Saturday, 27th July 2024

ಸಂಕಲ್ಪದ ಬದಲು ಆತ್ಮಾವಲೋಕನ

ಹೊಸ ವರ್ಷ ಬಂತೆಂದರೆ ಸಾಕು ಕೆಲವರು ಸಂಪೂರ್ಣ ಜೀವನವೇ ಬದಲಾಯಿಸಿಕೊಂಡು ಬಿಡುವೆ ಎಂಬಂತೆ ಮಾತನಾಡುತ್ತಾರೆ. ಇದು ವಾಸ್ತದಲ್ಲಿ
ಯಾವತ್ತು ಸಾಧ್ಯವಿಲ್ಲ. ಪ್ರತಿ ದಿನದ ನಿಶ್ಚಿತ ದೃಢ ಸಂಕಲ್ಪದ ಕಾರ್ಯ ಮಾತ್ರ ನಮ್ಮ ಜೀವನವನ್ನು ಬದಲಾಯಿಸಲು ಸಾಧ್ಯ.

ಕೇವಲ ಜನವರಿ ಒಂದರಂದು ಮಾಡಿದ ಸಂಕಲ್ಪ ಅದು ಕೆಲವೇ ದಿನಗಳ ಮಟ್ಟಿಗೆ ಮಾತ್ರ ಇರುತ್ತದೆ. ಮುಂದೆ ಅದು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಜನವರಿ ಒಂದರಿಂದ ನಾನು ಪ್ರತಿದಿನ ಎಂಟು ಗಂಟೆಗಳು ಓದುತ್ತೇನೆ ಎಂದು ಸಂಕಲ್ಪ ಮಾಡುವುದು, ವ್ಯಾಪಾರಿ ಹೆಚ್ಚು ಸಂಪಾದನೆ ಮಾಡಿ ಉಳಿತಾಯ ಮಾಡಿ ದೊಡ್ಡ ಶ್ರೀಮಂತನಾಗುತ್ತಾನೆ ಎಂದು ಹವಣಿಸುವುದು, ಈ ಹವ್ಯಾಸ ಬಿಡುತ್ತೇನೆ ಈ ಚಟ ಬಿಡುತ್ತೇನೆ ಎಂದು ಸಂಕಲ್ಪ ಮಾಡುವುದು ಇಂಥವೆಲ್ಲ ಸಾಮಾನ್ಯ. ಹೀಗಾಗಿ ಈ ಹೊಸ ವರ್ಷದಂದು ಯಾವುದೇ ಹೊಸ ಸಂಕಲ್ಪಗಳು ಬೇಡ. ನಾವು ಹಿಂದೆ ಮಾಡಿದ ಸಂಕಲ್ಪಗಳು ಎಷ್ಟು ಸರಿಯಾಗಿ ಪಾಲಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ.

ಬದಲಾಗುತ್ತಿರುವುದು ಕ್ಯಾಲೆಂರ್ಡ ವಿನಃ ಜೀವನವಲ್ಲ ಎಂದು ಅರ್ಥ ಮಾಡಿಕೊಳ್ಳೋಣ. ಕಲ್ಪನೆಯಲ್ಲಿನ ವಿಹಾರಕ್ಕಿಂತ ವಾಸ್ತವದಲ್ಲಿ ಅರಿವೇ ಮುಖ್ಯ. ಮಾಡುವ ಕೆಲಸವನ್ನೇ ಇಚ್ಛಾಪೂರ್ವಕವಾಗಿ ಮಾಡೋಣ ಯಶಸ್ಸು ತಾನಾಗಿಯೇ ಸಿಗುತ್ತದೆ.

