Ravi Hunj Column: ವೀರಶೈವದಿಂದ ನಿಸ್ತೇಜ ಶವವಾದ ಮಹಾಸಭಾ !
ಮಹಾಸಭಾವು ಯಾವುದೇ ವಾಣಿಜ್ಯ ಚಟುವಟಿಕೆ, ಶಿಕ್ಷಣ ಸಂಸ್ಥೆಗಳನ್ನು ಖುದ್ದು ನಡೆಸದೆ ಅವುಗಳನ್ನು ನಡೆಸುವ ಸಮಾಜದ ಇತರೆ ಸಂಸ್ಥೆಗಳಿಗೆ ಕೇವಲ ಮಾರ್ಗದರ್ಶನ ನೀಡಬೇಕು ಎಂದು ನಿರ್ಧರಿಸಿತ್ತು. ಹಾಗಾಗಿ ಮಹಾಸಭಾಕ್ಕೆ ಕೇವಲ ಒಂದು ಕಟ್ಟಡ ಬಿಟ್ಟರೆ ಯಾವುದೇ ಆಸ್ತಿಯಿಲ್ಲ. ಕಟ್ಟಡದ ಕೆಲವು ಭಾಗ ಬಾಡಿಗೆಗೆ ಕೊಟ್ಟು ಅದರಿಂದ ನೌಕರರಿಗೆ ಸಂಬಳ ಮತ್ತಿತರೆ ಖರ್ಚುಗಳನ್ನು ತೂಗಿಸಿಕೊಂಡು ಹೋಗಲಾಗುತ್ತಿದೆ.


ರವಿ ಹಂಜ್
121 ವರ್ಷದ ಹಿಂದೆ ಹರಿದು ಹಂಚಿಹೋಗಿದ್ದ ವೀರಶೈವ ಮತಾನುಯಾಯಿಗಳನ್ನು ಒಗ್ಗೂಡಿಸಿ ಸಂಘಟಿಸಲು ಶ್ರೀ ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದರು. ಇದರ ಪ್ರಮುಖ ಉದ್ದೇಶ- ತತ್ವ ಸಿದ್ಧಾಂತ, ಅಧ್ಯಾತ್ಮ, ಶಿಕ್ಷಣ, ಸಂಸ್ಕೃತಿ, ಆರ್ಥಿಕ ಮುಂತಾದ ರಂಗಗಳಲ್ಲಿ ಸರ್ವತೋಮುಖ ಪ್ರಗತಿ ಸಾಧಿಸುವುದು. ಸಮಾಜದಲ್ಲಿನ ಎಲ್ಲಾ ಉಪಜಾತಿಗಳನ್ನು ಒಗ್ಗೂಡಿಸಿ ಸರಳ ವಿವಾಹ, ವರದಕ್ಷಿಣೆ ಪಿಡುಗು, ವಿಧವಾ ವಿವಾಹ ಮುಂತಾದ ಸಾಮಾಜಿಕ ಬದಲಾವಣೆಗಳನ್ನು ತರುವುದು ಸಂಸ್ಥೆಯ ಕಳಕಳಿಯಾಗಿತ್ತು.
ಮಹಾಸಭಾವು ಯಾವುದೇ ವಾಣಿಜ್ಯ ಚಟುವಟಿಕೆ, ಶಿಕ್ಷಣ ಸಂಸ್ಥೆಗಳನ್ನು ಖುದ್ದು ನಡೆಸದೆ ಅವು ಗಳನ್ನು ನಡೆಸುವ ಸಮಾಜದ ಇತರೆ ಸಂಸ್ಥೆಗಳಿಗೆ ಕೇವಲ ಮಾರ್ಗದರ್ಶನ ನೀಡಬೇಕು ಎಂದು ನಿರ್ಧರಿಸಿತ್ತು. ಹಾಗಾಗಿ ಮಹಾಸಭಾಕ್ಕೆ ಕೇವಲ ಒಂದು ಕಟ್ಟಡ ಬಿಟ್ಟರೆ ಯಾವುದೇ ಆಸ್ತಿಯಿಲ್ಲ. ಕಟ್ಟಡದ ಕೆಲವು ಭಾಗ ಬಾಡಿಗೆಗೆ ಕೊಟ್ಟು ಅದರಿಂದ ನೌಕರರಿಗೆ ಸಂಬಳ ಮತ್ತಿತರೆ ಖರ್ಚುಗಳನ್ನು ತೂಗಿಸಿಕೊಂಡು ಹೋಗಲಾಗುತ್ತಿದೆ.
ಆದರೆ ಮಹಾಸಭಾದ ಸಾಮಾಜಿಕ ಪ್ರಭಾವ ಮಾತ್ರ ಅತ್ಯಂತ ಗಾಢವಾಗಿದೆ. ಹಾಗಾಗಿಯೇ ಎಲ್ಲಾ ವೀರಶೈವ ರಾಜಕಾರಣಿಗಳು ಇದಕ್ಕೆ ಎಡತಾಕುವುದು. ಇಂಥ ಮಹಾನ್ ಸಂಸ್ಥೆಯನ್ನು ಪಿತೂರಿಯ ಮೂಲಕ ಇಂದು ಅವಸಾನದ ಅಂಚಿಗೆ ತರಲಾಗಿದೆ. ಜಾಗತಿಕ ಲಿಂಗಾಹತರು ನುಣ್ಣಗೆ ಸಾಣೆ ಹಿಡಿದು ಆಯಕಟ್ಟಿನ ಜಾಗಗಳಲ್ಲಿ ತಮ್ಮ ಭಂಜಕರನ್ನೇ ವೀರಶೈವ ಮಹಾಸಭಾದಲ್ಲಿ ಕೂರಿಸಿದ್ದಾರೆ.
ಮೊದಲಿಗೆ ಈ ಸಂಸ್ಥೆಯ ಕಟ್ಟಡದ ಭಾಗಗಳನ್ನು ಸಮರ್ಥ ಬಾಡಿಗೆದಾರರು ಬಂದರೂ ಅವರಿಗೆ ಇಲ್ಲದ ಕಾರಣಗಳನ್ನೊಡ್ಡಿ ಬಾಡಿಗೆಗೆ ನೀಡದೆ, ತಮಗೆ ಬೇಕಾದವರಿಗೆ ಬಾಡಿಗೆಗೆ ನೀಡುವ ಮೂಲಕ ಸಂಸ್ಥೆಯನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಲಾಯಿತು. ಏಕೆಂದರೆ ಈ ವಶೀಲಿಬಾಜಿ ಬಾಡಿಗೆ ದಾರರು ಸರಿಯಾಗಿ ಬಾಡಿಗೆಯನ್ನು ಕೊಡುತ್ತಿಲ್ಲ ಎಂಬ ಸುದ್ದಿ ಇದೆ.
