Friday, 25th October 2024

ಕೃಷ್ಣಾವತಾರ ತಾಳಿದ ಧ್ರುವನ್

ಡಾ.ರಾಜ್‌ಕುಮಾರ್ ಕುಟುಂಬದ ಕುಡಿ, ಧ್ರುವನ್, ಭಗವಾನ್ ಶ್ರೀ ಕೃಷ್ಣಪರಮಾತ್ಮನಾಗಿ ಚಂದನವನಕ್ಕೆ ಬರುತ್ತಿದ್ದಾರೆ.

ಚಿತ್ರವನ್ನು ಬಿ.ಎನ್.ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಧ್ರುವನ್ ಮತ್ತು ನಿರ್ದೇಶಕ ಪ್ರಸಾದ್ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ ಸಿನಿಮಾವೊಂದನ್ನು ತೆರೆಗೆ ತರಬೇಕು ಎಂದು ಯೋಚಿಸುವ ಹೊತ್ತಿಗೇ ಅದ್ಭುತವಾದ ಕಥೆಯ ಎಳೆ ಸಿಕ್ಕಿದೆ. ಜತೆಗೆ ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ನಿರ್ಮಾಪಕರೂ ದೊರೆತರಂತೆ. ಈ ಮೂಲಕ ಶುರುವಾದ ಸಿನಿಮಾವೇ ಭಗವಾನ್ ಶ್ರೀ ಕೃಷ್ಣಪರಮಾತ್ಮ.

ಪಾರ್ವತಮ್ಮ ಅವರ ಕಿರಿಯ ಸಹೋದರ ಶ್ರೀನಿವಾಸ ರಾಜು ಪುತ್ರನಾದ ಧ್ರುವನ್, ನಾಯಕನಾಗಬೇಕೆಂಬ ಹಂಬಲದಿಂದ, ನಟನೆ ಸೇರಿದಂತೆ ನಾನಾ ತರಬೇತಿ ಪಡೆದು ಪರಿಪೂರ್ಣರಾದ ನಂತರವೇ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ವರ್ಷದ ಹಿಂದೆಯೇ ಚೆನೈಗೆ ತೆರಳಿದ ಧ್ರುವನ್ ಅಲ್ಲಿಯೇ ನಟನೆಯ ವಿವಿಧ ಹಂತಗಳ ತರಬೇತಿ ಕಲಿತಿದ್ದಾರೆ. ಆ ನಂತರ ಪಾಂಡಿಯನ್ ಮಾಸ್ಟರ್ ಗರಡಿಯಲ್ಲಿ ಸಾಹಸದ ಪಟ್ಟುಗಳನ್ನು ಕರಗತ ಮಾಡಿಕೊಂಡು, ಕಲೈ ಮಾಸ್ಟರ್ ಬಳಿ ನೃತ್ಯಾಭ್ಯಾಸವನ್ನೂ  ಮುಗಿಸಿಕೊಂಡಿ ದ್ದಾರೆ.

ನಟನಾಗಬೇಕೆಂಬ ಆಸೆ ಇದ್ದರೂ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಅತೀವ ಆಸಕ್ತಿ ಇರುವ ಧ್ರುವನ್, ತಾರಕ್ ಮತ್ತು ಐರಾವತ ಚಿತ್ರಗಳಲ್ಲಿಯೂ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು. ಪ್ರತಿಯೊಂದರಲ್ಲಿಯೂ ಪರ್ಫೆಕ್ಟ್ ಆಗಿರ ಬೇಕೆಂದು ಬಯಸುವ ಧ್ರುವನ್, ತೀರಾ ಇಷ್ಟಪಟ್ಟು ಈ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅದಿತಿ ಪ್ರಭುದೇವ ಧ್ರುವನ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಭರತ್ ವಿಷ್ಣುಕಾಂತ್ ಭಗವಾನ್‌ದ್‌‌ಶ್ರೀಕೃಷ್ಣ ಪರಮಾತ್ಮ ಚಿತ್ರವನ್ನು ನಿರ್ಮಾಣ  ಮಾಡು ತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಅದ್ವಿಕ್ ಆರ್ಯ ಛಾಯಾಗ್ರಹಣವಿದೆ. ದತ್ತಣ್ಣ ಅವರಿಗೆ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದಿದೆ. ಚಿಕ್ಕಮಗಳೂರು, ಬೆಂಗಳೂರು, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ದರ್ಶನ್, ತಂಡಕ್ಕೆೆ ಶುಭ ಕೋರಿದ್ದಾರೆ