-ಶರಣಬಸವ.ಆರ್.ಪತ್ತಾರ, ಯಡ್ರಾಮಿ

ರಂಗಾಯಣದಲ್ಲಿ ನಾಟಕ
ಮೈಸೂರಿನ ರಂಗಾಯಣದ ಭೂಮಿಗೀತದಲ್ಲಿ ನಾನೂ ಹಲವಾರು ನಾಟಕಗಳನ್ನು ನೋಡಿದ್ದೇನೆ, ಮೆಚ್ಚಿದ್ದೇನೆ. ಆದರೆ ಈಗ ಅಲ್ಲಿ, ಆವರಣದಲ್ಲಿ ನಡೆಯುತ್ತಿರುವ ನಾಟಕವನ್ನು ಏಕೋ ಮೆಚ್ಚಿಕೊಳ್ಳಲಾಗುತ್ತಿಲ್ಲ. ನಾನಿಲ್ಲಿ ಎಡ-ಬಲ ಇತ್ಯಾದಿಗಳ ಬಗ್ಗೆ ಮಾತನಾ ಡಲು ಇಚ್ಛಿಸುವುದಿಲ್ಲ. ಬಹುರೂಪಿ ಉತ್ಸವಕ್ಕೆ ಬಲಪಂಥೀಯರನ್ನು ಆಹ್ವಾನಿಸಿದ್ದಾರೆ, ರಂಗಾಯಣವನ್ನು ಮೂಲಭೂತವಾದಿಗಳ, ಬಲಪಂಥೀಯರ ಅಡ್ಡಾ ಮಾಡುತ್ತಿದ್ದಾರೆ ಎಂಬುದು ಅಡ್ಡಂಡ ಕಾರ್ಯಪ್ಪ ಅವರ ಮೇಲಿರುವ ಆರೋಪ.

ನನಗೆ ಬಂದ ಅನುಮಾನವೆಂದರೆ, ಬಲಪಂಥೀಯರ ಮೂಲಭೂತ ವಾದಿಗಳ ಅಡ್ಡ ಮಾಡುತ್ತಿದ್ದಾರೆ ‘ಈಗ’ ಎನ್ನುವುದು ಅವರ ವಾದವಾದರೆ, ಇಷ್ಟು ದಿನ ಅದು ಎಡಪಂಥೀಯರ ಅಡ್ಡಾ ಆಗಿತ್ತು ಎಂಬ ಅರ್ಥ ಬರುತ್ತದೆ ಅಲ್ಲವೇ? ಆಗ, ಅಂದರೆ ಎಡಪಂಥೀಯ ಚಿಂತನೆಗಳನ್ನೇ ರಂಗಾಯಣ ‘ಪ್ರಮೋಟ್’ ಮಾಡುತ್ತಿತ್ತು ಎಂದಾದರೆ, ಆಗ ಯಾವ ಬಲಪಂಥೀಯರೂ, ಸಂಘಟನೆಗಳೂ ಬೀದಿಗಿಳಿದzಗಲೀ, ಆವರಣದಲ್ಲಿ ಅಂಡಾ ವರಣ ಎಬ್ಬಿಸಿದ್ದನ್ನಾಗಲೀ ನೋಡಲೇ ಇಲ್ಲವಲ್ಲ? ಏಕೆ ಅವ ರೆ ಆಗ ಸುಮ್ಮನಿದ್ದರು? ಇವರ ಹಾಗೆ ಅವರೇಕೆ ದಾಂಧಲೆ ಎಬ್ಬಿಸಲಿಲ್ಲ? ಇದು ಅವರ ತಪ್ಪಲ್ಲವೇ? ವೈಯಕ್ತಿಕ ನಂಬಿಕೆ
ಗಳಿಗೆ ಒಂದು ಸಂಸ್ಥೆ ಒಡಂಬಡುತ್ತಿಲ್ಲ ಎಂದರೆ, ಬೀದಿಗಿಳಿದಾದರೂ ಗಲಾಟೆ ಮಾಡಬೇಕಿತ್ತು.