ಇದನ್ನೂ ಓದಿ: Ravi Hunj Column: ವೀರಶೈವ ಲಿಂಗಾಯತರೇ, ಉಳಿವಿಗಾಗಿ ಎದ್ದೇಳಿ, ಎಚ್ಚರಗೊಳ್ಳಿ !
ಇಂಥ ಪರಿಸ್ಥಿತಿಯನ್ನು ಸುಧಾರಿಸುತ್ತಾರೆಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಹಣದ ಥೈಲಿಯ ಧಣಿಯೋರ್ವರನ್ನು ಕರೆತಂದರು. ಆರ್ಥಿಕ ಪರಿಸ್ಥಿತಿ ಸುಧಾರಿಸಿತೋ ಇಲ್ಲವೋ ಗೊತ್ತಿಲ್ಲ! ಆದರೆ ಇದು ಮಹಾಸಭೆಗೆ ಪರೋಕ್ಷವಾಗಿ ಮುಳುವಾಯಿತು. ಮೊದಲೇ ವಯೋವೃದ್ಧರಾದ ಇವರು ತಾವು ಚೆಲ್ಲುವ ಭಕ್ಷೀಸಿಗಾಗಿ ಕಾತರಿಸಿಕೊಂಡಿದ್ದ ಟೂರಿ ಹೋಟೆಲ್ ಮುಂದಿರುತ್ತಿದ್ದ ತಮ್ಮ ‘ಸ್ವಜಾತಿ ಬಂಧು’ ಪ್ರಚನ್ನ ರೇಣುಕನೆಂಬ ದಳಿ ಅಂಗಸೇವಕನಿಗೆ ಭಡ್ತಿ ಕೊಟ್ಟು ಮಹಾಸಭಾದ ಕಾರ್ಯದರ್ಶಿಯಾಗಿಸಿದರು.
ವರ್ಗಾವಣೆ ದಂಧೆ, ಸರಕಾರಿ ಕಾರ್ಯಗಳ ದಳಿಯಾಗಿದ್ದ ಈತ ಟೂರಿಸ್ಟ್ ಹೋಟೆಲ್ ಮುಂದಿನ ಕಟ್ಟೆಯ ಮೇಲ್ಲಿದ್ದ ತನ್ನ ಕಾರ್ಯಾಲಯವನ್ನು ನೇರವಾಗಿ ವೀರಶೈವ ಮಹಾಸಭಾದ ಕಚೇರಿಗೆ ವರ್ಗಾಯಿಸಿಕೊಂಡ. ಮಹಾಸಭಾದ ನೌಕರರು ಈತನ ಶಿಫಾರಸು ಪತ್ರಗಳನ್ನು ಟೈಪು ಮಾಡುವ ನೌಕರರಾಗಿ ಬದಲಾಗಿ ಈಗ ಈತನ ಗಿರಾಕಿಗಳಿಗೆ ಚಹಾ-ಕಾಫಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಕಷ್ಟು ಮುಗ್ಧರು ಈತನ ಪ್ರಚ್ಛನ್ನ ರೇಣುಕ ಎಂಬ ಹೆಸರನ್ನು ಕಂಡೇ ಭಕ್ತಿಯಿಂದ ಆತನ ಕಾಲಿ ಗೆರಗುತ್ತಿದ್ದಾರೆ! ಯಾರಾದರೂ “ಹೀಗೇಕೆ ಕಾಲಿಗೆ ಬೀಳಿಸಿಕೊಳ್ಳುವೆ?" ಎಂದು ಕೇಳಿದರೆ, “ಅವರು ನನ್ನ ಅಭಿಮಾನಿಗಳು, ನನ್ನನ್ನು ದೇವರೆಂದು ಭಾವಿಸುತ್ತಾರೆ" ಎನ್ನುತ್ತಾ ಪ್ರಚ್ಛನ್ನ ರಾಜಕುಮಾ ರನೂ ಆಗುತ್ತಾನೆ. ಸಾಣೇಹಳ್ಳಿಯ ಪರಮ ಶಿಷ್ಯನಾದ ಈತ ಲಿಂಗಾಹತರ ಏಜೆಂಟನಾಗಿ ರೇಣುಕರ ಪರಮದ್ವೇಷಿಯಾಗಿ ಧಾರ್ಮಿಕವಾಗಿ ನಿಶ್ಶೂನ್ಯನಾಗಿ ಮಹಾಸಭಾದ ಶವಪೆಟ್ಟಿಗೆಗೆ ಅಂತಿಮಮೊಳೆ ಹೊಡೆಯಲಿರುವ ಕಾರಣವೇ ಉಳಿದ ಸದಸ್ಯರು ಈಗ ಹತಾಶರಾಗಿ ಇದು ನಿಸ್ತೇಜಶವ ಮಹಾಸಭಾ ಎನ್ನುತ್ತಿದ್ದಾರೆ.
ಸಮಾಜಕ್ಕೆ ಏನಾದರೂ ಮಾಡಲೇಬೇಕೆಂಬ ಉದ್ದೇಶದಿಂದ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಗಳು ಈ ದಳಿಯ ಅಸಹ್ಯಕರ ಆಟದಿಂದ ಕಂಗಾಲಾ ಗಿದ್ದಾರೆ. ಬಸವಜಯಂತಿಯಂದು ರೇಣುಕರಾದಿಯಾಗಿ ಎಲ್ಲಾ ಪ್ರಮುಖ ಶರಣರ ಭಾವಚಿತ್ರ ಗಳನ್ನಿಟ್ಟು ಸಮಾಜವನ್ನು ಅಖಂಡವಾಗಿ ಒಗ್ಗೂಡಿಸಬೇಕು ಎಂಬ ರಾಜ್ಯಾಧ್ಯಕ್ಷರ ಸದುದ್ದೇಶಕ್ಕೆ ರಾಷ್ಟ್ರೀಯ ಅಧ್ಯಕ್ಷರು ಈ ದಲ್ಲಾಳಿ ಕಾರ್ಯದರ್ಶಿಯಿಂದ ಸೂಚನಾ ಪತ್ರ ಹೊರಡಿಸಿ ರದ್ದು ಮಾಡಿಸಿದ್ದು ಅತ್ಯಂತ ದುರದೃಷ್ಟಕರ.
