ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sowmya Sanath Column: ಪರಿಸರ ಚೆನ್ನಾಗಿದ್ದರಷ್ಟೇ ನಾವೂ ಚೆನ್ನಾಗಿರಬಹುದು

ಹೊಲಗಳಲ್ಲಿ ಸಿಗುವ ಕಸದಿಂದ ವಿದ್ಯುತ್ತನ್ನು ತಯಾರಿಸಬಹುದು ಎನ್ನುವ ಪರಿಕಲ್ಪನೆ ಹಳೆಯ ದಾದರೂ, ಅಲ್ಲಿಯವರೆಗೆ ಇಡೀ ಪ್ರಪಂಚದಲ್ಲಿ ಈ ತತ್ವವನ್ನು ಆಧರಿಸಿ ನಿರಂತರ ವಿದ್ಯುತ್ತನ್ನು ಕಡಿಮೆ ವೆಚ್ಚದಲ್ಲಿ ಯಾರೂ ತಯಾರಿಸಿರಲಿಲ್ಲ. ಹಳ್ಳಿಗಳಲ್ಲಿ ಸುಲಭವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಹೊಲದ ಕಸದಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದರೆ ಹಳ್ಳಿಗರಿಗೆ ಬಹಳ ಪ್ರಯೋಜನ ವಾಗುತ್ತದೆ ಎಂಬ ವಿಶ್ವಾಸವು ಜ್ಞಾನೇಶ್ ಅವರನ್ನು ಆವರಿಸಿತು

ಪರಿಸರ ಚೆನ್ನಾಗಿದ್ದರಷ್ಟೇ ನಾವೂ ಚೆನ್ನಾಗಿರಬಹುದು

Profile Ashok Nayak Jun 3, 2025 8:19 AM

ಕಳಕಳಿ

ಸೌಮ್ಯಾ‌ ಸನತ್

ಲಾಸ್ ಏಂಜಲೀಸ್‌ನ ‘ಇಂಟರ್‌ನ್ಯಾಷನಲ್ ರೆಕ್ಟಿಫೈಯರ್’ ಎಂಬ ಕಂಪನಿಯಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದವರು ಜ್ಞಾನೇಶ್ ಪಾಂಡೆ. ಕೈತುಂಬಾ ಸಂಬಳ ಸಂಪಾದಿ ಸುತ್ತ, ಸಮೃದ್ಧ ಜೀವನವನ್ನು ನಡೆಸುತ್ತಿದ್ದ ವ್ಯಕ್ತಿ ಅವರು. ಇಷ್ಟಾಗಿಯೂ ಅವರಿಗೆ ಮನದಾಳದಲ್ಲಿ ಅದೇನೋ ತವಕ, ತುಮುಲ. ತಮ್ಮ ಜನ್ಮಸ್ಥಾನವಾದ ಬಿಹಾರವು ಮತ್ತೆ ಮತ್ತೆ ಕೈಬೀಸಿ ಕರೆದಂಥ ಅನುಭವವಾಗುತ್ತಿತ್ತು ಜ್ಞಾನೇಶ್ ಪಾಂಡೆಯವರಿಗೆ. ಒಳದನಿಗೆ ಓಗೊಟ್ಟು 2007ರಲ್ಲಿ ಭಾರತಕ್ಕೆ ಮರಳಿದರು; ದೇಶದ ಹಳ್ಳಿಗಳ ಸ್ಥಿತಿಗತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ಇಲ್ಲಿನ ಸಮಸ್ಯೆ ಗಳನ್ನು ಸುಧಾರಿಸಲು ಸ್ವಚ್ಛವಾದ ನೀರಿನ ವ್ಯವಸ್ಥೆಯೆಡೆಗೆ ಹಾಗೂ ನಿರಂತರ ವಿದ್ಯುಚ್ಛಕ್ತಿ ಪೂರೈಕೆ ಯೆಡೆಗೆ ಗಮನಹರಿಸಬೇಕು ಎಂಬ ಸತ್ಯವನ್ನು ಮನವರಿಕೆ ಮಾಡಿಕೊಂಡರು. ತಡೆರಹಿತ ವಿದ್ಯುತ್ತನ್ನು ಕಡಿಮೆ ಬೆಲೆಯಲ್ಲಿ ಸರಬರಾಜು ಮಾಡುವು ದನ್ನೇ ತಮ್ಮ ಗುರಿಯನ್ನಾಗಿ ಆಯ್ದು ಕೊಂಡರು ಜ್ಞಾನೇಶ್.