ಅದು ಬಿಟ್ಟು, ಬಲವೋ ಎಡವೋ, ಯಾರೋ ಬಂದು ಏನೋ ಒಂದಷ್ಟು ಹೊಸ ವಿಚಾರಗಳನ್ನು, ನಮಗೆ ತಿಳಿಯದ್ದನ್ನು ಹೇಳುತ್ತಾರೆ, ಕೇಳೋಣ. ನಮ್ಮ ಮೈಸೂರಿನ ರಂಗಾಯಣದ ಗೌರವ- ಪ್ರತಿಷ್ಠೆ ‘ಬಹುರೂಪಿ’ ಉತ್ಸವ, ಅದರ ಮೇಲ್ಯಾಕೆ ಈ ಬೇಡದ ಕೆಸರೆರಚುವುದು, ಎಲ್ಲಿಂದಲೋ ಬಂದು
ಒಳ್ಳೊಳ್ಳೆ ನಾಟಕಗಳನ್ನು ಮಾಡುತ್ತಾರೆ, ಶಾಪಿಂಗ್ ಮಾಡಬಹುದು, ಜೋಳದರೊಟ್ಟಿ, ತೊಡೆದೇವುಗಳಂಥ ತಿಂಡಿಗಳನ್ನು ಸವಿಯಬಹುದು, ಒಂದು ವಾರ ಹಬ್ಬದಂತಿರುತ್ತದೆ ಎಂದು, ಬಾಯಿ ಮುಚ್ಚಿಕೊಂಡಿದ್ದು ಇವರ ತಪ್ಪಿರಬಹುದೇನೋ!

ರಂಗಾಯಣದಲ್ಲಿ ಹೊಸ ಸಕಾರಾತ್ಮಕ ಬೆಳವಣಿಗೆಗಳಾಗಿವೆ, ಇಡೀ ಆವರಣ ಪಾರಿಜಾತದ ಸುಗಂಧದಿಂದ ಘಮಎನ್ನುತ್ತಿರುವುದಾಗಲೀ, ಹೊಸದೊಂದು ವೇದಿಕೆ ನಿರ್ಮಾಣವಾಗಿರುವುದಾಲೀ. ರಂಗಾಯಣದ ಹಿಂದಿನ ಶಕ್ತಿ, ಕನಸುಗಾರ ಕಾರಂತರ ಪ್ರತಿಮೆ ಎಲ್ಲರನ್ನೂ ಸ್ವಾಗತಿಸುತ್ತಿರುವುದಾಗಲೀ ನಗಣ್ಯ. ಈಗ ಮುಖ್ಯ ವಿಷಯ ಬಲಪಂಥೀಯರು ಬರುತ್ತಿ ರುವುದು, ಅವರು ಏನು ಹೇಳುತ್ತಾರೋ ಎಂದು ಕೇಳುವ ತಾಳ್ಮೆ ಯಾರಿಗೂ ಇಲ್ಲ.

ರಂಗಭೂಮಿಗೆ ಏನು ಮಾಡಿದ್ದಾರೆ ಎಂಬುದಷ್ಟೇ ಇವರ ಪ್ರಶ್ನೆ. ಅರ್ಥವಾಗುತ್ತದೆ. ಬಹುರೂಪಿ ಬೇರೆ ಮುಂದೂಡಲ್ಪಟ್ಟಿದೆ, ಸಮಯವಿದೆ, ಗಲಾಟೆ
ಮಾಡುತ್ತಿದ್ದಾರೆ. ಮಾಡಲಿ. ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಪ್ರತಿಪಾದಿಸುವ ದೇಶದವರಲ್ಲವೇ ನಾವು! ನೋಡೊಣ ಎಲ್ಲಿಗೆ ಬಂದು ನಿಲ್ಲುತ್ತದೆ ಈ ಹೊಸ ಪ್ರಹಸನ.

-ನಿವೇದಿತಾ ಧನ್ವ, ಮೈಸೂರು

ಪುಸ್ತಕ ಮಾರಾಟಕ್ಕೆ ಗಮನ ಹರಿಸಲಿ
ಪ್ರತಿ ವರ್ಷ ಸುಮಾರು ಏಳುಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಈ ಸಂಖೆ ಕನ್ನಡಿಗರ ಓದುವ ಅಭಿರುಚಿ ಮತ್ತು ಕನ್ನಡ ಪುಸ್ತಕ ಪ್ರಪಂಚದ
ಶ್ರೀಮಂತಿಕೆಯ ಪ್ರತೀಕ. ಆದರೆ ವಾಸ್ತವ ತೀರ ಭಿನ್ನ.