ಕಷ್ಟಪಟ್ಟು ಓದಿ ಐಪಿಎಸ್ ಪಾಸಾಗಿ ಗುರುತರ ಸೇವೆ ಸಲ್ಲಿಸಿದ ಸಾಧನೆಗಿಂತ ಟೂರಿ ಹೋಟೆಲ್ ಮುಂದೆ ನಿಂತು ವರ್ಗಾವಣೆ ದಳಿ ಮಾಡುವುದು ಮಹತ್ಸಾಧನೆ ಎಂಬಂತೆ ಬಿಂಬಿಸಿದರೆ ಸಮಾಜದ ಯುವ ಪೀಳಿಗೆಗೆ ಯಾವ ಸಂದೇಶ ಹೋದೀತು?! ಚಂದನವನದ ಸಿನಿಮಾಗಳು ಹೇಗೆ ಸಾಲುಸಾಲಾಗಿ ರೌಡಿಗಳ ವೈಭವೀಕರಣವನ್ನು ತೋರಿ ಇಂದಿನ ಯುವಜನತೆ ರೌಡಿಗಳಾಗಬೇಕೆಂದು ಸ್ಪೂರ್ತಿ ನೀಡುತ್ತಿರುವವೋ ಹಾಗೆಯೇ ಮಹಾಸಭಾದ ಈ ನಡೆಯು, ವೀರಶೈವ ಲಿಂಗಾಯತ ಯುವಜನತೆಗೆ ಐಪಿಎಸ್, ಐಎಎಸ್ ವಿದ್ಯೆಗಿಂತ ವರ್ಗಾವಣೆ ದಂಧೆ, ಸರಕಾರಿ ದಳಿಕೆ, ರಾಜಕಾರಣಿಗಳ ಅಂಗಸೇವೆಗೆ ಅನುವಾಗುವುದು ಉತ್ತಮ ಆಯ್ಕೆ ಎನ್ನುವ ಅಧಾರ್ಮಿಕ ಸಂದೇಶವನ್ನು ಕೊಡುವುದು ಎನ್ನುವ ಯೋಚನೆಯೇ ಮಹಾಸಭಾದ ಧಾರ್ಮಿಕ ಹಿರಿಯರಿಗಿಲ್ಲ.
ರಾಜ್ಯಾಧ್ಯಕ್ಷರ ವೇಗಕ್ಕೆ ಸ್ಪಂದಿಸದ ಹಳೆಯ ತಲೆಮಾರು, ಲಿಂಗಾಹತ ಪಿತೂರಿ/ಬೇಹುಗಾರಿಕೆ, ಕಾರ್ಯದರ್ಶಿಯ ಅಧಾರ್ಮಿಕ ಚಟುವಟಿಕೆಗಳು ಮಹಾಸಭಾವನ್ನು ಅಲುಗಾಡಿಸಿ ಬಿಟ್ಟಿವೆ. ಕಳೆದ ಎರಡು ವಾರಗಳ ಹಿಂದೆ ‘ವಿಶ್ವವಾಣಿ’ಯ ‘ಬಸವ ಮಂಟಪ’ ಅಂಕಣದಲ್ಲಿ ಸೂಕ್ಷ್ಮವಾಗಿ ಮಹಾ ಸಭಾದ ಈ ಪ್ರಚ್ಛನ್ನ ರೇಣುಕನ ಬಗ್ಗೆ ಓದಿದ್ದಿರಷ್ಟೇ. ಆ ಸೂಕ್ಷ್ಮ ಲೇಖನದಿಂದಲೇ ಎಚ್ಚೆತ್ತ ಮಹಾ ಸಭಾದ ಅನೇಕ ಸದಸ್ಯರು ತಮ್ಮ ಪ್ರತಿರೋಧವನ್ನು ನಿಧಾನವಾಗಿ ತೋರುತ್ತಿದ್ದಾರೆ.
ಇವರಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರೋರ್ವರು ಆಡಳಿತ ಮಂಡಳಿಯ ನೈತಿಕತೆ ಯ ಪ್ರಶ್ನೆಯೆತ್ತಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯ ಪತ್ರ ಮಹಾಸಭಾದ ಚಟುವಟಿಕೆಗಳಿಂದ ಬೇಸತ್ತವರ ಗಟ್ಟಿದನಿಯಾಗಿದೆ. ಅವರ ರಾಜೀನಾಮೆಯ ವಿವರ ಹೀಗಿದೆ: “ನನ್ನ ವೀರಶೈವ ಲಿಂಗಾಯತ ಧರ್ಮದ ಪ್ರಾಣವಾಗಿರುವ ಪಂಚಾಚಾರದ ಅನುಗುಣವಾಗಿ ಪಂಚಪುಟ ಗಳಲ್ಲಿ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ.
ಕನ್ನಡನಾಡಿನಲ್ಲಿ ಹನ್ನೆರಡನೆಯ ಶತಮಾನ, ಹದಿನಾರನೇ ಶತಮಾನ, ಇಪ್ಪತ್ತನೆಯ ಶತಮಾನ ಗಳು ಕ್ರಮವಾಗಿ ಬಸವಾದಿ ಶಿವಶರಣರು, ಎಡೆಯೂರು ಸಿದ್ಧಲಿಂಗೇಶ್ವರರು, ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳ ಕಾಲವಾದ್ದರಿಂದ ಅವು ಅವಿಸ್ಮರಣೀಯ ಕಾಲಘಟ್ಟಗಳಾಗಿ ಉಳಿದಿವೆ. ಪ್ರತಿ ಹಂತದಲ್ಲಿ ಜನರ ಜೀವನ ಸುಧಾರಣೆಗೆ ಒಂದೊಂದು ರೀತಿ ಕ್ರಾಂತಿಯ ಮೂಲಕ ಬದಲಾವಣೆ ತಂದ ಕಾಲಗಳಿವು.
ಇಪ್ಪತ್ತನೆಯ ಶತಮಾನದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥ ಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗಪುರುಷರು ಹಾನಗಲ್ಲಿನ ಶ್ರೀ ಕುಮಾರ ಶಿವಯೋಗಿಗಳು, ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚೆಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಟಿಯಿಂದ ಸಮಷ್ಟಿಯತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.
ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ನಾಡಿನ ಯಾವುದೇ ಒಂದು ಧರ್ಮ ಅಥವಾ ಒಂದು ಮಠ ಅಥವಾ ಒಂದು ಭಾಗ ಅಥವಾ ಕಾಲಕ್ಕೆ ಸಂಬಂಧಪಟ್ಟವರಲ್ಲ, ಅವರು ಸಮಗ್ರ ಮನುಕುಲಕ್ಕೆ ಸಂಬಂಧಪಟ್ಟವರು. ಜಂಗಮ ಅಂದರೆ ಸಮಾಜ, ಸಮಾಜ ಸೇವೆಯೇ ಜೀವ-ಜೀವನವಾಗಿಸಿ ಕೊಂಡು ಬದುಕಿದವರು, ಅವರ ದೂರದೃಷ್ಟಿಯ ಸಂಸ್ಥೆಯೇ ಅಖಿಲ ಭಾರತ ವೀರಶೈವ ಮಹಾ ಸಭಾ.
