಡವನ್ನು ಸೇರಿಸಿ 40 ನಿಮಿಷಗಳ ಕಾಲ ಮಾತನಾಡಿದರು. ಅವರ ಭಾಷಣದ ಸಂದರ್ಭದಲ್ಲಿ ಭಗವದ್ಗೀತೆಯ 8 ಶ್ಲೋಕಗಳನ್ನು ಹೇಳಿದರು. ಅದು ನಾನು ನನ್ನ ಜೀವನದಲ್ಲಿ ಕೇಳಿದ ಅತ್ಯುತ್ತಮ ಆಧ್ಯಾತ್ಮಿಕ ಭಾಷಣ ವಾಗಿತ್ತು. ನಂತರ ನಾನು ನನ್ನ ಆಪ್ತ ಕಾರ್ಯದರ್ಶಿಗೆ ಹೇಳಿ ಓರ್ವ ಸಂಸ್ಕೃತ ಶಿಕ್ಷಕರನ್ನು ನಿಯೋಜಿಸಿಕೊಂಡೆ. ನಂತರ ಅದು ನನ್ನ ಆಲೋಚನೆ, ಘನತೆ, ವ್ಯಕ್ತಿತ್ವವನ್ನೇ ಬದಲಿಸಿತು.

ಸಾಯಿಬಾಬ ಅವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ಹಣ ಮತ್ತು ರಕ್ತ ಸದಾ ಚಲನೆಯಲ್ಲಿರಬೇಕು. ಹಣ ಒಂದೆಡೆ ಇದ್ದರೆ ಆದಾಯ ತೆರಿಗೆ ದಾಳಿ ಆಗುತ್ತದೆ, ರಕ್ತ ಒಂದೆಡೆ ಇದ್ದರೆ ರೋಗಗಳು ಬರುತ್ತವೆ. ಹೀಗಾಗಿ ಇವು ಚಲನೆಯಲ್ಲಿದ್ದರೆ ವ್ಯಕ್ತಿ ಹಾಗೂ ಸಮಾಜ ಆರೋಗ್ಯವಾಗಿರುತ್ತದೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ಸ್ವಾಮೀಜಿಗಳು ಮಠದ ವತಿಯಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದರು.

ಸಾಯಿಬಾಬ ಅವರು ನಮ್ಮ ಜತೆ ಇಲ್ಲದಿದ್ದರೂ ಅವರ ಆಲೋಚನೆ, ದೂರದೃಷ್ಟಿ, ಧಾರ್ಮಿಕ ಶಕ್ತಿ ನಮ್ಮ ಜತೆ ಇದೆ. ಈ ಕಟ್ಟಡದ ವಿನ್ಯಾಸ ನೋಡಿದ ನಂತರ ಇದೇ ವಿನ್ಯಾಸದಲ್ಲಿ ನಾನು ಇಂಜಿನಿಯರಿಂಗ್ ಕಾಲೇಜು ಕಟ್ಟಿದೆ.

ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದದಂತೆ ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ನೀವು ಮನಶಾಂತಿಗಾಗಿ ಸೇವೆ ಮಾಡುತ್ತಿದ್ದೀರಿ. ಯಶಸ್ವಿ ವ್ಯಕ್ತಿಗಳು ಮುಖದಲ್ಲಿ ನಗು ಹಾಗೂ ಮೌನವನ್ನು ಹೊಂದಿರುತ್ತಾರೆ. ನಗು ಸಮಸ್ಯೆಗಳನ್ನು ಬಗೆಹರಿಸಿದರೆ, ಮೌನ ಸಮಸ್ಯೆಗಳನ್ನು ದೂರವಿಡುತ್ತದೆ.

ನಗು ನಿಮ್ಮ ಅಂದವನ್ನು ಹೆಚ್ಚಿಸಿದರೆ, ಪ್ರಾರ್ಥನೆ ನಿಮ್ಮನ್ನು ಶಕ್ತಿಶಾಲಿಯಾಗಿ ಮಾಡುತ್ತದೆ. ಪ್ರೀತಿ ಜೀವನ ಆನಂದಿಸುವಂತೆ ಮಾಡುತ್ತದೆ ಎಂದು ಸಾಯಿಬಾಬ ಅವರು ಹೇಳಿಕೊಟ್ಟಿದ್ದಾರೆ. ವಿವಿಧ ಜಾತಿ ಹಾಗೂ ಸಮುದಾಯದವರು ಇಲ್ಲಿ ಸೇರಿದ್ದೇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಯಾವುದಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ಅಂತಿಮವಾಗಿ ಮನುಷ್ಯತ್ವ ಹಾಗೂ ಮಾನವೀಯತೆ ಬಹಳ ಮುಖ್ಯ. ಮಾನವನ ಸೇವೆಯೇ ಮಾದವನ ಸೇವೆ.

ಭಕ್ತನಾಗಿ, ಸಾಯಿಬಾಬ ಅವರ ಶಿಷ್ಯನಾಗಿ ನಾನಿಲ್ಲಿಗೆ ಬಂದಿದ್ದೇನೆ. ನನಗೆ ಅಧಿಕಾರ ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ನಾನು ಸದಾ ನಿಮ್ಮ ಜತೆಗಿರುತ್ತೇನೆ. ಯಾವಾಗಬೇಕಾದರೂ ನೀವು ನನ್ನ ಸಹಾಯ ಪಡೆಯಬಹುದು. ಈ ಆಸ್ಪತ್ರೆ ಆರಂಭವಾದಾಗ ರಾಜ್ಯಕ್ಕೆ ದೊಡ್ಡ ಕಿರೀಟದಂತಿತ್ತು. ನಿಮ್ಮ ಉದ್ದೇಶ ಹಾಗೂ ಮೂಲವನ್ನು ಮರೆಯಬೇಡಿ. ಸತ್ಯ ಸಾಯಿಬಾಬ ಅವರ ಚಿಂತನೆ, ಆದರ್ಶವನ್ನು ನಾವು ಮುಂದುವರಿಸಿಕೊಂಡು ಹೋಗೋಣ.

ಶಿಷ್ಟಾಚಾರದಂತೆ ನಾನು ಪ್ರಧಾನಮಂತ್ರಿಗಳನ್ನು ಸ್ವಾಗತಿಸಬೇಕಾಗಿತ್ತು. ಹೀಗಾಗಿ ಈ ಕಾರ್ಯಕ್ರಮಕ್ಕೆ ಬರಲು ತಡವಾಯಿತು. ಗಂಟೆಗಟ್ಟಲೇ ತಾಳ್ಮೆ ಯಿಂದ ನನಗೆ ಕಾಯುತ್ತಿದ್ದ ನಿಮ್ಮೆಲ್ಲರ ಬಳಿ ಕ್ಷಮೆ ಕೇಳುತ್ತೇನೆ.

Leave a Reply

Your email address will not be published. Required fields are marked *