ಓದುವವರ ಸಂಖೆ ಪ್ರಕಟವಾಗುವ ಪುಸ್ತಕಗಳ ಸಂಖೆಗೆ ಅನುಗುಣವಾಗಿಲ್ಲ. ಪ್ರಕಟವಾದ ಪುಸ್ತಕದ ಮಾಹಿತಿ ನೀಡುವ, ಮಾರುವ ವ್ಯವಸ್ಥೆ ಇಲ್ಲ. ಪಠ್ಯಪುಸ್ತಕ ಪುಸ್ತಕಗಳ ಪರಿಚಯವಿರಲಿ ಹೆಸರೇ ತಿಳಿಯದು. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರುಗಳಲ್ಲಿ ಹೊರತುಪಡಿಸಿ ಇತರೆಡೆ ಹೊಸಬರ ಪುಸ್ತಕಗಳು ಕಾಣಗುವುದಿಲ್ಲ. ಇದರಿಂದ ಪುಸ್ತಕ ಪ್ರೇಮಿಗಳು ನಿರಾಶರಾಗಿ, ಓದು ಅಭ್ಯಾಸ ತಪ್ಪಿ ಧಾರಾವಾಹಿಗಳತ್ತ ಮುಖ ಮಾಡುತ್ತಿದ್ದಾರೆ.
ಇದರತ್ತ ಗಮನ ಹರಿಸಿ ಪರಿಹಾರ ಕಂಡು ಹಿಡಿಯುವಲ್ಲಿ ಸರಕಾರದ ಇಲಾಖೆಗಳು, ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಘಗಳು ನಿರಾಸಕ್ತ ರಾಗಿರುವುದ್ದೊಂದು ಶೋಚನೀಯ.

ಪ್ರಕಟವಾದ ಪುಸ್ತಕಗಳ ಹೆಸರು, ಸಿಗುವ ಸ್ಥಳ ಮತ್ತು ಅದರ ವಿಷಯ ಇವುಗಳನ್ನು ಒಳಗೊಂಡ ಮಾಹಿತಿ ಹೊತ್ತಯ ರೂಪದಲ್ಲಿ ನಿಯತ ಕಾಲಿಕೆ ನಿರಂತರ ಪ್ರಕಟವಾದರೆ ಒಳಿತು. ಗ್ರಂಥಾಲಯ ಇಲಾಖೆಯಲ್ಲಿ ಮಾರಾಟ ಮಳಿಗೆ ಆರಂಭಿಸಿ, ಪುಸ್ತಕ ಭಂಡಾರ ಮತ್ತು ವಾಚನಾಲಯದಲ್ಲಿ ಪುಸ್ತಕಗಳ ಮಾರಾಟ ಏರ್ಪಡಿಸಬೇಕು. ಸಾಹಿತ್ಯ ಪರಿಷತ್ ತನ್ನ ತಾಲೂಕಿನ ಮತ್ತು ಜಿಲ್ಲೆಯ ಶಾಖೆಗಳಲ್ಲಿ ಪುಸ್ತಕ ಮಳಿಗೆ ತೆಗೆಯಬೇಕು.

ಶಾಲಾ ಕಾಲೇಜುಗಳೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕರೂಪದಲ್ಲಿ ಬಹುಮಾನವನ್ನು ಕೊಡುವ ಸಂಪ್ರದಾಯ ಮತ್ತೆ ಅಳವಡಿಸಿಕೊಳ್ಳಬೇಕು. ಕನ್ನಡ ಸಂಘಗಳೂ ಜನರಲ್ಲಿ ಸಾಹಿತ್ಯಿಕೆಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಪುಸ್ತಕ ಮಾರಾಟಕ್ಕೆ ಕೈ ಜೋಡಿಸುವಂತಾಗಲಿ.
ಸತ್ಯಬೋಧ, ಹೊಸಕೆರೆಹಳ್ಳಿ 

error: Content is protected !!