1904ರಲ್ಲಿ ಧಾರವಾಡದಲ್ಲಿ ಮತ್ತು 1905ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಮತ್ತು ದ್ವಿತೀಯ ಅಖಿಲ ಭಾರತ ವೀರಶೈವ ಮಹಾಸಭಾದ ಸಮ್ಮೇಳನಾಧ್ಯಕ್ಷರಾಗಿ ಶಿರಸಂಗಿ ಲಿಂಗರಾಜರು ವೀರಶೈವ ಲಿಂಗಾಯತ ಸಂಘಟನೆಗೆ ಹೊಸ ದಿಕ್ಕು ದಿಶೆಗಳನ್ನು ತೋರಿದರು.
ಪ್ರಗತಿಪರ ಆಲೋಚನೆ, ವೈಜ್ಞಾನಿಕ ಮನೋಧರ್ಮ ಹಾಗೂ ದೂರದೃಷ್ಟಿಯ ಕನಸುಗಳಿಂದ ಕೂಡಿದ ಅವರ ಅಂದಿನ ಭಾಷಣಗಳು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಮಾರ್ಗದರ್ಶಕ ಮಂತ್ರಗಳಾಗಿವೆ. ಸಮ್ಮೇಳನಾಧ್ಯಕ್ಷರಾಗಿ ಅವರು ಮಾಡಿದ ಭಾಷಣಗಳು ಅತ್ಯಂತ ವೈಚಾರಿಕತೆ ಯಿಂದ ಕೂಡಿವೆ. ಅಂದೇ ಹಳ್ಳಿಹಳ್ಳಿಗಳಲ್ಲಿ ಗಣತಿ ಆಗಬೇಕು ಎಂದು ಅವರು ಒಂದು ನೀಲಿನಕ್ಷೆ ನೀಡಿದ್ದರು. ಶತಮಾನೋತ್ಸವ ಪೂರೈಸಿ ಎರಡು ದಶಕಗಳು ಕಳೆದರೂ ಇಂದಿಗೂ ಅದೇ ವಿಚಾರದಲ್ಲಿ ಅ.ಭಾ.ವೀ. ಮಹಾಸಭಾ ತೋಳಲಾಡುತ್ತಿದೆ!
ಹೀಗೆ ಹಲವಾರು ವಿಚಾರಗಳಲ್ಲಿ ಅ.ಭಾ.ವೀ.ಲಿಂ.ಮಹಾಸಭಾ, ಸಮಾಜದ ಏಳಿಗೆಗೆ ಯಾವುದೇ ಸೂಕ್ತ ಕ್ರಮವನ್ನುತಗೆದುಕೊಳ್ಳದೆ ಆಮೆ ಹೆಜ್ಜೆ ಇಟ್ಟಿರುವ ನಿದರ್ಶನಗಳೇ ಕಾಣುತ್ತಿವೆ. ವೀರಶೈವ ಲಿಂಗಾಯತ ಧರ್ಮವು ಅರಿವು ಮತ್ತು ಆಚರಣೆಯಿಂದ ಹುಟ್ಟಿದಂಥ ಧರ್ಮ. ಧಾರ್ಮಿಕ ಆಚರಣೆಗಳು ಇಲ್ಲದ ವೀರಶೈವ ಲಿಂಗಾಯತ ಧರ್ಮವು ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ.
ಇಂದು ಸಾಮಾಜಿಕವಾಗಿ ವೀರಶೈವ ಲಿಂಗಾಯತರಿಗೆ ಆಗುತ್ತಿರುವ ಅನ್ಯಾಯ, ನಿರ್ಲಕ್ಷ್ಯದ ಮೂಲ ವೀರಶೈವ ಲಿಂಗಾಯತರಲ್ಲಿ ಧಾರ್ಮಿಕ ಪ್ರeಯ ಕೊರತೆ ಹಾಗೂ ಧರ್ಮಾಚರಣೆ ರಹಿತವಾದ ಬದುಕು ಕಾರಣವಾಗಿದೆ. “ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು, ಕಂಗಳಿಚ್ಛೆಗೆ ಪರವಧುವ ನೆರೆವರು. ಲಿಂಗಲಾಂಛನಧಾರಿಯಾದಲ್ಲಿ ಫಲವೇನು ಲಿಂಗಪಥವ ತಪ್ಪಿ ನಡೆವವರು ಜಂಗಮ ಮುಖದಿಂದ ನಿಂದೆ ಬಂದಡೆ ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲ ಸಂಗಮದೇವಾ".
ಸಾಮಾನ್ಯ ಜನರು ಎದುರು ನೋಡುವ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಯಾರು ಎಂದರೆ ಸಹಜವಾಗಿಯೇ ನಮ್ಮ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಮ್ಮ ಸಮಾಜದ ರಾಜಕಾರಣಿಗಳು, ವಿವಿಧ ವೀರಶೈವ ಲಿಂಗಾಯತ ಹೆಸರಿನ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಇವುಗಳ ಹೆಸರಿನಲ್ಲಿ ಹೇಳಲ್ಪಡುವ ಸದಸ್ಯರು; ನಮ್ಮ ಸಮಾಜದ ಸಾಮಾನ್ಯ ಜನರು ಎದುರು ನೋಡುವ ಇವರುಗಳಲ್ಲಿ ಬಹುಪಾಲು ಜನರು ಸಂಘ, ಸಂಸ್ಥೆ, ಮಹಾಸಭಾವನ್ನು ಒಳಗೊಂಡು ತಮ್ಮ ಹೆಸರಿನ ಮುಂದೆ ವೀರಶೈವ ಲಿಂಗಾಯತ ಸಂಘಟನೆಗಳ ಹೆಸರು ಹೇಳಿಕೊಂಡು ತೋರ್ಪ ಡಿಸಿಕೊಳ್ಳುವ ವ್ಯಕ್ತಿಗಳ ಬದುಕಿನ ರೀತಿ, ನೀತಿ ಏನು? ಜೀವನಶೈಲಿ ಹೇಗಿದೆ? ಆಚಾರ, ವಿಚಾರ ಏನು? ಧರ್ಮದ ವಿಶಾಲ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆಯೇ? ಇಲ್ಲವಲ್ಲವೇ?!