ಹೊಲಗಳಲ್ಲಿ ಸಿಗುವ ಕಸದಿಂದ ವಿದ್ಯುತ್ತನ್ನು ತಯಾರಿಸಬಹುದು ಎನ್ನುವ ಪರಿಕಲ್ಪನೆ ಹಳೆಯ ದಾದರೂ, ಅಲ್ಲಿಯವರೆಗೆ ಇಡೀ ಪ್ರಪಂಚದಲ್ಲಿ ಈ ತತ್ವವನ್ನು ಆಧರಿಸಿ ನಿರಂತರ ವಿದ್ಯುತ್ತನ್ನು ಕಡಿಮೆ ವೆಚ್ಚದಲ್ಲಿ ಯಾರೂ ತಯಾರಿಸಿರಲಿಲ್ಲ. ಹಳ್ಳಿಗಳಲ್ಲಿ ಸುಲಭವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಹೊಲದ ಕಸದಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದರೆ ಹಳ್ಳಿಗರಿಗೆ ಬಹಳ ಪ್ರಯೋಜನವಾಗುತ್ತದೆ ಎಂಬ ವಿಶ್ವಾಸವು ಜ್ಞಾನೇಶ್ ಅವರನ್ನು ಆವರಿಸಿತು.

ಆದರೆ ಅವರ ಈ ಉದ್ದೇಶವನ್ನು ಕೇಳಿದವರೆಲ್ಲಾ, “ಇದೆಲ್ಲಾ ನಿಜಕ್ಕೂ ಸಾಧ್ಯವಾಗುವ ಮಾತೇ?" ಎನ್ನುತ್ತ ವ್ಯಂಗ್ಯವಾಗಿ ನಕ್ಕರು. ಆದರೆ ಜ್ಞಾನೇಶ್ ತಮ್ಮ ಉದ್ದೇಶವನ್ನು ಕೈಬಿಡದೆ ಬಿಹಾರದ ತಾಮ್ ಕುಹ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು, ಮೂವರು ಗೆಳೆಯ ರೊಂದಿಗೆ ಸೇರಿಕೊಂಡು ‘ಹಸ್ಕ್ ಪವರ್ ಸಿಸ್ಟಮ್’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು.

ಇದನ್ನೂ ಓದಿ: Prakash Shesharaghavachar Column: ಇದು ಆತ್ಮನಿರ್ಭರತೆಗೆ ದಕ್ಕಿದ ಅದ್ಭುತ ಯಶಸ್ಸು

ಆರು ವರ್ಷಗಳಷ್ಟು ಸುದೀರ್ಘ ಕಾಲ ಸಂಶೋಧನೆ ನಡೆಸಿ ಭತ್ತದ ಹೊಟ್ಟಿನಿಂದ ವಿದ್ಯುಚ್ಛಕ್ತಿ ಯನ್ನು ಉತ್ಪಾದಿಸಿಯೇ ಬಿಟ್ಟರು. ಸುಮಾರು 2 ಕೆ.ಜಿ. ಭತ್ತದ ಹೊಟ್ಟಿನಿಂದ ಒಂದು ಕಿಲೋ ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆ ಆಯಿತು. ಈಗ ಗ್ರಾಮದ ಪ್ರತಿಯೊಂದು ಮನೆಗೂ ಆರರಿಂದ ಎಂಟು ಗಂಟೆಗಳ ಕಾಲ ಅಡೆತಡೆ ಇಲ್ಲದೆ ವಿದ್ಯುತ್ ಸರಬರಾಜು ಆಗುತ್ತಿದೆ. ‌

ಸಿಎಫ್ಎಲ್ ದೀಪವಿರುವ ಮನೆಗೆ ತಿಂಗಳಿಗೆ ಬರುವ ವಿದ್ಯುಚ್ಛಕ್ತಿ ಬಿಲ್ ಕೇವಲ 120 ರುಪಾಯಿ ಗಳಷ್ಟೇ. ಈಗ ತಾಮ್ ಕುಹ ಮಾತ್ರವಲ್ಲದೆ ಬಿಹಾರದ ಇನ್ನೂ 120 ಹಳ್ಳಿಗಳನ್ನು ಮತ್ತು ಉತ್ತರ ಪ್ರದೇಶದ ಮೂರು ಹಳ್ಳಿಗಳನ್ನು ಈ ‘ಹಸಿರುಶಕ್ತಿ’ ಬೆಳಗುತ್ತಿದೆ. ‘ಹಸಿರು ಆಸ್ಕರ್’ ಎಂದೇ ಪ್ರಸಿದ್ಧ ವಾದ, ಅಂತಾರಾಷ್ಟ್ರೀಯ ಮಟ್ಟದ ‘ಆಶ್ ಡೆನ್’ ಪ್ರಶಸ್ತಿಯು ಜ್ಞಾನೇಶ್ ಅವರಿಗೆ 2011ರ ಜೂನ್‌ ನಲ್ಲಿ ಲಭಿಸಿದೆ. ವಿದ್ಯುಚ್ಛಕ್ತಿಯ ಸೌಲಭ್ಯ ಪಡೆದ ಗ್ರಾಮಸ್ಥರು, “ನೀವು ನಮ್ಮ ಪಾಲಿಗೆ ದೇವರೇ ಸರಿ" ಎಂದು ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ...

