RCB Final Match List: ಆರ್ಸಿಬಿಯ ಹಿಂದಿನ 3 ಫೈನಲ್ ಪಂದ್ಯದ ಕಿರು ನೋಟ ಇಲ್ಲಿದೆ
ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸಲ ಟ್ರೋಫಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಕಳೆದ 17 ವರ್ಷಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ(RCB) ಕಪ್ ಗೆಲ್ಲಲು ವಿಫಲವಾಗಿತ್ತು. ಇದೀಗ 18ನೇ ವರ್ಷದಲ್ಲಿ ಆರ್ಸಿಬಿ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.


ಅಹಮದಾಬಾದ್: ಐಪಿಎಲ್(IPL 2025)ನಲ್ಲಿ ಒಂದೂ ಬಾರಿಯೂ ಆರ್ಸಿಬಿ*RCB) ಕಪ್ ಗೆದ್ದಿಲ್ಲ. ಆದರೆ ನಾಲ್ಕನೇ ಸಲ ಫೈನಲ್ಗೇರಿದ ಸಾಧನೆ ಮಾಡಿದೆ. ಈ ಹಿಂದೆ 2009, 2011 ಹಾಗೂ 2016ನೇ ಸಾಲಿನಲ್ಲೂ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಮೂರು ಬಾರಿಯೂ ರನ್ನರ್ ಅಪ್ ಆಗಿತ್ತು. ಇದೀಗ ಐಪಿಎಲ್ 18ನೇ ಆವೃತ್ತಿಯಲ್ಲೂ ಮಗದೊಮ್ಮೆ ಫೈನಲ್ಗೆ ಪ್ರವೇಶಿಸಿದ್ದು, ಪ್ರಶಸ್ತಿ ನಿರೀಕ್ಷೆ ಗರಿಗೆದರಿದೆ. ಮಂಗಳವಾರ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಪಂಜಾಬ್ ಕಿಂಗ್ಸ್(RCB vs PBKS) ಸವಾಲು ಎದುರಿಸಲಿದೆ. ಆರ್ಸಿಬಿಯ ಈ ಹಿಂದಿನ 3 ಪ್ರಶಸ್ತಿ ಸೆಣಸಾಟಗಳ(RCB Final Match List) ಕಿರು ನೋಟ ಇಲ್ಲಿದೆ.
2009ರಲ್ಲಿ 6 ರನ್ ಸೋಲು
ಆರ್ಸಿಬಿ ಮೊದಲ ಬಾರಿಗೆ ಫೈನಲ್ ಆಡಿದ್ದು 2009ರಲ್ಲಿ. ಡೆಕ್ಕನ್ ಚಾರ್ಜಸ್ ಎದುರು. ಜೊಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಕ್ಕನ್ 6 ವಿಕೆಟ್ಗೆ 143 ರನ್ ಬಾರಿಸಿತು. ಅನಿಲ್ ಕುಂಬ್ಳೆ 16ಕ್ಕೆ 4 ವಿಕೆಟ್ ಉರುಳಿಸಿದ್ದರು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್ಸಿಬಿ ಬ್ಯಾಟರ್ಗಳು 9ಕ್ಕೆ 137 ರನ್ ಮಾಡಿ ಚೊಚ್ಚಲ ಕಪ್ ಕೈಚೆಲ್ಲಿತ್ತು.
2011ರಲ್ಲಿ ಚೆನ್ನೈ ವಿರುದ್ಧ ಸೋಲು
2ನೇ ಬಾರಿ ಆರ್ಸಿಬಿ ಫೈನಲ್ ಪ್ರವೇಶಿಸಿದ್ದು 2011ರಲ್ಲಿ. ಲೀಗ್ನಲ್ಲಿ 19 ಅಂಕ ಸಂಪಾದಿಸಿ ಅಗ್ರಸ್ಥಾನ ಅಲಂಕರಿಸಿದ್ದ ಆರ್ಸಿಬಿ ಕಪ್ ಗೆಲ್ಲಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಇದಕ್ಕೆ ಧೋನಿ ಪಡೆ ಅಡ್ಡಗಾಲಿಕ್ಕಿತ್ತು. ಚೆಪಾಕ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಚೆನ್ನೈ 5ಕ್ಕೆ 205 ರನ್ ಪೇರಿಸಿದರೆ, ಆರ್ಸಿಬಿ ಈ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡು 8ಕ್ಕೆ 147 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತ್ತು. ಚೆನ್ನೈ ಪರ ಮುರಳಿ ವಿಜಯ್ (95)-ಮೈಕಲ್ ಹಸ್ಸಿ (63) ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2016ರಲ್ಲಿ ತವರಿನಲ್ಲೇ ಸೋಲು
ಎರಡು ಬಾರಿ ಫೈನಲ್ನಲ್ಲಿ ಎಡವಿದ್ದ ಆರ್ಸಿಬಿ ಮೂರನೇ ಬಾರಿಗೆ ತವರಿನ ಅಭಿಮಾನಳ ಮುಂದೆ ಫೈನಲ್ ಆಡುವ ಸೌಭಾಗ್ಯ ಒದಗಿಬಂದಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ, ಹೈದರಾಬಾದ್ ವಿರುದ್ಧ ಫೈನಲ್ ಆಡಿತ್ತು. ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್, ವಿರಾಟ್ ಕೊಹ್ಲಿ, ಶೇನ್ ವಾಟ್ಸನ್, ಮೊಯಿನ್ ಅಲಿ ಅವರಂತಹ ಘಟಾನುಘಟಿ ಆಟಗಾರರನ್ನು ಹೊಂದಿದ್ದ ಆರ್ಸಿಬಿ ಮೇಲೆ ಭಾರೀ ಭರವಸೆ ಇರಿಸಲಾಗಿತ್ತು. ಆದರೆ ಇಲ್ಲಿಯೂ ಲಕ್ ಕೈಕೊಟ್ಟಿತ್ತು. ಒಂದು ಹಂತದದ ವರೆಗೆ ಉತ್ತಮ ಬ್ಯಾಟಿಂಗ್ ನಡಿಸಿ ಇನ್ನೇನು ಗೆಲುವು ಸಾಧಿಸಬೇಕು ಎನ್ನುವಷ್ಟರಲ್ಲಿ ನಾಟಕೀಯ ಕುಸಿತ ಕಂಡು 8 ರನ್ ಸೋಲನುಭವಿಸಿತು.
ಇದೀಗ ನಾಲ್ಕನೇ ಪ್ರಯತ್ನದಲ್ಲಾದರೂ ಅದೃಷ್ಟ ಆರ್ಸಿಬಿ ಪಾಲಾಗಿ ವಿರಾಟ್ ಕೊಹ್ಲಿ ಮತ್ತು ಅಭಿಮಾನಿಗಳ ಕಪ್ ಕನಸು ನನಸಾಗಲಿ ಎಂಬ ಹಾರೈಕೆ ನಮ್ಮದು.