ಸಾಮಾಜಿಕವಾಗಿ ಮಹಾನುಭಾವವನ್ನು ಒಳಗೊಂಡ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಹೆಸರಿನಿಂದ ಗುರುತಿಸಿಕೊಳ್ಳಲು ಹಾತೊರೆಯುವವರೇ ತುಂಬಿ ತುಳುಕುತ್ತಿದ್ದಾರೆ. ಮೂಲಭೂತ ವಾಗಿ ಕನಿಷ್ಠ ಧರ್ಮಪ್ರಜ್ಞೆ ಕೂಡಾ ಇವರಿಗೆ ಇಲ್ಲವಾಗಿದೆ. ಸಮಾಜದ ಮುಂದಿನ ಪೀಳಿಗೆಗೆ ತಮ್ಮಜೀವನಶೈಲಿ ಮೂಲಕ ದಾರಿ ತಪ್ಪಿಸುತ್ತಿರುವವರನ್ನು ಪ್ರಶ್ನೆ ಮಾಡುವ ನೈತಿಕತೆಯು ಮಹಾಸಭಾದವರಿಗೆ ಇಲ್ಲದಂತಾಗಿದೆ.
ಕಾರಣ, ಮಹಾಸಭಾದ ಬಹುಪಾಲು ಮಂದಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಸಂಸ್ಥೆಯ ಸ್ಥಾನದ ಮುಖವಾಡ ವನ್ನು ಧರಿಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಇನ್ನೂ ಕೆಲವರು ಈ ಸಂಸ್ಥೆಯನ್ನು ತಮ್ಮ ಒಡೆತನದ ಭಾಗವಾಗಿಸಿಕೊಂಡು ರಾಜಕೀಯ ಏಳಿಗೆಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಶ್ರಮಿಕ ವರ್ಗ, ವೈವಿಧ್ಯ ತಿರುಳು, ಎಲ್ಲಾ ಕಾಯಕ ಜೀವಿಗಳನ್ನು ಹೊಂದಿದ್ದ ಅನುಭವ ಮಂಟಪದಲ್ಲಿ ಶೂನ್ಯ ಪೀಠಾಧ್ಯಕ್ಷರಾಗಿ ಅಪ್ಪ ಬಸವಣ್ಣನವರೇ ಕೂರಬಹುದಾಗಿತ್ತು.
ಆದರೆ ಅವರು ಕೂರಲಿಲ್ಲ, ಆಗ ಯಾರನ್ನು ಮಾಡುವುದು ಎನ್ನುವ ಚರ್ಚೆಯಲ್ಲಿ ಶರಣರೆಲ್ಲರೂ ಒಕ್ಕೊರಲಿನಿಂದ ದ್ವಿತೀಯ ಶಂಭು ಬಸವಣ್ಣನವರೇ ಪೀಠಾಧ್ಯಕ್ಷರಾಗಬೇಕು ಎಂದರೂ ಒಲ್ಲದೇ, ನಟವರ ಕಾಯಕದ ಕುಲದಲ್ಲಿ ಹುಟ್ಟಿ, ಸಾಧಕರಾದ ವ್ಯೋಮಕಾಯ ಅಲ್ಲಮಪ್ರಭು ದೇವರನ್ನು ಶೂನ್ಯ ಪೀಠಾಧ್ಯಕ್ಷರನ್ನಾಗಿ ಮಾಡಿ ಮೇಲು-ಕೀಳು, ಉಳ್ಳವರು- ಕನಿಷ್ಠರು ಎಂಬ ಭೇದ ಭಾವದಲ್ಲಿ ಜಡವಿಡಿದಿದ್ದ ಸಮಾಜಕ್ಕೆ ಯೋಗ್ಯತೆ ಹೊಂದಿದವರಿಗೆ ಮನ್ನಣೆಯನ್ನು ಕೊಡಬೇಕು ಎಂಬ ಸಂದೇಶವನ್ನು ಇತ್ತ ಅಂದಿನ ಲಿಂಗಧಾರಿಗಳು ಎಲ್ಲಿ? ಇಂದು ಸಮಾಜದಲ್ಲಿ ಶ್ರಮಿಕರನ್ನು, ಯೋಗ್ಯರನ್ನು ಕಡೆಗಣಿಸಿ ಉಳ್ಳವರು ಮಾತ್ರ ಸಮಾಜದ ಚುಕ್ಕಾಣಿ ಹಿಡಿಯಬೇಕು ಎಂಬ ಹುನ್ನಾರದ ಕುದುರೆ ವ್ಯಾಪಾರದ ಲಾಬಿ ಮಾಡುತ್ತಿರುವ ಇಂದಿನ ವೀರಶೈವ ಲಿಂಗಾಯತ ಸಮಾಜದ, ಮಹಾಸಭಾದ ಪದಾಧಿಕಾರಿಗಳು ಎಲ್ಲಿ? ವೀರಶೈವ ಲಿಂಗಾಯತ ಧರ್ಮದ ಮೂಲ ಅಷ್ಟಾವರಣಗಳು, ಪಂಚಾಚಾರಗಳು ಮತ್ತು ಷಟ್ಸ್ಥಲಗಳು; ವೀರಶೈವ ಲಿಂಗಾಯತರು ಅಷ್ಟಾವರಣವೇ ಅಂಗವಾಗಿ ಪಂಚಾಚಾರವೇ ಪ್ರಾಣವಾಗಿ ಮತ್ತು ಷಟ್ಸ್ಥಲವೇ ಆತ್ಮವಾಗಿಸಿ ಕೊಂಡು ಬದುಕಬೇಕು.
ಇಂದು ಸಮಾಜದಲ್ಲಿ ಇವುಗಳನ್ನು ಅಳವಡಿಸಿಕೊಂಡು ಬದುಕುವ ದಾರಿಯಲ್ಲಿ ಇರಬೇಕಾದ ಸಮಸ್ತ ವೀರಶೈವ ಲಿಂಗಾಯತರು, ಧರ್ಮದ ಕನಿಷ್ಠಪ್ರಜ್ಞೆ ಮತ್ತು ಜ್ಞಾನವಿಲ್ಲದೇ ಇರುವುದಕ್ಕೆ ಕಾರಣ ಏನಿರಬಹುದು? ಮುಂದುವರಿದು ನಮ್ಮ ನಮ್ಮ ಧರ್ಮ ನಮ್ಮ ನಮ್ಮ ಮನೆಯಲ್ಲಿ ಇರಬೇಕು ಎನ್ನುವುದಾದರೆ ಇಂದು ನಮ್ಮ ವೀರಶೈವ ಲಿಂಗಾಯತ ಧರ್ಮ ವೀರಶೈವ ಲಿಂಗಾ ಯತರ ಮನೆಯಲ್ಲಿ ಆದರೂ ಉಳಿದಿದೆಯೇ? ಇಂಥ ಧರ್ಮದ ಅರಿವು ಮತ್ತು ಆಚರಣೆ ಹಿಂದೆಂದಿಗಿಂತಲೂ ಇಂದು ಅನಿವಾರ್ಯವಾಗಿದೆ.