***

ಮೇಲಿನ ಘಟನೆಯನ್ನು ಅವಲೋಕಿಸಿದಾಗ, ವೈಯಕ್ತಿಕವಾಗಿ, ಸಾಂಕವಾಗಿ ಮತ್ತು ವ್ಯಾಪಾರ- ವಹಿವಾಟುಗಳ ದೃಷ್ಟಿಯಲ್ಲಿ ‘ಪರಿಸರ ಪ್ರಜ್ಞೆ’ಯು ಅದೆಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ. ಪರಿಸರವನ್ನು ಕುರಿತಾದ ಕಾಳಜಿ ಇರುವವರಿಗೆ ಹಾಗೂ ಪರಿಸರವನ್ನು ಒಳಗೊಂಡ ಕ್ರಿಯಾ ಶೀಲತೆಯ ಪ್ರಯೋಗ- ಪ್ರವರ್ತನೆಯನ್ನು ಗಂಭೀರವಾಗಿ ಪರಿಗಣಿಸುವವರಿಗೆ ಇಂಥ ಬೆಳವಣಿಗೆಗಳು ಅಥವಾ ಸಾಧ್ಯತೆಗಳು ಆಪ್ತವಾಗಿ ಪರಿಣಮಿಸಬಲ್ಲವು.

ಕಾರಣ, ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕಾದ್ದು ಕೇವಲ ಪರಿಸರದ ದೃಷ್ಟಿಯಿಂದ ಮಾತ್ರವೇ ಅಲ್ಲ; ಅದರಿಂದ ವ್ಯಕ್ತಿಗತವಾಗಿ ನಮಗೆ ದಕ್ಕುವ ಗೌರವ ಹಾಗೂ ಪ್ರಯೋಜನದ ದೃಷ್ಟಿ ಯಿಂದಲೂ ಅದು ಮುಖ್ಯವೆನಿಸುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸೇವಾ ವಿಭಾಗ ಗಳು ತಮ್ಮ ಕಾರ್ಯವೈಖರಿಯಲ್ಲಿ ‘ಪರಿಸರ-ಸ್ನೇಹಿ’ ಪರಿಪಾಠಗಳನ್ನು ಅಳವಡಿಸಿ ಕೊಳ್ಳುತ್ತಿರುವು ದನ್ನು ಕಾಣಬಹುದು. ಇವುಗಳತ್ತ ಕಣ್ಣು ಹಾಯಿಸಿದಾಗ, ಸಮಕಾಲೀನ ಸಮಾಜದಲ್ಲಿ ‘ಸ್ವೀಕಾರಾರ್ಹ’ ಎನಿಸಿಕೊಳ್ಳಬೇಕಾದರೆ ಅಥವಾ ಅಂಗೀಕಾರಕ್ಕೆ ಪಾತ್ರರಾಗಬೇಕಾದರೆ, ನಮ್ಮ ನಡವಳಿಕೆಯು ಪರಿಸರದ ಪರವಾಗಿರಬೇಕು ಎಂಬ ಅರಿವು ಮೂಡುತ್ತದೆ.

‘ಪರಿಸರ’ ಅಂದರೆ ‘ಹಸಿರು’, ಹಸಿರೇ ನಮ್ಮ ‘ಉಸಿರು. ಮಾನವನು ಹೇಳಿ-ಕೇಳಿ ಪರಿಸರಜೀವಿ. ನಮ್ಮ ಬದುಕಿಗೆ ಅನಿವಾರ್ಯವಾಗಿರುವ ಮೂಲಭೂತ ಅವಶ್ಯಕತೆಗಳು ದಕ್ಕುವುದೇ ಪರಿಸರದಿಂದ ಎಂಬ ಸತ್ಯ ನಮಗೆಲ್ಲ ತಿಳಿದೇ ಇದೆ. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರವೇ ನಾವೂ ಚೆನ್ನಾಗಿರಲು ಸಾಧ್ಯ. ಆದ್ದರಿಂದ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಹೊಣೆಗಾರಿಕೆಯನ್ನು ನಮ್ಮೆಲ್ಲರಿಗೂ ಮತ್ತೆ ಮತ್ತೆ ನೆನಪಿಸಲೆಂದೇ ‘ವಿಶ್ವ ಪರಿಸರ ದಿನ’ದ ( World Environment Day) ಪರಿಕಲ್ಪನೆಯನ್ನು ಹುಟ್ಟುಹಾಕಲಾಗಿದೆ.

ಪ್ರತಿವರ್ಷದ ಜೂನ್ 5ರಂದು ಆಚರಿಸಲಾಗುವ ಈ ದಿನವು, ನಮ್ಮ ಪರಿಸರಕ್ಕಿರುವ ಮಹತ್ವವನ್ನು ನಮಗೆ ಮನವರಿಕೆ ಮಾಡಿಕೊಡುವ ಪರ್ವಕಾಲವೂ ಹೌದು. ನಮ್ಮ ಪರಿಸರದ ಸ್ಥಿತಿಗತಿಯು ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೂ ಹೌದು; ಪರಿಸರವನ್ನು ಗಲೀಜು ಮಾಡುವ ವ್ಯಕ್ತಿಗಳು ನಾವಾಗಿದ್ದರೆ ಅದು ನಮ್ಮ ಕೊಳಕುತನಕ್ಕೆ ಹಿಡಿದ ಕೈಗನ್ನಡಿಯಾಗುತ್ತದೆ. ಖ್ಯಾತ ಲೇಖಕ ಎಕಾರ್ಟ್ ಟಾಲ್ ಅವರು The Power Now ಎಂಬ ತಮ್ಮ ಜನಪ್ರಿಯ ಕೃತಿಯಲ್ಲಿ, “ಭೂಮಿಯ ಮೇಲೆ ಕಂಡು ಬರುವ ಮಾಲಿನ್ಯವು ನಮ್ಮೊಳಗಿನ ಮನೋಮಾಲಿನ್ಯದ ನೇರ ಪ್ರತಿಬಿಂಬವಷ್ಟೇ.

ನೀವು ಪರಿಸರವನ್ನು ಕೊಳೆ ಮಾಡುವವರೋ ಅಥವಾ ಚೊಕ್ಕವಾಗಿಟ್ಟುಕೊಳ್ಳುವವರೋ? ನಿಮ್ಮ ಅಂತರಂಗದ ಶುಭ್ರತೆಯನ್ನು ಕಾಪಿಟ್ಟುಕೊಳ್ಳಬೇಕಾದವರು ನೀವೇ ಎನ್ನುವುದು ಎಷ್ಟು ಸತ್ಯವೋ, ಈ ಭೂಮಿಯ ಶುಭ್ರತೆಗೂ ನೀವೇ ಹೊಣೆಗಾರರು ಎಂಬುದೂ ಅಷ್ಟೇ ಸತ್ಯ" ಎಂದು ಹೇಳಿದ್ದಾರೆ.

ಆದ್ದರಿಂದ, ನೈಸರ್ಗಿಕ ಸಂಪನ್ಮೂಲಗಳು, ಶಕ್ತಿಮೂಲಗಳು, ಜೀವವೈವಿಧ್ಯಗಳು ಮುಂತಾದ ಪರಿಸರದ ಕೊಡುಗೆಗಳನ್ನು ಹಿತ-ಮಿತವಾಗಿ, ಕ್ಷತಿ ಉಂಟಾಗದ ರೀತಿಯಲ್ಲಿ, ಎಲ್ಲರ ಬಳಕೆಗೆ ಲಭ್ಯವಾಗುವಂತೆ ಕೌಶಲಪೂರ್ಣವಾಗಿ ಬಳಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕು. ಆದರೆ, ಕಾಂಕ್ರೀಟ್ ಕಾಡುಗಳನ್ನೇ ‘ಸ್ವರ್ಗ’ ಎಂದು ಭ್ರಮಿಸಿರುವ ಅನೇಕರಿಗೆ ವೃಕ್ಷಸಂ ಪತ್ತಿಗಿರುವ ಮಹತ್ವದ ಬಗ್ಗೆ ಅರಿವಿಲ್ಲ ಎಂಬುದು ವಿಷಾದನೀಯ ಸಂಗತಿ.