ಶರಣರು ಬಾಹ್ಯವಾಗಿ ದೇವರನ್ನು ಹುಡುಕದೆ ದೇಹವೇ ದೇವಾಲಯ ಎಂದರು. ಅವರು ಜಾರಿಯಲ್ಲಿ ತಂದ ಧರ್ಮ ದಯಾಮೂಲವಾದದ್ದು. ಅದು ಅರಿವು ಮತ್ತು ಆಚಾರಗಳ ಸಂಗಮ. ‘ವಚನ’ ಎನ್ನುವ ವಿಶಿಷ್ಟ ಸಾಹಿತ್ಯದ ಮೂಲಕ ಶರಣರು ಧರ್ಮಪ್ರಸಾರ ಮಾಡಿದರು. ಧಾರ್ಮಿಕ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ನೆಲೆಯಲ್ಲಿ ವೀರಶೈವ ಲಿಂಗಾಯತ ಧರ್ಮ ಜಾರಿಯಲ್ಲಿ ತಂದದ್ದು ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯಂಥ ಮಹತ್ವದ ಅಂಶಗಳನ್ನು. ವೀರಶೈವ ಲಿಂಗಾಯತ ಧರ್ಮದಲ್ಲಿ ವೈಚಾರಿಕತೆಗೆ ಬದ್ಧರಾಗಿ ಎಷ್ಟು ಜನ ಬದುಕುತ್ತಿದ್ದಾರೆ? ನಮ್ಮ ಜನಸಂಖ್ಯೆಯ ಬಹುಶಃ ಅರ್ಧದಷ್ಟಾದರೂ ಮತ್ತು ಹೆಸರಾಂತ ವೀರಶೈವ ಲಿಂಗಾಯತ ಹೆಸರಿನ ಸಂಘ ಸಂಸ್ಥೆಗಳ ಪ್ರಮುಖರು ಮಹಾಸಭಾ ಒಳಗೊಂಡು ಎಷ್ಟು ಜನ ನಮ್ಮ ಆಚರಣೆಗೆ ಅನುಗುಣ ವಾಗಿ ಬದುಕುತ್ತಿದ್ದಾರೆ? ಅ.ಭಾ.ವೀ.ಲಿ. ಮಹಾಸಭಾದಂಥ ಐತಿಹಾಸಿಕ ಸಂಸ್ಥೆ ಧರ್ಮದ ಆಚರಣೆಗೆ ಅನುಗುಣವಾಗಿ ಯಾವ ಮಾನದಂಡಗಳನ್ನು ತನ್ನ ಸದಸ್ಯರಿಗೆ/ಪದಾಧಿಕಾರಿಗಳಿಗೆ ಕಡ್ಡಾಯ ಮಾಡಿದೆ? ಅಥವಾ ಆಯ್ಕೆಯಾದವರಿಗೆ ಧರ್ಮದ ಮೂಲಭೂತ ವಿಚಾರಗಳನ್ನು ಎಂದಾದರೂ ತಿಳಿಸಿ ಅವರು ಅನುಕರಣೆ ಮಾಡುವಂತೆ ಕಟ್ಟಪ್ಪಣೆ ಮಾಡಿರುವುದೇ? ಮೊದಲಿಗೆ ರಾಜ್ಯಾದ್ಯಂತ, ನಂತರ ರಾಷ್ಟ್ರಾದ್ಯಂತ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ವೀರಶೈವ ಲಿಂಗಾಯತರಿಗೆ ಇರುವ ಅನನ್ಯತೆಯಿಂದ ಶತಮಾನಗಳಿಂದಲೂ ವೀರಶೈವ ಲಿಂಗಾಯತರಿಗೆ ಇರುವ ಪ್ರತ್ಯೇಕತೆ ಇಂದು ಕ್ಷೀಣಿಸುತ್ತಿದೆ.
ಇದು ಮಹಾಸಭಾದ ಗಮನಕ್ಕೆ ಬಂದರೂ ಬಾರದಂತೆ ಜಾಣ ಕುರುಡುತನ ಮತ್ತು ಕಿವುಡುತನ ಅನುಸರಿಸುತ್ತಿರುವ ಕ್ರಮವು ಮಹಾಸಭೆಯಲ್ಲಿರುವವರ ಅಧಿಕಾರದ ಹಪಾಹಪಿತನವನ್ನು ತೋರಿಸುತ್ತದೆ. ಮಹಾಸಭೆಯಲ್ಲಿನ ಇಂಥ ಅಧಿಕಾರದ ಹಪಾಹಪಿತನದಲ್ಲಿ ಇರುವ ಜನರು ಅವರ ಬದ್ಧತೆಯನ್ನು ಮಹಾಸಭೆಯ ನಿಯಮ ಮತ್ತು ನಿಯಂತ್ರಣಗಳನ್ನು ಅನುಸರಿಸಲು ತೋರಿಸದೇ ಕೆಲವರಿಗೆ ಬೇಕಾದಂತೆ ಸೃಷ್ಟಿಸುವಂತೆ ಕಾಳಜಿ ವಹಿಸುತ್ತಿದ್ದಾರೆ.
ಕೆಲ ತಿಂಗಳ ಕೆಳಗೆ ಮಹಾಸಭೆಯ ನಿಯಮಗಳು ಗಾಳಿಗೆ ತೂರಿ ನಡೆಯುತ್ತಿರುವ ಘಟನೆಗಳನ್ನು ಪ್ರಮುಖ ಜವಾಬ್ದಾರಿ ಹೊಂದಿರುವವರ ಗಮನಕ್ಕೆ ತರಲು ಪ್ರಯತ್ನಿಸಲಾಯಿತು. ಈ ಸಂದರ್ಭ ದಲ್ಲಿ ಅವರ ಮಾತುಕತೆಯ ರೀತಿ ಅಸಹ್ಯವೆನಿಸಿತು. ಅವರು ಹೇಳುತ್ತಾರೆ, “ನೋಡ್ರಿ ಏನೋ ಆಗಿದ್ದು ಆಗಿದೆ, ನೀವು ಇದರ ಬಗ್ಗೆ ಚರ್ಚಿಸಬೇಡಿ, ನಿಮಗೆ ಏನು ಬೇಕು ಹೇಳಿ, ಯಾವ ಸ್ಥಾನ ಬೇಕು ಕೇಳಿ ಕೊಡುವ ವ್ಯವಸ್ಥೆ ಮಾಡುತ್ತೇನೆ, ಇದರೆ ಬಗ್ಗೆ ಮಾತನಾಡುವುದನ್ನು ಬಿಡಿ".