385ಕ್ಕೂ ಹೆಚ್ಚು ಆಲದ ಸಸಿಗಳನ್ನು, 8000ದಷ್ಟು ಇತರೆ ಸಸಿಗಳನ್ನು ರಸ್ತೆಯ ಇಕ್ಕೆಲಗಳಲ್ಲೂ ನೆಟ್ಟು ಪೋಷಿಸಿದ ‘ಸಾಲುಮರದ ತಿಮ್ಮಕ್ಕ’ರಂಥ ನಮ್ಮ ಹಳ್ಳಿಗಾಡಿನ ನಿಸ್ವಾರ್ಥ ಜೀವಿಗಳು ಈ ನಿಟ್ಟಿನಲ್ಲಿ ನಮಗೆ ಮೇಲ್ಪಂಕ್ತಿ ಆಗಬೇಕು. ಅವರಂತೆ ಗಿಡ-ಮರಗಳನ್ನು ನೆಡೋಣ. ಅಳಿವಿನ ಅಂಚಿನಲ್ಲಿರುವ ಸಸ್ಯಪ್ರಭೇದಗಳನ್ನೂ, ಅವುಗಳ ಮಡಿಲಿನಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳನ್ನೂ ಕಾಳಜಿ ವಹಿಸಿ ಕಾಪಾಡೋಣ. ಪರಿಸರ ಪ್ರೀತಿಯನ್ನು ಬೆಳೆಸಿಕೊಳ್ಳೋಣ.

ನಮ್ಮ ಪ್ರತಿಯೊಂದು ನಡೆ-ನುಡಿಯಲ್ಲೂ ಪರಿಸರ ಪ್ರೇಮ ಕಂಡಬಂದಲ್ಲಿ ಮಾತ್ರವೇ ಸಂಭಾವ್ಯ ನೈಸರ್ಗಿಕ ವಿಕೋಪಗಳಿಂದ ನಾವು ಪಾರಾಗಲು ಸಾಧ್ಯ. ಹಳೆಯ ತಲೆಮಾರಿನಿಂದ ನಾವು ಬಳುವಳಿ ಯಾಗಿ ಪಡೆದುಕೊಂಡಿರುವ ಈ ಪ್ರಾಕೃತಿಕ ಸಂಪತ್ತನ್ನು, ಮುಂದಿನ ತಲೆಮಾರುಗಳಿಗೂ ಕೊಡುಗೆ ಯಾಗಿ ನೀಡಬೇಕಾದಂಥ ಹೊಣೆಗಾರಿಕೆಯ ನೊಗ ನಮ್ಮ ಹೆಗಲನ್ನು ಏರಿದೆ ಎಂಬುದನ್ನು ಮರೆಯದಿರೋಣ.

‘ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ; ಪರಿಸರವಿಲ್ಲದೆ ಮಾನವನಿಲ್ಲ’ ಎಂಬ ನಿತ್ಯಸತ್ಯ ವನ್ನು ಬದುಕಿನ ಉಸಿರಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ಧಾವಂತದ ಮತ್ತು ವೇಗದ ಬದುಕಿನಲ್ಲಿ ಪರಿಸರವನ್ನೇ ಕಡೆಗಣಿಸುತ್ತಿರುವ ಮಾನವನ ಜೀವನಶೈಲಿಯು ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು.

ಪರಿಸರದ ಮೇಲೆ ತಾನು ನಡೆಸುತ್ತಿರುವ ದೌರ್ಜನ್ಯವನ್ನು ಮನುಷ್ಯನು ನಿಲ್ಲಿಸದಿದ್ದರೆ, ಅದನ್ನೇ ನೆಚ್ಚಿರುವ ಜೀವವೈವಿಧ್ಯಗಳ ಅಸ್ತಿತ್ವ ಹಾಗೂ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾ ಗುತ್ತದೆ. ಅದರಿಂದಾಗಿ ಮಾನವನ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕುತ್ತದೆ. ಆದ್ದರಿಂದ, ಪರಿಸರವನ್ನು ಉಳಿಸಿ ಮಾನವ ಬದುಕನ್ನು ಹಸಿರಾಗಿಸುವ, ಹಸನಾಗಿಸುವ ಸಂಕಲ್ಪ ನಮ್ಮದಾಗಲಿ.

(ಲೇಖಕಿ ಆಧ್ಯಾತ್ಮಕ ಚಿಂತಕಿ)