ಇದು ಒಬ್ಬರ ಕಥೆಯ, ಹೀಗೆ ಸುಮಾರು ಜನರಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ವಾಸ್ತವ ಅರ್ಥ ಮಾಡಿಸಲು ಪ್ರಯತ್ನಿಸಿದರೆ ಎಲ್ಲರದೂ ಅದೇ ರಾಗ. ಇವರುಗಳು ಈ ರೀತಿ ಪಲಾಯನವಾದದ ಹಾರಿಕೆ ಉತ್ತರಗಳನ್ನು ನೀಡುತ್ತಾ ಇರುವುದಕ್ಕೆ ಬೇಸತ್ತು, ಮಹಾಸಭೆಯ ಕೇಂದ್ರ ಕಚೇರಿ ಬೆಂಗಳೂರಿಗೆ ಒಂದು ಪತ್ರವನ್ನು ಶಿವಮೊಗ್ಗ ಜಿಲ್ಲೆಯ ಶೇ.40ರಷ್ಟು ಕಾರ್ಯಕಾರಿ ಸಮಿತಿ ಸದಸ್ಯರ ಸಹಿಯೊಂದಿಗೆ ಕಳುಹಿಸಿ ನಾಲ್ಕೂವರೆ ತಿಂಗಳು ಕಳೆದರೂ ಅದಕ್ಕೆ ಇದುವರೆಗೆ ಯಾವುದೇ ಸ್ಪಂದನೆ ಇಲ್ಲ.
ವೀರಶೈವ ಲಿಂಗಾಯತ ಧರ್ಮದ ತತ್ವಾಚಾರಣೆ ಮೂಲೆಗೆ ಬಿದ್ದಿರುವ ಮಹಾಸಭೆಯಲ್ಲಿ ಸತ್ಯವನ್ನು ಬೇಡುವ, ನ್ಯಾಯವನ್ನು ಕೇಳುವ ಮೋಸವನ್ನು ಖಂಡಿಸಿರುವ ಪತ್ರ ಅಲ್ಲೇ ಕಸದ ತೊಟ್ಟಿಯಲ್ಲಿ ಇರಬಹುದು. 12ನೇ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಕನ್ನಡಿಗರಿಂದ ನಡೆದ ವೈಚಾರಿಕ ಮತ್ತು ಸಾಮಾಜಿಕ ಚಳವಳಿಗೆ ಮೊದಲಿಗೆ ಅನಿವಾರ್ಯವಾಗಿ ಬಾಹ್ಯ ಬೆಂಬಲವಿತ್ತು,
ನಂತರ ಬಂಡಾಯ ಎಬ್ಬಿಸಿದವರು ಕಲಚೂರಿಗಳ ವಂಶಸ್ಥರು. ಈ ಕಲಚೂರಿಗಳು ಅಪ್ಪ ಬಸವಣ್ಣನವರ ವೈಚಾರಿಕ ಮತ್ತು ಸಾಮಾಜಿಕ ಹೋರಾಟ ಹತ್ತಿಕ್ಕಿದರು. ಇಂದು ಮಹಾಸಭಾ ದವರು ಸಮಾಜಕ್ಕೆ ಇಂಥದ್ದೇ ದ್ರೋಹ ಮಾಡುತ್ತಿರುವಂತಿದೆ. ವ್ಯವಸ್ಥಿತವಾಗಿ ಕೆಲ ಜನರಿಗೆ ಬೇಕಾದಂತೆ ಇಡೀ ಸಮಾಜದ ಹಿತಾಸಕ್ತಿಯನ್ನು ಗುರು ಕುಮಾರೇಶ್ವರರಿಂದ ಸ್ಥಾಪಿಸಲ್ಪಟ್ಟ ಅ.ಭಾ.ವೀ. ಮಹಾಸಭೆಯನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದ್ದಾರೆ.
ಸಾಮಾನ್ಯ ವೀರಶೈವ ಲಿಂಗಾಯತರಿಗೆ ದಾರಿ ತಪ್ಪಿಸುತ್ತಾ, ದಶಕಗಳಿಂದ ಜವಾಬ್ದಾರಿಯ ಹೆಸರಿನ ಅಧಿಕಾರವನ್ನು ಅನುಭವಿಸುತ್ತಾ ಸೂಕ್ತ ಪದವಿಗಳಿಗೆ ವೀರಶೈವ ಲಿಂಗಾಯತ ಧರ್ಮದ ಮಾನ ದಂಡವಿಲ್ಲದೆ, ಧಾರ್ಮಿಕತೆಯ ಪ್ರಜ್ಞೆ ಇಲ್ಲದವರನ್ನು ಮುಂದುವರಿಸುತ್ತಾ, ಅನರ್ಹರು ಸಮಾಜ ವನ್ನು ರಾಜಕಾರಣದಲ್ಲಿ ಮುಳುಗಿಸುತ್ತಾ, ಅರ್ಹರು ಸಮಾಜ ದ್ರೋಹಿಗಳೆಂದು ಬಿಂಬಿಸುತ್ತಾ ಮಹಾಸಭೆಯ ಮೂಲ ಆಶಯಗಳಿಗೆ ಬಲಿಕೊಡುತ್ತಿರುವುದು ದುಃಖಕರವಾದದ್ದು.
ಬಸವಾದಿ ಶಿವಶರಣರು, ವೀರಶೈವ ಲಿಂಗಾಯಿತ ಸಾಧಕರು, ಸಕಲ ಸೇವಾತ್ಮರಿಗೆ ಲೇಸಾಗಲಿ ಎಂಬ ಆಶಯದಂತೆ ಇವರುಗಳು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಡೆದು ಅವರಂತೆ ಸಮಾಜಕ್ಕಾಗಿ ಬದುಕುವುದು ನಮ್ಮ ಗುರಿಯಾಗಲಿ. ಅ.ಭಾ.ವೀ. ಮಹಾಸಭಾದ ಈ ಸ್ಥಿತಿಗೆ ಇಚ್ಛಾಶಕ್ತಿ ಇಲ್ಲದ ಅಲ್ಲಿನ ಕೆಲ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ತಾಲೂಕು ಕಾರ್ಯಕಾರಿ ಸದಸ್ಯರುಗಳೇ ಕಾರಣ. ಇಂಥ ಸಂಸ್ಥೆಯ ಜಿಲ್ಲಾ ಕಾರ್ಯನಿರ್ವಾಹಕ ಸದಸ್ಯ ಸ್ಥಾನದಲ್ಲಿ ಇರುವ ನಾನು, ಬಸವಾದಿ ಶರಣ ತತ್ವಗಳಿಗೆ ವಿರುದ್ಧ ಸಾಗಲು ಇಚ್ಚಿಸದ ಕಾರಣ ಈ ರಾಜಿನಾಮೆ ಪತ್ರವನ್ನು ಸಲ್ಲಿಸುತ್ತೇನೆ".
***
ಒಂದೊಮ್ಮೆ ವೀರಶೈವ/ಲಿಂಗಾಯತ ಸಮುದಾಯಕ್ಕೆ, ಸಮುದಾಯದ ಚರಿತ್ರೆಗೆ ಧಕ್ಕೆಯಾದಾಗ ಲೆಲ್ಲ ಸಮಾಜದ ಧ್ವನಿಯಾಗಿ ನಿಲ್ಲುತ್ತಿದ್ದ ಮಹಾಸಭೆ ಇಂದು ತನ್ನ ಪ್ರಾತಿನಿಧಿಕ ಧ್ವನಿಯನ್ನು ಕಳೆದುಕೊಂಡಿದೆ. ಅದು ಬಸವಣ್ಣನವರ ವಚನ ನಾಮಾಂಕಿತ ಪ್ರಕ್ಷಿಪ್ತಗೊಳಿಸಿದ ಮಹಾದೇವಿ ಪ್ರಸಂಗವಾಗಿರಬಹುದು, ‘ಆನುದೇವ ಹೊರಗಣವನು’, ‘ಧರ್ಮಕಾರಣ’, ‘ಮಹಾಚೈತ್ರ’ ದಂಥ ಪುಸ್ತಕಗಳ ವಿರುದ್ಧದ ಪ್ರತಿಭಟನೆಯಾಗಿರಬಹುದು. ಒಟ್ಟಾರೆ ಅಂದಿನ ಮಹಾಸಭೆಯ ಪ್ರತಿಭಟನೆಯ ಒಂದು ಕೂಗು ಸಾಸಿರ್ಮಡಿಯಾಗಿ ದೇಶಾದ್ಯಂತ ಪ್ರತಿಧ್ವನಿತವಾಗುತ್ತಿತ್ತು.
ಆದರೆ ಇಂದು ಆ ಧ್ವನಿಯು ನಿರ್ವೀರ್ಯ ಪಿಸುಮಾತಾಗಿ ಪಿಸಿದುಹೋಗುತ್ತಿರುವುದು ಮಹಾ ಸಭಾದ ದುರಂತ. ಇದಕ್ಕೆ ಕಾರಣ ವಯೋವೃದ್ಧರು ಮತ್ತು ಸರಕಾರದಲ್ಲಿ ಪ್ರಮುಖ ಜವಾಬ್ದಾರಿ ಯನ್ನು ಹೊಂದಿದವರು ಮಹಾಸಭೆಯನ್ನು ತಮ್ಮ ಅಂಗಸೇವಕ ಕಾರ್ಯದರ್ಶಿಯ ಏಕಮುಖ ಸರ್ವಾಧಿಕಾರಕ್ಕೆ ಸಮರ್ಪಿಸಿ, ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ’ಅ ಜಿo ಡಿಛ್ಝ್ಝಿ’ ಎಂಬ ಭ್ರಮೆಯಲ್ಲಿರುವುದು.
ಈ ಭ್ರಮೆ, ಇಂದು ಮಹಾಸಭೆಯನ್ನು ಕತ್ತಲೆಯಲ್ಲಿಟ್ಟಿದೆ. ಆದರೆ ಮುಂದೊಂದು ದಿನ ಈ ನಿಷ್ಕ್ರಿಯತೆ ತಮ್ಮ ಭವಿಷ್ಯವನ್ನೇ ಕತ್ತಲೆಯಾಗಿಸಬಹುದು ಎಂಬ ಖಚಿತ ಆತ್ಮವಿಮರ್ಶೆ ಇಲ್ಲದೇ ಇರುವುದು ಮಹಾಸಭೆಯ ಆಡಳಿತ ವರ್ಗದ ದುರ್ದೈವ. ಕೈಯಲ್ಲಿರುವ ಹಣದ ಥೈಲಿ ಸ್ವಲ್ಪ ದೂರದವರೆಗೆ ಕೊಂಡೊಯ್ದೀತು. ಆದರೆ ಧಾರ್ಮಿಕ ಗಮ್ಯವನ್ನು ಎಂದೂ ತಲುಪಿಸದು.
ಇರಲಿ ಈ ಸದಸ್ಯರ ರಾಜೀನಾಮೆಯ ಎಚ್ಚರಿಕೆಯ ಕರೆಗಂಟೆ ಮೊಳಗಿದರೂ ಏನೂ ಆಗದಂತೆ ಕಿವುಡರಾಗಿರುವ ಸಭಿಕರು ಉಳಿದ ಮೊಳೆಗಳನ್ನು ನಿಸ್ತೇಜಶವ ಮಹಾಸಭಾಕ್ಕೆ ಹೊಡೆಯುವುದು ನಿಶ್ಚಿತ. ಏಕೆಂದರೆ, “ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!" ಅತ್ತ ಸುಳ್ಳಿನ ಸಂಕಥನದ ಧರ್ಮಭಂಜಕ ದುಷ್ಕ್ರಿಯ ಲಿಂಗಾಹತಿಗಳಿದ್ದರೆ, ಇತ್ತ ಸತ್ಯದ ಸಂಕಥನದ ಬೆಂಬಲವಿದ್ದರೂ ನಿಷ್ಕ್ರಿಯ ನಿಸ್ತೇಜಶವಗಳಾದ ಮಹಾಸಭಿಗಳಿದ್ದಾರೆ.
ರಾಜೀನಾಮೆ ಸಲ್ಲಿಸಿದ ಮೇಲಿನ ಸದಸ್ಯರು ಹೇಳಿದಂತೆ, ವ್ಯವಸ್ಥಿತವಾಗಿ ಇಡೀ ಸಮಾಜದ ಹಿತಾಸಕ್ತಿ ಯನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದ್ದಾರೆ. ಇತ್ತ ಲಿಂಗಾಹತಿ ಬಸವ ತಾಲಿಬಾನಿಗಳು ಹಲಾಲ್ ಮಾಡಲು ಚೂರಿ ಹಿಡಿದು ನಿಂತಿದ್ದಾರೆ. ಒಟ್ಟಾರೆ ಲಿಂಗವೂ ಇಲ್ಲದೆ, ಶೈವವೂ ಅಲ್ಲದೆ ಕೊರಳಿಗೆ ಶಿಲುಬೆ ಸಿಕ್ಕಿಸಿಕೊಂಡು ಸಮಾಜವು ಅಖಂಡ ಕ್ರೈಸ್ತ ಲಿಂಗಾಯತರಾಗಲು ‘ಆಲೇಲೂಯಾ’ ಎನ್ನುತ್ತಾ ದಾಪುಗಾಲಿಡುತ್ತಿರುವುದು ಪರಮಸತ್ಯ ದೇವವಾಕ್ಯ ವಾಗುವುದೇನೋ! ಶಿವ ಶಿವ, ಬಸವ ಬಸವ, ಎಮನ್, ಆಮೀನ್!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)